ಭಾನುಸುತ ಕುಳ್ಳಿರು ನದೀಸುತ
ನೇನನೆಂದನು ತನ್ನ ಚಿತ್ತ
ಗ್ಲಾನಿಯನು ಬಿಸುಟೇನ ನುಡಿದನು ಭಾವಶುದ್ಧಿಯಲಿ
ಏನನೆಂಬೆನು ಜೀಯ ಬಹಳ ಕೃ
ಪಾನಿಧಿಯಲಾ ಭೀಷ್ಮನನುಸಂ
ಧಾನವಿಲ್ಲದೆ ಬೆಸಸಿ ಕಳುಹಿದನೆಂದನಾ ಕರ್ಣ (ದ್ರೋಣ ಪರ್ವ, ೧ ಸಂಧಿ, ೩೩ ಪದ್ಯ)
ತಾತ್ಪರ್ಯ:
ಕರ್ಣನನ್ನು ತನ್ನ ಓಲಗದಲ್ಲಿ ಕಂಡ ದುರ್ಯೋಧನನು, ಕುಳಿತುಕೋ ಕರ್ಣ, ಭೀಷ್ಮನು ತನ್ನ ಚಿಂತೆಯನ್ನು ಮರೆತು ಭಾವಶುದ್ಧಿಯಿಂದ ಏನು ಹೇಳಿದನು ಎಂದು ದುರ್ಯೋಧನನು ಕೇಳಲು, ಕರ್ಣನು, ಒಡೆಯ ಭೀಷ್ಮನು ಕೃಪಾನಿಧಿ, ಏನನ್ನೂ ಕೆದಕದೆ ಯುದ್ಧ ಮಾಡಲಿ ಹೇಳಿ ಕಳುಹಿಸಿದನೆಂದನು.
ಅರ್ಥ:
ಭಾನುಸುತ: ರವಿಯ ಪುತ್ರ (ಕರ್ಣ); ಕುಳ್ಳಿರು: ಆಸೀನನಾಗು; ನದೀಸುತ: ಭೀಷ್ಮ; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ; ಬಿಸುಟು: ಹೊರಹಾಕು; ನುಡಿ: ಮಾತಾಡು; ಭಾವ: ಚಿತ್ತವೃತ್ತಿ, ಸಂವೇದನೆ; ಶುದ್ಧ: ನಿರ್ಮಲ; ಜೀಯ: ಒಡೆಯ; ಬಹಳ: ತುಂಬ; ಕೃಪ: ಕರುಣೆ; ಕೃಪಾನಿಧಿ: ಕರುಣೆಯ ನಿಧಿ; ಅನುಸಂಧಾನ: ಪರಿಶೀಲನೆ, ವಿಮರ್ಶೆ; ಬೆಸಸು: ಆಜ್ಞಾಪಿಸು, ಹೇಳು; ಕಳುಹು: ತೆರಳು;
ಪದವಿಂಗಡಣೆ:
ಭಾನುಸುತ +ಕುಳ್ಳಿರು +ನದೀಸುತನ್
ಏನನೆಂದನು +ತನ್ನ +ಚಿತ್ತ
ಗ್ಲಾನಿಯನು +ಬಿಸುಟ್+ಏನ +ನುಡಿದನು +ಭಾವ+ಶುದ್ಧಿಯಲಿ
ಏನನೆಂಬೆನು +ಜೀಯ +ಬಹಳ+ ಕೃ
ಪಾನಿಧಿಯಲಾ +ಭೀಷ್ಮನ್+ಅನುಸಂ
ಧಾನವಿಲ್ಲದೆ +ಬೆಸಸಿ +ಕಳುಹಿದನ್+ಎಂದನಾ +ಕರ್ಣ
ಅಚ್ಚರಿ:
(೧) ಭಾನುಸುತ, ನದೀಸುತ – ಪದಗಳ ಬಳಕೆ, ೧ ಸಾಲು
(೨) ಭೀಷ್ಮರನ್ನು ಹೊಗಳಿದ ಪರಿ – ಬಹಳ ಕೃಪಾನಿಧಿಯಲಾ ಭೀಷ್ಮ