ಪದ್ಯ ೨೪:ದುರ್ಯೋಧನನು ಮಗನನ್ನು ಹೇಗೆ ಕರೆದನು?

ಕರೆಸಿದನು ದುರಿಯೋಧನನನಾ
ದರಿಸಿ ಕಟ್ಟೇಕಾಂತದಲಿ ಮು
ವ್ವರು ವಿಚಾರಿಸಿದರು ನಿಜಾನ್ವಯ ಮೂಲನಾಶನವ
ಭರತಕುಲ ನಿರ್ವಾಹಕನೆ ಬಾ
ಕುರುಕುಲಾನ್ವಯದೀಪ ಬಾ ಎ
ನ್ನರಸ ಬಾ ಎನ್ನಾಣೆ ಬಾಯೆಂದಪ್ಪಿದನು ಮಗನ (ಸಭಾ ಪರ್ವ, ೧೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶಕುನಿಯ ಮಾತಿಗೆ ಓಗೊಟ್ಟು ದುರ್ಯೋಧನನನ್ನು ತನ್ನ ಅರಮನೆಗೆ ಕರೆಸಿದನು. ಏಕಾಂತದಲ್ಲಿ ಆ ಮೂವರೇ ಇದ್ದ ಸಮಯದಲ್ಲಿ ಅವರು ತಮ್ಮ ವಂಶದ ಬೇರನ್ನು ಕೀಳುವ ವಿಧಾನವನ್ನು ಆಲೋಚಿಸಿದರು. ಧೃತರಾಷ್ಟ್ರನು ದುರ್ಯೋಧನನನ್ನು ಭರತಕುಲವನ್ನು ನಡೆಸುವವನೇ, ಕುರುಕುಲದ ಬೆಳಕನ್ನು ಬೆಳಗಿಸುವ ದೀಪವೇ, ನನ್ನ ರಾಜ, ನನ್ನಾನೆ ಬಾ ಎಂದು ದುರ್ಯೋಧನನನ್ನು ಅಪ್ಪಿಕೊಂಡನು.

ಅರ್ಥ:
ಕರೆಸು: ಬರೆಮಾಡು; ಆದರ: ಗೌರವ, ಪ್ರೀತಿ; ಏಕಾಂತ: ಒಂಟಿ; ಮುವ್ವರು: ಮೂರು ಮಂದಿ; ವಿಚಾರಿಸು: ಪರಾಮರ್ಶಿಸು;ಆನ್ವಯ: ಸಂಬಂಧ; ಮೂಲ: ಕಾರಣ, ಹೇತು; ನಾಶ: ಹಾಳು; ಕುಲ: ವಂಶ; ನಿರ್ವಾಹಕ: ನಿರ್ವಹಿಸುವವನು; ದೀಪ: ಬೆಳಗು; ಅರಸ: ರಾಜ; ಆಣೆ: ಪ್ರಮಾಣ; ಅಪ್ಪು: ತಬ್ಬಿಕೊ; ಮಗ: ಪುತ್ರ;

ಪದವಿಂಗಡಣೆ:
ಕರೆಸಿದನು+ ದುರಿಯೋಧನನನ್
ಆದರಿಸಿ+ ಕಟ್+ಏಕಾಂತದಲಿ+ ಮು
ವ್ವರು+ ವಿಚಾರಿಸಿದರು +ನಿಜಾನ್ವಯ +ಮೂಲನಾಶನವ
ಭರತಕುಲ+ ನಿರ್ವಾಹಕನೆ+ ಬಾ
ಕುರುಕುಲಾನ್ವಯದೀಪ +ಬಾ +ಎ
ನ್ನರಸ+ ಬಾ + ಎನ್ನಾಣೆ +ಬಾ+ಎಂದ್+ಅಪ್ಪಿದನು +ಮಗನ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಬಗೆ – ಭರತಕುಲ ನಿರ್ವಾಹಕ, ಕುರುಕುಲಾನ್ವಯದೀಪ, ಅರಸ