ನೆರೆದ ನಿಜಸೇನಾಧಿಪರ ಸಂ
ವರಣೆಗಳ ನೋಡಿದನು ನೀಡಿದ
ನರಿಬಿರುದ ಮಂಡಳಿಕರಿಗೆ ಕಾಳೆಗದ ವೀಳೆಯವ
ಹರಿಗೆ ಹಲಗೆ ಕೃಪಾಣ ತೋಮರ
ಪರಶು ಕಕ್ಕಡೆ ಕೊಂತ ಮುದ್ಗರ
ಸುರಗಿಯತಿಬಳ ಪಾಯ್ದಳವ ನಿರಿಸಿದನು ವಳಯದಲಿ (ದ್ರೋಣ ಪರ್ವ, ೪ ಸಂಧಿ, ೧೫ ಪದ್ಯ)
ತಾತ್ಪರ್ಯ:
ಮಹಾಶೂರನಾದ ಶತ್ರುಭಯಂಕರರಾದ ಮಂಡಳಿಕರ ಸೇನೆಗಳನ್ನು ನಿರೀಕ್ಷಿಸಿ ದ್ರೋಣನು ಅವರಿಗೆ ರಣವೀಳೆಯವನ್ನು ಕೊಟ್ಟನು. ಗುರಾಣಿ, ಕತ್ತಿ, ತೋಮರ, ಗಂಡುಕೊಡಲಿ, ಕಕ್ಕಡೆ, ಕುಂತ, ಮುದ್ಗರ, ಸುರಗಿಗಳನ್ನು ಹಿಡಿದ ಕಾಲಾಳುಗಳನ್ನು ವೃತ್ತಾಕಾರವಾಗಿ ನಿಲ್ಲಿಸಿದನು.
ಅರ್ಥ:
ನೆರೆದ: ಸೇರಿದ; ಸೇನಾಧಿಪ: ಸೇನೆಯ ಮುಖ್ಯಸ್ಥ; ಸಂವರಣೆ: ಶೇಖರಣೆ, ಸಜ್ಜು; ನೋಡು: ವೀಕ್ಷಿಸು; ನೀಡು: ಕೊಡು; ಅರಿಬಿರುದ: ಶತ್ರುಭಯಂಕರ; ಮಂಡಳಿಕ: ಸಾಮಂತ ರಾಜ; ಕಾಳೆಗ: ಯುದ್ಧ; ವೀಳೆ: ಆಮಂತ್ರಣ, ತಾಂಬೂಲ; ಹರಿಗೆ: ಪ್ರವಹಿಸು; ಹಲಗೆ: ಗುರಾಣಿ; ಕೃಪಾಣು: ಒಂದು ಬಗೆಯ ಆಯುಧ; ತೋಮರ: ಈಟಿಯಂತಹ ಒಂದು ಬಗೆಯ ಆಯುಧ; ಪರಶು: ಕೊಡಲಿ, ಕುಠಾರ; ಕಕ್ಕಡ: ದೀವಟಿಗೆ, ಪಂಜು; ಕುಂತ: ಈಟಿ, ಭರ್ಜಿ; ಮುದ್ಗರ: ಗದೆ; ಸುರಗಿ: ಸಣ್ಣ ಕತ್ತಿ, ಚೂರಿ; ಅತಿಬಲ: ಪರಾಕ್ರಮ; ಪಾಯ್ದಳ: ಸೈನ್ಯ; ಇರಿಸು: ಸಜ್ಜುಮಾಡು; ವಳಯ: ವರ್ತುಲ, ಪರಿಧಿ;
ಪದವಿಂಗಡಣೆ:
ನೆರೆದ +ನಿಜಸೇನಾಧಿಪರ+ ಸಂ
ವರಣೆಗಳ +ನೋಡಿದನು +ನೀಡಿದನ್
ಅರಿಬಿರುದ +ಮಂಡಳಿಕರಿಗೆ +ಕಾಳೆಗದ +ವೀಳೆಯವ
ಹರಿಗೆ +ಹಲಗೆ +ಕೃಪಾಣ +ತೋಮರ
ಪರಶು +ಕಕ್ಕಡೆ +ಕೊಂತ +ಮುದ್ಗರ
ಸುರಗಿ+ಅತಿಬಳ +ಪಾಯ್ದಳವ +ನಿರಿಸಿದನು +ವಳಯದಲಿ
ಅಚ್ಚರಿ:
(೧) ಆಯುಧಗಳ ಹೆಸರು – ಹಲಗೆ, ಕೃಪಾಣ, ತೋಮರ, ಪರಶು, ಕಕ್ಕಡ, ಕುಂತ, ಮುದ್ಗರ, ಸುರಗಿ