ಪದ್ಯ ೪೬: ಸೈನಿಕರ ಸ್ಥಿತಿ ಹೇಗಾಯಿತು?

ಏರುವಡೆದರು ಕೆಲರು ಕೆಲರಸು
ಸೂರೆಯೋದುದು ಮತ್ತೆ ಕೆಲರೆದೆ
ಡೋರುಗಳ ಪೂರಾಯ ಗಾಯದಲುಸುರ ತೆಗೆಬಗೆಯ
ಕಾರಿದರು ರಕ್ತವನು ಸಗ್ಗಕೆ
ಗೂರು ಮಾರಾಡಿದರು ತಲೆಗಳ
ಹೇರಿದರು ಹರಣವನು ವೊಟ್ಟಿಗೆ ಕಾಲನರಮನೆಗೆ (ವಿರಾಟ ಪರ್ವ, ೮ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳು ಕೆಲ ಸೈನಿಕರ ಮೇಲೆ ಮಾರಣಾಂತಿಕ ಪೆಟ್ಟನ್ನು ಮಾಡಿದವು, ಕೆಅಲವರ ಪ್ರಾಣವೇ ಹೋಯಿತು, ಕೆಲವರ ಎದೆಗಳಲ್ಲಿ ದೊಡ್ಡ ಗುಂಡಿ ಬಿದ್ದು ಉಸುರಿನಲ್ಲೇ ರಕ್ತವನ್ನು ಕಾರಿಕೊಂಡರು. ಸ್ವರ್ಗಕ್ಕೆ ನಾ ಮೊದಲು ನೀ ಮೊದಲು ಎಂದು ನುಗ್ಗಿದರು, ತಲೆಗಳು ಗುಡ್ಡೆ ಬಿದ್ದವು. ಅವರ ಪ್ರಾಣಗಳನ್ನು ಯಮಲೋಕಕ್ಕೆ ಹೇರಿಕೊಂಡು ಹೋದರು.

ಅರ್ಥ:
ಏರು: ಮೇಲೆ ಹತ್ತು; ಕೆಲರು: ಸ್ವಲ್ಪಜನ; ಅಸು: ಪ್ರಾಣ; ಸೂರೆ: ಲೂಟಿ; ಎದೆ: ಹೃದಯ; ಡೋರುಗಳೆ: ತೂತುಮಾಡು; ಪೂರಾಯ: ಪರಿಪೂರ್ಣ; ಗಾಯ: ಪೆಟ್ಟು; ಉಸುರು: ಪ್ರಾಣ; ತೆಗೆ: ಹೊರತರು; ಕಾರು: ಕೆಸರು; ರಕ್ತ: ನೆತ್ತರು; ಸಗ್ಗ:ನಾಕ, ಸ್ವರ್ಗ; ಊರು: ನೆಲೆಸು; ತಲೆ: ಶಿರ; ಮಾರಾಡು: ನುಗ್ಗು; ಹೇರು: ಪೇರಿಸು, ಹೊರೆ, ಭಾರ; ಹರಣ: ಜೀವ, ಪ್ರಾಣ; ಒಟ್ಟಿಗೆ: ಜೊತೆಯಾಗಿ; ಕಾಲ: ಯಮ; ಅರಮನೆ: ರಾಜರ ವಾಸಸ್ಥಾನ;

ಪದವಿಂಗಡಣೆ:
ಏರುವಡೆದರು +ಕೆಲರು +ಕೆಲರ್+ಅಸು
ಸೂರೆಯೋದುದು+ ಮತ್ತೆ +ಕೆಲರ್+ಎದೆ
ಡೋರುಗಳ +ಪೂರಾಯ +ಗಾಯದಲ್+ಉಸುರ +ತೆಗೆಬಗೆಯ
ಕಾರಿದರು+ ರಕ್ತವನು +ಸಗ್ಗಕೆಗ್
ಊರು +ಮಾರಾಡಿದರು +ತಲೆಗಳ
ಹೇರಿದರು +ಹರಣವನು +ವೊಟ್ಟಿಗೆ +ಕಾಲನ್+ಅರಮನೆಗೆ

ಅಚ್ಚರಿ:
(೧) ಮಡಿದರು ಎಂದು ಹೇಳುವ ಪರಿ – ಸಗ್ಗಕೆಗೂರು ಮಾರಾಡಿದರು ತಲೆಗಳ ಹೇರಿದರು ಹರಣವನು ವೊಟ್ಟಿಗೆ ಕಾಲನರಮನೆಗೆ