ಪದ್ಯ ೨೦: ಕೀಚಕನು ದ್ರೌಪದಿಗೆ ಏನು ಹೇಳಿದನು?

ಎಲೆಗೆ ಪಾತಕಿ ನಿನ್ನ ಕಣ್ಣೆಂ
ಬಲಗಿನಲಿ ತನ್ನೆದೆಯ ನೋಯಿಸಿ
ತೊಲಗಬಹುದೇ ಕರುಣವಿಲ್ಲವೆ ನಿನ್ನ ಮನದೊಳಗೆ
ಒಲಿದು ಬಂದೆನು ಕಾಮನೂಳಿಗ
ಬಲುಹು ಎನ್ನಯ ಭಯವ ತಗ್ಗಿಸಿ
ತಲೆಯ ಕಾಯಲು ಬೇಕೆನುತ ಕೀಚಕನು ಕೈಮುಗಿದ (ವಿರಾಟ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೀಚಕನು ದ್ರೌಪದಿಯನ್ನುದ್ದೇಶಿಸಿ, ಎಲೆ ಪಾಪಿ, ನಿನ್ನ ಕಣ್ಣೆಂಬ ಬಾಣದಿಂದ ನನ್ನನ್ನು ನೋಯಿಸಿ, ನೀನು ಹೀಗೆ ಹೋಗಿ ಬಿಡಬಹುದೆ? ನಿನ್ನ ಮನಸ್ಸಿನಲ್ಲಿ ಕರುಣೆಯೇ ಇಲ್ಲವೇ? ನಿನಗೆ ಒಲಿದು ಬಂದಿದ್ದೇನೆ, ಮನ್ಮಥನ ಕಾಟವು ಪ್ರಬಲವಾದದ್ದು, ಭಯಗೊಂಡ ನನ್ನನ್ನು ಸಂತೈಸಿ ಕಾಪಾಡು ಎಂದು ನಮಸ್ಕರಿಸಿದನು.

ಅರ್ಥ:
ಪಾತಕಿ: ಪಾಪಿಲ್ ಕಣ್ಣು: ನಯನ; ಅಲಗು: ಬಾಣ; ಎದೆ: ಹೃದಯ; ನೋಯಿಸು: ಪೆಟ್ಟು; ತೊಲಗು: ಹೊರಡು; ಕರುಣೆ: ದಯೆ; ಮನ: ಮನಸ್ಸು; ಒಲಿ: ಪ್ರೀತಿಸು; ಬಂದೆ: ಆಗಮಿಸು; ಕಾಮ: ಮನ್ಮಥ; ಊಳಿಗ: ಸೇವೆ; ಬಲುಹು: ಬಲ, ಶಕ್ತಿ; ಭಯ: ಹೆದರು; ತಗ್ಗಿಸು: ಕಡಿಮೆ ಮಾಡು; ತಲೆ: ಶಿರ; ಕಾಯು: ರಕ್ಷಿಸು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಎಲೆಗೆ +ಪಾತಕಿ+ ನಿನ್ನ +ಕಣ್ಣೆಂಬ್
ಅಲಗಿನಲಿ +ತನ್ನೆದೆಯ +ನೋಯಿಸಿ
ತೊಲಗಬಹುದೇ +ಕರುಣವಿಲ್ಲವೆ +ನಿನ್ನ +ಮನದೊಳಗೆ
ಒಲಿದು +ಬಂದೆನು +ಕಾಮನೂಳಿಗ
ಬಲುಹು +ಎನ್ನಯ +ಭಯವ +ತಗ್ಗಿಸಿ
ತಲೆಯ +ಕಾಯಲು +ಬೇಕೆನುತ+ ಕೀಚಕನು+ ಕೈಮುಗಿದ

ಅಚ್ಚರಿ:
(೧) ದ್ರೌಪದಿಯನ್ನು ಬಯ್ಯುವ ಪರಿ – ನಿನ್ನ ಕಣ್ಣೆಂಬಲಗಿನಲಿ ತನ್ನೆದೆಯ ನೋಯಿಸಿ ತೊಲಗಬಹುದೇ