ಮತ್ತೆ ಕವಿದುದು ಹೆಣನ ತುಳಿದೊ
ತ್ತೊತ್ತೆಯಲಿ ರಿಪುಸೇನೆ ಮಂಜಿನ
ಮುತ್ತಿಗೆಯ ರವಿಯಂತೆ ಕಾಣೆನು ಕಳಶಸಂಭವನ
ಮತ್ತೆ ನಿಮಿಷಾರ್ಧದಲಿ ಕಾಲನ
ತುತ್ತು ಜೋಡಿಸಿತೇನನೆಂಬೆನು
ಹತ್ತು ಕೋಟಿಯನಿಲುಹಿದನು ರಿಪುಚಾತುರಂಗದಲಿ (ದ್ರೋಣ ಪರ್ವ, ೧೮ ಸಂಧಿ, ೨೧ ಪದ್ಯ)
ತಾತ್ಪರ್ಯ:
ಪಾಂಚಾಲ ಸೇನೆಯು ದ್ರೋಣನನ್ನು ಮತ್ತೆ ಮುತ್ತಿತು. ಮಂಜಿನಲ್ಲಿ ಮರೆಯಾದ ಸೂರ್ಯನಂತೆ ದ್ರೋನನು ಕಾಣಿಸಲೇ ಇಲ್ಲ. ನಿಮಿಷಾರ್ಧದಲ್ಲಿ ಹತ್ತು ಕೋಟಿ ಸೈನ್ಯವನ್ನು ಕೊಂದು ದ್ರೋನನು ಪ್ರಚಂಡತನವನ್ನು ತೋರಿಸಿದನು.
ಅರ್ಥ:
ಕವಿ: ಆವರಿಸು; ಹೆಣ: ಜೀವವಿಲ್ಲದ ಶರೀರ; ತುಳಿ: ಮೆಟ್ಟು; ಒತ್ತು: ಒತ್ತಡ; ರಿಪು: ವೈರಿ; ಸೇನೆ: ಸೈನ್ಯ; ಮಂಜು: ಇಬ್ಬನಿ, ಹಿಮ; ಮುತ್ತಿಗೆ: ಆವರಿಸುವಿಕೆ; ರವಿ: ಭಾನು; ಕಾಣು: ತೋರು; ಕಳಶ: ಕುಂಭ; ಸಂಭವ: ಹುಟ್ಟು; ಮತ್ತೆ: ಪುನಃ; ನಿಮಿಷ: ಕ್ಷಣ; ಕಾಲ: ಸಮಯ; ತುತ್ತು: ನಾಶಮಾಡು; ಜೋಡಿಸು: ಕೂಡಿಸು; ಹತ್ತು: ದಶ; ಕೋಟಿ: ಅಸಂಖ್ಯಾತ; ಇಳುಹು: ಇಳಿಸು, ಕತ್ತರಿಸು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ;
ಪದವಿಂಗಡಣೆ:
ಮತ್ತೆ +ಕವಿದುದು +ಹೆಣನ +ತುಳಿದ್
ಒತ್ತೊತ್ತೆಯಲಿ +ರಿಪುಸೇನೆ +ಮಂಜಿನ
ಮುತ್ತಿಗೆಯ +ರವಿಯಂತೆ +ಕಾಣೆನು+ ಕಳಶಸಂಭವನ
ಮತ್ತೆ +ನಿಮಿಷಾರ್ಧದಲಿ +ಕಾಲನ
ತುತ್ತು +ಜೋಡಿಸಿತ್+ಏನನೆಂಬೆನು
ಹತ್ತು +ಕೋಟಿಯನ್+ ಇಳುಹಿದನು +ರಿಪು+ಚಾತುರಂಗದಲಿ
ಅಚ್ಚರಿ:
(೧) ಉಪಮಾನದ ಪ್ರಯೋಗ – ತುಳಿದೊತ್ತೊತ್ತೆಯಲಿ ರಿಪುಸೇನೆ ಮಂಜಿನ ಮುತ್ತಿಗೆಯ ರವಿಯಂತೆ ಕಾಣೆನು ಕಳಶಸಂಭವನ