ಫಲಿಸಿತರಸಾ ನಿನ್ನ ಭಾಗ್ಯದ
ಬೆಳೆಸು ನಿನ್ನೊಡವುಟ್ಟಿದನ ನುಡಿ
ಕಳಸಗಂಡುದು ಕದನವಿದು ಭಾರಾಂಕವುಳಿದರಿಗೆ
ಕಳಿದುದೊಂದಪಮೃತ್ಯುವೆನೆ ನೃಪ
ತಿಲಕ ನುಡಿದನು ನಿನ್ನ ಭಾಷೆಯ
ಬಲಿದೆ ನಿನ್ನಯ ಬಿರುವ ಸಲಿಸಿದೆ ನಮಗಿದೇನೆಂದ (ದ್ರೋಣ ಪರ್ವ, ೧೫ ಸಂಧಿ, ೩ ಪದ್ಯ)
ತಾತ್ಪರ್ಯ:
ರಾಜಾ ನಿನ್ನ ಭಾಗ್ಯದ ಬೆಳೆ ಫಲಿಸಿತು. ನಿನ್ನ ತಮ್ಮನ ಪ್ರತಿಜ್ಞೆಗೆ ಕಳಶವಿಟ್ಟಿತು. ಇದು ಉಳಿದವರಿಗೆ ಬಹು ಕಷ್ಟಕರ, ಒಂದು ಅಪಮೃತ್ಯು ತಪ್ಪಿತು ಎಂದು ಕೃಷ್ಣನು ಹೇಳಲು, ಧರ್ಮಜನು ಉತ್ತರಿಸುತ್ತಾ, ನಿನ್ನ ಪ್ರತಿಜ್ಞೆಯನ್ನು ನೀನು ನಡೆಸಿಕೊಂಡೆ, ಮಾತನ್ನು ಉಳಿಸಿಕೊಂಡೆ, ನಿನ್ನ ಕೃಪೆಯಿರಲು ನಮಗಿದೇನು ಎಂದು ಕೃಷ್ಣನ ಮೇಲಿನ ಭಕ್ತಿಭಾವವನ್ನು ತೋರಿದನು.
ಅರ್ಥ:
ಫಲಿಸು: ಪ್ರಯೋಜನ; ಭಾಗ್ಯ: ಅದೃಷ್ಟ; ಬೆಳೆಸು: ಅಧಿಕವಾಗು; ಒಡವುಟ್ಟು: ಜೊತೆಯಲ್ಲಿ ಜನಿಸಿದ; ನುಡಿ: ಮಾತು; ಕಳಶ: ಶಿಖರ, ಹಿರಿಯ; ಕಂಡು: ನೋಡು; ಕದನ: ಯುದ್ಧ; ಭಾರಾಂಕ: ಮಹಾಯುದ್ಧ; ಅಪಮೃತ್ಯು: ಅಕಾಲ ಮರಣ; ನೃಪ: ರಾಜ; ತಿಲಕ: ಶ್ರೇಷ್ಠ; ನುಡಿ: ಮಾತು; ಭಾಷೆ: ನುಡಿ; ಬಲಿ: ಗಟ್ಟಿ; ಬಿರು: ಬಿರುಸಾದುದು; ಸಲಿಸು: ಪೂರೈಸು; ಒಪ್ಪಿಸು;
ಪದವಿಂಗಡಣೆ:
ಫಲಿಸಿತ್+ಅರಸಾ +ನಿನ್ನ +ಭಾಗ್ಯದ
ಬೆಳೆಸು +ನಿನ್ನೊಡವುಟ್ಟಿದನ +ನುಡಿ
ಕಳಸ+ಕಂಡುದು +ಕದನವಿದು +ಭಾರಾಂಕವ್+ಉಳಿದರಿಗೆ
ಕಳಿದುದೊಂದ್+ಅಪಮೃತ್ಯುವ್+ಎನೆ +ನೃಪ
ತಿಲಕ +ನುಡಿದನು +ನಿನ್ನ +ಭಾಷೆಯ
ಬಲಿದೆ +ನಿನ್ನಯ +ಬಿರುವ +ಸಲಿಸಿದೆ +ನಮಗಿದೇನೆಂದ
ಅಚ್ಚರಿ:
(೧) ಅರ್ಜುನನನ್ನು ಹೊಗಳುವ ಪರಿ – ನಿನ್ನೊಡವುಟ್ಟಿದನ ನುಡಿ ಕಳಸಗಂಡುದು ಕದನವಿದು ಭಾರಾಂಕವುಳಿದರಿಗೆ