ಕಲಹವೆನ್ನದು ದಳಪತಿಗೆ ತಾ
ನಿಲುವೆನೆಂದನು ಭೀಮನೆನ್ನನು
ಕಳುಹಿ ನೋಡೆಂದನು ಧನಂಜಯನೆಮ್ಮ ಮಾವನಲಿ
ಸಲುಗೆಯೆನಗೆಂದನು ನಕುಲನೆ
ನ್ನೊಲವಿನರ್ತಿಯಿದೆನ್ನ ಕಳುಹಿದ
ಡುಳುಹಿದವರೆಂದೆರಗಿದನು ಸಹದೇವನಾ ಹರಿಗೆ (ಶಲ್ಯ ಪರ್ವ, ೧ ಸಂಧಿ, ೩೦ ಪದ್ಯ)
ತಾತ್ಪರ್ಯ:
ಈ ಯುದ್ಧ ನನ್ನದು. ದಲಪತಿಯನ್ನು ನಾನು ಇದಿರಿಸುತ್ತೇನೆ ಎಂದು ಭೀಮನು ಹೇಳಿದನು. ನನ್ನನ್ನು ಮಾವನ ಮೇಲೆ ಯುದ್ಧಕ್ಕೆ ಕಳುಹಿಸಿ ನೋಡು ಎಂದು ಅರ್ಜುನನು ಹೇಳಿದನು. ನಾನು ಪ್ರೀತಿಯಿಂದ ಕೇಳಿಕೊಳ್ಳುತ್ತೇನೆ, ಮಾವನಲ್ಲಿ ನನಗೆ ಸಲುಗೆಯಿದೆ ಎಂದು ನಕುಲನು ಹೇಳಿದನು. ನನ್ನ ಪ್ರೀತಿಯ ಬೇಡಿಕೆ ನನ್ನನ್ನು ಯುದ್ಧಕ್ಕೆ ಕಳಿಸಿದರೆ ನೀವು ನನ್ನನ್ನು ಬದುಕಿಸಿದವರು ಎಂದು ಸಹದೇವನು ಹೇಳಿದನು.
ಅರ್ಥ:
ಕಲಹ: ಜಗಳ; ದಳಪತಿ: ಸೇನಾಧಿಪತಿ; ಕಳುಹು: ತೆರಳು; ಮಾವ: ಹೆಂಡತಿಯ ತಂದೆ; ಸಲುಗೆ: ಸದರ, ಅತಿ ಪರಿಚಯ; ಒಲವು: ಪ್ರೀತಿ; ಎರಗು: ಬಾಗು, ನಮಸ್ಕರಿಸು; ಹರಿ: ಕೃಷ್ಣ; ಅರ್ತಿ: ಪ್ರೀತಿ ;
ಪದವಿಂಗಡಣೆ:
ಕಲಹವ್+ಎನ್ನದು+ ದಳಪತಿಗೆ+ ತಾ
ನಿಲುವೆನ್+ಎಂದನು +ಭೀಮನ್+ಎನ್ನನು
ಕಳುಹಿ +ನೋಡೆಂದನು +ಧನಂಜಯನ್+ಎಮ್ಮ +ಮಾವನಲಿ
ಸಲುಗೆ+ಎನಗ್+ಎಂದನು +ನಕುಲನ್
ಎನ್ನೊಲವಿನ್+ಅರ್ತಿಯಿದೆನ್ನ+ ಕಳುಹಿದಡ್
ಉಳುಹಿದವರ್+ಎಂದೆರಗಿದನು+ ಸಹದೇವನಾ +ಹರಿಗೆ
ಅಚ್ಚರಿ:
(೧) ಎಂದು, ಎಂದನು ಪದದ ಬಳಕೆ