ಮತ್ತೆ ಹೇಳುವುದೇನ ಸೋಲವ
ಬಿತ್ತಿ ಬೆಳೆದನು ಭೂಪನವರಿಗೆ
ತೆತ್ತನೈ ಸರ್ವಸ್ವಧನವನು ಸಕಲ ಸೈನಿಕರ
ಮತ್ತೆ ಪಣವೇನೆನಲು ಬಳಿಕರು
ವತ್ತು ಸಾವಿರ ಕರಿಕಳಭವೆಂ
ಬತ್ತು ಸಾವಿರ ತುರಗ ಶಿಶುಗಳನೊಡ್ಡಿದನು ಭೂಪ (ಸಭಾ ಪರ್ವ, ೧೪ ಸಂಧಿ, ೬೬ ಪದ್ಯ)
ತಾತ್ಪರ್ಯ:
ಜನಮೇಜಯ ಇನ್ನೇನು ಹೇಳಲಿ, ಸೋಲನ್ನು ಬಿತ್ತಿ ಧರ್ಮರಾಯನು ಸೋಲನ್ನೇ ಬೆಳಸಿದನು. ತನ್ನ ಹಣ ಸೈನ್ಯಗಳನ್ನೆಲ್ಲಾ ಕೌರವನಿಗೆ ತೆತ್ತನು. ಮತ್ತೆ ಏನು ಪಣವನ್ನೊಡ್ಡುವೆ ಎಂದು ಶಕುನಿಯು ಕೇಳಲು ಅರವತ್ತು ಸಾವಿರ ಆನೆಮರಿಗಳನ್ನು, ಎಂಬತ್ತು ಸಾವಿರ ಕುದುರೆ ಮರಿಗಳನ್ನು ಒಡ್ಡಿದನು.
ಅರ್ಥ:
ಮತ್ತೆ: ಪುನಃ; ಹೇಳು: ತಿಳಿಸು; ಸೋಲು: ಪರಾಭವ; ಬಿತ್ತಿ: ಉಂಟುಮಾಡು; ಬೆಳೆ: ಬೆಳೆಯುವಿಕೆ, ಅಭಿವೃದ್ಧಿ; ಭೂಪ: ರಾಜ; ತೆತ್ತ: ನೀಡಿದ; ಸರ್ವಸ್ವ: ಎಲ್ಲಾ; ಧನ: ಐಶ್ವರ್ಯ; ಸಕಲ: ಎಲ್ಲಾ; ಸೈನಿಕ: ಸೈನ್ಯ, ಪಡೆ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ಬಳಿಕ: ನಂತರ; ಸಾವಿರ: ಸಹಸ್ರ; ಕರಿ: ಆನೆ; ಕಳಭ: ಆನೆಮರಿ; ತುರಗ: ಕುದುರೆ; ಶಿಶು: ಮರಿ; ಒಡ್ಡು: ನೀಡು; ಭೂಪ: ರಾಜ;
ಪದವಿಂಗಡಣೆ:
ಮತ್ತೆ +ಹೇಳುವುದೇನ +ಸೋಲವ
ಬಿತ್ತಿ +ಬೆಳೆದನು+ ಭೂಪನ್+ಅವರಿಗೆ
ತೆತ್ತನೈ +ಸರ್ವಸ್ವ+ಧನವನು +ಸಕಲ +ಸೈನಿಕರ
ಮತ್ತೆ +ಪಣವೇನ್+ಎನಲು +ಬಳಿಕ್+ಅರು
ವತ್ತು +ಸಾವಿರ +ಕರಿಕಳಭವ್+ಎಂ
ಬತ್ತು +ಸಾವಿರ +ತುರಗ +ಶಿಶುಗಳನ್+ಒಡ್ಡಿದನು +ಭೂಪ
ಅಚ್ಚರಿ:
(೧) ಆಗಿನ ಕಾಲದಲ್ಲಿ ಪ್ರಾಣಿಗಳನ್ನು ಪೋಷಿಸುವ ಬಗೆ – ಅರುವತ್ತು ಸಾವಿರ ಕರಿಕಳಭ, ಎಂಬತ್ತು ಸಾವಿರ ತುರಗ ಶಿಶು
(೨) ಬ ಕಾರದ ತ್ರಿವಳಿ ಪದ – ಬಿತ್ತಿ ಬೆಳೆದನು ಭೂಪನ
(೩) ಸೋಲನ್ನು ಅನುಭವಿಸಿದನು ಎನ್ನುವ ಪರಿ – ಸೋಲವ ಬಿತ್ತಿ ಬೆಳೆದನು