ಲೇಸಲೈ ಕೃತವರ್ಮ ಬಳಿಕೇ
ನಾಸುರದ ಕಗ್ಗೊಲೆಗೆ ರಾಜಾ
ದೇಶದಲಿ ನಾವ್ ಬಂದೆವೀ ಪಾಂಡವರ ಪಾಳೆಯಕೆ
ಘಾಸಿಯಾಗರು ಪಾಂಡುಸುತರಿಗೆ
ವಾಸುದೇವನ ಕಾಹು ಘನ ಕಾ
ಳಾಸ ತಪ್ಪಿದ ಬಳಿಕ ನಮಗಪಕೀರ್ತಿ ಬಹುದೆಂದ (ಗದಾ ಪರ್ವ, ೯ ಸಂಧಿ, ೮ ಪದ್ಯ)
ತಾತ್ಪರ್ಯ:
ಕೃಪನು ಮಾತನಾಡುತ್ತಾ, ಕೃತವರ್ಮ, ಶತ್ರುಗಳನ್ನು ಕಗ್ಗೊಲೆ ಮಾಡಲು ರಾಜನ್ ಆದೇಶದಂತೆ ನಾವು ಬಂದಿದ್ದೇವೆ. ಪಾಂಡವರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅವರಿಗೆ ಶ್ರೀಕೃಷ್ಣನ ರಕ್ಷಣೆ ಬಲವಾಗಿದೆ. ಆದುದರಿಮ್ದ ಈ ಕೆಲಸ ಮುಗಿದ ಮೇಲೆ ನಮಗೆ ಕೆಟ್ಟಹೆಸರು ಬರುತ್ತದೆ ಎಂದು ಹೇಳಿದನು.
ಅರ್ಥ:
ಲೇಸು: ಒಳಿತು; ಬಳಿಕ: ನಂತರ; ಆಸುರ: ಭಯಂಕರ; ಕಗ್ಗೊಲೆ: ಸಾಯಿಸು; ಆದೇಶ: ಅಪ್ಪಣೆ; ರಾಜ: ನೃಪ; ಬಂದು: ಆಗಮಿಸು; ಪಾಳೆಯ: ಬಿಡಾರ; ಘಾಸಿ: ಪೆಟ್ಟು; ಸುತ: ಮಕ್ಕಳು; ಕಾಹು; ರಕ್ಷಣೆ; ಘನ: ಶ್ರೇಷ್ಠ; ಕಾಳ: ಕಪ್ಪು, ಕತ್ತಲೆ; ತಪ್ಪಿದ: ಜಾರಿದ; ಅಪಕೀರ್ತಿ: ಕೆಟ್ಟ ಹೆಸರು;
ಪದವಿಂಗಡಣೆ:
ಲೇಸಲೈ +ಕೃತವರ್ಮ +ಬಳಿಕೇನ್
ಆಸುರದ +ಕಗ್ಗೊಲೆಗೆ +ರಾಜ
ಆದೇಶದಲಿ +ನಾವ್ +ಬಂದೆವ್+ಈ+ ಪಾಂಡವರ +ಪಾಳೆಯಕೆ
ಘಾಸಿಯಾಗರು +ಪಾಂಡುಸುತರಿಗೆ
ವಾಸುದೇವನ +ಕಾಹು +ಘನ +ಕಾ
ಳಾಸ +ತಪ್ಪಿದ +ಬಳಿಕ +ನಮಗ್+ಅಪಕೀರ್ತಿ +ಬಹುದೆಂದ
ಅಚ್ಚರಿ:
(೧) ಪಾಂಡವರು, ಪಾಂಡುಸುತರು – ಸಾಮ್ಯಾರ್ಥ ಪದ
(೨) ಪಾಂಡವರನ್ನು ಕೊಲ್ಲಲೇಕೆ ಸಾಧ್ಯವಿಲ್ಲ – ಘಾಸಿಯಾಗರು ಪಾಂಡುಸುತರಿಗೆ ವಾಸುದೇವನ ಕಾಹು