ಸೇದಿದನು ಪೂತನಿಯಸುವ ನವ
ಳಾದರಿಸಿ ಮೊಲೆವಾಲನೊಡಿಸೆ
ಪಾದತಳ ಸೋಂಕಿನಲಿ ತೊಟ್ಟಿಲ ಬಂಡಿ ನುಗ್ಗಾಯ್ತು
ಸೇದಿ ಕಟ್ಟಿದ್ದೊರಳನೆಳೆದರೆ
ಬೀದಿಯಲಿ ಮರಮುರಿದುದೀ ಕರು
ಗಾದವನ ಕೈಯಿಂದ ಮಡಿದುದು ಕಂಸ ಪರಿವಾರ (ಸಭಾ ಪರ್ವ, ೧೦ ಸಂಧಿ, ೫೬ ಪದ್ಯ)
ತಾತ್ಪರ್ಯ:
ಕೃಷ್ಣನು ತನ್ನನ್ನು ಹಾಲು ಕುಡಿಸಲು ಬಂದ ಪೂತನಿಯ ಎದೆಹಾಲನ್ನು ಕುಡಿಯುವ ನೆವದಲ್ಲಿ ಅವಳ ಪ್ರಾಣವಾಯುಗಳನ್ನೇ ಎಳೆದುಬಿಟ್ಟನು. ಇವನ ಪಾದಗಳು ಸೋಕಿದ ಮಾತ್ರಕ್ಕೆ ತೊಟ್ಟಿಲ ಬಂಡಿ ಶಕಟಾಸುರ ಮುರಿದು ಬಿದ್ದಿತು. ಎಲ್ಲಿಯೂ ಹೋಗದಂತೆ ತುಂಟಾಟ ಮಾದದಿರಲೆಂದು ಯಶೋದೆಯು ಇವನನ್ನು ಒರಳು ಕಲ್ಲಿಗೆ ಕಟ್ಟಿದ್ದಳು, ಬಾಲಕ ಕೃಷ್ಣನು ಈ ಒರಳುಕಲ್ಲನ್ನು ಎಳೆದುಕೊಂಡು ಎರಡು ಮರಗಳ ನಡುವೆ ಹೋಗಲು ಯಮಳಾರ್ಜುನ ವೃಕ್ಷವು ಮುರಿದವು. ಕರುಗಳನ್ನು ಕಾಯುವ ಇವನಿಂದಲೇ ಕಂಸ ಪರಿವಾರವು ನಾಶವಾಯಿತು ಎಂದು ಕೃಷ್ಣನ ಹಿರಿಮೆಯನ್ನು ಭೀಷ್ಮರು ತಿಳಿಸಿದರು.
ಅರ್ಥ:
ಸೇದು: ಸೇಂದು, ಮುದುಡು; ಅಸು: ಪ್ರಾಣ; ಆದರ: ಪ್ರೀತಿ, ಆಸಕ್ತಿ; ಮೊಲೆ: ಸ್ತನ; ವಾಲನೂಡಿಸೆ: ಹಾಲು ಕುಡಿಸು; ಪಾದತಳ: ಚರಣ; ಸೋಂಕು: ಮುಟ್ಟುವಿಕೆ, ಸ್ಪರ್ಶ; ತೊಟ್ಟಿಲು: ಮಕ್ಕಳನ್ನು ತೂಗಿ ಮಲಗಿಸುವ ಸಾಧನ; ಬಂಡಿ: ರಥ; ನುಗ್ಗು: ಒಳಗೆ ಪ್ರವೇಶಿಸು; ಕಟ್ಟು: ಬಂಧಿಸು; ಒರಳು: ಒರಳುಕಲ್ಲು; ಎಳೆ: ತನ್ನ ಕಡೆಗೆ ಸೆಳೆದುಕೊ, ಆಕರ್ಷಿಸು; ಅರೆ:ಅರ್ಧಭಾಗ; ಬೀದಿ: ರಸ್ತೆ; ಮರ: ತರು; ಮುರಿ: ಸೀಳು; ಕರು: ಚಿಕ್ಕ ದನ; ಕಾದು: ಕಾಯುವ; ಕೈ: ಕರ, ಹಸ್ತ; ಮಡಿ: ಸಾವು; ಪರಿವಾರ: ವಂಶ;
ಪದವಿಂಗಡಣೆ:
ಸೇದಿದನು +ಪೂತನಿ+ಅಸುವ +ನವ
ಳಾದರಿಸಿ+ ಮೊಲೆವಾಲನ್+ಊಡಿಸೆ
ಪಾದತಳ+ ಸೋಂಕಿನಲಿ+ ತೊಟ್ಟಿಲ +ಬಂಡಿ +ನುಗ್ಗಾಯ್ತು
ಸೇದಿ +ಕಟ್ಟಿದ್+ಒರಳನ್+ಎಳೆದರೆ
ಬೀದಿಯಲಿ +ಮರಮುರಿದುದ್+ಈ+ ಕರು
ಕಾದವನ +ಕೈಯಿಂದ +ಮಡಿದುದು +ಕಂಸ +ಪರಿವಾರ (ಸಭಾ ಪರ್ವ, ೧೦ ಸಂಧಿ, ೫೬ ಪದ್ಯ)
ಅಚ್ಚರಿ:
(೧) ಕ ಕಾರದ ಸಾಲು ಪದ – ಕರುಗಾದವನ ಕೈಯಿಂದ ಮಡಿದುದು ಕಂಸ ಪರಿವಾರ