ಪದ್ಯ ೪೪: ಸಂಜಯನು ಯಾರನ್ನು ನೆನೆಯುತ್ತಾ ಹಿಂದಿರುಗಿದನು?

ಕುರುಪತಿಯ ಬೀಳ್ಕೊಂಡು ಸಂಜಯ
ಮರಳಿದನು ತನಗಾದ ಹಿಂದಣ
ಪರಿಭವವ ನೆನೆದಡಿಗಡಿಗೆ ಕಂಪಿಸುತ ಮನದೊಳಗೆ
ಧುರದ ಮಧ್ಯದೊಳೊಬ್ಬನೇ ನಡೆ
ತರುತ ಭೂತಾವಳಿಯನೀಕ್ಷಿಸಿ
ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ (ಗದಾ ಪರ್ವ, ೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ಕೌರವನನ್ನು ಬೀಳ್ಕೊಂಡು, ಹಿಂದೆ ಯುದ್ಧಭೂಮಿಯಲ್ಲಿ ತನಗೊದಗಿದ್ದ ಅಪಾಯವನ್ನು ನೆನೆದು ಹೆಜ್ಜೆಹೆಜ್ಜೆಗೂ ನಡುಗುತ್ತಾ ಯುದ್ಧರಂಗದಲ್ಲಿ ಭೂತಗಳನ್ನು ನೋಡುತ್ತಾ ಏಕಾಂಗಿಯಾಗಿ ಗುರುಸ್ಮರಣೆ ಮಾಡುತ್ತಾ ಬಂದನು.

ಅರ್ಥ:
ಬೀಳ್ಕೊಂಡು: ತೆರಳು; ಮರಳು: ಹಿಂದಿರುಗು; ಹಿಂದಣ: ಹಿಂದೆ, ಭೂತ; ಪರಿಭವ: ಅನಾದರ, ತಿರಸ್ಕಾರ, ಸೋಲು; ನೆನೆದು: ಜ್ಞಾಪಿಸು; ಅಡಿಗಡಿ: ಹೆಜ್ಜೆ ಹೆಜ್ಜೆ; ಕಂಪಿಸು: ನಡುಗು; ಮನ: ಮನಸ್ಸು; ಧುರ: ಯುದ್ಧ, ಕಾಳಗ; ಮಧ್ಯ: ನಡುವೆ; ನಡೆ: ಚಲಿಸು; ಭೂತಾವಳಿ: ಭೂತ, ಪಿಶಾಚಿ; ಈಕ್ಷಿಸು: ನೋಡು; ಗುರು: ಆಚಾರ್ಯ; ನೆನೆ: ಜ್ಞಾಪಿಸು; ಮಹೀಪಾಲ: ರಾಜ;

ಪದವಿಂಗಡಣೆ:
ಕುರುಪತಿಯ +ಬೀಳ್ಕೊಂಡು +ಸಂಜಯ
ಮರಳಿದನು +ತನಗಾದ +ಹಿಂದಣ
ಪರಿಭವವ +ನೆನೆದ್+ಅಡಿಗಡಿಗೆ +ಕಂಪಿಸುತ +ಮನದೊಳಗೆ
ಧುರದ +ಮಧ್ಯದೊಳ್+ಒಬ್ಬನೇ +ನಡೆ
ತರುತ+ ಭೂತಾವಳಿಯನ್+ಈಕ್ಷಿಸಿ
ಗುರುವ +ನೆನೆದನು +ಕೇಳು+ ಜನಮೇಜಯ +ಮಹೀಪಾಲ

ಅಚ್ಚರಿ:
(೧) ಪರಿಭವವ ನೆನೆದಡಿಗಡಿಗೆ, ಗುರುವ ನೆನೆದನು – ನೆನೆದ ಪದದ ಬಳಕೆ

ಪದ್ಯ ೪೩: ಪಾಳಯಕ್ಕೆ ಹಿಂದಿರುಗಿದ ಪಾಂಡವರ ಮನದ ಭಾವ ಹೇಗಿತ್ತು?

ಇವರು ಭೀಷ್ಮನ ಬೀಳುಕೊಂಡು
ತ್ಸವದ ಹರುಷದಲೊಮ್ಮೆ ಗಂಗಾ
ಭವಗೆ ತಪ್ಪಿದ ದುಗುಡ ಭಾರದಲೊಮ್ಮೆ ಚಿಂತಿಸುತ
ಕವಲು ಮನದಲಿ ಕಂಪಿಸುತ ಶಿಬಿ
ರವನು ಹೊಕ್ಕರು ನಿಖಿಲ ಸೇನಾ
ನಿವಹ ಸಹಿತವೆ ವೀರ ನಾರಾಯಣನ ಕರುಣದಲಿ (ಭೀಷ್ಮ ಪರ್ವ, ೧೦ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪಾಂಡವರು ಭೀಷ್ಮನನ್ನು ಬೀಳುಕೊಂಡು ಒಮ್ಮೆ ಸಂತಸ ಒಮ್ಮೆ ಭೀಷ್ಮನಿಗೆ ತಪ್ಪಿದೆವೆಂಬ ದುಃಖಗಳ ಕವಲು ಮನಸ್ಸಿನಿಂದ ವೀರ ನಾರಾಯಣನ ಕರುಣೆಯಿಂದ ತಮ್ಮ ಶಿಬಿರಗಳನ್ನು ಹೊಕ್ಕರು.

ಅರ್ಥ:
ಬೀಳುಕೊಂಡು: ತೆರಳು; ಉತ್ಸವ: ಸಂಭ್ರಮ; ಹರುಷ: ಸಂತಸ; ಭವ: ಹುಟ್ಟು; ತಪ್ಪು: ಸರಿಯಲ್ಲದ; ದುಗುಡ: ದುಃಖ; ಭಾರ: ಹೊರೆ; ಚಿಂತಿಸು: ಯೋಚಿಸು; ಕವಲು: ಟಿಸಿಲು, ಭಿನ್ನತೆ; ಮನ: ಮನಸ್ಸು; ಕಂಪಿಸು: ನಡುಗು; ಶಿಬಿರ: ಪಾಳೆಯ; ಹೊಕ್ಕು: ಸೇರು; ನಿಖಿಲ: ಎಲ್ಲಾ; ನಿವಹ: ಗುಂಪು; ಸಹಿತ: ಜೊತೆ; ಕರುಣ: ದಯೆ;

ಪದವಿಂಗಡಣೆ:
ಇವರು +ಭೀಷ್ಮನ +ಬೀಳುಕೊಂಡ್
ಉತ್ಸವದ +ಹರುಷದಲ್+ಒಮ್ಮೆ+ ಗಂಗಾ
ಭವಗೆ +ತಪ್ಪಿದ +ದುಗುಡ +ಭಾರದಲ್+ಒಮ್ಮೆ +ಚಿಂತಿಸುತ
ಕವಲು +ಮನದಲಿ +ಕಂಪಿಸುತ +ಶಿಬಿ
ರವನು +ಹೊಕ್ಕರು +ನಿಖಿಲ +ಸೇನಾ
ನಿವಹ +ಸಹಿತವೆ +ವೀರ +ನಾರಾಯಣನ +ಕರುಣದಲಿ

ಅಚ್ಚರಿ:
(೧) ಪಾಂಡವರ ಸ್ಥಿತಿ – ಕವಲು ಮನದಲಿ ಕಂಪಿಸುತ ಶಿಬಿರವನು ಹೊಕ್ಕರು