ಪದ್ಯ ೧೧: ಪಾಂಡುರಾಜರನ್ನು ಯಾರು ಬೇಟೆಗೆ ಕರೆದರು?

ಧರಿಸಿದಳು ಗಾಂಧಾರಿ ಗರ್ಭೋ
ತ್ಕರವನಿತ್ತ ನಿಜಾಶ್ರಮಕೆ ಮುನಿ
ತಿರುಗಿದನು ದಿನದಿನದೊಳುಬ್ಬಿತು ರಾಯನಭ್ಯುದಯ
ಅರಸ ಕೇಳೈ ಬೇಂಟೆಗಾರರು
ಕರೆಯ ಬಂದರು ಮೃಗನಿಕಾಯದ
ನೆರವಿಗಳ ನೆಲೆಗೊಳಿಸಿ ಪಾಂಡುನೃಪಾಲಕನೋಲಗಕೆ (ಆದಿ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಾಂಧಾರಿಯು ಮಂತ್ರಪಿಂಡವನ್ನು ಸೇವಿಸಿ, ಗರ್ಭವತಿಯಾದಳು. ವೇದವ್ಯಾಸರು ಆಶ್ರಮಕ್ಕೆ ಹಿಂದಿರುಗಿದರು. ಹೀಗೆ ರಾಜನ ಅಭ್ಯುದಯವಾಗುತ್ತಿರಲು, ರಾಜ ಜನಮೇಜಯ ಕೇಳು, ಬೇಟೆಗಾರರು ಪಾಂಡುರಾಜನ ಓಲಗಕ್ಕೆ ಬಂದು, ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ಬೇಟೆಗೆ ಬರಬೇಕೆಂದು ಕರೆದರು.

ಅರ್ಥ:
ಧರಿಸು: ಹೊರು; ಗರ್ಭ: ಹೊಟ್ಟೆ; ಉತ್ಕರ: ರಾಶಿ, ಸಮೂಹ; ಆಶ್ರಮ: ಕುಟೀರ; ಮುನಿ: ಋಷಿ; ತಿರುಗು: ಹಿಂತಿರುಗು, ಹೊರಡು; ದಿನ: ವಾರ; ಉಬ್ಬು: ಹೆಚ್ಚಾಗು; ರಾಯ: ರಾಜ; ಅಭ್ಯುದಯ: ಏಳಿಗೆ; ಅರಸ: ರಾಜ; ಕೇಳು: ಆಲಿಸು; ಬೇಂಟೆಗಾರ: ಬೇಡ; ಕರೆ: ಕೂಗು; ಬಂದು: ಆಗಮಿಸು; ಮೃಗ: ಪ್ರಾಣಿ; ನಿಕಾಯ: ವಾಸಸ್ಥಳ; ನೆರವಿ: ಗುಂಪು, ಸಮೂಹ; ನೆಲೆ: ವಾಸಸ್ಥಳ; ನೃಪಾಲ: ರಾಜ; ಓಲಗ: ದರಬಾರು;

ಪದವಿಂಗಡಣೆ:
ಧರಿಸಿದಳು +ಗಾಂಧಾರಿ +ಗರ್ಭೋ
ತ್ಕರವನ್+ಇತ್ತ+ ನಿಜಾಶ್ರಮಕೆ +ಮುನಿ
ತಿರುಗಿದನು +ದಿನದಿನದೊಳ್+ಉಬ್ಬಿತು +ರಾಯನ್+ಅಭ್ಯುದಯ
ಅರಸ+ ಕೇಳೈ +ಬೇಂಟೆಗಾರರು
ಕರೆಯ +ಬಂದರು +ಮೃಗ+ನಿಕಾಯದ
ನೆರವಿಗಳ +ನೆಲೆಗೊಳಿಸಿ +ಪಾಂಡು+ನೃಪಾಲಕನ್+ಓಲಗಕೆ

ಅಚ್ಚರಿ:
(೧) ರಾಯ, ಅರಸ – ಸಮಾನಾರ್ಥಕ ಪದ

ಪದ್ಯ ೩೦: ಕೃಷ್ಣನಿಗೆ ದೂತರು ಏನನ್ನು ನೀಡಿದರು?

ಬರವ ಬಿನ್ನಹ ಮಾಡಿ ಪಡಿ
ಹಾರರು ಮುರಾರಿಯ ನೇಮದಲಿ ಚಾ
ರರನು ಹೊಗಿಸಲು ಬಂದು ಹೊಕ್ಕರು ಕೃಷ್ಣನೋಲಗವ
ದರುಶನವ ಮಾಡುತ್ತ ಚರಣಾಂ
ಬುರುಹದಲಿ ಮೈಯಿಕ್ಕಿ ದೇವನ
ಒರೆಯಲಿಳುಹಿದರವರು ಕಳುಹಿದ ಬಿನ್ನವತ್ತಳೆಯ (ವಿರಾಟ ಪರ್ವ, ೧೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕಾವಲಿನವರು ಪಾಂಡವ ದೂತರು ಬಂದ ವಿಷಯವನ್ನು ತಿಳಿಸಿದರು. ಶ್ರೀಕೃಷ್ಣನ ಅಪ್ಪಣೆಯಂತೆ ಅವರನ್ನು ಆಸ್ಥಾನಕ್ಕೆ ಕರೆತಂದರು. ಪಾಂಡವರ ದೂತರು ಶ್ರೀಕೃಷ್ಣನಿಗೆ ನಮಸ್ಕರಿಸಿ ಪಾಂಡವರ ಓಲೆಯನ್ನು ನೀಡಿದರು.

ಅರ್ಥ:
ಬರವ: ಆಗಮಿಸು; ಬಿನ್ನಹ: ಕೋರಿಕೆ; ಪಡಿಹಾರ: ಬಾಗಿಲು ಕಾಯುವವ; ಮುರಾರಿ: ಕೃಷ್ಣ; ನೇಮ: ನಿಯಮ; ಚಾರರು: ದೂತರು; ಹೊಗಿಸು: ಪ್ರವೇಶಕ್ಕೆ ಅನುಮತಿಯನ್ನು ಕೊಡು; ಬಂದು: ಆಗಮಿಸು; ಹೊಕ್ಕು: ಸೇರು; ಓಲಗ: ದರ್ಬಾರು; ದರುಶನ: ನೋಟ; ಚರಣಾಂಬುರುಹ: ಪಾದ ಪದ್ಮ; ಅಂಬುರುಹ: ಕಮಲ; ಮೈಯಿಕ್ಕು: ನಮಸ್ಕರಿಸು; ದೇವ: ಭಗವಂತ; ಹೊರೆ: ರಕ್ಷಣೆ, ಆಶ್ರಯ; ಇಳುಹು: ಕೆಳಕ್ಕೆ ಬಾ; ಬಿನ್ನವತ್ತಳೆ: ಮನವಿ ಪತ್ರ;

ಪದವಿಂಗಡಣೆ:
ಬರವ +ಬಿನ್ನಹ +ಮಾಡಿ +ಪಡಿ
ಹಾರರು +ಮುರಾರಿಯ +ನೇಮದಲಿ +ಚಾ
ರರನು+ ಹೊಗಿಸಲು+ ಬಂದು +ಹೊಕ್ಕರು +ಕೃಷ್ಣನ್+ಓಲಗವ
ದರುಶನವ+ ಮಾಡುತ್ತ+ ಚರಣಾಂ
ಬುರುಹದಲಿ +ಮೈಯಿಕ್ಕಿ +ದೇವನ
ಒರೆಯಲ್+ಇಳುಹಿದರ್+ಅವರು +ಕಳುಹಿದ+ ಬಿನ್ನವತ್ತಳೆಯ

ಅಚ್ಚರಿ:
(೧) ನಮಸ್ಕರಿಸು ಎಂದು ಹೇಳಲು – ಚರಣಾಂಬುರುಹದಲಿ ಮೈಯಿಕ್ಕಿ
(೨) ಪ ವರ್ಗದ ಪದಗಳ ಬಳಕೆ – ಬರವ ಬಿನ್ನಹ ಮಾಡಿ ಪಡಿಹಾರರು ಮುರಾರಿಯ

ಪದ್ಯ ೯: ಯಾವ ಬೆಳಕನ್ನು ವಿರಾಟನು ಕಂಡನು?

ಕರೆಸಿಕೊಂಡು ಪುರೋಹಿತನನು
ತ್ತರನಖಿಳ ಮಹಾಪ್ರಧಾನರ
ನರಮನೆಯ ಹೊರವಂಟು ವೋಲಗ ಶಾಲೆಗೈತರುತ
ಕರಗಿ ಸೂಸಿದ ಚಂದ್ರ ಬಿಂಬದ
ಕಿರಣ ಲಹರಿಗಳೆನಲು ವಿವಿಧಾ
ಭರಣ ಮುಕ್ತಾಪ್ರಭೆಯ ಕಂಡನು ನೃಪತಿ ದೂರದಲಿ (ವಿರಾಟ ಪರ್ವ, ೧೧ ಸಂಧಿ, ೯ ಪದ್ಯ)

ತಾತ್ಪರ್ಯ:
ಪುರೋಹಿತರು, ಪ್ರಧಾನರು ಮತ್ತು ಉತ್ತರನನ್ನು ಕರೆಸಿಕೊಂಡು ವಿರಾಟನು ಸಭಾಸ್ಥಾನಕ್ಕೆ ಬಂದನು. ಚಂದ್ರಕಿರಣಗಳು ಕರಗಿ ಹೊರ ಹೊಮ್ಮುತ್ತಿರುವಂತೆ ಕಾಣುವ ಆಭರಣಗಳ ಮುತ್ತಿನ ಬೆಳಕನ್ನು ದೂರದಿಂದ ಕಂಡನು.

ಅರ್ಥ:
ಕರೆಸು: ಬರೆಮಾಡು; ಪುರೋಹಿತ: ವೇದೋಕ್ತ ವಿಧಿ, ಧಾರ್ಮಿಕ ವ್ರತ ಶುಭಕಾರ್ಯಗಳನ್ನು ಮಾಡಿಸುವವನು; ಅಖಿಳ: ಎಲ್ಲಾ; ಪ್ರಧಾನ: ಮಹಾಮಾತ್ರ, ಪ್ರಮುಖ; ಅರಮನೆ: ರಾಜರ ಆಲಯ; ಹೊರವಂಟು: ತೆರಳು; ಓಲಗ: ದರ್ಬಾರು; ಐತುರು: ಬಂದು ಸೇರು; ಕರಗು: ಕನಿಕರ ಪಡು, ನೀರಾಗಿಸು; ಸೂಸು: ಎರಚು, ಚಲ್ಲು; ಚಂದ್ರ: ಶಶಿ; ಬಿಂಬ: ಸೂರ್ಯ ಯಾ ಚಂದ್ರನ ಸುತ್ತಲೂ ಇರುವ ಪ್ರಭಾವ ವಲಯ; ಕಿರಣ: ರಶ್ಮಿ; ಲಹರಿ: ರಭಸ, ಆವೇಗ; ವಿವಿಧ: ಹಲವಾರು; ಆಭರಣ: ಒಡವೆ; ಮುಕ್ತಾಪ್ರಭೆ: ಮುತ್ತಿನ ಬೆಳಕು; ಕಂಡು: ನೋಡು; ನೃಪತಿ: ರಾಜ; ದೂರ: ಅಂತರ;

ಪದವಿಂಗಡಣೆ:
ಕರೆಸಿಕೊಂಡು +ಪುರೋಹಿತನನ್
ಉತ್ತರನ್+ಅಖಿಳ+ ಮಹಾ+ಪ್ರಧಾನರನ್
ಅರಮನೆಯ +ಹೊರವಂಟು +ಓಲಗ+ ಶಾಲೆಗ್+ಐತರುತ
ಕರಗಿ +ಸೂಸಿದ+ ಚಂದ್ರ +ಬಿಂಬದ
ಕಿರಣ+ ಲಹರಿಗಳೆನಲು +ವಿವಿಧಾ
ಭರಣ+ ಮುಕ್ತಾಪ್ರಭೆಯ+ ಕಂಡನು+ ನೃಪತಿ+ ದೂರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕರಗಿ ಸೂಸಿದ ಚಂದ್ರ ಬಿಂಬದ ಕಿರಣ ಲಹರಿಗಳೆನಲು ವಿವಿಧಾ
ಭರಣ ಮುಕ್ತಾಪ್ರಭೆಯ ಕಂಡನು

ಪದ್ಯ ೯: ದೂತರನ್ನು ರಾಜನು ಹೇಗೆ ಸನ್ಮಾನಿಸಿದನು?

ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ (ವಿರಾಟ ಪರ್ವ, ೧೦ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜನು ಈ ಸುದ್ದಿಯನ್ನು ಕೇಳಿ ವಿರಾಟನು ಬಹಳ ಹಿಗ್ಗಿದನು. ಅವನ ಕಣ್ಣುಗಳು ಅರಳಿದವು. ದೇಹವು ಅತೀವ ರೋಮಾಂಚನಗೊಂಡಿತು, ಹರ್ಷದ ಭರದಲ್ಲಿ ಮನಸ್ಸು ದಿಕ್ಕುತೋಚದಂತಾಯಿತು. ಸುದ್ದಿಯನ್ನು ಕೇಳಿ ಸಂಪೂರ್ಣ ಹರ್ಷದಿಂದ ದೂತರಿಗೆ ಹೇರಳವಾಗಿ ಉಡುಗೊರೆಗಳನ್ನು ನೀಡಿದನು. ದೂತರು ರಾಜನ ಓಲಗವನ್ನೇ ಸೂರೆಗೊಂಡರು.

ಅರ್ಥ:
ಕೇಳು: ಆಲಿಸು; ಮಿಗೆ: ಮತ್ತು, ಅಧಿಕ; ಹಿಗ್ಗು: ಹರ್ಷಿಸು; ತನು: ದೇಹ; ಪುಳಕಾಳಿ: ರೋಮಾಂಚನ; ತಳಿತ: ಚಿಗುರು; ಹರುಷ: ಸಂತಸ; ಬಹಳ: ತುಂಬ; ದಾಳಿ: ಆಕ್ರಮಣ; ಮನ: ಮನಸ್ಸು; ಮುಂದುಗೆಡು: ದಿಕ್ಕು ತೋಚದಂತಾಗು; ಕಂಗಳು: ಕಣ್ಣು; ಅರಳು: ಅಗಲವಾಗು, ಸಂತೋಷಗೊಳ್ಳು; ಲಾಲಿಸು: ಅಕ್ಕರೆಯನ್ನು ತೋರಿಸು; ಸರ್ವಾಂಗ: ಎಲ್ಲಾ; ಆಳೆ: ಪೋಷಿಸು; ಜನಪ: ರಾಜ; ಪಸಾಯ: ಉಡುಗೊರೆ; ದೂತಾಳಿ: ಸೇವಕರ ಗುಂಪು; ಸುಲಿ: ಬಿಚ್ಚು, ತೆಗೆ; ರಾಯ: ರಾಜ; ಓಲಗ: ದರ್ಬಾರು;

ಪದವಿಂಗಡಣೆ:
ಕೇಳಿ+ ಮಿಗೆ +ಹಿಗ್ಗಿದನು +ತನು +ಪುಳ
ಕಾಳಿ+ ತಳಿತುದು +ಬಹಳ +ಹರುಷದ
ದಾಳಿಯಲಿ +ಮನ +ಮುಂದುಗೆಟ್ಟುದು +ಕಂಗಳ್+ಅರಳಿದವು
ಲಾಲಿಸುತ +ಸರ್ವಾಂಗ +ಹರುಷದೊಳ್
ಆಳೆ +ಜನಪ +ಪಸಾಯಿತವ +ದೂ
ತಾಳಿಗಿತ್ತನು +ಸುಲಿದರ್+ಅವದಿರು +ರಾಯನ್+ಓಲಗವ

ಅಚ್ಚರಿ:
(೧) ಪುಳುಕಾಳಿ, ದಾಳಿ, ದೂತಾಳಿ – ಪ್ರಾಸ ಪದಗಳು
(೨) ರಾಜನ ಹರ್ಷದ ಸ್ಥಿತಿಯನ್ನು ಹೇಳುವ ಪರಿ – ಕೇಳಿ ಮಿಗೆ ಹಿಗ್ಗಿದನು ತನು ಪುಳಕಾಳಿ ತಳಿತುದು ಬಹಳ ಹರುಷದ ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು

ಪದ್ಯ ೧೯: ಕರ್ಣನ ಮೇಲೆ ಆಕ್ರಮಣ ಮಾಡಲು ಅಶ್ವತ್ಥಾಮನು ಹೇಗೆ ಸಿದ್ಧನಾದನು?

ತೆಗೆದು ತಾಳಿಗೆಗಡಿತನಕ ನಾ
ಲಗೆಯ ಕೀಳ್ವೆನು ಮುನಿದು ತ
ನ್ನೋಲಗವ ತೆಗೆಸಲಿ ಕೌರವನು ನಿನಗೊಲಿದು ಪತಿಕರಿಸಿ
ಅಗಣಿತದ ಗರುವರನು ನಿಂದಿಸಿ
ನಗುವೆ ನಿನ್ನನು ಕೊಲುವೆನೆಂದಾ
ಳುಗಳ ದೇವನು ಸೆಳೆದನಶ್ವತ್ಥಾಮ ಖಂಡೆಯವ (ವಿರಾಟ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ನಿನ್ನ ಗಂಟಲಿನವರೆಗೆ ಇರಿದು ನಿನ್ನ ನಾಲಿಗೆಯನ್ನು ಕೀಳುತ್ತೇನೆ, ಔರವನು ನಿನ್ನನ್ನೇ ಮನ್ನಿಸಿ ನನ್ನನ್ನು ಓಲಗದಿಂದ ದೂರಮಾಡಲಿ, ಅತ್ಯಂತ ಮಾನ್ಯರನ್ನು ಅಲ್ಲಗಳೆಯುತ್ತಾ ನಗುವ ನಿನ್ನನ್ನು ಕೊಲ್ಲುತ್ತೇನೆ ಎಂದು ಮಹಾಸುಭಟನಾದ ಅಶ್ವತ್ಥಾಮನು ತನ್ನ ಕತ್ತಿಯನ್ನು ಸೆಳೆದನು.

ಅರ್ಥ:
ತೆಗೆ: ಹೊರತರು; ತಾಳಿಗೆ: ಗಂಟಲು; ಅಡಿ: ಕೆಳಭಾಗ; ನಾಲಗೆ: ಜಿಹ್ವೆ; ಕೀಳು: ಕತ್ತರಿಸು; ಮುನಿ: ಕೋಪಗೊಳ್ಳು; ಓಲಗ: ದರ್ಬಾರು; ಒಲಿ: ಪ್ರೀತಿಸು; ಪತಿಕರಿಸು: ಅನುಗ್ರಹಿಸು; ಅಗಣಿತ: ಅಸಂಖ್ಯಾತ; ಗರುವರು: ಶ್ರೇಷ್ಠರು; ನಿಂದಿಸು: ಅಪಮಾನಗೊಳಿಸು; ನಗು: ಹರ್ಷಿಸು; ಕೊಲು: ಸಾಯಿಸು; ಆಳು: ಸೈನಿಕರ; ದೇವ: ಒಡೆಯ; ಸೆಳೆ: ಜಗ್ಗು, ಎಳೆ; ಖಂಡೆಯ: ಕತ್ತಿ;

ಪದವಿಂಗಡಣೆ:
ತೆಗೆದು +ತಾಳಿಗೆಗ್+ಅಡಿತನಕ +ನಾ
ಲಗೆಯ +ಕೀಳ್ವೆನು +ಮುನಿದು +ತನ್
ಓಲಗವ +ತೆಗೆಸಲಿ +ಕೌರವನು +ನಿನಗೊಲಿದು +ಪತಿಕರಿಸಿ
ಅಗಣಿತದ +ಗರುವರನು +ನಿಂದಿಸಿ
ನಗುವೆ +ನಿನ್ನನು +ಕೊಲುವೆನೆಂದ್
ಆಳುಗಳ +ದೇವನು +ಸೆಳೆದನ್+ಅಶ್ವತ್ಥಾಮ +ಖಂಡೆಯವ

ಅಚ್ಚರಿ:
(೧) ಅಶ್ವತ್ಥಾಮನ ಕೋಪ – ತೆಗೆದು ತಾಳಿಗೆಗಡಿತನಕ ನಾಲಗೆಯ ಕೀಳ್ವೆನು
(೨) ಅಶ್ವತ್ಥಾಮನನು ಬಣ್ಣಿಸಿದ ಪರಿ – ಆಳುಗಳ ದೇವನು

ಪದ್ಯ ೧೮: ಧರ್ಮಜನು ವಿರಾಟ ರಾಜನಿಗೆ ಏನು ಬೇಡಿದನು?

ಇತ್ತ ಬಿಜಯಂಗೈಯಿ ಹಿರಿಯರಿ
ದೆತ್ತಣಿಂದೈತಂದಿರೈ ಅ
ತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು
ಇತ್ತಪೆವು ಬೇಡಿದುದ ನಾವೆನೆ
ಸುತ್ತ ಬಳಸೆವು ರಾಜಸೇವೆ ನಿ
ಮಿತ್ತ ಬಂದೆವು ಮುನ್ನಿನೋಲಗವಂತರಿಸಿತಾಗಿ (ವಿರಾಟ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ವಿರಾಟನು ಧರ್ಮಜನನ್ನು ನೋಡಿ, ಅತ್ಯುತ್ತಮವಾದ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ ಮಹಾತ್ಮರನ್ನು ಕಂಡು ನಾವು ಬದುಕಿದುದು ಸಾರ್ಥಕವಯಿತು. ಎಲ್ಲಿಂದ ಬಂದಿರಿ? ಇತ್ತ ಬನ್ನಿ, ನೀವು ಬೇಡಿದುದನ್ನು ನಾವು ಕೊಡುತ್ತೇವೆ ಎಂದು ಉಪಚರಿಸಿದನು. ಧರ್ಮಜನು ನಾವು ಇದ್ದ ರಾಜನ ಓಲಗವು ಇಲ್ಲದಂತಾಯಿತು. ಆದುದರಿಂದ ರಾಜಾಶ್ರಯವನ್ನು ಬೇಡುತ್ತಿದ್ದೇವೆ, ಸುತ್ತ ಬಳಸಿ ಮಾತಾಡುವವರು ನಾವಲ್ಲ ಎಂದು ಧರ್ಮಜನು ಹೇಳಿದನು.

ಅರ್ಥ:
ಬಿಜಯಂಗೈ: ದಯಮಾಡು; ಹಿರಿಯ: ದೊಡ್ಡವ; ಎತ್ತಣ: ಎಲ್ಲಿಂದ; ಐತಂದು: ಬಂದು ಸೇರು; ಅತ್ಯುತ್ತಮ: ಶ್ರೇಷ್ಠ; ವೇಷ: ರೂಪ; ಮಹಾತ್ಮ: ಶ್ರೇಷ್ಠ; ಕಂಡು: ನೋಡು; ಬದುಕು: ಜೀವಿಸು; ಬೇಡು: ಕೇಳು; ಸುತ್ತ: ಎಲ್ಲಾ ಕಡೆ; ಬಳಸು: ಆವರಿಸುವಿಕೆ; ರಾಜಸೇವೆ: ರಾಜ ಕಾರ್ಯ; ನಿಮಿತ್ತ: ಕಾರಣ; ಬಂದು: ಆಗಮಿಸು; ಮುನ್ನ: ಮುಂಚೆ; ಓಲಗ: ದರ್ಬಾರು; ಇತ್ತು: ನೀಡು;

ಪದವಿಂಗಡಣೆ:
ಇತ್ತ +ಬಿಜಯಂಗೈಯಿ+ ಹಿರಿಯರಿದ್
ಎತ್ತಣಿಂದ್+ಐತಂದಿರೈ+ ಅ
ತ್ಯುತ್ತಮದ +ವೇಷದ +ಮಹಾತ್ಮರ+ ಕಂಡು +ಬದುಕಿದೆವು
ಇತ್ತಪೆವು+ ಬೇಡಿದುದ+ ನಾವೆನೆ
ಸುತ್ತ +ಬಳಸೆವು+ ರಾಜಸೇವೆ +ನಿ
ಮಿತ್ತ +ಬಂದೆವು+ ಮುನ್ನಿನ್+ಓಲಗವ್+ಅಂತರಿಸಿತಾಗಿ

ಅಚ್ಚರಿ:
(೧) ಇಲ್ಲದಂತಾಗು ಎಂದು ಹೇಳಲು – ಅಂತರಿಸಿತಾಗು ಪದದ ಬಳಕೆ

ಪದ್ಯ ೬೦: ಭೀಮನ ಕೋಪಮಿಶ್ರಿತ ನುಡಿಗಳು ಹೇಗಿದ್ದವು?

ಸಾಲದೇ ನಿಮಗಿನ್ನು ಕೌರವ
ರೋಲಗದ ಫಲವಾಯ್ತಲಾ ವನ
ಮಾಲೆ ಕೊರಳಿಂಗಲ್ಲ ಚರಣಾಭರಣವಾಯಿತಲೆ
ಬೀಳುಕೊಳಿರೇ ಬೊಪ್ಪನವರನು
ಮೇಲೆ ಮೋಹದ ತಾಯಲಾ ನಡೆ
ಹೇಳಿ ಕಳುಹಿಸಿಕೊಂಬೆವೆಂದನು ಭೂಪತಿಗೆ ಭೀಮ (ಸಭಾ ಪರ್ವ, ೧೭ ಸಂಧಿ, ೬೦ ಪದ್ಯ)

ತಾತ್ಪರ್ಯ:
ಭೀಮನು ತನ್ನ ಕೋಪಾಗ್ನಿಯನ್ನು ಸಂತೈಸಿ ಧರ್ಮರಾಯನ ಬಳಿ ಕೌರವರ ಸಭೆಗೆ ಬಂದುದು ಫಲವನ್ನು ಕೊಟ್ಟಿತಲ್ಲವೇ? ನಿಮಗಿನ್ನೂ ಸಾಕಾಗಲಿಲ್ಲವೇ? ತುಳಸೀಮಾಲೆಯು ಕೊರಳಿಗೆ ಆಭ್ರಣವಾಗುವುದರ ಬದಲು ಅರಣ್ಯಸಂಚಾರವು ಪಾದಗಳಿಗೆ ಆಭರಣವಾಯಿತಲ್ಲವೇ? ಇನ್ನೇಕೆ ತಡ, ದೊಡ್ಡಪ್ಪನನ್ನು ನೋಡಿ ಅವನಿಂದ ಬೀಳ್ಕೊಳ್ಳೋಣ, ಅಲ್ಲದೇ ಗಾಂಧಾರಿಯು ಪ್ರೀತಿಯ ತಾಯಿಯಲ್ಲವೇ? ಅವಳಿಗೆ ಹೇಳಿ ಅಪ್ಪಣೆ ಪಡೆದು ತೆರಳೋಣ ಎಂದು ಭೀಮನು ಧರ್ಮರಾಯನಿಗೆ ಹೇಳಿದನು.

ಅರ್ಥ:
ಸಾಲದೇ: ಸಾಕಾಗಲಿಲ್ಲವೇ; ಓಲಗ: ದರ್ಬಾರು; ಫಲ: ಪ್ರಯೋಜನ; ವನಮಾಲೆ: ತುಳಸೀಮಾಲೆ; ಕೊರಳು: ಕುತ್ತಿಗೆ; ಚರಣ: ಪಾದ; ಆಭರಣ: ಒಡವೆ; ಬೀಳುಕೊಳು: ಹೊರಡಲು ಅಪ್ಪಣೆ ಪಡೆ, ತೆರಳು; ಬೊಪ್ಪ: ತಂದೆ; ಮೋಹ: ಪ್ರೀತಿಯ; ತಾಯಿ: ಮಾತೆ; ನಡೆ: ಹೋಗು; ಹೇಳು: ತಿಳಿಸು; ಕಳುಹಿಸಿಕೊಂಬೆ: ಬೀಳ್ಕೊಡು; ಭೂಪತಿ: ರಾಜ;

ಪದವಿಂಗಡಣೆ:
ಸಾಲದೇ+ ನಿಮಗಿನ್ನು+ ಕೌರವರ್
ಓಲಗದ +ಫಲವಾಯ್ತಲಾ +ವನ
ಮಾಲೆ +ಕೊರಳಿಂಗಲ್ಲ+ ಚರಣಾಭರಣವಾಯಿತಲೆ
ಬೀಳುಕೊಳಿರೇ+ ಬೊಪ್ಪನವರನು
ಮೇಲೆ +ಮೋಹದ +ತಾಯಲಾ +ನಡೆ
ಹೇಳಿ +ಕಳುಹಿಸಿ+ಕೊಂಬೆವ್+ಎಂದನು +ಭೂಪತಿಗೆ+ ಭೀಮ

ಅಚ್ಚರಿ:
(೧) ಭೀಮನ ಕೋಪಮಿಶ್ರಿತ ನುಡಿ – ಬೀಳುಕೊಳಿರೇ ಬೊಪ್ಪನವರನು ಮೇಲೆ ಮೋಹದ ತಾಯಲಾ ನಡೆ ಹೇಳಿ ಕಳುಹಿಸಿಕೊಂಬೆವೆಂದನು ಭೂಪತಿಗೆ ಭೀಮ

ಪದ್ಯ ೩೦: ದುರ್ಯೋಧನನು ಏಕೆ ಜರ್ಝರಿತನಾದ?

ನೆಗೆದ ಬುಗಟದೆ ಹಣೆಯಲವರೋ
ಲಗದ ಸಭೆಯಲಿ ನನೆದ ಸೀರೆಯ
ತೆಗಸಿ ಕೊಟ್ಟರು ತಮ್ಮ ಮಡಿವರ್ಗದ ನವಾಂಬರವ
ಬೆಗಡುಗೊಳಿಸಿದರೆನ್ನನವರೋ
ಲಗದ ಸೂಳೆಯರವರ ಸೂಳಿನ
ನಗೆಯ ನೆನೆನೆನೆದೆನ್ನ ಮನ ಜರ್ಝರಿತವಾಯ್ತೆಂದ (ಸಭಾ ಪರ್ವ, ೧೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಾನು ಅವರ ಆಸ್ಥಾನದಲ್ಲಿ ಎಡವಿ ಡಿಕ್ಕಿ ಹೊಡೆದು ಹಣೆಯಲ್ಲಿ ಎದ್ದಿರುವ ಬೊರೆ ಇನ್ನು ತಗ್ಗಿಲ್ಲ. ಆಸ್ಥಾನದ ನಡುವೆ ನನ್ನ ಬಟ್ಟೆಗಳು ತೊಯ್ದು ಹೋಗಲು ಅವರು ನನಗೆ ಹೊಸಬಟ್ಟೆಗಳನ್ನು ತೆಗಿಸಿಕೊಟ್ಟರು. ಅವರ ಆಸ್ಥಾನದ ವೇಶ್ಯೆಯರು ಮತ್ತೆ ಮತ್ತೆ ನನ್ನನ್ನು ನೋಡಿ ನಗುತ್ತಿರುವುದು ನನ್ನನ್ನು ದಿಗ್ಭ್ರಮೆಗೊಳಿಸಿದೆ. ಅವರ ನಗೆಯನ್ನು ಮತ್ತೆ ಮತ್ತೆ ನೆನೆದು ನನ್ನ ಎದೆ ಜರ್ಝರಿತವಾಗಿದೆ ಎಂದು ತನ್ನ ದುಃಖವನ್ನು ತೋಡಿಕೊಂಡನು.

ಅರ್ಥ:
ನೆಗೆ:ನೆಗೆತ, ಜಿಗಿತ; ಬುಗುಟು: ತಲೆಯ ಮೇಲಿನ ಬೊರೆ, ಗಾಯ; ಹಣೆ: ಲಲಾಟ, ಭಾಳ; ಓಲಗ: ದರ್ಬಾರು; ಸಭೆ: ಗೋಷ್ಠಿ; ನನೆ: ಒದ್ದೆ, ತೋಯ್ದ; ಸೀರೆ: ಬಟ್ಟೆ; ತೆಗೆಸಿ: ಬಿಚ್ಚಿ; ಕೊಟ್ಟರು: ನೀಡಿದರು; ಮಡಿ: ಸ್ವಚ್ಛ; ನವ: ಹೊಸ; ಅಂಬರ: ಬಟ್ಟೆ; ಬೆಗಡು: ಆಶ್ಚರ್ಯ, ಬೆರಗು; ಸೂಳೆ: ವೇಶ್ಯೆ; ನಗೆ: ಹರ್ಷ, ಸಂತೋಷ; ನೆನೆ: ಜ್ಞಾಪಿಸು; ಮನ: ಮನಸ್ಸು; ಜರ್ಝರಿತ: ಭಗ್ನ, ಚೂರುಚೂರು;

ಪದವಿಂಗಡಣೆ:
ನೆಗೆದ +ಬುಗಟದೆ+ ಹಣೆಯಲ್+ಅವರ್
ಓಲಗದ +ಸಭೆಯಲಿ +ನನೆದ +ಸೀರೆಯ
ತೆಗಸಿ+ ಕೊಟ್ಟರು+ ತಮ್ಮ +ಮಡಿವರ್ಗದ +ನವ+ಅಂಬರವ
ಬೆಗಡು+ಗೊಳಿಸಿದರ್+ಎನ್ನನ್+ಅವರ್+
ಓಲಗದ +ಸೂಳೆಯರ್+ಅವರ +ಸೂಳಿನ
ನಗೆಯ +ನೆನೆನೆನೆದ್+ಎನ್ನ +ಮನ +ಜರ್ಝರಿತವಾಯ್ತೆಂದ

ಅಚ್ಚರಿ:
(೧) ಓಲಗ, ಸಭೆ – ಸಮನಾರ್ಥಕ ಪದ
(೨) ನೆನೆನೆನೆದು – ಮತ್ತೆ ಮತ್ತೆ ಜ್ಞಾಪಿಸಿಕೊಂಡು ಎಂದು ಹೇಳುವ ಪರಿ

ಪದ್ಯ ೨೫: ಧೃತರಾಷ್ಟ್ರನು ದುರ್ಯೋಧನನನ್ನು ಏನು ಕೇಳಿದ?

ದುಗುಡವೇಕೈ ಮಗನೆ ಹಿರಿಯೋ
ಲಗವನೀಯೆ ಗಡೇಕೆ ವೈಹಾ
ಳಿಗಳ ಬೇಟೆಗಳವನಿಪಾಲ ವಿನೋದ ಕೇಳಿಗಳ
ಬಗೆಯೆ ಗಡ ಬಾಂಧವರ ಸಚಿವರ
ಹೊಗಿಸೆ ಗಡ ನಿನ್ನರಮನೆಯ ನೀ
ಹಗಲು ನಿನಗೇಕಾಯ್ತು ಕತ್ತಲೆಯೆಂದನಂಧನೃಪ (ಸಭಾ ಪರ್ವ, ೧೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ಮಗನನ್ನು ಅಪ್ಪಿ ಮನಗೇ ನಿನಗಾವ ದುಃಖ ಬಂದೊದಗಿದೆ? ಆಸ್ಥಾನಕ್ಕೇಕೆ ಹೋಗುತ್ತಿಲ್ಲ? ಆನೆ ಕುದುರೆಗಳ ಸವಾರಿ, ಬೇಟೆ ಮತ್ತಿತರ ರಾಜಯೋಗ್ಯ ವಿನೋದಗಳನ್ನೇಕೆ ಲೆಕ್ಕಕ್ಕೆ ತಂದುಕೊಳ್ಳುತ್ತಿಲ್ಲ? ಮಂತ್ರಿಗಳನ್ನೂ ಬಾಂಧವರನ್ನೂ ನಿನ್ನ ಅರಮನೆಗೇಕೆ ಹೊಗಿಸುತ್ತಿಲ್ಲ. ಹಗಲು ನಿನಗೇಕೆ ರಾತ್ರಿಯ ಕತ್ತಲಾಯಿತು ಎಂದು ದುರ್ಯೋಧನನನ್ನು ಧೃತರಾಷ್ಟ್ರನು ಕೇಳಿದನು.

ಅರ್ಥ:
ದುಗುಡ: ದುಃಖ; ಮಗ: ಪುತ್ರ, ಸುತ; ಹಿರಿ: ದೊಡ್ಡ; ಓಲಗ: ದರ್ಬಾರು; ಗಡ: ಬೇಗನೆ, ಅಲ್ಲವೆ; ವೈಹಾಳಿ: ಕುದುರೆ ಸವಾರಿ, ಸಂಚಾರ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವುದು; ಅವನಿಪಾಲ: ರಾಜ; ವಿನೋದ: ಹಾಸ್ಯ, ತಮಾಷೆ; ಕೇಳಿ: ಕ್ರೀಡೆ, ವಿನೋದ; ಬಗೆ: ಜಾತಿ, ಲಕ್ಷಿಸು; ಬಾಂಧವರು: ಸಂಬಂಧಿಕರು; ಸಚಿವ: ಮಂತ್ರಿ; ಹೊಗಿಸು: ಹೊಗುವಂತೆ ಮಾಡು; ಅರಮನೆ: ಆಲಯ; ಹಗಲು: ದಿನ, ದಿವಸ; ಕತ್ತಲೆ: ಅಂಧಕಾರ; ಅಂಧನೃಪ: ಕಣ್ಣಿಲ್ಲದ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ದುಗುಡವ್+ಏಕೈ+ ಮಗನೆ+ ಹಿರಿ+
ಓಲಗವನೀಯೆಗಡ್+ಏಕೆ+ ವೈಹಾ
ಳಿಗಳ +ಬೇಟೆಗಳ್+ಅವನಿಪಾಲ+ ವಿನೋದ +ಕೇಳಿಗಳ
ಬಗೆಯೆ+ ಗಡ +ಬಾಂಧವರ +ಸಚಿವರ
ಹೊಗಿಸೆ +ಗಡ+ ನಿನ್ನ್+ಅರಮನೆಯ +ನೀ
ಹಗಲು+ ನಿನಗೇಕಾಯ್ತು +ಕತ್ತಲೆ+ಎಂದನ್+ಅಂಧನೃಪ

ಅಚ್ಚರಿ:
(೧) ಕತ್ತಲೆ ಅಂಧನೃಪ – ಕತ್ತಲೆ ಅಂಧ ಪದದ ಬಳಕೆ

ಪದ್ಯ ೫: ದುರ್ಯೋಧನನು ಹೇಗೆ ಮಾತನ್ನು ಪ್ರಾರಂಭಿಸಿದನು?

ಬಂದುದಿರುಳೋಲಗಕೆ ರಾಯನ
ಮಂದಿ ದಳಪತಿ ಶಕುನಿ ಕೃಪ ಗುರು
ನಂದನಾದಿ ಪ್ರತತಿ ಸಚಿವ ಪಸಾಯಿತರು ಸಹಿತ
ಇಂದಿನಾಹವದೊಳಗೆ ಕುಂತೀ
ನಂದನರ ಬೊಬ್ಬಾಟ ಬಲುಹಾ
ಯ್ತೆಂದು ಮೆಲ್ಲನೆ ಮಾತ ತೆಗೆದನು ಕೌರವರ ರಾಯ (ಕರ್ಣ ಪರ್ವ, ೫ ಸಂಧಿ, ೫ ಪದ್ಯ)

ತಾತ್ಪರ್ಯ:
ಎಲ್ಲರೂ ಆ ದಿನದ ಯುದ್ಧವನ್ನು ಮುಗಿಸಿ ರಾತ್ರಿಯ ಹೊತ್ತು ಎಲ್ಲರು ಓಲಗದಲ್ಲಿ ಸೇರಿದರು, ಸೇನಾಧಿಪತಿ ಕರ್ಣ, ಶಕುನಿ, ಕೃಪಾಚಾರ್ಯರು, ಅಶ್ವತ್ಥಾಮ, ಮಂತ್ರಿಗಳು, ಸಾಮಂತರಾಜರು, ದುರ್ಯೋಧನಾದಿಯಾಗಿ ಸೇರಿದರು. ದುರ್ಯೋಧನನು ಮಾತನ್ನು ಮೆಲ್ಲನೆ ಪ್ರಾರಂಭಿಸುತ್ತಾ, ಈ ದಿನದ ಯುದ್ಧದಲ್ಲಿ ಪಾಂಡವರ ಆರ್ಭಟ ಹೆಚ್ಚಾಯಿತು ಎಂದು ಪ್ರಾರಂಭದ ನುಡಿಗಳನ್ನು ತೆಗೆದನು.

ಅರ್ಥ:
ಬಂದು: ಆಗಮಿಸು; ಇರುಳು: ರಾತ್ರಿ; ಓಲಗ: ದರ್ಬಾರು; ರಾಯ: ರಾಜ; ಮಂದಿ: ಜನ; ದಳಪತಿ: ಸೇನಾಧಿಪತಿ; ನಂದನ: ಮಗ; ಪ್ರತತಿ: ಸಮೂಹ; ಸಚಿವ: ಮಂತ್ರಿ; ಪಸಾಯಿತ: ಸಾಮಂತರಾಜ; ಸಹಿತ: ಜೊತೆ; ಇಂದಿನ: ಇವತ್ತು; ಆಹವ: ಯುದ್ಧ; ಬೊಬ್ಬಾಟ: ಜೋರು, ಆರ್ಭಟ; ಬಲುಹು: ಬಹಳ, ತುಂಬ; ಮೆಲ್ಲನೆ: ನಿಧಾನ; ಮಾತ: ನುಡಿ; ತೆಗೆ: ಪ್ರಾರಂಭಿಸು;

ಪದವಿಂಗಡಣೆ:
ಬಂದುದ್+ಇರುಳ್+ಓಲಗಕೆ +ರಾಯನ
ಮಂದಿ +ದಳಪತಿ+ ಶಕುನಿ+ ಕೃಪ +ಗುರು
ನಂದನಾದಿ +ಪ್ರತತಿ +ಸಚಿವ +ಪಸಾಯಿತರು +ಸಹಿತ
ಇಂದಿನ್+ಆಹವದೊಳಗೆ+ ಕುಂತೀ
ನಂದನರ +ಬೊಬ್ಬಾಟ +ಬಲುಹಾ
ಯ್ತೆಂದು +ಮೆಲ್ಲನೆ +ಮಾತ +ತೆಗೆದನು +ಕೌರವರ+ ರಾಯ

ಅಚ್ಚರಿ:
(೧) ರಾಯ – ೧, ೬ ಸಾಲಿನ ಕೊನೆ ಪದ
(೨) ಜೋಡಿ ಪದಗಳು – ಬೊಬ್ಬಾಟ ಬಲುಹಾಯ್ತೆಂದು; ಮೆಲ್ಲನೆ ಮಾತ