ವೀರನಲ್ಲಾ ಬನದ ರಾಜಕು
ಮಾರನಲ್ಲಾ ಕೌರವನ ಬಡಿ
ಹೋರಿಯಲ್ಲಾ ತಿರಿದೆಲಾ ದಿಟವೇಕಚಕ್ರದೊಳು
ನಾರಿಯರ ನಾಟಕದ ಚೋಹವ
ನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೇಕೆನುತ ತೆಗೆದೆಚ್ಚನಾ ಕರ್ಣ (ವಿರಾಟ ಪರ್ವ, ೯ ಸಂಧಿ, ೨೩ ಪದ್ಯ)
ತಾತ್ಪರ್ಯ:
ಎಲೋ ಅರ್ಜುನ ನೀಣು ವೀರನಲ್ಲವೇ? ಕಾಡಿನ ರಾಜಕುಮಾರನಲ್ಲವೇ? ಕೌರವನ ಬಡಿ ಹೋರಿಯಲ್ಲವೇ? ಏಕ ಚಕ್ರದಲ್ಲಿ ಓಡಾಡಿ ತಿಂದು ಉಂಡವನಲ್ಲವೇ? ಅದಿರಲಿ ನಾಟ್ಯದಲ್ಲಿ ಧರಿಸಿದ್ದ ಸ್ತ್ರೀ ವೇಷವನ್ನು ತೆಗೆದು ನಿನಗೆ ಗಂಡುಡಿಗೆ ಕೊಟ್ಟವರಾರು? ನಿನಗೇಕೆ ಈ ಶೌರ್ಯ ಎನ್ನುತ್ತಾ ಕರ್ಣನು ಮತ್ತೆ ಬಾಣಗಳನ್ನು ಬಿಟ್ಟನು.
ಅರ್ಥ:
ವೀರ: ಶೂರ; ಬನ: ಕಾಡು; ಹೋರಿ: ಗೂಳಿ: ಬಡಿ: ಹೊಡೆ, ತಾಡಿಸು; ತಿರಿ: ಸುತ್ತಾಡು, ತಿರುಗಾಡು; ದಿಟ: ನಿಜ; ನಾರಿ: ಹೆಣ್ಣು; ನಾಟಕ: ಪ್ರದರ್ಶನ ಕಲೆ; ಚೋಹ: ಚೋದ್ಯ, ಅಚ್ಚರಿ; ತೆಗೆ: ಹೊರತರು; ಶೌರ್ಯ: ಪರಾಕ್ರಮ; ಸಿರಿ: ಐಶ್ವರ್ಯ; ಎಚ್ಚು: ಬಾಣ ಪ್ರಯೋಗ ಮಾಡು;
ಪದವಿಂಗಡಣೆ:
ವೀರನಲ್ಲಾ+ಬನದ +ರಾಜಕು
ಮಾರನಲ್ಲಾ +ಕೌರವನ +ಬಡಿ
ಹೋರಿಯಲ್ಲಾ+ ತಿರಿದೆಲಾ +ದಿಟವ್+ಏಕಚಕ್ರದೊಳು
ನಾರಿಯರ+ ನಾಟಕದ +ಚೋಹವನ್
ಆರು +ತೆಗೆದರು +ಪಾರ್ಥ +ನಿನಗೀ
ಶೌರಿಯದ +ಸಿರಿಯೇಕೆನುತ +ತೆಗೆ+ಎಚ್ಚನಾ +ಕರ್ಣ
ಅಚ್ಚರಿ:
(೧) ಅರ್ಜುನನನ್ನು ಕೆಣಕುವ ಪರಿ – ನಾರಿಯರ ನಾಟಕದ ಚೋಹವನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೇಕೆನುತ