ಇದು ಕಣಾ ಧರ್ಮಜನ ಸತ್ಯಾ
ಭ್ಯುದಯಕೋಸುಗ ಊರ್ವಶಿಯ ಶಾ
ಪದಲಿ ಬಂದುದು ಹೊತ್ತು ನೂಕಿದೆನೊಂದು ವತ್ಸರವ
ಇದಕೆ ನಲ್ಜೋಡಾಯ್ತು ನಿರ್ವಿ
ಘ್ನದಲಿ ದಾಂಟಿದೆವವಧಿಯನು ನ
ಮ್ಮೆದಟತನವನು ಭೀತಿಯಿಲ್ಲದೆ ನೋಡು ನೀನೆಂದ (ವಿರಾಟ ಪರ್ವ, ೭ ಸಂಧಿ, ೫೦ ಪದ್ಯ)
ತಾತ್ಪರ್ಯ:
ಉತ್ತರಕುಮಾರ, ಧರ್ಮಜನ ಸತ್ಯದ ಹೆಚ್ಚಳಕ್ಕಾಗಿ, ಊರ್ವಶಿಯು ಕೊಟ್ಟ ಶಾಪದಿಂದ ಈ ನಪುಂಸಕತನವು ಒಂದು ವರ್ಷಕಾಲ ಬಂದಿತು, ಅಜ್ಞಾತವಾಸಕ್ಕೆ ಈ ಬೃಹನ್ನಳೆ ವೇಷವನ್ನು ಜೋಡಿಸಿಕೊಂಡು ಕಳೆದೆನು. ಇನ್ನು ನೀನು ನನ್ನ ಪರಾಕ್ರಮವನ್ನು ಭಯಗೊಳ್ಳದೆ ನೋಡು ಎಂದು ಅರ್ಜುನನು ಹೇಳಿದನು.
ಅರ್ಥ:
ಅಭ್ಯುದಯ: ಅಭಿವೃದ್ಧಿ; ಓಸುಗ: ಓಸ್ಕರ; ಶಾಪ: ನಿಷ್ಠುರದ ನುಡಿ; ಹೊತ್ತು: ಧರಿಸು; ನೂಕು: ತಳ್ಳು; ವತ್ಸರ: ವರ್ಷ; ಜೋಡು: ಜೊತೆ; ನಿರ್ವಿಘ್ನ: ಅಡಚಣೆಗಳಿಲ್ಲದೆ; ಅವಧಿ: ಕಾಲ; ಎದಟತನ: ಪರಾಕ್ರಮ; ಭೀತಿ: ಭಯ; ನೋಡು: ವೀಕ್ಷಿಸು;
ಪದವಿಂಗಡಣೆ:
ಇದು +ಕಣಾ +ಧರ್ಮಜನ +ಸತ್ಯ
ಅಭ್ಯುದಯಕ್+ಓಸುಗ +ಊರ್ವಶಿಯ+ ಶಾ
ಪದಲಿ +ಬಂದುದು +ಹೊತ್ತು +ನೂಕಿದೆನ್+ಒಂದು +ವತ್ಸರವ
ಇದಕೆ +ನಲ್ಜೋಡಾಯ್ತು+ ನಿರ್ವಿ
ಘ್ನದಲಿ +ದಾಂಟಿದೆವ್+ಅವಧಿಯನು +ನಮ್ಮ್
ಎದಟತನವನು+ ಭೀತಿಯಿಲ್ಲದೆ +ನೋಡು +ನೀನೆಂದ
ಅಚ್ಚರಿ:
(೧) ಅರ್ಜುನನ ಪರಾಕ್ರಮ – ನಮ್ಮೆದಟತನವನು ಭೀತಿಯಿಲ್ಲದೆ ನೋಡು