ಪದ್ಯ ೪೭: ಭೀಷ್ಮಾರ್ಜುನರ ಸಮರವು ಹೇಗೆ ಸಾಗಿತ್ತು?

ಉಲಿಯೆ ಕಿರುಘಂಟೆಗಳು ಹೊಳ ಹೊಳ
ಹೊಳೆವ ಶಕ್ತಿಯ ತುಡುಕಿ ಭೀಷ್ಮನು
ಫಲುಗುಣನನಿಡೆ ಕಡಿದು ಬಿಸುಟನು ನೂರು ಬಾಣದಲಿ
ಸೆಳೆದು ಫಲುಗುಣ ತಿರುಹಿ ಭೀಷ್ಮನ
ತಲೆಯ ಲಕ್ಷಿಸಿ ಹೊನ್ನ ಘಂಟೆಗ
ಳುಲಿಯೆ ಬಿಟ್ಟೇರಿಂದಲಿಡೆ ಖಂಡಿಸಿದನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ಭೀಷ್ಮನು ಒಂದು ಶಕ್ತಿಯನ್ನು ಹಿಡಿದು ಅದರ ಕಿರುಘಂಟೆಗಳು ಸದ್ದು ಮಾಡುತ್ತಿರಲು ಅರ್ಜುನನನ್ನು ಹೊಡೆದನು, ಅರ್ಜುನನು ನೂರು ಬಾಣಗಳಿಂದ ಆ ಶಕ್ತಿಯನ್ನು ಕಡಿದು, ಭೀಷ್ಮನ ತಲೆಗೆ ಗುರಿಯಿಟ್ಟು ಶಕ್ತಿಯೊಂದನ್ನು ಎಸೆದನು. ಭೀಷ್ಮನು ಅದನ್ನು ಕತ್ತರಿಸಿ ಬಿಟ್ಟನು.

ಅರ್ಥ:
ಉಲಿ: ಶಬ್ದ; ಕಿರುಘಂಟೆ; ಚಿಕ್ಕ ಘಂಟೆ; ಹೊಳೆ: ಪ್ರಕಾಶ; ಶಕ್ತಿ: ಸಾಮರ್ಥ್ಯ; ತುಡುಕು: ಹೋರಾಡು, ಸೆಣಸು; ಕಡಿ: ಕತ್ತರಿಸು; ಬಿಸುಟು: ಹೊರಹಾಕು; ನೂರು: ಶತ; ಬಾಣ: ಅಂಬು; ಸೆಳೆ: ಎಳೆತ, ಸೆಳೆತ; ತಿರುಹಿ: ತಿರುಗು; ತಲೆ: ಶಿರ; ಲಕ್ಷಿಸು: ಗುರಿಯಿಡು; ಹೊನ್ನ: ಚಿನ್ನ; ಬಿಟ್ಟೇರು: ಈಟಿ; ಖಂಡಿಸು: ತುಂಡು ಮಾಡು;

ಪದವಿಂಗಡಣೆ:
ಉಲಿಯೆ +ಕಿರುಘಂಟೆಗಳು +ಹೊಳ +ಹೊಳ
ಹೊಳೆವ+ ಶಕ್ತಿಯ +ತುಡುಕಿ +ಭೀಷ್ಮನು
ಫಲುಗುಣನನಿಡೆ+ ಕಡಿದು+ ಬಿಸುಟನು +ನೂರು +ಬಾಣದಲಿ
ಸೆಳೆದು +ಫಲುಗುಣ +ತಿರುಹಿ +ಭೀಷ್ಮನ
ತಲೆಯ +ಲಕ್ಷಿಸಿ+ ಹೊನ್ನ +ಘಂಟೆಗಳ್
ಉಲಿಯೆ +ಬಿಟ್ಟೇರಿಂದಲಿಡೆ+ ಖಂಡಿಸಿದನಾ +ಭೀಷ್ಮ

ಅಚ್ಚರಿ:
(೧) ಉಲಿಯೆ – ೧, ೬ ಸಾಲಿನ ಮೊದಲ ಪದ