ಒದರಿ ಮೇಲಿಕ್ಕಿದರು ನಿಸ್ಸಾ
ಳದ ನಿರಂತರ ಸೂಳುವೊಯ್ಲಿನ
ಹೊದರುಗಳ ಹೊಸ ಮಸೆಯಡಾಯ್ದದ ಸಾಲ ಸಂದಣಿಯ
ಸದರವೀ ಹೊತ್ತೆನುತ ಗೆಲವಿನ
ಕುದುಕುಳಿಗಳುರವಣಿಸೆ ಕಾಣುತ
ಗದಗದಿಸಿ ಮುರವೈರಿ ಚಾಚಿದನರ್ಜುನಗೆ ರಥವ (ದ್ರೋಣ ಪರ್ವ, ೧೦ ಸಂಧಿ, ೩೦ ಪದ್ಯ)
ತಾತ್ಪರ್ಯ:
ನಿಸ್ಸಾಳಗಳನ್ನು ಮೇಲಿಂದ ಮೇಲೆ ಹೊಡೆಯುತ್ತಾ, ಮತ್ತೆ ಮತ್ತೆ ಬೊಬ್ಬಿಡುತ್ತಾ, ಕೇಕೆ ಹೊಡೆಯುತ್ತಾ, ಮಸೆದ ಕತ್ತಿಗಲನ್ನು ಹಿಡಿದು ಮತ್ಸರದಿಂದ ಕುದಿಯುತ್ತಾ ಕೌರವ ಸೈನಿಕರು ಗುಂಪು ಗುಂಪಾಗಿ ಇದೇ ಹೊತ್ತು ಎಂದು ನುಗ್ಗಲು, ಶ್ರೀಕೃಷ್ಣನು ಅರ್ಜುನನ ಬಳಿಗೆ ರಥವನೊಯ್ದನು.
ಅರ್ಥ:
ಒದರು: ಕೊಡಹು, ಜಾಡಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ನಿರಂತರ: ಯಾವಾಗಲು; ಸೂಳು: ಆರ್ಭಟ, ಬೊಬ್ಬೆ; ಹೊದರು: ಗುಂಪು, ಸಮೂಹ; ಹೊಸ: ನವೇನ; ಮಸೆ: ಹರಿತವಾದುದು; ಅಡಾಯ್ದು: ಅಡ್ಡ ಬಂದು; ಸಾಲ: ಸುತ್ತು, ಪ್ರಾಕಾರ; ಸಂದಣಿ: ಗುಂಪು; ಸದರ: ಸಲಿಗೆ, ಸಸಾರ; ಹೊತ್ತು: ಹೊರು; ಗೆಲವು: ಜಯ; ಕುದುಕುಳಿ: ವ್ಯಾಕುಲ ಮನಸ್ಸಿನವನು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕಾಣು: ತೋರು; ಗದಗದಿಸು: ನಡುಗು; ಮುರವೈರಿ: ಕೃಷ್ಣ;
ಪದವಿಂಗಡಣೆ:
ಒದರಿ +ಮೇಲಿಕ್ಕಿದರು +ನಿಸ್ಸಾ
ಳದ +ನಿರಂತರ+ ಸೂಳುವೊಯ್ಲಿನ
ಹೊದರುಗಳ +ಹೊಸ +ಮಸೆ+ಅಡಾಯ್ದದ +ಸಾಲ +ಸಂದಣಿಯ
ಸದರವ್+ಈ+ ಹೊತ್+ಎನುತ +ಗೆಲವಿನ
ಕುದುಕುಳಿಗಳ್+ಉರವಣಿಸೆ +ಕಾಣುತ
ಗದಗದಿಸಿ +ಮುರವೈರಿ +ಚಾಚಿದನ್+ಅರ್ಜುನಗೆ +ರಥವ
ಅಚ್ಚರಿ:
(೧) ಕುದುಕುಳಿ, ಗದಗದಿಸಿ – ಪದಗಳ ಬಳಕೆ