ಪದ್ಯ ೨೦: ಧೃತರಾಷ್ಟ್ರನು ಯಾರ ತಲೆಯನ್ನು ನೇವರಿಸಿದನು?

ಬಂದು ಸಂಜಯನಂಧನೃಪತಿಯ
ಮಂದಿರವ ಹೊಕ್ಕಖಿಳ ನಾರೀ
ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ
ಬಂದರಾರೆನೆ ಸಂಜಯನು ಜೀ
ಯೆಂದಡುತ್ಸಾಹದಲಿ ಬಂದೈ
ತಂದೆ ಸಂಜಯ ಬಾಯೆನುತ ತಡವಿದನು ಬೋಳೈಸಿ (ಗದಾ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನರಮನೆಯನ್ನು ಹೊಕ್ಕು, ಸ್ತ್ರೀಯರನ್ನು ಪಲ್ಲಕ್ಕಿಗಳಲ್ಲಿ ಅವರವರ ಮನೆಗೆ ಕಳುಹಿಸಿದನು. ಧೃತರಾಷ್ಟ್ರನು ಬಂದವರಾರು ಎಂದು ಉತ್ಸಾಹದಿಂದ ಕೇಳಲು ಸಂಜಯನು ಒಡೆಯಾ ನಾನು ಎಂದು ಹೇಳಲು, ಧೃತರಾಷ್ಟ್ರನು ಉತ್ಸಾಹದಿಂದ ಅಪ್ಪಾ ಸಂಜಯ ಬಾ ಬಾ ಎಂದು ಆತನ ತಲೆಯನ್ನು ನೇವರಿಸಿದನು.

ಅರ್ಥ:
ಬಂದು: ಆಗಮಿಸು; ಅಂಧ: ಕುರುಡ; ನೃಪ: ರಾಜ; ಮಂದಿರ: ಆಲಯ; ಹೊಕ್ಕು: ಸೇರು; ಅಖಿಳ: ಎಲ್ಲಾ; ನಾರಿ: ಹೆಂಗಸು; ವೃಂದ: ಗುಂಪು; ಕಳುಹಿದ: ತೆರಳು, ಹೊರಗಡೆ ಅಟ್ಟು; ದಂಡಿಗೆ: ಪಲ್ಲಕ್ಕಿ; ಮನೆ: ಆಲಯ, ಗೃಹ; ಜೀಯ: ಒಡೆಯ; ಉತ್ಸಾಹ: ಸಂಭ್ರಮ; ತಡವು: ನೇವರಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು;

ಪದವಿಂಗಡಣೆ:
ಬಂದು +ಸಂಜಯನ್+ಅಂಧ+ನೃಪತಿಯ
ಮಂದಿರವ+ ಹೊಕ್ಕ್+ಅಖಿಳ +ನಾರೀ
ವೃಂದವನು +ಕಳುಹಿದನು +ದಂಡಿಗೆಗಳಲಿ+ ಮನೆಮನೆಗೆ
ಬಂದರಾರ್+ಎನೆ +ಸಂಜಯನು +ಜೀಯ್
ಎಂದಡ್+ಉತ್ಸಾಹದಲಿ +ಬಂದೈ
ತಂದೆ +ಸಂಜಯ +ಬಾಯೆನುತ +ತಡವಿದನು +ಬೋಳೈಸಿ

ಅಚ್ಚರಿ:
(೧) ಧೃತರಾಷ್ಟ್ರನನ್ನು ಕರೆದ ಪರಿ – ಅಂಧ ನೃಪತಿ, ಜೀಯ
(೨) ಅಕ್ಕರೆಯನ್ನು ತೋರುವ ಪರಿ – ಬಾಯೆನುತ ತಡವಿದನು ಬೋಳೈಸಿ

ಪದ್ಯ ೪೪: ಪಾಂಡವರ ಸ್ಥಿತಿ ಹೇಗಾಯಿತು?

ಮುರಿದುದಾಬಲವಿಳೆಯೊಡೆಯೆ ಬೊ
ಬ್ಬಿರಿದುದೀ ಬಲವಪಜಯದ ಮಳೆ
ಗರೆದುದವರಿಗೆ ಹರಿದುದಿವರಿಗೆ ಸರ್ಪರಜ್ಜುಭಯ
ತೆರಳಿತಾಚೆಯ ಥಟ್ಟು ಮುಂದಣಿ
ಗುರವಣಿಸಿತೀಯೊಡ್ಡು ಕೌರವ
ರರಸನುತ್ಸಾಹವನು ಬಣ್ಣಿಸಲಿರಿಯೆನಾನೆಂದ (ದ್ರೋಣ ಪರ್ವ, ೧೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪಾಂಡವರ ಸೈನ್ಯ ಮುರಿಯಿತು. ಭೂಮಿ ಬಿರಿಯುವಂತೆ ಕೌರವ ಬಲ ಬೊಬ್ಬಿರಿಯಿತು. ಅವರಿಗೆ ಅಪಜಯದ ಮಳೆ ವರ್ಷಿಸಿತು ಇವರಿಗೆ ಹಾವು ಹಗ್ಗದ ಭಯ ಬಿಟ್ಟಿತು. ಆಚೆಯ ಸೈನ್ಯ ಓಡಿತು, ಈ ಸೈನ್ಯ ಮುನ್ನುಗ್ಗಿತು. ಕೌರವನ ರಣೋತ್ಸಾಹ ಅವರ್ಣನೀಯವಾಗಿತ್ತು.

ಅರ್ಥ:
ಮುರಿ: ಸೀಳು; ಬಲ: ಸೈನ್ಯ; ಇಳೆ: ಭೂಮಿ; ಒಡೆಯ: ರಾಜ; ಬೊಬ್ಬಿರಿ: ಗರ್ಜಿಸು; ಅಪಜಯ: ಸೋಳು; ಮಳೆ: ವರ್ಷ; ಹರಿ: ಪ್ರವಹಿಸು, ಚಲಿಸು; ಸರ್ಪ: ಉರಗ; ರಜ್ಜು: ಹಗ್ಗ; ತೆರಳು: ಮರಳು; ಥಟ್ಟು: ಗುಂಪು; ಮುಂದಣಿ: ಮುಂಚೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಒಡ್ಡು: ರಾಶಿ, ಸಮೂಹ; ಅರಸ: ರಾಜ; ಉತ್ಸಾಹ: ಹುರುಪು, ಆಸಕ್ತಿ; ಬಣ್ಣಿಸು: ವರ್ಣಿಸು; ಅರಿ: ತಿಳಿ;

ಪದವಿಂಗಡಣೆ:
ಮುರಿದುದ್+ಆ+ಬಲವ್ + ಇಳೆ+ಒಡೆಯೆ+ ಬೊ
ಬ್ಬಿರಿದುದ್+ಈ+ ಬಲವ್+ಅಪಜಯದ +ಮಳೆ
ಗರೆದುದ್+ಅವರಿಗೆ +ಹರಿದುದ್+ಇವರಿಗೆ+ ಸರ್ಪ+ರಜ್ಜು+ಭಯ
ತೆರಳಿತ್+ಆಚೆಯ +ಥಟ್ಟು +ಮುಂದಣಿಗ್
ಉರವಣಿಸಿತ್+ಈ+ ಒಡ್ಡು +ಕೌರವರ್
ಅರಸನ್+ಉತ್ಸಾಹವನು +ಬಣ್ಣಿಸಲ್+ಅರಿಯೆ+ನಾನೆಂದ

ಅಚ್ಚರಿ:
(೧) ಕೌರವರ ಸ್ಥಿತಿಯನ್ನು ಹೇಳುವ ಪರಿ – ಹರಿದುದಿವರಿಗೆ ಸರ್ಪರಜ್ಜುಭಯ
(೨) ರಾಜನನ್ನು ಇಳೆಯೊಡೆಯ ಎಂದು ಕರೆದಿರುವುದು

ಪದ್ಯ ೧೪: ಪಾಂಡವರ ಪಡೆಯಲ್ಲಿ ಯಾವ ಸ್ಥಿತಿಯಿತ್ತು?

ಭೀತಿ ಬೀತುದು ಹರುಷವಲ್ಲರಿ
ಹೂತುದವರಿಗೆ ವಿಜಯ ಕಾಮಿನಿ
ದೂತಿಯರ ಕಳುಹಿದಳು ತನಿ ಹೊಗರೇರಿತುತ್ಸಾಹ
ಸೋತುದಾಹವ ಚಿಂತೆ ಜರಿದುದು
ಕಾತರತೆ ನುಡಿಗೆಡೆಗುಡದೆ ಭಾ
ವಾತಿಶಯವೊಂದಾಯ್ತು ಪಾಂಡವ ಬಲದ ಸುಭಟರಿಗೆ (ಭೀಷ್ಮ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಾಂಡವರಿಗಾದರೋ ಭೀತಿ ಬಿಟ್ಟುಹೋಯಿತು. ಹರ್ಷದ ಬಳ್ಳಿಯು ಹೂಬಿಟ್ಟಿತು, ವಿಜಯ ಸ್ತ್ರೀಯು ಕೆಳೆಯನ್ನು ಬೇಡಿ ತನ್ನ ಸೇವಕರನ್ನು ಅವರ ಬಳಿಗೆ ಕಳುಹಿಸಿದಳು. ಉತ್ಸಾಹವು ತಾನೇ ತಾನಾಗಿ ಹೊಳೆಯಿತು. ಯುದ್ಧದ ಚಿಂತೆ ಬಿಟ್ಟಿತು, ಕಾತರವು ಜಾರಿಹೋಯಿತು. ಮಾತೇ ಇಲ್ಲದ ಸುಮ್ಮಾನದ ಭಾವವು ಪಾಂಡವ ಬಲದ ಭಟರಿಗೆ ಉಕ್ಕೇರಿತು.

ಅರ್ಥ:
ಭೀತಿ: ಹೆದರಿಕೆ; ಬೀತುದು: ಹೋಯಿತು; ಹರುಷ: ಸಂತಸ; ವಲ್ಲರಿ: ಬಳ್ಳಿ; ಹೂತು: ಹೂವು ಬಿಡು; ವಿಜಯ: ಗೆಲುವು; ಕಾಮಿನಿ: ಹೆಣ್ಣು; ದೂತಿ: ಸೇವಕಳು; ಕಳುಹು: ಬೀಳ್ಕೊಡು; ತನಿ: ಚೆನ್ನಾಗಿ ಬೆಳೆದುದು; ಹೊಗರು: ಕಾಂತಿ, ಪ್ರಕಾಶ; ಏರು: ಹೆಚ್ಚಾಗು; ಉತ್ಸಾಹ: ಶಕ್ತಿ, ಬಲ; ಸೋತು: ಪರಾಭವ; ಆಹವ: ಯುದ್ಧ; ಚಿಂತೆ: ಯೋಚನೆ; ಜರಿ: ಬಯ್ಯು; ಕಾತರತೆ: ಉತ್ಸುಕತೆ; ನುಡಿ: ಮಾತು; ಕೆಡೆ: ಹಾಳು; ಭಾವ: ಭಾವನೆ, ಚಿತ್ತವೃತ್ತಿ; ಅತಿಶಯ: ಹೆಚ್ಚು; ಬಲ: ಸೈನ್ಯ; ಸುಭಟ: ಪರಾಕ್ರಮಿ, ಸೈನಿಕ;

ಪದವಿಂಗಡಣೆ:
ಭೀತಿ +ಬೀತುದು +ಹರುಷ+ ವಲ್ಲರಿ
ಹೂತುದ್+ಅವರಿಗೆ +ವಿಜಯ +ಕಾಮಿನಿ
ದೂತಿಯರ +ಕಳುಹಿದಳು +ತನಿ +ಹೊಗರ್+ಏರಿತ್+ಉತ್ಸಾಹ
ಸೋತುದ್+ಆಹವ +ಚಿಂತೆ +ಜರಿದುದು
ಕಾತರತೆ+ ನುಡಿ+ಕೆಡೆಗುಡದೆ +ಭಾವ
ಅತಿಶಯವ್+ಒಂದಾಯ್ತು +ಪಾಂಡವ +ಬಲದ +ಸುಭಟರಿಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಹರುಷವಲ್ಲರಿಹೂತುದವರಿಗೆ
(೨) ವಿಜಯವು ಹತ್ತಿರವಾಯಿತು ಎಂದು ಹೇಳುವ ಪರಿ – ವಿಜಯ ಕಾಮಿನಿ ದೂತಿಯರ ಕಳುಹಿದಳು

ಪದ್ಯ ೩೭: ಧರ್ಮಜನು ಪತ್ರದಲ್ಲಿ ಏನು ಬೇಡಿದನು?

ಮದುವೆಯೆಂಬುದು ನೆವ ನಿಜ ಶ್ರೀ
ಪದವ ತೋರಿಸಬೇಕು ವನವಾ
ಸದ ಪರಿಕ್ಲೇಶಾನು ಸಂತಾಪವನು ಬೀಳ್ಕೊಡಿಸಿ
ಕದಡು ಹೋಗಲು ಕಾಣಬೇಹುದು
ಹದುಳವಿಟ್ಟೆಮಗುಚಿತವಚನದ
ಹದವಳೆಯಲುತ್ಸಾಹ ಸಸಿಯನು ದೇವ ಸಲಹುವುದು (ವಿರಾಟ ಪರ್ವ, ೧೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ದೇವ, ಮದುವೆಯೆಂಬುದೊಂದು ನೆಪ ಮಾತ್ರ, ನಿಮ್ಮ ಶ್ರೀಪಾದಗಳ ದರ್ಶನವನ್ನು ನೀಡಬೇಕು. ವನವಾಸ ಅಜ್ಞಾತವಾಸಗಳ ಕ್ಲೇಶದಿಂದಾಗಿರುವ ಸಂತಾಪವನ್ನು ಹೋಗಲಾಡಿಸಬೇಕು, ನಮ್ಮ ಮನಸ್ಸನ್ನು ಸಮಾಧಾನ ಪಡಿಸಬೇಕು, ಉಚಿತವಾದ ಮಾತುಗಳ ಹದಮಳೆಯನ್ನು ಕರೆದು ನಮ್ಮ ಉತ್ಸಾಹ ಸಸಿಯನ್ನು ಕಾಪಾಡಬೇಕು ಎಂದು ಧರ್ಮಜನು ಪತ್ರದಲ್ಲಿ ಬರೆದಿದ್ದನು.

ಅರ್ಥ:
ಮದುವೆ: ವಿವಾಹ; ನೆವ: ನೆಪ; ನಿಜ: ದಿಟ; ಶ್ರೀ: ಶ್ರೇಷ್ಠ; ಪದ: ಪಾದ; ತೋರಿಸು: ನೋಡು; ವನ: ಕಾಡು; ಪರಿ: ರೀತಿ; ಕ್ಲೇಶ: ದುಃಖ, ಸಂಕಟ; ಸಂತಾಪ: ವ್ಯಥೆ, ಅಳಲು; ಬೀಳ್ಕೊಡು: ತೆರಳು; ಕದಡು: ಕಲಕು, ಕಳವಳ; ಕಾಣು: ತೋರು; ಹದುಳ: ಸೌಖ್ಯ, ಕ್ಷೇಮ; ಹದವಳೆ: ಹದವಾದ ಮಳೆ; ಉಚಿತ: ಸರಿಯಾದ; ವಚನ: ಮಾತು; ಉತ್ಸಾಹ: ಹುರುಪು; ಸಸಿ: ಮೊಳಕೆ, ಅಂಕುರ; ಸಲುಹು: ಕಾಪಾಡು;

ಪದವಿಂಗಡಣೆ:
ಮದುವೆಯೆಂಬುದು+ ನೆವ +ನಿಜ +ಶ್ರೀ
ಪದವ +ತೋರಿಸಬೇಕು +ವನವಾ
ಸದ +ಪರಿಕ್ಲೇಶಾನು+ ಸಂತಾಪವನು+ ಬೀಳ್ಕೊಡಿಸಿ
ಕದಡು +ಹೋಗಲು +ಕಾಣಬೇಹುದು
ಹದುಳವಿಟ್ಟ್+ಎಮಗ್+ಉಚಿತ+ವಚನದ
ಹದವಳೆಯಲ್+ಉತ್ಸಾಹ +ಸಸಿಯನು +ದೇವ +ಸಲಹುವುದು

ಅಚ್ಚರಿ:
(೧) ಧರ್ಮಜನ ಬೇಡಿಕೆ – ಹದುಳವಿಟ್ಟೆಮಗುಚಿತವಚನದ ಹದವಳೆಯಲುತ್ಸಾಹ ಸಸಿಯನು ದೇವ ಸಲಹುವುದು

ಪದ್ಯ ೩೦: ಅರ್ಜುನನ ಯಾವ ನುಡಿಯಿಂದ ಹಣ್ಣು ಮೇಲೇರಿತು?

ವಾಯುಸುತನ ಸುಭಾಷಿತದ ತರು
ವಾಯಲರ್ಜುನನೆದ್ದು ವಿಪ್ರನಿ
ಕಾಯಕಾಮಂತ್ರಣವು ನವತೃಣ ಗೋಧನಾವಳಿಗೆ
ಸ್ತ್ರೀಯರಿಗೆ ನಿಜಪತಿಯ ಬರವಿನ
ಪ್ರೀಯದೊರೆಕೊಂಬಂತೆ ಕಮಲದ
ಳಾಯತಾಂಬಕ ಸತತ ಕದನೋತ್ಸಾಹ ತನಗೆಂದ (ಅರಣ್ಯ ಪರ್ವ, ೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಭೀಮನ ಹಿತ ನುಡಿಯ ನಂತರ ಅರ್ಜುನನು ಎದ್ದು ನಿಂತು, ಭೋಜನದ ಆಮಂತ್ರಣವನ್ನು ಬ್ರಾಹ್ಮಣರೂ, ಹೊಸಹುಲ್ಲನ್ನು ಗೋವುಗಳು, ಪತಿಯ ಆಗಮನವನ್ನು ಹೆಂಡತಿಯು ಹೇಗೆ ಉತ್ಸಾಹದಿಂದ ಕಾಯುವರೋ ಅದೇ ರೀತಿ ಹೇ ಕೃಷ್ಣ ನಾನು ಯುದ್ಧದಲ್ಲಿ ಅಷ್ಟು ಉತ್ಸುಕನಾಗಿರುತ್ತೇನೆ ಎಂದನು.

ಅರ್ಥ:
ವಾಯು: ಸಮೀರ, ಗಾಳಿ; ಸುತ: ಮಗ; ಸುಭಾಷಿತ: ಹಿತನುಡಿ; ತರುವಾಯ: ನಂತರ; ಎದ್ದು: ಮೇಲೇಳು; ವಿಪ್ರ: ಬ್ರಾಹ್ಮಣ; ನಿಕಾಯ: ಗುಂಪು; ಆಮಂತ್ರಣ: ಆಹ್ವಾನ, ಕರೆ; ನವ: ಹೊಸ; ತೃಣ: ಹುಲ್ಲು; ಗೋಧನ: ಗೋವು; ಆವಳಿ: ಗುಂಪು; ಸ್ತ್ರೀ: ಹೆಂಗಸು; ಪತಿ: ಗಂಡ; ಬರವು: ಆಗಮನ; ಪ್ರೀಯ: ಪ್ರೀತಿಯಿಂದ; ಒರೆ: ಬಳಿ, ನಿರೂಪಿಸು; ಸತತ: ಯಾವಾಗಲೂ; ಕದನ: ಯುದ್ಧ; ಉತ್ಸಾಹ: ಹುರುಪು, ಆಸಕ್ತಿ; ಕಮಲದಳಾಯತ: ಕಮಲದ ಎಲೆಯಂತೆ ವಿಶಾಲವಾದ; ದಳ: ಎಲೆ; ಆಯತ: ವಿಶಾಲ; ಅಂಬಕ: ಕಣ್ಣು;

ಪದವಿಂಗಡಣೆ:
ವಾಯುಸುತನ +ಸುಭಾಷಿತದ+ ತರು
ವಾಯಲ್+ಅರ್ಜುನನ್+ಎದ್ದು +ವಿಪ್ರ+ನಿ
ಕಾಯಕ್+ಆಮಂತ್ರಣವು+ ನವತೃಣ+ ಗೋಧನಾವಳಿಗೆ
ಸ್ತ್ರೀಯರಿಗೆ +ನಿಜಪತಿಯ+ ಬರವಿನ
ಪ್ರೀಯದೊರೆ+ಕೊಂಬಂತೆ +ಕಮಲದ
ಳ+ಆಯತ+ಅಂಬಕ+ ಸತತ +ಕದನ+ಉತ್ಸಾಹ +ತನಗೆಂದ

ಅಚ್ಚರಿ:
(೧) ಶ್ರೀಕೃಷ್ಣನನ್ನು ಕಮಲದಳಾಯತಾಂಬಕ ಎಂದು ಕರೆದಿರುವುದು
(೨) ಅರ್ಜುನನ ಹಿತನುಡಿ: ವಿಪ್ರ ನಿಕಾಯಕಾಮಂತ್ರಣವು ನವತೃಣ ಗೋಧನಾವಳಿಗೆ
ಸ್ತ್ರೀಯರಿಗೆ ನಿಜಪತಿಯ ಬರವಿನ ಪ್ರೀಯದೊರೆಕೊಂಬಂತೆ

ಪದ್ಯ ೮೧: ಭೀಷ್ಮ ದ್ರೋಣರು ವಿದುರನಿಗೆ ಏನು ಹೇಳಿದರು?

ಅರುಹಿದನು ಭೀಷ್ಮಂಗೆ ಗುರು ಕೃಪ
ರರಿದರಿನ್ನಪಮೃತ್ಯವೇನೆಂ
ದರಿಯದಿನ್ನುತ್ಸಾಹ ಶಕ್ತಿಗೆ ಮನವ ಮಾಡಿತಲ
ಹರಿದುದೇ ಕುರುವಂಶ ಲತೆ ಹೊ
ಕ್ಕಿರಿದನೇ ಧೃತರಾಷ್ಟ್ರ ನೀ ಬೇ
ಸರದಿರವರನು ಕರೆದು ತಾ ಹೋಗೆಂದರವರಂದು (ಸಭಾ ಪರ್ವ, ೧೩ ಸಂಧಿ, ೮೧ ಪದ್ಯ)

ತಾತ್ಪರ್ಯ:
ವಿದುರನು ಧೃತರಾಷ್ಟ್ರನು ಹೇಳಿದ ವಿಚಾರವನ್ನು ಭೀಷ್ಮ, ದ್ರೋಣ, ಕೃಪಾಚಾರ್ಯರಿಗೆ ತಿಳಿಸಿದನು. ಅವರೆಲ್ಲರು ಅಕಾಲದ ಮರಣವನ್ನು ತಿಳಿಯದೆ ಉತ್ಸಾಹಶಕ್ತಿಗೆ ಮನಸ್ಸು ಮಾಡಿತೇ? ಕೌರವ ವಂಶದ ಬಳ್ಳಿ ಹರಿದು ಹೋಯಿತೇ? ಧೃತರಾಷ್ಟ್ರನೇ ವಂಶಲತೆಯನ್ನು ಕತ್ತರಿಸಿದನೇ? ಎಂದು ನೋವಿನಿಂದ ಹೇಳುತ್ತಾ ವಿದುರನಿಗೆ ಬೇಸರಗೊಳ್ಳಬೇಡ, ಪಾಂಡವರನ್ನು ಕರೆದು ತಾ ಎಂದು ಹೇಳಿದರು.

ಅರ್ಥ:
ಅರುಹು: ತಿಳಿವಳಿಕೆ; ಅರಿ: ತಿಳಿ; ಅಪಮೃತ್ಯು: ಅಕಾಲ ಮರಣ; ಉತ್ಸಾಹ: ಶಕ್ತಿ, ಬಲ; ಶಕ್ತಿ: ಬಲ; ಮನ: ಮನಸ್ಸು; ಹರಿ: ಸೀಳೂ; ವಂಶ: ಕುಲ; ಲತೆ: ಬಳ್ಳಿ; ಹೊಕ್ಕು: ಸೇರು; ಬೇಸರ: ದುಃಖ; ಕರೆ: ಬರೆಮಾಡು; ಹೋಗು: ತೆರಳು;

ಪದವಿಂಗಡಣೆ:
ಅರುಹಿದನು+ ಭೀಷ್ಮಂಗೆ +ಗುರು +ಕೃಪರ್
ಅರಿದರ್+ಇನ್+ಅಪಮೃತ್ಯವೇನೆಂದ್
ಅರಿಯದ್+ಇನ್+ಉತ್ಸಾಹ +ಶಕ್ತಿಗೆ+ ಮನವ +ಮಾಡಿತಲ
ಹರಿದುದೇ+ ಕುರುವಂಶ +ಲತೆ +ಹೊಕ್
ಇರಿದನೇ +ಧೃತರಾಷ್ಟ್ರ +ನೀ +ಬೇ
ಸರದಿರ್+ಅವರನು +ಕರೆದು +ತಾ +ಹೋಗ್+ಎಂದರ್+ಅವರ್+ಅಂದು

ಅಚ್ಚರಿ:
(೧) ಭೀಷ್ಮರ ನೋವಿನ ನುಡಿ – ಹರಿದುದೇ ಕುರುವಂಶ ಲತೆ ಹೊಕ್ಕಿರಿದನೇ ಧೃತರಾಷ್ಟ್ರ
(೨) ಅರಿ, ಹರಿ, ಇರಿ – ಪ್ರಾಸ ಪದಗಳ ಬಳಕೆ

ಪದ್ಯ ೪೦: ಸೈನ್ಯದಲ್ಲಿ ಯಾವ ಭಾವನೆ ಮೂಡಿದ್ದವು?

ಮೊದಲಲೆರಡೊಡ್ಡಿನಲಿ ಸುಮ್ಮಾ
ನದ ಸಘಾಡವ ದಂಡೆನೀಗಳು
ತುದಿಗೆ ಬರೆವರೆ ಕಂಡೆನಿವರವರೆರಡು ಥಟ್ಟಿನಲಿ
ತುದಿವೆರಳ ಕಂಬನಿಯ ಬಳಸಿದ
ಬೆದರುಗಳ ಕುಕ್ಕುಳಿಸಿದುತ್ಸಾ
ಹದ ವಿಘಾತಿಯ ನಟ್ಟ ಚಿಂತೆಯನರಸ ಕೇಳೆಂದ (ಕರ್ಣ ಪರ್ವ, ೨೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ, ಕರ್ಣಾರ್ಜುನರ ಕಾಳಗ ಆರಂಭವಾದಗ ಎರಡು ಸೈನ್ಯಗಳಲ್ಲೂ ಸಂತಸ, ಸಂಭ್ರಮಗಳು ಕಾಣಿಸುತ್ತಿದ್ದವು. ಈಗಲೋ ಎರಡು ಸೈನ್ಯದಲ್ಲಿ ಬೆದರಿಕೆ, ಕಂಬನಿ, ಸಂತಸದ ಕುಸಿತ, ದುಗುಡ, ಯಾವುದೋ ತೊಂದರೆ, ಚಿಂತೆಗಳು ಅವರ ಮನಸ್ಸಿನಲ್ಲಿ ಕಂಡುಬರುತ್ತಿವೆ.

ಅರ್ಥ:
ಮೊದಲು: ಆದಿ; ಒಡ್ಡು: ಸೈನ್ಯ, ಗುಂಪು; ಸುಮ್ಮಾನ:ಸಂತೋಷ, ಹಿಗ್ಗು; ಸಘಾಡ: ರಭಸ, ವೇಗ; ಕಂಡು: ನೋಡು; ತುದಿ: ಅಗ್ರ, ಮುಂದೆ; ಬರೆವರೆ: ಬಂದರೆ; ತುದಿವೆರಳು: ಬೆರಳ ಕೊನೆ; ಕಂಬನಿ: ಕಣ್ಣೀರು; ಬಳಸು: ಆವರಿಸುವಿಕೆ; ಬೆದರು: ಭಯ, ಅಂಜಿಕೆ; ಕುಕ್ಕುಳಿಸು: ಕುದಿ, ತಳಮಳಿಸು; ಉತ್ಸಾಹ: ಶಕ್ತಿ, ಬಲ; ವಿಘಾತಿ: ಹೊಡೆತ, ವಿರೋಧ; ನಟ್ಟ: ನಡು, ಒಳಹೋಕು; ಚಿಂತೆ: ಯೋಚನೆ; ಅರಸ; ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮೊದಲಲ್+ಎರಡ್+ಒಡ್ಡಿನಲಿ+ ಸುಮ್ಮಾ
ನದ +ಸಘಾಡವ +ದಂಡೆನ್+ಈಗಳು
ತುದಿಗೆ+ ಬರೆವರೆ+ ಕಂಡೆನ್+ಇವರ್+ಅವರ್+ಎರಡು+ ಥಟ್ಟಿನಲಿ
ತುದಿವೆರಳ+ ಕಂಬನಿಯ +ಬಳಸಿದ
ಬೆದರುಗಳ +ಕುಕ್ಕುಳಿಸಿದ್+ಉತ್ಸಾ
ಹದ+ ವಿಘಾತಿಯ +ನಟ್ಟ+ ಚಿಂತೆಯನ್+ಅರಸ+ ಕೇಳೆಂದ

ಅಚ್ಚರಿ:
(೧) ಸುಮ್ಮಾನ, ಬೆದರು, ಉತ್ಸಾಹ, ವಿಘಾತ, ಚಿಂತೆ – ಭಾವನೆಗಳನ್ನು ವರ್ಣಿಸುವ ಪದಗಳು

ಪದ್ಯ ೨೫: ಸಭೆಯಲ್ಲಿದ್ದ ವೀರರು ಅರ್ಜುನನಲ್ಲಿ ಏನನ್ನು ಕಂಡರು?

ಇವನ ಗತಿ ಮುಖಚೇಷ್ಟೆ ಭಾವೋ
ತ್ಸವ ವಿಲಾಸವುಪೇಕ್ಷೆ ಭರವಂ
ಘವಣೆ ಗರುವಿಕೆ ಗಮಕಭಾವವಭೀತಿ ಭುಲ್ಲವಣೆ
ಇವನ ವಿಮಲಕ್ಷತ್ರವಿಕ್ರಮ
ವಿವನ ಕೊಂಡೆಯತನವಿವೇ ಸಾ
ಕಿವನು ಘಾಟದ ವೀರನೆಂದರು ವೀರರರ್ಜುನನ (ಆದಿ ಪರ್ವ, ೧೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನನು ಬರುವುದನ್ನು ಕಂಡ ವೀರರು ಇವನ ಗತಿ (ಬರುವ ಠೀವಿ), ಮುಖದ ಹಾವಭಾವ, ಮುಖದಲ್ಲಿದ್ದ ಉತ್ಸಾಹ, ಬಿಲ್ಲಿನ ಬಗ್ಗೆ ಇದ್ದ ಉಪೇಕ್ಷೆ (ಕಡೆಗಣಿಸುವಿಕೆ), ಜೋರು, ನಡೆಗೆಯಲ್ಲಿನ ದರ್ಪ, ಗಾಂಭೀರ್ಯ, ನಿರ್ಭೀತಿ, ದೋಷರಹಿತವಾದ ಕ್ಷಾತ್ರಶಕ್ತಿ, ಇವುಗಳನ್ನು ನೋಡಿ ಅಲ್ಲಿ ನೆರೆದಿದ್ದ ವೀರರು ಇವನು ಮಹಾವೀರನೆಂದರು.

ಅರ್ಥ:
ಗತಿ: ವೇಗ; ಮುಖ: ಆನನ; ಚೇಷ್ಟೆ: ಅಂಗಾಂಗಗಳ ಚಲನೆ; ಭಾವ: ಸ್ವರೂಪ; ಉತ್ಸಾಹ: ಹುಮ್ಮಸ್ಸು, ಚೈತನ್ಯ; ವಿಲಾಸ: ಸೊಬಗು; ಉಪೇಕ್ಷೆ: ಕಡೆಗಣಿಸುವಿಕೆ; ಭರ: ಜೋರು; ಗರುವಿಕೆ: ಗರ್ವ, ದರ್ಪ; ಗಮಕ: ಕ್ರಮ, ಬೆಡಗು, ಸೊಗಸು; ಅವಭೀತಿ: ನಿರ್ಭೀತಿ; ಭುಲ್ಲವಣೆ: ಅತಿಶಯ, ಹೆಚ್ಚಳ; ವಿಮಲ: ನಿರ್ಮಲ; ಕ್ಷತ್ರ: ಕ್ಷತ್ರಿಯ; ವಿಕ್ರಮ: ಶೌರಿ, ಪರಾಕ್ರಮಿ; ಘಾಟ: ಸಮರ್ಥ; ವೀರ: ಶೂರ;

ಪದವಿಂಗಡಣೆ:
ಇವನ +ಗತಿ +ಮುಖಚೇಷ್ಟೆ +ಭಾವೋ
ತ್ಸವ +ವಿಲಾಸವ್+ಉಪೇಕ್ಷೆ +ಭರ+ವಂ
ಘವಣೆ +ಗರುವಿಕೆ +ಗಮಕಭಾವ+ಅವಭೀತಿ +ಭುಲ್ಲವಣೆ
ಇವನ +ವಿಮಲ+ಕ್ಷತ್ರ+ವಿಕ್ರಮವ್
ಇವನ+ ಕೊಂಡೆಯತನವ್+ಇವೇ +ಸಾಕ್
ಇವನು +ಘಾಟದ +ವೀರನೆಂದರು +ವೀರರ್+ಅರ್ಜುನನ

ಅಚ್ಚರಿ:
(೧) ಇವನ – ೪ ಸಾಲಿನ ಮೊದಲ ಪದ
(೨) ಅರ್ಜುನನ ಹಾವಭಾವದ ವರ್ಣನೆ: ಗತಿ, ಮುಖಚೇಷ್ಟೆ, ಉತ್ಸಾಹ, ವಿಲಾಸ, ಉಪೇಕ್ಷೆ, ನಿರ್ಭೀತಿ, ಭರ, ಗರುವಿಕೆ, ಭುಲ್ಲವಣೆ, ವಿಮಲ, ವಿಕ್ರಮ