ಪದ್ಯ ೧೫: ದ್ರೋಣರು ರಥದಲ್ಲಿ ಹೇಗೆ ಕಂಡರು?

ನಿರಿಯುಡಿಗೆಯಲಿ ಮಲ್ಲಗಂಟಿನ
ಸೆರಗ ಮೋಹಿಸಿ ಬೆರಳ ದರ್ಭೆಯ
ಹರಿದು ಬಿಸುಟನು ಜೋಡು ಸೀಸಕ ಬಾಹುರಕ್ಷೆಗಳ
ಮುರುಹಿ ಬಿಗಿದನು ನಿಖಿಳಭೂಸುರ
ರುರುವ ಮಂತ್ರಾಕ್ಷತೆಯ ಕೊಳುತ
ಳ್ಳಿರಿವ ಜಯರವದೊಡನೆ ರಥವೇರಿದನು ಕಲಿದ್ರೋಣ (ದ್ರೋಣ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮಲ್ಲಗಂಟಿನಿಂದ ವಸ್ತ್ರವನ್ನುಟ್ಟು, ಬೆರಳಿನಲ್ಲಿದ್ದ ದರ್ಭೆಯನ್ನು ಕಿತ್ತೆಸೆದನು. ಕವಚ, ಶಿರಸ್ತ್ರಾಣ, ಬಾಹುರಕ್ಷೆಗಳನ್ನು ಭದ್ರವಾಗಿ ಧರಿಸಿದನು. ಬ್ರಾಹ್ಮನರನ್ನರ್ಚಿಸಿ ಅವರ ಆಶೀರ್ಮಂತ್ರಾಕ್ಷತೆಗಳನ್ನು ಸ್ವೀಕರಿಸಿ, ಜಯ ಶಬ್ದವು ಎತ್ತೆತ್ತ ಮೊಳಗುತ್ತಿರಲು ರಥವನ್ನೇರಿದನು.

ಅರ್ಥ:
ನಿರಿ: ಸೀರೆಯ ಮಡಿಕೆ; ಉಡಿಗೆ: ಉಟ್ಟುಕೊಳ್ಳುವ ಬಟ್ಟೆ; ಮಲ್ಲ: ಕುಸ್ತಿಪಟು; ಗಂಟು: ಸೇರಿಸಿ ಕಟ್ಟಿದುದು; ಸೆರಗು:ಸೀರೆಯಲ್ಲಿ ಹೊದೆಯುವ ಭಾಗ; ಮೋಹಿಸು: ಅಪ್ಪಳಿಸುವಂತೆ ಮಾಡು; ಬೆರಳು: ಅಂಗುಲಿ; ದರ್ಭೆ: ಹುಲ್ಲು; ಹರಿ: ಕಡಿ, ಕತ್ತರಿಸು; ಬಿಸುಟು: ಹೊರಹಾಕು; ಜೋಡು: ಜೊತೆ, ಜೋಡಿ; ಸೀಸಕ: ಶಿರಸ್ತ್ರಾಣ; ಬಾಹು: ಭುಜ; ರಕ್ಷೆ: ಕವಚ; ಮುರುಹು: ತಿರುಗಿಸು; ಬಿಗಿ: ಭದ್ರವಾಗಿ; ನಿಖಿಳ: ಎಲ್ಲಾ; ಭೂಸುರ: ಬ್ರಾಹ್ಮನ; ಉರು: ವಿಶೇಷವಾದ; ಮಂತ್ರಾಕ್ಷತೆ: ಆಶೀರ್ವದಿಸಿದ ಅಕ್ಕಿ; ಕೊಳು: ತೆಗೆದುಕೋ; ಇರಿ: ಚುಚ್ಚು, ಕರೆ; ಜಯ: ಗೆಲುವು; ರವ: ಶಬ್ದ; ರಥ: ಬಂಡಿ; ಏರು: ಹತ್ತು; ಕಲಿ: ಶೂರ;

ಪದವಿಂಗಡಣೆ:
ನಿರಿ+ಉಡಿಗೆಯಲಿ +ಮಲ್ಲ+ಗಂಟಿನ
ಸೆರಗ+ ಮೋಹಿಸಿ +ಬೆರಳ+ ದರ್ಭೆಯ
ಹರಿದು +ಬಿಸುಟನು +ಜೋಡು +ಸೀಸಕ +ಬಾಹು+ರಕ್ಷೆಗಳ
ಮುರುಹಿ +ಬಿಗಿದನು +ನಿಖಿಳ+ಭೂಸುರರ್
ಉರುವ +ಮಂತ್ರಾಕ್ಷತೆಯ +ಕೊಳುತಳ್
ಇರಿವ +ಜಯರವದೊಡನೆ +ರಥವೇರಿದನು +ಕಲಿ+ದ್ರೋಣ

ಅಚ್ಚರಿ:
(೧) ಬ್ರಾಹ್ಮಣ ವೇಷವನ್ನು ಕಳಚಿದ ಎಂದು ಹೇಳಲು – ಬೆರಳ ದರ್ಭೆಯ ಹರಿದು ಬಿಸುಟನು

ಪದ್ಯ ೬: ಊರ್ವಶಿಯನ್ನು ಯಾರು ಸುತ್ತುವರೆದರು?

ನೆರೆದರಬಲೆಯರಂಗವಟ್ಟದ
ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣಬೆಳಗುಗಳ
ಪರಿಪರಿಯ ಹೊಂದೊಡಿಗೆಗಳ ಪರಿ
ಪರಿಗಳುಡಿಗೆಯ ದೇಶಿಮಿಗೆ ಪರಿ
ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕಿಯ (ಅರಣ್ಯ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ತಮ್ಮ ಅಂಗದ ಪರಿಮಳಕ್ಕೆ ದುಂಬಿಗಳು ಹೂವೆಂದು ಭ್ರಮಿಸಿ ಮುತ್ತುತ್ತಿರಲು, ಕಣ್ಣ ಬೆಳಕು ಕತ್ತಲೆಯನ್ನು ಓಡಿಸುತ್ತಿರಲು, ವಿಧವಿಧವಾದ ಬಂಗಾರದ ಆಭರಣಗಳು, ವಿವಿಧ ವಸ್ತ್ರಗಳ ವಿನ್ಯಾಸ, ವಿವಿಧ ರೀತಿಯ ಮುಡಿಗಳನ್ನು ಧರಿಸಿದ ಅಪ್ಸರೆಯರು ಊರ್ವಶಿಯನ್ನು ಸುತ್ತುವರೆದರು.

ಅರ್ಥ:
ನೆರೆ: ಪಕ್ಕ, ಸಮೀಪ; ಅಬಲೆ: ಹೆಂಗಸು; ಅಂಗ: ದೇಹ, ಶರೀರ; ಅಟ್ಟು: ಅಂಟಿಕೊಳ್ಳು; ಪರಿಮಳ: ಸುಗಂಧ; ಮುತ್ತಿಗೆ: ಆವರಿಸು; ತುಂಬಿ: ದುಂಬಿ, ಜೇನು; ತೆರಳು: ಹೋಗು, ಹೋಗಲಾಡಿಸು; ಕತ್ತಲೆ: ಅಂಧಕಾರ; ಕೆದರು: ಚದುರಿಸು; ಕಣ್ಣು: ನಯನ; ಬೆಳಕು: ಪ್ರಕಾಶ; ಪರಿಪರಿ: ಹಲವಾರು ರೀತಿ; ಹೊಂದು: ಸರಿಯಾಗು; ಒಡಿಗೆ; ಒಡವೆ; ಉಡಿಗೆ: ವಸ್ತ್ರ, ಬಟ್ಟೆ; ದೇಶಿ: ಅಲಂಕಾರ; ಮಿಗೆ: ಅಧಿಕ; ಮುಡಿ: ಶಿರ; ಮುಗುದೆ: ಸುಂದರ ಯುವತಿ; ಬಳಸು: ಆವರಿಸು; ಬಾಲಕಿ: ಹೆಣ್ಣು;

ಪದವಿಂಗಡಣೆ:
ನೆರೆದರ್+ಅಬಲೆಯರ್+ಅಂಗವಟ್ಟದ
ಪರಿಮಳದ+ ಮುತ್ತಿಗೆಯ+ ತುಂಬಿಯ
ತೆರಳಿಕೆಯ+ ಕತ್ತಲೆಯ+ ಕೆದರುವ +ಕಣ್ಣಬೆಳಗುಗಳ
ಪರಿಪರಿಯ+ ಹೊಂದ್+ಒಡಿಗೆಗಳ +ಪರಿ
ಪರಿಗಳ್+ಉಡಿಗೆಯ +ದೇಶಿ+ಮಿಗೆ +ಪರಿ
ಪರಿಯ +ಮುಡಿಗಳ +ಮುಗುದೆಯರು +ಬಳಸಿದರು +ಬಾಲಕಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೆರೆದರಬಲೆಯರಂಗವಟ್ಟದ ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣಬೆಳಗುಗಳ
(೨) ಕ ಕಾರದ ತ್ರಿವಳಿ ಪದ – ಕತ್ತಲೆಯ ಕೆದರುವ ಕಣ್ಣಬೆಳಗುಗಳ
(೩) ೪-೬ ಸಾಲಿನ ಮೊದಲ ಪದ ಪರಿಪರಿ

ಪದ್ಯ ೧೦೦: ದ್ರೌಪದಿಯ ಪಲ್ಲಕ್ಕಿಯ ಸುತ್ತಲು ಯಾರಿದ್ದರು?

ಉಡಿಗೆಗಳ ದೇಸಿಯ ವಿಳಾಸದ
ತೊಡಿಗೆಗಳ ಮೌಳಿಯ ನವಾಯಿಯ
ಮುಡಿಗಳೆಡಬಲದೋರೆನೋಟದ ಬಳ್ಳಿ ಬೆಳಗುಗಳ
ಕಡು ಬೆಮರ ತನುಪರಿಮಳದೊಳೆಡೆ
ವಿಡದ ಗಗನೋದರದ ಗರುವೆಯ
ರಡಸಿದರು ದ್ರುಪದಾತ್ಮಜೆಯ ದಂಡೆಗೆಯ ಬಳಸಿನಲಿ (ಸಭಾ ಪರ್ವ, ೧೩ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಚೆಲುವಾದ ದೇಸಿಯ ಬಟ್ಟೆಗಳನ್ನು ಧರಿಸಿ, ವಿಲಾಸಪೂರ್ಣ ಆಭರಣಗಳನ್ನು ತೊಟ್ಟು; ನೂತನ ರೀತಿಯ ಕೇಶವಿನ್ಯಾಸಗಳನ್ನೂ, ಓರೆ ನೋಟದ ಮಿಂಚಿನ ಬಳ್ಳಿಗಳನ್ನೂ, ಬೆವರಿನ ಪರಿಮಳವನ್ನೂ, ಕೃಶೋದರಗಳನ್ನೂ ಹೊಂದಿದ ಸಖಿಯರು ದ್ರೌಪದಿಯ ಪಲ್ಲಕ್ಕಿಯ ಸುತ್ತಲೂ ಸಂದಣಿಸಿದ್ದರು.

ಅರ್ಥ:
ಉಡಿಗೆ: ಧರಿಸುವ ವಸ್ತ್ರ, ಬಟ್ಟೆ; ದೇಸಿಯ: ಚೆಲುವು, ಜಾನಪದ, ಆಚಾರ; ವಿಳಾಸ: ವಿಹಾರ; ತೊಡಿಗೆ: ಆಭರಣ; ಮೌಳಿ: ಶಿರ; ನವಾಯಿ: ಹೊಸರೀತಿ, ಠೀವಿ; ಮುಡಿ: ತಲೆ; ಎಡಬಲ: ಅಕ್ಕಪಕ್ಕ; ಓರೆ: ಡೊಂಕು; ನೋಟ: ವೀಕ್ಷಣೆ; ಬಳ್ಳಿ: ಲತೆ; ಬೆಳಗು: ಹೊಳಪು, ಕಾಂತಿ; ಕಡು: ಬಹಳ; ಬೆಮರು: ಬೆವರು; ತನು: ದೇಹ; ಪರಿಮಳ: ಸುಗಂಧ; ಎಡವಿಡದೆ: ಬಿಡುವಿಲ್ಲದೆ; ಗಗನೋದರ: ಆಕಾಶವೇ ಹೊಟ್ಟೆಯಾರಿರುವ; ಗರುವ: ಶ್ರೇಷ್ಠ; ಅಡಸು: ಬಿಗಿಯಾಗಿ ಒತ್ತು, ಮುತ್ತು; ಆತ್ಮಜೆ: ಮಗಳು; ದಂಡಿಗೆ: ಪಲ್ಲಕ್ಕಿ; ಬಳಸು: ಆವರಿಸು;

ಪದವಿಂಗಡಣೆ:
ಉಡಿಗೆಗಳ +ದೇಸಿಯ +ವಿಳಾಸದ
ತೊಡಿಗೆಗಳ +ಮೌಳಿಯ +ನವಾಯಿಯ
ಮುಡಿಗಳ್+ಎಡಬಲದ್+ಓರೆನೋಟದ +ಬಳ್ಳಿ +ಬೆಳಗುಗಳ
ಕಡು+ ಬೆಮರ+ ತನು+ಪರಿಮಳದೊಳ್+ ಎಡೆ
ವಿಡದ +ಗಗನ+ಉದರದ +ಗರುವೆಯರ್
ಅಡಸಿದರು +ದ್ರುಪದ್+ಆತ್ಮಜೆಯ +ದಂಡೆಗೆಯ +ಬಳಸಿನಲಿ

ಅಚ್ಚರಿ:
(೧) ಉಡಿಗೆ, ತೊಡಿಗೆ – ಪ್ರಾಸ ಪದ
(೨) ಕಣ್ಣನ್ನು ವರ್ಣಿಸುವ ಬಗೆ – ಓರೆನೋಟದ ಬಳ್ಳಿ ಬೆಳಗುಗಳ
(೩) ಬೆವರು ಸಹ ಸುವಾಸನೆ ಭರಿತವಾಗಿದ್ದವು ಎಂದು ಹೇಳಲು – ಕಡು ಬೆಮರ ತನು ಪರಿಮಳದೊಳೆಡೆವಿಡದ

ಪದ್ಯ ೫೧: ಮುಂದಾಲೋಚನೆಯಿಲ್ಲದ ನೃಪನನ್ನು ಯಾವುದಕ್ಕೆ ಹೋಲಿಸಬಹುದು?

ಮೇಲನರಿಯದ ನೃಪನ ಬಾಳಿಕೆ
ಗಾಳಿಗೊಡ್ಡಿದ ಸೊಡರು ನೀರದ
ಜಾಲದೊಡ್ಡಣೆ ಸುರಧನುವಿನಾಕಾರ ಶವದುಡಿಗೆ
ಬಾಳಿಗೌಕಿದ ಕೊರಳು ಭುಜಗನ
ಹೇಳಿಗೆಯಲಿಕ್ಕಿದ ಕರವು ಬೆ
ಳ್ಳಾರ ಹಬ್ಬುಗೆಯವನ ಸಿರಿ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೫೧ ಪದ್ಯ)

ತಾತ್ಪರ್ಯ:
ಮುಂದಾಲೋಚನೆ ಮಾಡದ ರಾಜನ ಬಾಳ್ವಿಕೆಯು, ಗಾಳಿಗೆ ಒಡ್ಡಿದ ಹಣತೆಯಂತೆ, ಮೋಡಗಳ ರಚನೆಯಂತೆ, ಕಾಮನಬಿಲ್ಲಿನಂತೆ, ಶವದ ಉಡುಗೆಯಂತೆ, ಕತ್ತಿಗೆ ಒಡ್ಡಿದ ಕೊರಳಿನಂತೆ, ಹಾವಿರುವ ಬುಟ್ಟಿಯಲ್ಲಿ ಕೈಯಿಟ್ಟಂತೆ, ಪ್ರಾಣಕ್ಕೆ ಸಂಚಕಾರ ತರುತ್ತದೆ, ಅವನ ಸಿರಿ ಭ್ರಮೆ ಎಂದು ನಾರದರು ಯುಧಿಷ್ಠಿರನಿಗೆ ಹೇಳಿದರು.

ಅರ್ಥ:
ಮೇಲು: ಮುಂದಾಲೋಚನೆ; ಅರಿ: ತಿಳಿ; ನೃಪ: ರಾಜ; ಬಾಳಿಕೆ: ಬಾಳುವುದು; ಗಾಳಿ: ಅನಿಲ, ಪವನ; ಒಡ್ಡು: ಈಡುಮಾಡು, ಅರ್ಪಿಸು; ಸೊಡರು: ದೀಪ; ನೀರದ: ಮೋಡ; ಒಡ್ಡಣೆ:ಗುಂಪು; ಜಾಲ: ಗುಂಪು; ಸುರಧನು: ಕಾಮನಬಿಲ್ಲು;ಆಕಾರ: ರೂಪ; ಶವ: ಹೆಣ; ಉಡುಗೆ: ಬಟ್ಟೆ; ಬಾಳು: ಜೀವಿಸು; ಔಕು:ಒತ್ತು, ಹಿಚುಕು;ಬಾಳ್: ಕತ್ತಿ; ಕೊರಳು:ಕತ್ತು; ಭುಜಗ: ಹಾವು; ಹೇಳಿಗೆ:ಹಾವುಗಳನ್ನಿಡುವ ಬಿದಿರಿನ ಬುಟ್ಟಿ; ಕರ: ಕೈ, ಹಸ್ತ; ಬೆಳ್ಳಾರ: ಬಿಳಿಯ ಹಾರ (ಮುತ್ತಿನ ಹಾರ); ಹಬ್ಬುಗೆ:ವಿಸ್ತಾರ; ಸಿರಿ: ಐಶ್ವರ್ಯ; ಭೂಪಾಲ: ರಾಜ ಬೆಳ್ಳಾದ: ಬೆಪ್ಪನಾದ;

ಪದವಿಂಗಡಣೆ:
ಮೇಲನ್+ಅರಿಯದ +ನೃಪನ +ಬಾಳಿಕೆ
ಗಾಳಿಗ್+ಒಡ್ಡಿದ +ಸೊಡರು +ನೀರದ
ಜಾಲದ್+ಒಡ್ಡಣೆ +ಸುರಧನುವಿನ್+ಆಕಾರ +ಶವದ್+ಉಡಿಗೆ
ಬಾಳಿಗ್+ಔಕಿದ +ಕೊರಳು +ಭುಜಗನ
ಹೇಳಿಗೆಯಲ್+ಇಕ್ಕಿದ +ಕರವು+ ಬೆ
ಳ್ಳಾರ +ಹಬ್ಬುಗೆ+ಯವನ +ಸಿರಿ +ಭೂಪಾಲ +ಕೇಳೆಂದ

ಅಚ್ಚರಿ:
(೧) ೬ ಬಗೆಯ ಉಪಮಾನಗಳಿಂದ ರಾಜನ ಮುಂದಾಲೋಚನೆಯ ಮಹತ್ವವನ್ನು ತಿಳಿಸಿರುವುದು
(೨) ಗಾಳಿ, ಬಾಳಿ, ಹೇಳಿ – ಪ್ರಾಸ ಪದಗಳ ಪ್ರಯೋಗ
(೩) ಜಾಲ, ಒಡ್ಡಣೆ – ಸಮನಾರ್ಥಕ ಪದ (ಗುಂಪು)