ಪದ್ಯ ೪೫: ಧೃತರಾಷ್ಟ್ರನು ಯಾರನ್ನು ಸಂತೈಸಿಸಲು ಧರ್ಮಜನಿಗೆ ಹೇಳಿದನು?

ಸಾಕಿದಂತಿರಲಬಲೆಯರೊಳು
ದ್ರೇಕಿ ನಿಮ್ಮಯ ಹಿರಿಯ ತಾಯು
ದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳರಿವಿನೊ
ಳಾಕೆವಾಳರು ತಿಳಿಹಿ ತಮ್ಮನ
ನಾಕೆಯನು ಕಾಣಿಸುವುದೆಂದನು ವ್ಯಾಸ ವಿದುರರಿಗೆ (ಗದಾ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಧರ್ಮಜನನ್ನು ಉದ್ದೇಶಿಸುತ್ತಾ, ಧರ್ಮಜ ನೀನಾಡಿದ ಮಾತು ಒಳಿತಾಗಿದೆ, ಇದು ನಮಗೆ ಸಾಕು, ನಿಮ್ಮ ತಾಯಿಯ ಉದ್ರೇಕವನ್ನು ನಿವಾರಿಸು. ಶೋಕವೊಂದು ಕಡೆ, ಕೋಪವೊಂಡುಕಡೆ, ಅವುಗಳ ಉಪಟಲವನ್ನು ಆಕೆ ತಡೆದುಕೊಳ್ಳಲಾರಳು ಎಂದು ಹೇಳಿ ವ್ಯಾಸ ವಿದುರರಿಗೆ ಇವರನ್ನು ಕರೆದುಕೊಂಡು ಹೋಗಿ ಆಕೆಯನ್ನು ತೋರಿಸಿರಿ ಎಂದನು.

ಅರ್ಥ:
ಸಾಕು: ನಿಲ್ಲು; ಅಬಲೆ: ಹೆಣ್ಣು; ಉದ್ರೇಕ: ಉದ್ವೇಗ, ತಳಮಳ; ಹಿರಿಯ: ದೊಡ್ಡ; ತಾಯಿ: ಅಮ್ಮ; ಪರಿಹರಿಸು: ಶಮನಗೊಳಿಸು; ಶೋಕ: ದುಃಖ; ಕ್ರೋಧ: ಕೋಪ; ಉಪಟಳ: ಕಿರುಕುಳ; ಸೈರಿಸು: ಸಮಾಧಾನ ಪಡಿಸು; ಅರಿ: ತಿಳಿ; ಆಕೆವಾಳ: ವೀರ, ಪರಾಕ್ರಮಿ; ಕಾಣಿಸು: ನೋದು;

ಪದವಿಂಗಡಣೆ:
ಸಾಕ್+ಇದಂತಿರಲ್+ಅಬಲೆಯರೊಳ್
ಉದ್ರೇಕಿ +ನಿಮ್ಮಯ +ಹಿರಿಯ +ತಾಯ್
ಉದ್ರೇಕವನು +ಪರಿಹರಿಸು +ಶೋಕ+ಕ್ರೋಧದ್+ಉಪಟಳಕೆ
ಆಕೆ +ಸೈರಿಸಲ್+ಅರಿಯಳ್+ಅರಿವಿನೊಳ್
ಆಕೆವಾಳರು+ ತಿಳಿಹಿ +ತಮ್ಮನನ್
ಆಕೆಯನು +ಕಾಣಿಸುವುದೆಂದನು +ವ್ಯಾಸ +ವಿದುರರಿಗೆ

ಅಚ್ಚರಿ:
(೧) ಆಕೆ, ಆಕೆವಾಳ, ಆಕೆಯನು – ಆಕೆ ಪದದ ಬಳಕೆ
(೨) ಗಾಂಧಾರಿಯ ಸ್ಥಿತಿ – ನಿಮ್ಮಯ ಹಿರಿಯ ತಾಯುದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳ್

ಪದ್ಯ ೧೧: ದುರ್ಯೊಧನನು ಯಾರನ್ನು ಸಮಾಧಾನ ಪಡಿಸಲು ಹೇಳಿದನು?

ಸಾಕದಂತಿರಲಿನ್ನು ವೈರಿ
ವ್ಯಾಕರಣಪಾಂಡಿತ್ಯದಲ್ಲಿ ವಿ
ವೇಕಶೂನ್ಯರು ನಾವು ಮೊದಲಾದೌರ್ಧ್ವದೈಹಿಕವ
ಆಕೆವಾಳರಿಗರುಹಿ ನೀವ
ಸ್ತೋಕಪುಣ್ಯರ ತಿಳುಹಿ ವಿಗಳಿತ
ಶೋಕರೆನಿಸುವುದಂಧನೃಪ ಗಾಂಧಾರಿದೇವಿಯರ (ಗದಾ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಮಾತಿಗೆ ಉತ್ತರಿಸುತ್ತಾ ದುರ್ಯೋಧನನು, ಅದು ಹಾಗಿರಲಿ, ವೈರ್ಗಳೊಡನೆ ಮಾಡಿದ ಯುದ್ಧದಲ್ಲಿ ನಾವು ಅವಿವೇಕದಿಂದ ವರ್ತಿಸಿದ್ದೇವೆ. ನಮ್ಮನ್ನು ಸೇರಿಸಿ, ಎಲ್ಲರ ಅಂತ್ಯಕ್ರಿಯೆಗಳನ್ನು ಮಾಡಿಸಲು ವೀರರಿಗೆ ತಿಳಿಸಿರಿ. ನಮ್ಮ ತಂದೆ ತಾಯಿಗಳಾದ ಗಾಂಧಾರಿ, ಧೃತರಾಷ್ಟ್ರರನ್ನು ಸಮಾಧಾನ ಪಡಿಸಿ. ಅವರ ಶೋಕವನ್ನು ನಿವಾರಿಸಿರಿ ಎಂದು ಹೇಳಿದನು.

ಅರ್ಥ:
ಸಾಕು: ಕೊನೆ, ಅಂತ್ಯ; ವೈರಿ: ಶತ್ರು; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಪಾಂಡಿತ್ಯ: ವಿದ್ವತ್ತು, ಜ್ಞಾನ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಶೂನ್ಯ: ಬರಿದಾದುದು, ಇಲ್ಲವಾದುದು; ಮೊದಲು: ಮುಂಚೆ; ಉರ್ಧ್ವದೇಹಿಕ: ಸತ್ತ ಮೇಲೆ ಮಾಡುವ ಕರ್ಮ; ಆಕೆವಾಳ: ವೀರ, ಪರಾಕ್ರಮಿ; ಅರುಹು: ತಿಳಿಸು; ಅಸ್ತೋಕ: ಅಧಿಕವಾದ; ಪುಣ್ಯ: ಸದ್ಗುಣ ಯುಕ್ತವಾದ; ವಿಗಳಿತ: ಜಾರಿದ, ಸರಿದ; ಶೋಕ: ದುಃಖ; ಅಂಧನೃಪ: ಧೃತರಾಷ್ಟ್ರ;

ಪದವಿಂಗಡಣೆ:
ಸಾಕ್+ಅದಂತಿರಲ್+ಇನ್ನು+ ವೈರಿ
ವ್ಯಾಕರಣ+ಪಾಂಡಿತ್ಯದಲ್ಲಿ +ವಿ
ವೇಕ+ಶೂನ್ಯರು+ ನಾವು +ಮೊದಲಾದ್+ಊರ್ಧ್ವದೈಹಿಕವ
ಆಕೆವಾಳರಿಗ್+ಅರುಹಿ +ನೀವ್
ಅಸ್ತೋಕಪುಣ್ಯರ+ ತಿಳುಹಿ +ವಿಗಳಿತ
ಶೋಕರೆನಿಸುವುದ್+ಅಂಧನೃಪ +ಗಾಂಧಾರಿ+ದೇವಿಯರ

ಅಚ್ಚರಿ:
(೧) ದುರ್ಯೋಧನನು ತನ್ನ ತಪ್ಪನ್ನು ಒಪ್ಪಿಕೊಳ್ಳುವ ಪರಿ – ವೈರಿ ವ್ಯಾಕರಣಪಾಂಡಿತ್ಯದಲ್ಲಿ ವಿವೇಕಶೂನ್ಯರು ನಾವು

ಪದ್ಯ ೫೨: ಅರ್ಜುನನ ಬಾಣವನ್ನು ಎದುರಿಸಲು ಯಾರು ಬಂದರು?

ನೂಕಿದರು ಶಲ್ಯಂಗೆ ಪಡಿಬಲ
ದಾಕೆವಾಳರು ಗುರುಸುತಾದ್ಯರು
ತೋಕಿದರು ಶರಜಾಳವರ್ಜುನನಂಬಿನಂಬುಧಿಯ
ಬೀಕಲಿನ ಭಟರುಬ್ಬಿದರೆ ಸು
ವ್ಯಾಕುಲರು ತುಬ್ಬಿದರೆ ತಪ್ಪೇ
ನೀ ಕಳಂಬವ ಕಾಯುಕೊಳ್ಳೆನುತೆಚ್ಚನಾ ಪಾರ್ಥ (ಶಲ್ಯ ಪರ್ವ, ೨ ಸಂಧಿ, ೫೨ ಪದ್ಯ)

ತಾತ್ಪರ್ಯ:
ಶಲ್ಯನಿಗೆ ಸಹಾಯಮಾಡಲು ಅಶ್ವತ್ಥಾಮನೇ ಮೊದಲಾದ ವೀರರು ಅರ್ಜುನನ ಬಾಣಗಳ ಸಮುದ್ರವನ್ನು ತಮ್ಮ ಬಾಣಗಳಿಂದ ಇದಿರಿಸಿದರು. ದುರ್ಬಲ ಯೋಧರು ಉಬ್ಬಿದರೆ, ನೊಂದವರು ಉತ್ಸಾಹದಿಂದ ಮುಂದೆ ಬಂದರೆ, ತಪ್ಪೇನು? ಈ ಬಾಣದಿಂದ ನಿನ್ನನ್ನು ರಕ್ಷಿಸಿಕೋ ಎಂದು ಅರ್ಜುನನು ಹೊಡೆದನು.

ಅರ್ಥ:
ನೂಕು: ತಳ್ಳು; ಪಡಿಬಲ: ವೈರಿಸೈನ್ಯ; ಆಕೆವಾಳ: ಪರಾಕ್ರಮಿ; ಸುತ: ಮಗ; ಆದಿ: ಮುಂತಾದ; ತೋಕು: ಎಸೆ, ಪ್ರಯೋಗಿಸು, ಚೆಲ್ಲು; ಶರ: ಬಾಣ; ಜಾಲ: ಗುಂಪು; ಅಂಬು: ಬಾಣ; ಅಂಬುಧಿ: ಸಾಗರ; ಬೀಕಲು: ಕೊನೆ, ಅಂತ್ಯ; ಭಟ: ಸೈನಿಕ; ಉಬ್ಬು: ಅತಿಶಯ, ಉತ್ಸಾಹ; ವ್ಯಾಕುಲ: ದುಃಖ, ವ್ಯಥೆ; ತುಬ್ಬು: ಪತ್ತೆ ಮಾಡು, ಶೋಧಿಸು; ಕಳಂಬ: ಬಾಣ, ಅಂಬು; ಕಾಯ್ದು: ಕಾಪಾಡು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ನೂಕಿದರು +ಶಲ್ಯಂಗೆ +ಪಡಿಬಲದ್
ಆಕೆವಾಳರು +ಗುರುಸುತಾದ್ಯರು
ತೋಕಿದರು +ಶರಜಾಳವ್+ಅರ್ಜುನನ್+ಅಂಬಿನ್+ಅಂಬುಧಿಯ
ಬೀಕಲಿನ+ ಭಟರ್+ಉಬ್ಬಿದರೆ+ ಸು
ವ್ಯಾಕುಲರು +ತುಬ್ಬಿದರೆ +ತಪ್ಪೇನ್
ಈ+ ಕಳಂಬವ+ ಕಾಯ್ದುಕೊಳ್ಳೆನುತ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಶರಜಾಳವರ್ಜುನನಂಬಿನಂಬುಧಿಯ – ಅಂಬು ಪದದ ಬಳಕೆ
(೨) ಉಬ್ಬಿದರೆ, ತುಬ್ಬಿದರೆ – ಪ್ರಾಸ ಪದಗಳು
(೩) ಕಳಂಬ, ಅಂಬು, ಶರ – ಸಮಾನಾರ್ಥಕ ಪದ

ಪದ್ಯ ೨೦: ಕೌರವ ಸೈನ್ಯ ಹೇಗೆ ತನ್ನ ಪ್ರತಾಪವನ್ನು ತೋರಿತು?

ನೂಕಿದರು ನಿನ್ನವರು ಹಿನ್ನಲೆ
ಯಾಕೆವಾಳರ ಜೋಕೆಯಲಿ ರಣ
ವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ
ವ್ಯಾಕುಲರ ಬಯ್ಬಯ್ದು ಚಪಲಾ
ನೀಕ ಬಂಡಿಸಿ ಚಂಡಪಾತ ನಿ
ರಾಕರಿಷ್ಣುಗಳೊಕ್ಕಲಿಕ್ಕಿತು ದಳದ ಮಧ್ಯದಲಿ (ಶಲ್ಯ ಪರ್ವ, ೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ನಿನ್ನ ಸುಭಟರು ವೀರರ ಬೆಂಬಲದಿಂದ ಮುನ್ನುಗ್ಗಿ ಸಮರದಲ್ಲಿ ಆನೆ ಕುದುರೆಗಳ ರಕ್ತವನ್ನು ಸುರಿಸಿದರು. ಯುದ್ಧ ವ್ಯಾಕುಲರನ್ನು ಬೈದು, ಸೈನ್ಯವನ್ನು ಬಡಿದು, ರಣರಂಗದಲ್ಲಿ ಅತಿಶಯ ಪರಾಕ್ರಮದಿಂದ ವೀರರನ್ನು ಹೊಡೆದು ಹಾಕಿದರು.

ಅರ್ಥ:
ನೂಕು: ತಳ್ಳು; ಆಕೆವಾಳ: ವೀರ, ಪರಾಕ್ರಮಿ; ಜೋಕೆ: ಎಚ್ಚರಿಕೆ; ರಣ: ಯುದ್ಧ; ಓಕರಿಸು: ಹೊರಹಾಕು; ಅರುಣಾಂಬು: ಕೆಂಪಾದ ನೀರು (ರಕ್ತ); ಗಜ: ಆನೆ; ಹಯ: ಕುದುರೆ; ಮೈ: ತನು, ದೇಹ; ವ್ಯಾಕುಲ: ದುಃಖ, ವ್ಯಥೆ; ಬೈದು: ಜರೆದು; ಚಪಲ: ಚಂಚಲ ಸ್ವಭಾವದವನು; ಆನೀಕ: ಗುಂಪು; ಬಂಡಿಸು: ಹೊಡೆ; ಚಂಡ: ಶೂರ, ಪರಾಕ್ರಮಿ; ನಿರಾಕರಿಷ್ಣು: ನಿರಾಕರಿಸಿ ಬಯಸಿದವನು; ದಳ: ಸೈನ್ಯ; ಮಧ್ಯ: ನಡುವೆ;

ಪದವಿಂಗಡಣೆ:
ನೂಕಿದರು +ನಿನ್ನವರು +ಹಿನ್ನಲೆ
ಆಕೆವಾಳರ+ ಜೋಕೆಯಲಿ +ರಣ
ಓಕರಿಸಿತ್+ಅರುಣಾಂಬುವನು +ಗಜ+ಹಯದ +ಮೈಗಳಲಿ
ವ್ಯಾಕುಲರ +ಬಯ್ಬಯ್ದು+ ಚಪಲ
ಆನೀಕ +ಬಂಡಿಸಿ+ ಚಂಡಪಾತ+ ನಿ
ರಾಕರಿಷ್ಣುಗಳ್+ಒಕ್ಕಲಿಕ್ಕಿತು +ದಳದ +ಮಧ್ಯದಲಿ

ಅಚ್ಚರಿ:
(೧) ರಕ್ತಹರಿಯಿತು ಎಂದು ಹೇಳುವ ಪರಿ – ರಣವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ

ಪದ್ಯ ೫೬: ಮುನಿವರ್ಯರು ದ್ರೋಣರಿಗೆ ಏನೆಂದು ಹೇಳಿದರು?

ಲೋಕವೆಂಬುದು ವರ್ಣಧರ್ಮವ
ನೌಕಿ ನಡೆವುದು ವೈದಿಕಕೆ ನಾ
ವಾಕೆವಾಳರು ತಪ್ಪಿ ನಡೆದರೆ ಭ್ರಮಿಸುವರು ಬುಧರು
ಲೋಕ ನಮ್ಮನುದಾಹರಿಸುವುದು
ಕಾಕನೇ ಬಳಸುವುದು ದುರ್ಯಶ
ವೇಕೆ ನಿಮಗಿದು ವಿಹಿತಕರ್ಮಶ್ರುತಿ ಪರಿತ್ಯಾಗ (ದ್ರೋಣ ಪರ್ವ, ೧೮ ಸಂಧಿ, ೫೬ ಪದ್ಯ)

ತಾತ್ಪರ್ಯ:
ವರ್ಣ ಧರ್ಮವನ್ನು ಮೀರಿ ನಡೆಯುವುದೇ ಲೋಕದ ರೀತಿ. ವೇದೋಕ್ತ ಮಾರ್ಗಕ್ಕೆ ತಿಳಿದ ನಾವು ತಪ್ಪಿದರೆ ವಿದ್ವಾಂಸರೂ ಭ್ರಮಿಸುತ್ತಾರೆ. ತಮ್ಮ ತಪ್ಪು ಮಾರ್ಗಕ್ಕೆ ನಾವೇ ಕಾರಣರೆಂದು ಉದಾಹರಣೆ ಕೊಡುತ್ತಾರೆ. ಕೆಟ್ಟ ಮಾರ್ಗದಲ್ಲೇ ನಡೆಯುತ್ತಾರೆ. ವೇದವು ವಿಹಿತವೆಂದು ಹೇಳಿರುವ ಕರ್ಮಗಳನ್ನು ನೀನೇಕೆ ಬಿಡಬೇಕು ಎಂದು ಮುನಿವರ್ಯರು ಕೇಳಿದರು.

ಅರ್ಥ:
ಲೋಕ: ಜಗತ್ತು; ವರ್ಣ: ಬಣ, ಪಂಗಡ; ಧರ್ಮ: ಧಾರಣೆ ಮಾಡಿದುದು; ಔಕು: ಒತ್ತು; ನಡೆ: ಚಲಿಸು; ವೈದಿಕ: ವೇದಗಳನ್ನು ಬಲ್ಲವನು; ಆಕೆವಾಳ: ವೀರ, ಪರಾಕ್ರಮಿ; ತಪ್ಪು: ಸರಿಯಿಲ್ಲದ್ದು; ಭ್ರಮಿಸು: ಭ್ರಾಂತಿ, ಹುಚ್ಚು; ಬುಧ: ವಿದ್ವಾಂಸ; ಉದಾಹರಣೆ: ದೃಷ್ಟಾಂತ; ಕಾಕ: ಕಾಗೆ, ನೀಚ; ಬಳಸು: ಉಪಯೋಗಿಸು; ದುರ್ಯಶ: ಅಪಯಶಸ್ಸು; ವಿಹಿತ: ಸರಿಯಾದ; ಕರ್ಮ: ಕಾರ್ಯ; ಶೃತಿ: ವೇದ; ತ್ಯಾಗ: ತೊರೆ;

ಪದವಿಂಗಡಣೆ:
ಲೋಕವೆಂಬುದು +ವರ್ಣ+ಧರ್ಮವನ್
ಔಕಿ +ನಡೆವುದು +ವೈದಿಕಕೆ +ನಾವ್
ಆಕೆವಾಳರು +ತಪ್ಪಿ+ ನಡೆದರೆ +ಭ್ರಮಿಸುವರು +ಬುಧರು
ಲೋಕ +ನಮ್ಮನ್+ಉದಾಹರಿಸುವುದು
ಕಾಕನೇ +ಬಳಸುವುದು +ದುರ್ಯಶವ್
ಏಕೆ +ನಿಮಗಿದು +ವಿಹಿತ+ಕರ್ಮ+ಶ್ರುತಿ +ಪರಿತ್ಯಾಗ

ಅಚ್ಚರಿ:
(೧) ಲೋಕದ ನೀತಿ – ಲೋಕವೆಂಬುದು ವರ್ಣಧರ್ಮವ ನೌಕಿ ನಡೆವುದು
(೨) ಮುನಿವರ್ಯರು ತಮ್ಮನ್ನು ಪರಿಚಯಿಸಿದ ಪರಿ – ವೈದಿಕಕೆ ನಾವಾಕೆವಾಳರು

ಪದ್ಯ ೩೧: ಕೃಷ್ಣನೇಕೆ ರಥವನ್ನು ಹಿಂದಕ್ಕೆ ತಿರುಗಿಸಿದನು?

ಸಾಕು ನಿಮಗಾಗದು ವೃಥಾ ನೀ
ವೇಕಹಂಕರಿಸುವಿರಿ ಸೇನಾ
ನೀಕ ಹೊದ್ದಲಿ ಹೊಗಲಿ ದೃಷ್ಟದ್ಯುಮ್ನ ಮೊದಲಾಗಿ
ಆಕೆವಾಳರು ನಿಲಲಿ ಕುಪಿತ ಪಿ
ನಾಕಿಯರಿಯಾ ದ್ರೋಣನೆನುತ ನ
ರಾಕೃತಿಯ ಪರಬೊಮ್ಮರೂಪನು ತಿರುಹಿದನು ರಥವ (ದ್ರೋಣ ಪರ್ವ, ೧೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ಮನುಷ್ಯ ರೂಪಿನ ಪರಬ್ರಹ್ಮನಾದ ಶ್ರೀಕೃಷ್ಣನು ನುಡಿಯುತ್ತಾ, ನಿಮ್ಮ ಕೈಲಿ ಈ ಯುದ್ಧದಲ್ಲಿ ಗೆಲಲಾಗುವುದಿಲ್ಲ. ನೀವು ಏಕೆ ಅಹಂಕಾರದಿಂದ ಕಾದುತ್ತಿರುವಿರಿ? ದ್ರೋಣನೆದುರು ನಮ್ಮ ಸೈನ್ಯ ನಿಲ್ಲಲಿ, ಧೃಷ್ಟದ್ಯುಮ್ನನೇ ಮೊದಲಾದ ವೀರರು ನಿಲ್ಲಲಿ, ಈ ದ್ರೋಣನು ಕೋಪಗೊಂಡ ಶಿವ, ನಿಮಗೆ ತಿಳಿಯಲಿಲ್ಲವೇ ಎಂದು ರಥವನ್ನು ಹಿಂದಕ್ಕೆ ತಿರುಗಿಸಿದನು.

ಅರ್ಥ:
ಸಾಕು: ತಡೆ; ವೃಥ: ಸುಮ್ಮನೆ; ಅಹಂಕಾರ: ಗರ್ವ, ದರ್ಪ; ಸೇನೆ: ಸೈನ್ಯ; ಆನೀಕ: ಸಮೂಹ; ಹೊದ್ದು: ಪೊರ್ದು, ಸೇರು; ಹೊಗು: ತೆರಳು; ಮೊದಲಾಗಿ: ಮುಂತಾದ; ಆಕೆವಾಳ: ಪರಾಕ್ರಮಿ; ನಿಲಲಿ: ನಿಂತುಕೊಳ್ಳಲಿ; ಕುಪಿತ: ಕೋಪ; ಪಿನಾಕ: ತ್ರಿಶೂಲ; ಅರಿ: ಶಿವ; ನರ: ಮನುಷ್ಯ; ಆಕೃತಿ: ರೂಪ; ಪರಬೊಮ್ಮ: ಪರಬ್ರಹ್ಮ; ತಿರುಹು: ತಿರುಗಿಸು, ಮರಳು; ರಥ: ಬಂಡಿ;

ಪದವಿಂಗಡಣೆ:
ಸಾಕು +ನಿಮಗಾಗದು +ವೃಥಾ +ನೀವೇಕ್
ಅಹಂಕರಿಸುವಿರಿ +ಸೇನಾ
ನೀಕ+ ಹೊದ್ದಲಿ +ಹೊಗಲಿ +ದೃಷ್ಟದ್ಯುಮ್ನ +ಮೊದಲಾಗಿ
ಆಕೆವಾಳರು +ನಿಲಲಿ +ಕುಪಿತ +ಪಿ
ನಾಕಿ+ಅರಿ+ಆ +ದ್ರೋಣನ್+ಎನುತ +ನ
ರಾಕೃತಿಯ +ಪರಬೊಮ್ಮ+ರೂಪನು +ತಿರುಹಿದನು +ರಥವ

ಅಚ್ಚರಿ:
(೧) ದ್ರೋಣನನ್ನು ಹೋಲಿಸಿದ ಪರಿ – ಕುಪಿತ ಪಿನಾಕಿಯರಿಯಾ ದ್ರೋಣನೆನುತ
(೨) ಕೃಷ್ಣನನ್ನು ಕರೆದ ಪರಿ – ನರಾಕೃತಿಯ ಪರಬೊಮ್ಮರೂಪನು ತಿರುಹಿದನು ರಥವ

ಪದ್ಯ ೨೩: ದುರ್ಯೋಧನನು ಕರ್ಣನಿಗೆ ಏನು ಹೇಳಿದನು?

ಸಾಕು ದೈತ್ಯನ ಕೆಡಹು ಸೇನೆಯ
ಸಾಕು ಸುಭಟರು ಬಾಯಬಿಡುತಿದೆ
ನೂಕು ನೂಕಮರಾರಿಯನು ತಡೆ ತಡವುಮಾಡದಿರು
ಆಕೆವಾಲರು ವಿಗಡ ವೀರಾ
ನೀಕವಿದೆ ತಲ್ಲಣದ ತಗಹಿನ
ಲೇಕೆ ಕಾಲಕ್ಷೇಪವೆಂದನು ಕೌರವರರಾಯ (ದ್ರೋಣ ಪರ್ವ, ೧೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣ, ಈ ಮಾತು ಸಾಕು, ದೈತ್ಯನನ್ನು ಸಂಹರಿಸು, ನಮ್ಮ ಪರಾಕ್ರಮಿಗಳು ಬಾಯಿಬಾಯಿ ಬಿಡುತ್ತಿದ್ದಾರೆ, ತಡೆಯದೆ ತಡಮಾಡದೆ ಈ ರಾಕ್ಷಸನನ್ನು ಸಂಹರಿಸು. ವೀರರೂ ಸಮರ್ಥರೂ ತಲ್ಲಣಗೊಂಡಿದ್ದಾರೆ. ಕಾಲವನ್ನು ಸುಮ್ಮನೇ ವ್ಯರ್ಥಮಾಡಬೇಡ ಎಂದು ದುರ್ಯೋಧನನು ಕರ್ಣನಿಗೆ ಹೇಳಿದನು.

ಅರ್ಥ:
ಸಾಕು: ನಿಲ್ಲಿಸು; ದೈತ್ಯ: ರಾಕ್ಷಸ; ಕೆಡಹು: ಬೀಳಿಸು, ನಾಶಮಾಡು; ಸೇನೆ: ಸೈನ್ಯ; ಸುಭಟ: ವೀರ; ನೂಕು: ತಳ್ಳು; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ತಡೆ: ನಿಲ್ಲಿಸು; ತಡ: ನಿಧಾನ; ಆಕೆವಾಳ: ವೀರ, ಪರಾಕ್ರಮಿ; ವಿಗಡ: ಶೌರ್ಯ, ಪರಾಕ್ರಮ; ವೀರ: ಶೂರ; ತಲ್ಲಣ: ಅಂಜಿಕೆ, ಭಯ; ತಗಹು: ಅಡ್ಡಿ, ತಡೆ; ಕಾಲಕ್ಷೇಪ: ಕಾಲ ಕಳೆಯುವುದು; ರಾಯ: ರಾಜ; ಆನೀಕ: ಸಮೂಹ;

ಪದವಿಂಗಡಣೆ:
ಸಾಕು +ದೈತ್ಯನ +ಕೆಡಹು +ಸೇನೆಯ
ಸಾಕು +ಸುಭಟರು +ಬಾಯಬಿಡುತಿದೆ
ನೂಕು +ನೂಕ್+ಅಮರಾರಿಯನು +ತಡೆ +ತಡವು+ಮಾಡದಿರು
ಆಕೆವಾಳರು +ವಿಗಡ +ವೀರಾ
ನೀಕವಿದೆ +ತಲ್ಲಣದ +ತಗಹಿನ
ಲೇಕೆ +ಕಾಲಕ್ಷೇಪವೆಂದನು +ಕೌರವರ+ರಾಯ

ಅಚ್ಚರಿ:
(೧) ಸಾಕು, ನೂಕು – ಪ್ರಾಸ ಪದಗಳು
(೨) ಆಕೆವಾಳ, ಸುಭಟ, ವಿಗಡ, ವೀರಾನೀಕ – ಸಾಮ್ಯಾರ್ಥ ಪದಗಳು
(೩) ತಡೆ, ತಡ – ಪದಗಳ ಬಳಕೆ

ಪದ್ಯ ೬೭: ಕರ್ಣಾದಿಗಳು ಏನೆಂದು ಗರ್ಜಿಸಿದರು?

ಸಾಕು ನೀ ಚಿಂತಿಸಲು ಬೇಡ ಪಿ
ನಾಕಧರನಡಹಾಯ್ದಡೆಯು ನಾ
ವಾಕೆವಾಳರು ರಣಕೆ ಕೃಷ್ಣಾರ್ಜುನರ ಪಾಡೇನು
ನೂಕಿ ನೋಡಾ ಸೈಂಧವನನೇ
ಕೈಕವೀರರು ಕಾವೆವೆಂದು
ದ್ರೇಕ ಮಿಗೆ ಗರ್ಜಿಸಿತು ಕರ್ಣಾದಿಗಳು ತಮತಮಗೆ (ದ್ರೋಣ ಪರ್ವ, ೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ಆಗ ಕರ್ಣಾದಿಗಳು ಜೋರಾಗಿ ಗರ್ಜಿಸುತ್ತಾ, ಸಾಕು, ನೀನು ಚಿಂತೆ ಮಾಡಬೇಡ, ಶಿವನೇ ಎದುರಾಗಿ ಬಂದರೂ ಯುದ್ಧಮಾಡಬಲ್ಲ ವೀರರು ನಾವಿದ್ದೇವೆ, ಇನ್ನು ಕೃಷ್ಣಾರ್ಜುನರ ಪಾಡೆನು, ಅವರು ನಮಗೆ ಲೆಕ್ಕವೇ? ಸೈಂಧವನನ್ನು ನಾವು ಕಾಪಾಡುತ್ತೇವೆ, ಅವನನ್ನು ರಣರಂಗಕ್ಕೆ ನೂಕಿಇರಿ, ನಾವು ರಕ್ಷಿಸುತ್ತೇವೆ, ಜಗತ್ತಿನಲ್ಲಿ ನಾವು ಏಕೈಕ ವೀರರು ಎಂದು ಕೂಗಿದರು.

ಅರ್ಥ:
ಸಾಕು: ನಿಲ್ಲಿಸು; ಚಿಂತಿಸು: ಯೋಚಿಸು; ಬೇಡ: ತಡೆ; ಪಿನಾಕ: ತ್ರಿಶೂಲ; ಪಿನಾಕಧರ: ಶಿವ; ಅಡಹಾಯ್ದು: ಅಡ್ಡಬಾ, ಇದಿರಾಗು; ಆಕೆವಾಳ: ವೀರ, ಪರಾಕ್ರಮಿ; ರಣ: ಯುದ್ಧ; ಪಾಡು: ಸ್ಥಿತಿ; ನೂಕು: ತಳ್ಳು; ಏಕೈಕ: ಒಬ್ಬನೇ; ವೀರ: ಪರಾಕ್ರಮಿ; ಕಾವು: ರಕ್ಷಿಸು; ಉದ್ರೇಕ: ಉದ್ವೇಗ, ಆವೇಗ; ಮಿಗೆ: ಹೆಚ್ಚು; ಗರ್ಜಿಸು: ಆರ್ಭಟಿಸು; ಆದಿ: ಮುಂತಾದ;

ಪದವಿಂಗಡಣೆ:
ಸಾಕು +ನೀ +ಚಿಂತಿಸಲು +ಬೇಡ +ಪಿ
ನಾಕಧರನ್+ಅಡಹಾಯ್ದಡೆಯು +ನಾವ್
ಆಕೆವಾಳರು +ರಣಕೆ +ಕೃಷ್ಣಾರ್ಜುನರ +ಪಾಡೇನು
ನೂಕಿ +ನೋಡಾ +ಸೈಂಧವನನ್
ಏಕೈಕವೀರರು +ಕಾವೆವೆಂದ್
ಉದ್ರೇಕ +ಮಿಗೆ +ಗರ್ಜಿಸಿತು +ಕರ್ಣಾದಿಗಳು +ತಮತಮಗೆ

ಅಚ್ಚರಿ:
(೧) ಕರ್ಣಾದಿಗಳು ತಮ್ಮ ಪರಾಕ್ರಮವನ್ನು ಹೊಗಳಿದ ಪರಿ – ಪಿನಾಕಧರನಡಹಾಯ್ದಡೆಯು ನಾವಾಕೆವಾಳರು; ಏಕೈಕವೀರರು ಕಾವೆವೆಂದುದ್ರೇಕ ಮಿಗೆ ಗರ್ಜಿಸಿತು ಕರ್ಣಾದಿಗಳು

ಪದ್ಯ ೬೦: ಶಲ್ಯನ ಮಗನ ಸೈನ್ಯವು ಅಭಿಮನ್ಯುವನ್ನು ಹೇಗೆ ಎದುರಿಸಿತು?

ಆ ಕುಮಾರನ ಸೇನೆ ಗಡಣಿಸಿ
ನೂಕಿತುರವಣಿಸಿದುದು ತುರಗಾ
ನೀಕವಿಭತತಿ ತೂಳಿದವು ತುಡುಕಿದವು ರಥನಿಕರ
ತೋಕಿದವು ಕೈದುಗಳ ಮಳೆ ರಣ
ದಾಕೆವಾಳರ ಸನ್ನೆಯಲಿ ಸಮ
ರಾಕುಳರು ಕೆಣಕಿದರು ರಿಪುಕಲ್ಪಾಂತಭೈರವನ (ದ್ರೋಣ ಪರ್ವ, ೫ ಸಂಧಿ, ೬೦ ಪದ್ಯ)

ತಾತ್ಪರ್ಯ:
ಶಲ್ಯನ ಮಗನ ಸೈನ್ಯವು ಅಭಿಮನ್ಯುವನ್ನು ಆವರಿಸಿತು. ಆನೆ, ಕುದುರೆ, ರಥ, ಕಾಲಾಳುಗಳು ಮುನ್ನುಗ್ಗಿದರು. ಶಸ್ತ್ರಗಳ ಮಳೆ ಸುರಿಸಿದರು. ಚಮೂಪತಿಗಳ ಸನ್ನೆಯಂತೆ ಶತ್ರುಗಳಿಗೆ ಕಲ್ಪಾಂತ ಭೈರವನಂತಿದ್ದ ಅಭಿಮನುವನ್ನು ಎದುರಿಸಿದರು.

ಅರ್ಥ:
ಕುಮಾರ: ಮಗ; ಸೇನೆ: ಸೈನ್ಯ; ಗಡಣ: ಕೂಡಿಸುವಿಕೆ, ಸೇರಿಸುವಿಕೆ; ನೂಕು: ತಳ್ಳು; ಉರವಣೆ: ಆತುರ, ಅವಸರ; ತುರಗ: ಅಶ್ವ; ಆನೀಕ; ಸೈನ್ಯ, ಸಮೂಹ; ಇಭ; ಆನೆ; ತತಿ: ಗುಂಪು; ತೂಳು: ಆವೇಶ, ಉನ್ಮಾದ; ತುಡುಕು: ಹೋರಾಡು, ಸೆಣಸು; ರಥ:ಬಂಡಿ, ತೇರು; ನಿಕರ: ಗುಂಪು; ತೋಕು: ಎಸೆ, ಪ್ರಯೋಗಿಸು; ಕೈದು: ಆಯುಧ; ಮಳೆ: ವರ್ಷ; ರಣ: ಯುದ್ಧ; ಆಕೆವಾಳ: ವೀರ, ಪರಾಕ್ರಮಿ; ಸನ್ನೆ: ಗುರುತು; ಸಮರ: ಯುದ್ಧ; ಕೆಣಕು: ರೇಗಿಸು; ರಿಪು: ವೈರಿ; ಕಲ್ಪಾಂತ: ಯುಗದ ಅಂತ್ಯ; ಭೈರವ: ಈಶ್ವರನ ಸ್ವರೂಪ;

ಪದವಿಂಗಡಣೆ:
ಆ +ಕುಮಾರನ +ಸೇನೆ +ಗಡಣಿಸಿ
ನೂಕಿತ್+ಉರವಣಿಸಿದುದು +ತುರಗ
ಆನೀಕವ್+ಇಭ+ತತಿ +ತೂಳಿದವು +ತುಡುಕಿದವು +ರಥನಿಕರ
ತೋಕಿದವು +ಕೈದುಗಳ +ಮಳೆ +ರಣದ್
ಆಕೆವಾಳರ +ಸನ್ನೆಯಲಿ +ಸಮ
ರಾಕುಳರು +ಕೆಣಕಿದರು +ರಿಪು+ಕಲ್ಪಾಂತ+ಭೈರವನ

ಅಚ್ಚರಿ:
(೧) ತೂಳಿದವು, ತುಡುಕಿದವು, ತೋಕಿದವು – ಪದಗಳ ಬಳಕೆ
(೨) ರಣ, ಸಮರ; ತತಿ, ನಿಕರ – ಸಮಾನಾರ್ಥಕ ಪದ

ಪದ್ಯ ೪೨: ದ್ರೋಣರು ಶಿಖಂಡಿಯನ್ನು ಹೇಗೆ ಸೋಲಿಸಿದರು?

ಸಾಕು ಷಂಡನ ಕೂಡೆ ಕಾದುವು
ದೇಕೆ ತಿದ್ದುವೆನೆನುತ ರಥವನು
ನಾಕು ಶರದಲಿ ಮುರಿದು ಸೂತನ ತಲೆಯನೆರಡರಲಿ
ನೂಕಿ ಧನುವನು ಮೂರು ಬಾಣದ
ಲೌಕಿ ಖಂಡಿಸಿ ಹೋಗು ಹೋಗಿ
ನ್ನಾಕೆವಾಳರನರಸಿ ತಾ ಎನುತೈದಿದನು ದ್ರೋಣ (ದ್ರೋಣ ಪರ್ವ, ೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಈ ನಪುಂಸಕನ ಜೊತೆಗೆ ಯುದ್ಧಮಾಡಿದ್ದು ಸಾಕು, ಮುಗಿಸುತ್ತೇನೆ ಎಂದು ಯೋಚಿಸಿ ದ್ರೋಣನು ನಾಲ್ಕು ಬಾಣಗಳಿಂದ ಶಿಖಂಡಿಯ ರಥವನ್ನೂ ಎರಡು ಬಾಣಗಳಿಂದ ಸಾರಥಿಯ ತಲೆಯನ್ನೂ ಮುರು ಬಾಣಗಳಿಂದ ಬಿಲ್ಲನ್ನೂ ಕತ್ತರಿಸಿ ಶಿಖಂಡಿ ಹೋಗು ಯಾರಾದರೂ ವೀರರಿದ್ದರೆ ಹುಡುಕಿ ಕರೆದುಕೊಂಡು ಬಾ ಎಂದು ರಥವನ್ನು ಮುಂದಕ್ಕೆ ಚಲಿಸಿದನು.

ಅರ್ಥ:
ಸಾಕು: ನಿಲ್ಲಿಸು; ಷಂಡ: ಶಿಖಂಡಿ; ಕೂಡೆ: ಜೊತೆ; ಕಾದು: ಹೋರಾಡು; ತಿದ್ದು: ಸರಿಪಡಿಸು; ರಥ: ಬಂಡಿ; ನಾಕು: ನಾಲ್ಕು; ಶರ: ಬಾಣ; ಮುರಿ: ಸೀಳು; ಸೂತ: ಸಾರಥಿ ತಲೆ: ಶಿರ; ನೂಕು: ತಳ್ಳು; ಧನು: ಬಿಲ್ಲು; ಬಾಣ: ಶರ; ಔಕು: ತಳ್ಳು; ಖಂಡಿಸು: ಕಡಿ, ಕತ್ತರಿಸು; ಹೋಗು: ತೆರಳು; ಆಕೆವಾಳ: ವೀರ, ಪರಾಕ್ರಮಿ; ಅರಸು: ಹುಡುಕು; ಐದು: ಬಂದುಸೇರು;

ಪದವಿಂಗಡಣೆ:
ಸಾಕು +ಷಂಡನ +ಕೂಡೆ +ಕಾದುವುದ್
ಏಕೆ +ತಿದ್ದುವೆನ್+ಎನುತ +ರಥವನು
ನಾಕು +ಶರದಲಿ +ಮುರಿದು +ಸೂತನ +ತಲೆಯನ್+ಎರಡರಲಿ
ನೂಕಿ +ಧನುವನು +ಮೂರು +ಬಾಣದಲ್
ಔಕಿ +ಖಂಡಿಸಿ+ ಹೋಗು +ಹೋಗಿನ್
ಆಕೆವಾಳರನರಸಿ +ತಾ +ಎನುತ್+ಐದಿದನು +ದ್ರೋಣ

ಅಚ್ಚರಿ:
(೧) ನಾಕು, ಮೂರು, ಎರಡು ಬಾಣಗಳ ಪ್ರಯೋಗವನ್ನು ಚಿತ್ರಿಸುವ ಪರಿ
(೨) ಸಾಕು, ನಾಕು; ನೂಕಿ, ಔಕಿ – ಪ್ರಾಸ ಪದಗಳು