ಅಳಿಯನೀ ಮೋಹರದೊಳಲ್ಲದೆ
ಫಲುಗುಣನ ಮಗನಿವನು ಬಲುಗೈ
ಯುಳುಹ ಬಾರದು ಕಾಯಿದರೆ ಕಲಿಯುಗಕೆ ಗತಿಯಿಲ್ಲ
ಫಲುಗುಣನ ನಾವಿತ್ತಲೊಯ್ದರೆ
ಬಳಿಕ ನಿರ್ನಯವೆಂದು ಮನದಲಿ
ತಿಳಿದು ಪಾರ್ಥಂಗೆಂದನಸುರಾರಾತಿ ನಸುನಗುತ (ದ್ರೋಣ ಪರ್ವ, ೪ ಸಂಧಿ, ೨೭ ಪದ್ಯ)
ತಾತ್ಪರ್ಯ:
ಈ ಪದ್ಮವ್ಯೂಹದಲ್ಲಲ್ಲದೇ ಪರಾಕ್ರಮಿಯಾದ ಅಭಿಮನ್ಯುವು ಮಡಿಯುವುದಿಲ್ಲ, ಇವನನ್ನು ಉಳಿಸಬಾರದು, ಇವನುಳಿದರೆ ಕಲಿಯುಗವೇ ಬರುವುದಿಲ್ಲ. ನಾನು ಅರ್ಜುನನನ್ನು ಸಂಶಪ್ತಕರ ಕದನಕ್ಕೆ ಕರೆದೊಯ್ದರೆ ಅಭಿಮನ್ಯುವಿನ ಹಣೆಬರಹದ ನಿರ್ಣಯವಾಗುತ್ತದೆ ಎಂದು ಶ್ರೀಕೃಷ್ಣನು ಮನಸ್ಸಿನಲ್ಲೇ ತಿಳಿದು ಅರ್ಜುನನಿಗೆ ಹೀಗೆ ಹೇಳಿದನು.
ಅರ್ಥ:
ಅಳಿ: ನಾಶ; ಮೋಹರ: ಯುದ್ಧ; ಮಗ: ಪುತ್ರ; ಬಲುಗೈ: ಪರಾಕ್ರಮ; ಉಳುಹು: ಜೀವಿಸು; ಕಾಯು: ರಕ್ಷಿಸು; ಗತಿ: ಸ್ಥಿತಿ, ವೇಗ; ಒಯ್ಯು: ತೆರಳು; ಬಳಿಕ: ನಂತರ; ನಿರ್ಣಯ: ನಿರ್ಧಾರ; ಮನ: ಮನಸ್ಸು; ತಿಳಿ: ಯೋಚಿಸು; ಅಸುರಾರಾತಿ: ಅಸುರರಿಗೆ ಶತ್ರುವಾಗಿರುವ (ಕೃಷ್ಣ); ಅರಾತಿ: ಶತ್ರು; ನಸುನಗು: ಹಸನ್ಮುಖಿ; ಉಳುಹು: ಕಾಪಾಡು, ಸಂರಕ್ಷಿಸು;
ಪದವಿಂಗಡಣೆ:
ಅಳಿಯನ್+ಈ+ ಮೋಹರದೊಳ್+ಅಲ್ಲದೆ
ಫಲುಗುಣನ +ಮಗನಿವನು+ ಬಲುಗೈ
ಉಳುಹ ಬಾರದು +ಕಾಯಿದರೆ +ಕಲಿಯುಗಕೆ +ಗತಿಯಿಲ್ಲ
ಫಲುಗುಣನ +ನಾವಿತ್ತಲ್+ಒಯ್ದರೆ
ಬಳಿಕ +ನಿರ್ಣಯವೆಂದು +ಮನದಲಿ
ತಿಳಿದು +ಪಾರ್ಥಂಗ್+ಎಂದನ್+ಅಸುರ+ಅರಾತಿ+ ನಸುನಗುತ
ಅಚ್ಚರಿ:
(೧) ಅಭಿಮನ್ಯುವೇಕೆ ಸಾಯಬೇಕು – ಫಲುಗುಣನ ಮಗನಿವನು ಬಲುಗೈಯುಳುಹ ಬಾರದು ಕಾಯಿದರೆ ಕಲಿಯುಗಕೆ ಗತಿಯಿಲ್ಲ
(೨) ಫಲುಗುಣ, ಪಾರ್ಥ – ಅರ್ಜುನನನ್ನು ಕರೆದ ಪರಿ
(೩) ಕೃಷ್ಣನಿಗೆ ಅಸುರಾರಾತಿ ಎಂಬ ಪದ ಪ್ರಯೋಗ