ನಡೆವುತೆಡಹಿದ ಪಟ್ಟದಾನೆಯ
ಮಿಡಿಯ ಹೊಯ್ವರೆ ಜೀಯ ರಣವವ
ಗಡವು ನಮಗಿದು ರಾತ್ರಿ ದೈತ್ಯರಿಗಿದುವೆ ನಡುಹಗಲು
ಮೃಡನನೊಂದವಸರಕೆ ಬಗೆಯದ
ಕಡುಹುಕಾರರು ನಿನ್ನವರು ಕೆಡೆ
ನುಡಿದು ನೋಯಿಸಲೇತಕೆಂದನು ಕರ್ಣನರಸಂಗೆ (ದ್ರೋಣ ಪರ್ವ, ೧೬ ಸಂಧಿ, ೨೬ ಪದ್ಯ)
ತಾತ್ಪರ್ಯ:
ನಡೆಯುತ್ತಾ ಎಡವಿದ ಪಟ್ಟದಾನೆಯನ್ನು ನಡುಗುವಂತೆ ಹೊಯ್ಯುವರೇ? ಜೀಯಾ ಈಗ ರಾತ್ರಿ, ನಮಗೆ ಈಗ ಯುದ್ಧವು ಕಷ್ಟಸಾಧ್ಯ, ರಾಕ್ಷಸರಿಗೆ ರಾತ್ರಿಯೇ ನಡುಹಗಲು, ಆದುದರಿಂದ ನಮಗೆ ಈ ದುರ್ಗತಿ ಬಂದಿದೆ. ಸಮಯಬಂದರೆ ಶಿವನನ್ನು ಲೆಕ್ಕಿಸದ ವೀರರಿವರು. ಇಂತಹವನರ್ನ್ನು ತಿರಸ್ಕಾರದ ಮಾತುಗಳಿಂದ ಏಕೆ ನೋಯಿಸಬೇಕು?
ಅರ್ಥ:
ನಡೆ: ಚಲಿಸು; ಎಡಹು: ಮುಗ್ಗುರಿಸು, ಬೀಳು; ಪಟ್ಟದಾನೆ: ಶ್ರೇಷ್ಠವಾದ, ಪರಾಕ್ರಮಿ; ಮಿಡಿ: ತವಕಿಸು, ಹಿಂಭಾಗ; ಹೊಯ್ವ: ಹೊಡೆಯುವ; ಜೀಯ: ಒಡೆಯ; ರಣ: ಯುದ್ಧರಂಗ; ಗಡ: ಅಲ್ಲವೆ; ತ್ವರಿತವಾಗಿ; ರಾತ್ರಿ: ಇರುಳು; ದೈತ್ಯ: ದಾನವ; ನಡು: ಮಧ್ಯ; ಹಗಲು: ದಿನ; ಮೃಡ: ಈಶ್ವರ; ಅವಸರ: ಬೇಗ, ಲಗುಬಗೆ; ಬಗೆ: ಯೋಚಿಸು, ಎಣಿಸು; ಕಡುಹು: ಸಾಹಸ, ಹುರುಪು; ಕೆಡೆ: ಬೀಳು; ನುಡಿ: ಮಾತು; ನೋವು: ಪೆಟ್ಟು; ಅರಸ: ರಾಜ;
ಪದವಿಂಗಡಣೆ:
ನಡೆವುತ್+ಎಡಹಿದ +ಪಟ್ಟದಾನೆಯ
ಮಿಡಿಯ +ಹೊಯ್ವರೆ +ಜೀಯ +ರಣವವ
ಗಡವು +ನಮಗಿದು +ರಾತ್ರಿ +ದೈತ್ಯರಿಗ್+ಇದುವೆ +ನಡುಹಗಲು
ಮೃಡನನೊಂದ್+ಅವಸರಕೆ +ಬಗೆಯದ
ಕಡುಹುಕಾರರು +ನಿನ್ನವರು +ಕೆಡೆ
ನುಡಿದು +ನೋಯಿಸಲ್+ಏತಕೆಂದನು+ ಕರ್ಣನ್+ಅರಸಂಗೆ
ಅಚ್ಚರಿ:
(೧) ರೂಪಕದ ಪ್ರಯೋಗ – ನಡೆವುತೆಡಹಿದ ಪಟ್ಟದಾನೆಯಮಿಡಿಯ ಹೊಯ್ವರೆ
(೨) ರಾಕ್ಷಸರ ಬಗ್ಗೆ ಕರ್ಣನ ನುಡಿ – ಮೃಡನನೊಂದವಸರಕೆ ಬಗೆಯದ ಕಡುಹುಕಾರರು