ಪದ್ಯ ೫೮: ಪಾಂಡವ ಸೇನೆಯು ಯಾವ ಮಾತುಗಳನ್ನಾಡುತ್ತಿತ್ತು?

ಗೆಲಿದನೋ ಮಾದ್ರೇಶನವನಿಪ
ತಿಲಕನನು ಫಡ ಧರ್ಮಸುತನೀ
ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
ಅಳುಕಿದನು ನೃಪನೀ ಬಲಾಧಿಪ
ನುಲುಕನಂಜಿದನೆಂಬ ಲಗ್ಗೆಯ
ಲಳಿ ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ (ಶಲ್ಯ ಪರ್ವ, ೨ ಸಂಧಿ, ೫೮ ಪದ್ಯ)

ತಾತ್ಪರ್ಯ:
ಶಲ್ಯನು ಧರ್ಮಜನನ್ನು ಗೆದ್ದ, ಛೇ, ಇಲ್ಲ ಅವನು ನಮ್ಮ ದಳಪತಿಯನ್ನು ಸೋಲಿಸಿದನು, ಧರ್ಮಜನು ಹೆದರಿದ, ಅಜೇಯನಾದ ಶಲ್ಯನು ಹೆದರಿದನು, ಎಂಬ ತರತರದ ಮಾತುಗಳನ್ನು ಪಾಂಡವ ಸೇನೆಯು ಆಡುತ್ತಿತ್ತು.

ಅರ್ಥ:
ಗೆಲಿ: ಜಯಿಸು; ಅವನಿಪ: ರಾಜ; ತಿಲಕ: ಶ್ರೇಷ್ಠ; ಫಡ: ತಿರಸ್ಕಾರದ ಮಾತು; ಸುತ: ಮಗ; ದಳಪತಿ: ಸೇನಾಧಿಪತಿ; ಅದ್ದು: ತೋಯಿಸು, ಮುಳುಗು; ಪರಿಭವ: ಅನಾದರ, ತಿರಸ್ಕಾರ; ಸಮುದ್ರ: ಸಾಗರ; ಅಳುಕು: ಹೆದರು; ನೃಪ: ರಾಜ; ಬಲಾಧಿಪ: ಪರಾಕ್ರಮಿ; ಉಲುಕು: ಅಲ್ಲಾಡು, ನಡುಗು; ಅಂಜು: ಹೆದರು; ಲಗ್ಗೆ: ಆಕ್ರಮಣ; ಅಳಿ: ನಾಶ; ಮಸಗು: ಹರಡು; ಕೆರಳು; ಮೈದೋರು: ಎದುರು ನಿಲ್ಲು; ಆಚೆ: ಹೊರಗಡೆ; ಸಂದಣಿ: ಗುಂಪು;

ಪದವಿಂಗಡಣೆ:
ಗೆಲಿದನೋ +ಮಾದ್ರೇಶನ್+ಅವನಿಪ
ತಿಲಕನನು +ಫಡ +ಧರ್ಮಸುತನ್+ಈ
ದಳಪತಿಯನ್+ಅದ್ದಿದನು +ಪರಿಭವಮಯ +ಸಮುದ್ರದಲಿ
ಅಳುಕಿದನು +ನೃಪನ್+ಈ+ ಬಲಾಧಿಪನ್
ಅಲುಕನ್+ಅಂಜಿದನೆಂಬ +ಲಗ್ಗೆಯಲ್
ಅಳಿ +ಮಸಗಿ +ಮೈದೋರಿತ್+ಆಚೆಯ +ಸೇನೆ +ಸಂದಣಿಸಿ

ಅಚ್ಚರಿ:
(೧) ರೂಪಕದ ಪ್ರಯೋಗ – ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ
(೨) ಜೋಡಿ ಪದಗಳ ಬಳಕೆ – ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ