ತರುಣ ರವಿಗಳ ತತ್ತಿಗಳ ಸಂ
ವರಿಸದಿರರೆನೆ ಮಾಣಿಕಂಗಳ
ತರತರದ ಕೀಲಣೆಯ ಹೊಂಗೆಲಸದ ಸುರೇಖೆಗಳ
ಕೊರಳ ಹೀರಾವಳಿಯ ರಶ್ಮಿಯ
ಹೊರಳಿಗಳ ಹೊದಕೆಗಳ ಕವಚದ
ಲರಿದಿಶಾಪಟ ಭೀಷ್ಮನೆಸೆದನು ರಥದ ಮಧ್ಯದಲಿ (ಭೀಷ್ಮ ಪರ್ವ, ೮ ಸಂಧಿ, ೧೦ ಪದ್ಯ)
ತಾತ್ಪರ್ಯ:
ವೈರಿಗಳನ್ನು ಎಲ್ಲಾದಿಕ್ಕುಗಳಿಗೆ ಚದುರಿಸುವ ಚತುರನಾದ ಭೀಷ್ಮನು ಅಲಂಕೃತನಾಗಿ ರಥದ ಮಧ್ಯದಲ್ಲಿ ಕುಳಿತಿದ್ದನು. ಸೂರ್ಯನ ತತ್ತಿಗಳೆಂಬಂತೆ ಅವನ ಕವಚಕ್ಕೆ ಮಾಡಿದ್ದ ಹೊಂಗೆಲಸದ ನಡುವೆ ಮಾಣಿಕ್ಯಗಳು ಹೊಳೆಯುತ್ತಿದ್ದವು. ಅವನ ಕೊರಳಿನಲ್ಲಿ ಮುತ್ತಿನಹಾರ ತೂಗಾಡುತ್ತಿತ್ತು.
ಅರ್ಥ:
ತರುಣ: ಚಿಕ್ಕವ; ರವಿ: ಸೂರ್ಯ; ತತಿ: ಸಕಾಲ, ಗುಂಪು; ಸಂವರಿಸು: ಗುಂಪುಗೂಡು; ಮಾಣಿಕ: ಮಾಣಿಕ್ಯ; ತರತರದ: ಬೇರೆ, ಹಲವಾರು; ಕೊರಳು: ಗಂಟಲು; ಹೀರ: ನವರತ್ನಗಳಲ್ಲಿ ಒಂದು, ವಜ್ರ; ಆವಳಿ: ಸಾಲು, ಗುಂಪು; ರಶ್ಮಿ: ಕಿರಣ, ಕಾಂತಿ; ಹೊರಳಿ: ಗುಂಪು, ಸಮೂಹ; ಹೊದಕೆ: ಮುಸುಕು; ಕವಚ: ಹೊದಿಕೆ, ಉಕ್ಕಿನ ಅಂಗಿ; ಅರಿ: ವೈರಿ; ದಿಶ: ದಿಕ್ಕು; ದಿಶಾಪಟ: ಶತ್ರುಗಳನ್ನು ದಿಕ್ಕುದಿಕ್ಕಿಗೆ ಓಡಿಸುವವ; ಎಸೆ: ಶೋಭಿಸು, ಬಾಣ ಬಿಡು; ರಥ: ಬಂಡಿ; ಮಧ್ಯ: ನಡುವೆ;
ಪದವಿಂಗಡಣೆ:
ತರುಣ +ರವಿಗಳ +ತತ್ತಿಗಳ +ಸಂ
ವರಿಸದಿರರ್+ಎನೆ +ಮಾಣಿಕಂಗಳ
ತರತರದ +ಕೀಲಣೆಯ +ಹೊಂಗೆಲಸದ +ಸುರೇಖೆಗಳ
ಕೊರಳ +ಹೀರಾವಳಿಯ +ರಶ್ಮಿಯ
ಹೊರಳಿಗಳ+ ಹೊದಕೆಗಳ+ ಕವಚದಲ್
ಅರಿದಿಶಾಪಟ+ ಭೀಷ್ಮನ್+ಎಸೆದನು +ರಥದ +ಮಧ್ಯದಲಿ
ಅಚ್ಚರಿ:
(೧) ಉಪಮಾನದ ಪ್ರಯೋಗ – ತರುಣ ರವಿಗಳ ತತ್ತಿಗಳ ಸಂವರಿಸದಿರರೆನೆ ಮಾಣಿಕಂಗಳ
ತರತರದ ಕೀಲಣೆಯ ಹೊಂಗೆಲಸದ ಸುರೇಖೆಗಳ