ಪದ್ಯ ೫: ಸಂಜಯನು ಯಾರನ್ನು ನೋಡಲು ಹೋದನು?

ಸೆಳೆದುಕೊಂಡನು ಮೃತ್ಯುವಿನ ಹೆಡ
ತಲೆಯನೊದೆದು ಕೃಪಾಳು ತನ್ನನು
ತಲೆಬಳಿಚಿ ಕಳುಹಿದರೆ ಬಂದೆನು ರಾಯನರಕೆಯಲಿ
ಬಳಲಿ ಬೀಳುತ್ತೇಳುತೊಬ್ಬನೆ
ತಲೆಮುಸುಕಿನಲಿ ನಡೆಯೆ ಕಂಡೆನು
ನೆಲನೊಡೆಯನಹುದಲ್ಲೆನುತ ಸುಳಿದೆನು ಸಮೀಪದಲಿ (ಗದಾ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಸಾತ್ಯಕಿಯು ನನ್ನ ಹೆಡತಲೆಗೆ ಹೂಡಿದ್ದ ಕತ್ತಿಯಿಂದ ಅವರು ನನ್ನನ್ನುಳಿಸಿ ಕಳಿಸಿದರು. ಕೌರವನನ್ನು ಹುಡುಕುತ್ತಾ ಬರುತ್ತಿರಲು ತಲೆಗೆ ಮುಸುಕು ಹಾಕಿಕೊಂಡು ಬೀಳುತ್ತಾ ಏಳುತ್ತಾ ಹೋಗುವವನನ್ನು ಕಂಡೆನು. ಇವನು ಅರಸನೋ ಅಲ್ಲವೋ ನೋಡಿ ಬಿಡೋಣವೆಂದು ಹತ್ತಿರಕ್ಕೆ ಹೋದೆನು.

ಅರ್ಥ:
ಸೆಳೆ: ಎಳೆತ, ಸೆಳೆತ; ಮೃತ್ಯು: ಸಾವು; ಹೆಡತಲೆ: ಹಿಂದಲೆ; ಒದೆ: ತಳ್ಳು; ಕೃಪೆ: ಕರುಣೆ; ತಲೆಬಳಿಚು: ತಲೆ ಕತ್ತರಿಸು; ಕಳಿಸು: ತೆರಳು; ಬಂದು: ಆಗಮಿಸು; ಅರಕೆ: ಕೊರತೆ, ನ್ಯೂನತೆ; ಬಳಲು: ಆಯಾಸ, ದಣಿವು; ಬೀಳು: ಎರಗು; ಏಳು: ಹತ್ತು; ತಲೆ: ಶಿರ; ಮುಸುಕು: ಹೊದಿಕೆ; ನಡೆ: ಚಲಿಸು; ಕಂಡು: ನೊಡು; ನೆಲ: ಭೂಮಿ; ಒಡೆಯ: ರಾಜ; ಸುಳಿ: ಬೀಸು, ತೀಡು; ಸಮೀಪ: ಹತ್ತಿರ;

ಪದವಿಂಗಡಣೆ:
ಸೆಳೆದುಕೊಂಡನು +ಮೃತ್ಯುವಿನ +ಹೆಡ
ತಲೆಯನ್+ಒದೆದು +ಕೃಪಾಳು +ತನ್ನನು
ತಲೆಬಳಿಚಿ +ಕಳುಹಿದರೆ +ಬಂದೆನು+ ರಾಯನ್+ಅರಕೆಯಲಿ
ಬಳಲಿ +ಬೀಳುತ್+ಏಳುತ್+ಒಬ್ಬನೆ
ತಲೆಮುಸುಕಿನಲಿ +ನಡೆಯೆ +ಕಂಡೆನು
ನೆಲನೊಡೆಯನ್+ಅಹುದಲ್ಲೆನುತ +ಸುಳಿದೆನು +ಸಮೀಪದಲಿ

ಅಚ್ಚರಿ:
(೧) ದುರ್ಯೋಧನನನ್ನು ನೆಲನೊಡೆಯ ಎಂದು ಕರೆದಿರುವುದು
(೨) ದುರ್ಯೋಧನನು ನಡೆಯುತ್ತಿದ್ದ ಪರಿ – ಬಳಲಿ ಬೀಳುತ್ತೇಳುತೊಬ್ಬನೆ ತಲೆಮುಸುಕಿನಲಿ ನಡೆಯೆ ಕಂಡೆನು

ಪದ್ಯ ೧: ಸಂಜಯನು ಯಾವ ಮೂರು ರಥಗಳನ್ನು ನೋಡಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬರುತ ಕುರುಭೂ
ಪಾಲನರಕೆಯ ಭೀಮನವರಿವರಲ್ಲಲೇ ಎನುತ
ಮೇಲೆ ಹತ್ತಿರ ಬರಬರಲು ಸಮ
ಪಾಳಿಯಲಿ ರಥ ಮೂರರಲಿ ಕೃಪ
ಕೋಲ ಗುರುವಿನ ಮಗನಲಾ ಎನುತಲ್ಲಿಗೈತಂದ (ಗದಾ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಕೃಪಚಾರ್ಯ ಮುಂತಾದವರುಗಳನ್ನು ನೋಡಿ ಇವರು ಭೀಮನ ಕಡೆಯವರಲ್ಲವಲ್ಲ ಎಂದು ಬೆದರುತ್ತಾ ಹತ್ತಿರಕ್ಕೆ ಬಂದು ಮೂರೂ ರಥಗಳು ಒಂದೇ ಗತಿಯಲ್ಲಿ ಬರುವುದನ್ನೂ ಅದರಲ್ಲಿ ಕೃಪ ಅಶ್ವತ್ಥಾಮರಿರುವುದನ್ನು ಕಂಡು ಹತ್ತಿರಕ್ಕೆ ಬಂದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಬರುತ: ಆಗಮಿಸು; ಭೂಪಾಲ: ರಾಜ; ಅರಕೆ: ಕೊರತೆ, ನ್ಯೂನತೆ; ಹತ್ತಿರ: ಸಮೀಪ; ಸಮಪಾಳಿ: ಒಂದೇ ಗತಿ; ರಥ: ಬಂಡಿ; ಕೋಲ: ಬಾಣ; ಗುರು: ಆಚಾರ್ಯ; ಮಗ: ಸುತ; ಐತಂದ: ಬಂದುಸೇರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಂಜಯ +ಬರುತ +ಕುರು+ಭೂ
ಪಾಲನ್+ಅರಕೆಯ +ಭೀಮನವರಿವರಲ್ಲಲೇ+ ಎನುತ
ಮೇಲೆ +ಹತ್ತಿರ +ಬರಬರಲು +ಸಮ
ಪಾಳಿಯಲಿ +ರಥ +ಮೂರರಲಿ +ಕೃಪ
ಕೋಲ +ಗುರುವಿನ +ಮಗನಲಾ +ಎನುತ್+ಅಲ್ಲಿಗ್+ಐತಂದ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ – ಸಮಾನಾರ್ಥಕ ಪದ