ಪದ್ಯ ೬೫: ಕೃಷ್ಣನು ಮಹಾಂಕುಶದ ಬಗ್ಗೆ ಏನು ಹೇಳಿದ?

ಆಡಬಾರದು ತೋರಿ ನುಡಿದರೆ
ಖೋಡಿ ನಿನಗಹುದೆಲೆ ಮರುಳೆ ನೀ
ನೋಡಲೆವೆ ಸೀವವು ಕಣಾ ನಿನ್ನಳವಿನಾಯುಧವೆ
ಹೂಡಲಾಪುದು ಜಗವನಂತಕ
ಗೂಡಲಾಪುದು ಮುನಿದರಿದ ಕೈ
ಮಾಡುವರೆ ನಿಲಬಾರದಜ ರುದ್ರಾಮರೇಂದ್ರರಿಗೆ (ದ್ರೋಣ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನಾ, ನಾನು ಆಡಬಾರದು, ನಿನಗೆ ಬಿಡಿಸಿ ಹೇಳಿದರೆ ಮನಸ್ಸು ಕೆಡುತ್ತದೆ. ಹುಚ್ಚಾ, ಅದನ್ನು ನೋಡಿದರೆ ಎವೆಗಳು ಸೀದು ಹೋಗುತ್ತದೆ. ಅದನ್ನು ಗೆಲ್ಲಲು ನಿನಗೆ ಸತ್ವವಿಲ್ಲ. ಅದು ಜಗತ್ತನ್ನು ನಿಲ್ಲಿಸಬಲ್ಲದು, ಯಮನ ಬಾಯಿಗೆ ಜಗತ್ತನ್ನು ನೂಕಬಲ್ಲದು, ಇದು ಮುನಿದರೆ ಬ್ರಹ್ಮ ರುದ್ರ ಇಂದ್ರರು ಇದಿರಾಗಿ ನಿಲ್ಲಲಾರರು ಎಂದನು.

ಅರ್ಥ:
ಆಡು: ನುಡಿ; ತೊರು: ಪ್ರದರ್ಶಿಸು; ನುಡಿ: ಮಾತಾಡು; ಖೋಡಿ: ದುರುಳತನ, ನೀಚತನ; ಮರುಳ: ತಿಳಿಗೇಡಿ, ದಡ್ಡ; ಸೀವರಿಸು: ಬೇಜಾರಪಡು, ಚೀರು; ಸೀವು: ಸೀದು, ಕರಕಲಾಗು; ಅಳವಿ: ಶಕ್ತಿ; ಹೂಡು: ಅಣಿಗೊಳಿಸು; ಜಗ: ಪ್ರಪಂಚ; ಅಂತಕ: ಯಮ; ಗೂಡು: ನೆಲೆ; ಮುನಿ: ಕೋಪಗೊಳ್ಳು; ಕೈಮಾಡು: ಹೋರಾಡು; ನಿಲು: ನಿಲ್ಲು; ಅಜ: ಬ್ರಹ್ಮ; ರುದ್ರ: ಶಿವ; ಅಮರೇಂದ್ರ: ಇಂದ್ರ; ಅಮರ: ದೇವತೆ;

ಪದವಿಂಗಡಣೆ:
ಆಡಬಾರದು +ತೋರಿ +ನುಡಿದರೆ
ಖೋಡಿ +ನಿನಗಹುದ್+ಎಲೆ +ಮರುಳೆ +ನೀ
ನೋಡಲ್+ಎವೆ +ಸೀವವು +ಕಣಾ +ನಿನ್ನಳವಿನ್+ಆಯುಧವೆ
ಹೂಡಲಾಪುದು +ಜಗವನ್+ಅಂತಕ
ಗೂಡಲಾಪುದು +ಮುನಿದರಿದ +ಕೈ
ಮಾಡುವರೆ +ನಿಲಬಾರದ್+ಅಜ+ ರುದ್ರ+ಅಮರೇಂದ್ರರಿಗೆ

ಅಚ್ಚರಿ:
(೧) ಮಹಾಂಕುಶದ ಶಕ್ತಿ – ಮುನಿದರಿದ ಕೈಮಾಡುವರೆ ನಿಲಬಾರದಜರುದ್ರಾಮರೇಂದ್ರರಿಗೆ
(೨) ಗೂಡಲಾಪುದು, ಹೂಡಲಾಪುದು – ಪ್ರಾಸ ಪದಗಳು

ಪದ್ಯ ೯: ಇಂದ್ರನು ಕರ್ಣನಿಗೆ ಏನನ್ನು ನೀಡಿದನು?

ಮೆಚ್ಚಿದೆನು ರವಿಸುತನೆ ನೀ ಮನ
ಮೆಚ್ಚಿದುದ ವರಿಸೆನಲು ತಾ ನೆನೆ
ದಚ್ಚರಿಯ ಬೇಡಿದನು ಶಕ್ತಿಯನೀವುದೆನಗೆನಲು
ಬಿಚ್ಚಿಗವಸಣಿಗೆಯಲಿ ತನ್ನಯ
ನಚ್ಚಿನಾಯುಧವನ್ನು ಕರ್ಣನ
ನಿಚ್ಚಟದ ಮನವೈದೆ ಹರುಷದಿ ಕೊಟ್ಟನಮರೇಂದ್ರ (ಅರಣ್ಯ ಪರ್ವ, ೨೩ ಸಂಧಿ, ೯ ಪದ್ಯ)

ತಾತ್ಪರ್ಯ:
ಎಲೈ ಕರ್ಣನೇ ನಿನ್ನ ಧೈರ್ಯ ಮತ್ತು ದಾನಕ್ಕೆ ನಾನು ಮೆಚ್ಚಿದ್ದೇನೆ, ನೀನು ಬಯಸಿದುದನ್ನು ಕೇಳು ಎಂದು ದೇವೇಂದ್ರನು ಹೇಳಲು, ಕರ್ಣನು ತನ್ನ ತಂದೆ ಸೂರ್ಯದೇವನು ಹೇಳಿದ ಮಾತುಗಳು ನೆನಪಾಗಿ, ಎಲೈ ದೇವ ನನಗೆ ಶಕ್ತಿಯನ್ನು ನೀಡು ಎಂದು ಕೇಳಲು, ಇಂದ್ರನು ತನ್ನ ನೆಚ್ಚಿನ ಶಕ್ತ್ಯಾಯುಧವನ್ನು ಅದರ ಒರೆಯಿಂದ ತೆಗೆದು ವೀರ ಕರ್ಣನಿಗೆ ಸಂತೋಷದಿಂದ ನೀಡಿದನು.

ಅರ್ಥ:
ಮೆಚ್ಚು: ಹೊಗಳು, ಪ್ರಶಂಶಿಸು; ರವಿಸುತ: ಸೂರ್ಯನ ಮಗ; ಮನ: ಮನಸ್ಸು; ವರಿಸು: ಅಂಗೀಕರಿಸು; ನೆನೆ: ಜ್ಞಾಪಿಸಿಕೋ; ಅಚ್ಚರಿ: ಆಶ್ಚರ್ಯ; ಬೇಡು: ಕೇಳು; ಶಕ್ತಿ: ಬಲ; ಈವುದು: ನೀಡು; ಬಿಚ್ಚು: ತೆರೆ; ನಚ್ಚು: ಹತ್ತಿರ, ಪ್ರಿಯ; ಆಯುಧ: ಶಸ್ತ್ರ; ನಿಚ್ಚಟ: ಕಪಟವಿಲ್ಲದುದು; ಇಚ್ಛೆ: ಆಸೆ; ಮನ: ಮನಸ್ಸು; ಹರುಷ: ಸಂತೋಷ; ಅಮರೇಂದ್ರ: ಇಂದ್ರ; ಅಮರ: ಸುರರು; ಗವಸಣಿಗೆ: ಒರೆ, ಶಸ್ತ್ರಕೋಶ;

ಪದವಿಂಗಡಣೆ:
ಮೆಚ್ಚಿದೆನು+ ರವಿಸುತನೆ+ ನೀ +ಮನ
ಮೆಚ್ಚಿದುದ +ವರಿಸೆನಲು +ತಾ +ನೆನೆದ್
ಅಚ್ಚರಿಯ +ಬೇಡಿದನು +ಶಕ್ತಿಯನ್+ಈವುದ್+ಎನಗ್+ಎನಲು
ಬಿಚ್ಚಿ+ಗವಸಣಿಗೆಯಲಿ+ ತನ್ನಯ
ನಚ್ಚಿನ್+ಆಯುಧವನ್ನು +ಕರ್ಣನ
ನಿಚ್ಚಟದ +ಮನವ್+ಐದೆ +ಹರುಷದಿ+ ಕೊಟ್ಟನ್+ಅಮರೇಂದ್ರ

ಅಚ್ಚರಿ:
(೧) ಇಂದ್ರನು ಶಸ್ತ್ರವನ್ನು ನೀಡಿದ ಪರಿ – ನಿಚ್ಚಟದ ಮನವೈದೆ ಹರುಷದಿ ಕೊಟ್ಟನಮರೇಂದ್ರ

ಪದ್ಯ ೫೭: ಗಂಧರ್ವರು ಏನೆಂದು ಹೇಳಿದರು?

ಮುಟ್ಟದಿರಿ ಪರಿವಾರ ಕೈದುವ
ಕೊಟ್ಟು ಹೋಗಲಿ ದೊರೆಗಳಾದರ
ಬಿಟ್ಟವರಿಗಮರೇಂದ್ರನಾಣೆಯೆನುತ್ತ ಸಾರಿದರು
ಕೆಟ್ಟುದೀ ಕುರುಪತಿಯ ದಳ ಜಗ
ಜಟ್ಟಿಗಳು ಕರ್ಣಾದಿಗಳು ಮುಸು
ಕಿಟ್ಟು ಜಾರಿತು ಕಂಡದೆಸೆಗವನೀಶ ಕೇಳೆಂದ (ಅರಣ್ಯ ಪರ್ವ, ೨೦ ಸಂಧಿ, ೫೭ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಶತ್ರುಗಳ ಪರಿವಾರದವರನ್ನು ಮುಟ್ಟದಿರಿ, ಅವರು ಆಯುಧವನ್ನು ನೀಡಿ ಹೋಗಲಿ, ರಾಜವಂಶದವರನ್ನು ಬಿಡಲು ಹೋಗಬೇಡಿ, ನಿಮ್ಮ ಮೇಲೆ ಇಂದ್ರನ ಆಣೆ ಎಂದು ಗಂಧರ್ವರು ಸಾರಿದರು. ಕುರುಪತಿಯ ಸೈನ್ಯವು ಹಾಳಾಯಿತು, ಮಹಾ ಪರಾಕ್ರಮಿಗಳಾದ ಕರ್ಣಾದಿಗಳು ತಲೆಗೆ ಮುಸುಕು ಹಾಕಿಕೊಂಡು ದಿಕ್ಕು ದಿಕ್ಕುಗಳಲ್ಲಿ ಓಡಿ ಹೋದರು.

ಅರ್ಥ:
ಮುಟ್ಟು: ತಾಗು; ಪರಿವಾರ: ವಂಶ; ಕೈದು: ಕತ್ತಿ; ಕೊಟ್ಟು: ನೀಡಿ; ಹೋಗು: ತೆರಳು; ದೊರೆ: ರಾಜ; ಬಿಟ್ಟು: ತೆರಳು; ಅಮರೇಂದ್ರ: ಇಂದ್ರ; ಆಣೆ: ಪ್ರಮಾಣ; ಸಾರು: ಹೇಳು; ಕೆಟ್ಟು: ಹಾಳು; ದಳ: ಸೈನ್ಯ; ಜಗಜಟ್ಟಿ: ಪರಾಕ್ರಮಿ; ಆದಿ: ಮುಂತಾದ; ಮುಸುಕು: ಹೊದಿಕೆ; ಯೋನಿ; ಜಾರು: ಬೀಳು; ದೆಸೆ: ದಿಕ್ಕು; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುಟ್ಟದಿರಿ +ಪರಿವಾರ +ಕೈದುವ
ಕೊಟ್ಟು +ಹೋಗಲಿ +ದೊರೆಗಳಾದರ
ಬಿಟ್ಟವರಿಗ್+ಅಮರೇಂದ್ರನ್+ಆಣೆ+ಎನುತ್ತ +ಸಾರಿದರು
ಕೆಟ್ಟುದೀ +ಕುರುಪತಿಯ+ ದಳ +ಜಗ
ಜಟ್ಟಿಗಳು +ಕರ್ಣಾದಿಗಳು +ಮುಸು
ಕಿಟ್ಟು +ಜಾರಿತು+ ಕಂಡ+ ದೆಸೆಗ್+ಅವನೀಶ +ಕೇಳೆಂದ

ಅಚ್ಚರಿ:
(೧) ಕೌರವರ ಸೋಲಿನ ವಿವರಣೆ – ಕೆಟ್ಟುದೀ ಕುರುಪತಿಯ ದಳ ಜಗಜಟ್ಟಿಗಳು ಕರ್ಣಾದಿಗಳು ಮುಸುಕಿಟ್ಟು ಜಾರಿತು ಕಂಡದೆಸೆಗ್

ಪದ್ಯ ೫: ಗಾಂಡೀವದ ಶಬ್ದಕ್ಕೆ ಯಾರು ಬಂದರು?

ಏನಿದದ್ಭುತ ರವವೆನುತ ವೈ
ಮಾನಿಕರು ನಡನಡುಗಿದರು ಗ
ರ್ವಾನುನಯಗತವಾಯ್ತಲೇ ಸುರಪುರದ ಗರುವರಿಗೆ
ಆ ನಿರುತಿ ಯಮ ವರುಣ ವಾಯು ಕೃ
ಶಾನು ಧನದ ಮಹೇಶರೈತರ
ಲಾನೆಯಲಿ ಹೊರವಂಟನಂಬರಗತಿಯಲಮರೇಂದ್ರ (ಅರಣ್ಯ ಪರ್ವ, ೧೪ ಸಂಧಿ, ೫ ಪದ್ಯ)

ತಾತ್ಪರ್ಯ:
ಗಾಂಡೀವದ ಹೆದೆಯ ಮೊಳಗಿನಿಂದ ದೇವತೆಗಳ ಹೆಮ್ಮೆಯು ಉಡುಗಿ, ಅವರು ನಡುಗಿದರು. ನಿರುಋತಿ, ವರುಣ, ವಾಯು, ಅಗ್ನಿ, ಕುಬೇರರು ಇದೇನೆಂದು ನೋಡಲು ಹೊರಟರು. ಆಗ ಇಂದ್ರನೂ ಐರಾವತದ ಮೇಲೆ ಬಂದನು.

ಅರ್ಥ:
ಅದ್ಭುತ: ಆಶ್ಚರ್ಯ; ರವ: ಶಬ್ದ; ವೈಮಾನಿಕ: ದೇವತೆ; ನಡುಗು: ನಡುಕ, ಕಂಪನ; ಗರುವ: ಹಿರಿಯ, ಶ್ರೇಷ್ಠ; ನಿರುತಿ: ನೈಋತ್ಯದಿಕ್ಕಿನ ಒಡೆಯ; ಕೃಶಾನು: ಅಗ್ನಿ, ಬೆಂಕಿ; ಧನ: ಕುಬೇರ; ಮಹೇಶ: ಈಶ್ವರ; ಐತರು: ಬರುವಿಕೆ; ಹೊರವಂಟ: ತೆರಳು; ಅಂಬರ: ಆಗಸ; ಗತಿ: ವೇಗ; ಅಮರೇಂದ್ರ: ಇಂದ್ರ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು;

ಪದವಿಂಗಡಣೆ:
ಏನಿದ್+ಅದ್ಭುತ +ರವವ್+ಎನುತ +ವೈ
ಮಾನಿಕರು+ ನಡನಡುಗಿದರು +ಗ
ರ್ವ+ಅನುನಯ+ಗತವಾಯ್ತಲೇ +ಸುರಪುರದ+ ಗರುವರಿಗೆ
ಆ +ನಿರುತಿ +ಯಮ +ವರುಣ +ವಾಯು +ಕೃ
ಶಾನು +ಧನದ +ಮಹೇಶರ್+ಐತರಲ್
ಆನೆಯಲಿ +ಹೊರವಂಟನ್+ಅಂಬರ+ಗತಿಯಲ್+ಅಮರೇಂದ್ರ

ಅಚ್ಚರಿ:
(೧) ದಿಕ್ಕುಗಳನ್ನು ಹೇಳುವ ಪರಿ – ನಿರುತಿ, ಯಮ, ವರುಣ, ವಾಯು, ಕೃಶಾನು, ಧನ

ಪದ್ಯ ೩೬: ರಾಕ್ಷಸರು ಹೇಗೆ ಆಕ್ರಮಣ ಮಾಡಿದರು?

ತೋರು ತೋರಮರೇಂದ್ರನಾವೆಡೆ
ತೋರಿಸೈರಾವತವದೆತ್ತಲು
ತೊರಿಸುಚ್ಚೈಶ್ರವವನೆಲ್ಲಿಹರಗ್ನಿ ಯಮಗಿಮರು
ತೋರಿರೈ ಕೈಗುಣವನಸುರರ
ಗಾರುಗೆದರಿದ ಗರ್ವಿತರ ಮೈ
ದೋರ ಹೇಳಾ ಕಾಣಬಹುದೆನುತುರುಬಿದರು ಭಟರು (ಅರಣ್ಯ ಪರ್ವ, ೧೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ತೋರಿಸು ತೋರಿಸು ಇಂದ್ರನೆಲ್ಲಿದ್ದಾನೆ ತೋರಿಸು, ಇಂದ್ರನ ಆನೆ ಐರಾವತ, ಕುದುರೆ ಉಚ್ಚೈಶ್ರವಸುವುಗಳು ಎಲ್ಲಿವೆ ಎಂದು ತೋರಿಸು, ಅಗ್ನಿ, ಯಮಗಿಮರೆಲ್ಲಾ ಎಲ್ಲಿದ್ದಾರೆ ಸ್ವಲ್ಪ ತೋರಿಸು, ವೀರರೆ ನಿಮ್ಮ ಕೈ ಚಳಕವನ್ನು ತೋರಿಸಿರಿ, ರಾಕ್ಷಸರನ್ನು ಕೆಣಕಿದ ಆ ಹೀನ ದೇವತೆಗಳನ್ನು ಎದುರಿಗೆ ಕರೆ. ಆಗ ಅವರು ನಮ್ಮ ಕೈಯನ್ನು ನೋಡಬಹುದು ಎಂದು ರಾಕ್ಷಸರು ಮೇಲೆ ಬಿದ್ದರು.

ಅರ್ಥ:
ತೋರು: ಪ್ರದರ್ಶಿಸು; ಅಮರೇಂದ್ರ: ಇಂದ್ರ; ಐರಾವತ: ಇಂದ್ರನ ಆನೆ; ಉಚ್ಚೈಶ್ರವ: ಇಂದ್ರನ ಕುದುರೆ; ಅಗ್ನಿ: ಬೆಂಕಿ; ಕೈಗುಣ: ಹಸ್ತ ಚಳಕ; ಅಸುರ: ರಾಕ್ಷಸ; ಕೆದರು: ಹರಡು, ಚದರಿಸು; ಗರ್ವ: ಸೊಕ್ಕು; ಮೈ: ತನು; ಹೇಳು: ತಿಳಿಸು; ಕಾಣು: ತೋರು; ಉರುಬು: ಅತಿಶಯವಾದ ವೇಗ; ಭಟ: ರಾಕ್ಷಸ;

ಪದವಿಂಗಡಣೆ:
ತೋರು+ ತೋರ್+ಅಮರೇಂದ್ರನ್+ಆವೆಡೆ
ತೋರಿಸ್+ಐರಾವತವದ್+ಎತ್ತಲು
ತೊರಿಸ್+ಉಚ್ಚೈಶ್ರವವನ್+ಎಲ್ಲಿಹರ್+ಅಗ್ನಿ+ ಯಮಗಿಮರು
ತೋರಿರೈ +ಕೈಗುಣವನ್+ಅಸುರರಗ್
ಆರು+ಕೆದರಿದ +ಗರ್ವಿತರ+ ಮೈ
ತೋರ +ಹೇಳಾ +ಕಾಣಬಹುದ್+ಎನುತ್+ಉರುಬಿದರು +ಭಟರು

ಅಚ್ಚರಿ:
(೧) ಆಡು ಭಾಷೆಯ ಪ್ರಯೋಗ – ಯಮಗಿಮರು

ಪದ್ಯ ೧೬: ದೂತನು ರಾಜನಿಗೆ ಏನೆಂದು ಹೇಳಿದನು?

ಜೋಡಿಸಿದನಮರೇಂದ್ರನಮರರ
ವೇಡೆಯಾಯ್ತು ಹಿರಣ್ಯನಗರಿಗೆ
ಗಾಢಬಲರದೆ ಬಂದು ವರುಣ ಯಮಾಗ್ನಿ ವಾಯುಗಳು
ರೂಢಿಗಚ್ಚರಿಯಾಯ್ತಲಾ ಪರಿ
ಗೂಢ ಮೃಗಗಣ ಬಂದುದೀ ನಿ
ರ್ಮೂಢರನು ಹಿಡಿತರಿಸುಯೆಂದನು ದೂತನೊಡೆಯಂಗೆ (ಅರಣ್ಯ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ದೇವೇಂದ್ರನು ಸೈನ್ಯವನ್ನು ಜೋಡಿಸಿ ಹಿರಣ್ಯಪುರದ ಮೇಲೆ ದಾಳಿಗೆ ಕಳಿಸಿದ್ದಾನೆ, ವರುಣ, ಯಮ, ಅಗ್ನಿ ವಾಯು ಮೊದಲಾದ ಮಹಾ ಬಲಶಾಲಿಗಳು ಬಂದಿದ್ದಾರೆ, ಇದು ಪ್ರಪಂಚದಲ್ಲೇ ಆಶ್ಚರ್ಯಕರವಾದ ವಿಷಯ. ಅಪರೂಪದ ಪಶುಗಳು ಬಂದಿವೆ, ಅವನ್ನು ಬೇಟೆಯಲ್ಲಿ ಹಿಡಿಸಿ ತರಿಸು ಎಂದು ದೂತನು ರಾಜನಿಗೆ ಹೇಳಿದನು.

ಅರ್ಥ:
ಜೋಡಿಸು: ಕೂಡಿಸು; ಅಮರೇಂದ್ರ: ಇಂದ್ರ; ಅಮರ: ದೇವತೆ; ಈಡಿ: ಹೊಡೆ; ನಗರ: ಪುರ; ಗಾಢ: ಹೆಚ್ಚಳ, ಅತಿಶಯ; ಬಲ: ಶಕ್ತಿ, ಸೈನ್ಯ; ಬಂದು: ಆಗಮಿಸು; ವರುಣ: ನೀರಿನ ಅಧಿದೇವತೆ; ಯಮ: ಮೃತ್ಯುದೇವತೆ; ರೂಢಿ: ವಾಡಿಕೆ, ಬಳಕೆ; ಅಚ್ಚರಿ: ಆಶ್ಚರ್ಯ; ಪರಿಗೂಢ: ವಿಶೇಷ ಗುಟ್ಟಾದ; ಮೃಗಗಣ: ಪ್ರಾಣಿಗಳ ಗುಂಪು; ಮೂಢ: ತಿಳಿಗೇಡಿ, ಮೂರ್ಖ; ಹಿಡಿ: ಬಂಧಿಸು; ತರಿಸು: ಬರೆಮಾಡು; ದೂತ: ಸೇವಕ; ಒಡೆಯ: ರಾಜ;

ಪದವಿಂಗಡಣೆ:
ಜೋಡಿಸಿದನ್+ಅಮರೇಂದ್ರನ್+ಅಮರರವ್
ಈಡೆಯಾಯ್ತು+ ಹಿರಣ್ಯ+ನಗರಿಗೆ
ಗಾಢ+ಬಲರದೆ+ ಬಂದು +ವರುಣ +ಯಮ +ಅಗ್ನಿ +ವಾಯುಗಳು
ರೂಢಿಗ್+ಅಚ್ಚರಿಯಾಯ್ತಲಾ +ಪರಿ
ಗೂಢ +ಮೃಗಗಣ+ ಬಂದುದೀ+ ನಿ
ರ್ಮೂಢರನು +ಹಿಡಿ+ತರಿಸು+ಎಂದನು +ದೂತನ್+ಒಡೆಯಂಗೆ

ಅಚ್ಚರಿ:
(೧) ಗಾಢ, ಪರಿಗೂಢ, ನಿರ್ಮೂಢ – ಪ್ರಾಸ ಪದಗಳು

ಪದ್ಯ ೯: ದೇವೇಂದ್ರನು ಅರ್ಜುನನಲ್ಲಿ ಏನು ಬೇಡಿದನು?

ಅವರುಪೇಕ್ಷೆಯ ಉಳಿವಿನಲಿ ನ
ಮ್ಮವರ ಬೇಹಿನ ಸುಳಿವಿನಲಿ ಮೇ
ಣವರನಳುಕಿಸುವಾಧಿದೈವಿಕ ಕರ್ಮಗತಿಗಳಲಿ
ದಿವಿಜರಿಮ್ದವರುಳಿದರಾ ದಾ
ನವರ ಮರ್ದಿಸಿ ದೇವಲೋಕವ
ನೆವಗೆ ನಿರುಪದ್ರವದಲಿಡೆ ಮಾಡೆಂದನಮರೇಂದ್ರ (ಅರಣ್ಯ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ದೇವತೆಗಳನ್ನು ದಾನವರು ಉಪೇಕ್ಷಿಸುವುದು ಮುಂದುವರೆದಿದೆ, ನಮ್ಮ ಬೇಹುಗಾರಿಕೆಯೂ ಅವರ ನಾಶಕ್ಕಾಗಿ ಮಾಡಿದ ದೈವಿಕ ಕರ್ಮಗಳೂ ಅವರನ್ನು ಏನೂ ಮಾಡಲಿಲ್ಲ. ಅವರು ನಾಶವಾಗಲಿಲ್ಲ. ಅವರನ್ನು ಮರ್ದಿಸಿ, ಸ್ವರ್ಗ ಲೋಕಕ್ಕೆ ಯಾವ ಉಪದ್ರವವೂ ಇಲ್ಲದಂತೆ ಮಾಡು ಎಂದು ಇಂದ್ರನು ನನಗೆ ಹೇಳಿದನು.

ಅರ್ಥ:
ಉಪೇಕ್ಷೆ: ಅಲಕ್ಷ್ಯ, ಕಡೆಗಣಿಸುವಿಕೆ; ಉಳಿವು: ಬದುಕುವಿಕೆ, ಜೀವನ; ಬೇಹು: ಗುಪ್ತಚಾರನ ಕೆಲಸ, ಗೂಢಚರ್ಯೆ; ಸುಳಿವು: ಗುರುತು, ಕುರುಹು; ಮೇಣ್: ಮತ್ತು, ಅಥವ; ಅಳುಕಿಸು: ಅಳಿಸು, ಇಲ್ಲವಾಗಿಸು; ಅಧಿದೈವ: ಮುಖ್ಯ ಅಥವ ಪ್ರಮುಖವಾದ ದೇವ; ಕರ್ಮ:ಕೆಲಸ, ಕಾರ್ಯ; ಗತಿ: ಗಮನ, ಸಂಚಾರ; ದಿವಿಜ: ದೇವತೆ; ದಾನವ: ರಾಕ್ಷಸ; ಮರ್ದಿಸು: ಸಾಯಿಸು; ದೇವಲೋಕ: ಸ್ವರ್ಗ; ಉಪದ್ರವ: ಕಾಟ; ಅಮರೇಂದ್ರ: ಇಂದ್ರ;

ಪದವಿಂಗಡಣೆ:
ಅವರ್+ಉಪೇಕ್ಷೆಯ +ಉಳಿವಿನಲಿ +ನ
ಮ್ಮವರ +ಬೇಹಿನ+ ಸುಳಿವಿನಲಿ+ ಮೇಣ್
ಅವರನ್+ಅಳುಕಿಸುವ+ಅಧಿದೈವಿಕ+ ಕರ್ಮ+ಗತಿಗಳಲಿ
ದಿವಿಜರಿಂದ್+ಅವರ್+ಉಳಿದರಾ+ ದಾ
ನವರ +ಮರ್ದಿಸಿ +ದೇವಲೋಕವನ್
ಎವಗೆ+ ನಿರುಪದ್ರವದಲಿಡೆ+ ಮಾಡೆಂದನ್+ಅಮರೇಂದ್ರ

ಅಚ್ಚರಿ:
(೧) ಉಳಿವಿನಲಿ, ಸುಳಿವಿನಲಿ – ಪ್ರಾಸ ಪದಗಳು

ಪದ್ಯ ೪೧: ಭೂಮಿಯನ್ನು ವರಾಹಾವತಾರದಲ್ಲಿ ಕೃಷ್ಣನು ಹೇಗೆ ರಕ್ಷಿಸಿದ?

ತೂಳಿದನು ದಂಡೆಯಲಿ ದೈತ್ಯನ
ಸೀಳಿದನು ದಿಕ್ಕರ ಫಣೀಂದ್ರರ
ಮೇಲೆ ಧರಣಿಯ ನಿಲಿಸಿದನು ಸಂತವಿಸಿದನು ಜಗವ
ಹೇಳಲಜ ರುದ್ರಾಮರೇಂದ್ರರ
ತಾಳಿಗೆಗಳೊಣಗಿದವು ಭಂಗಿ ಛ
ಡಾಳಿಸಿತಲಾ ಚೈದ್ಯ ಭೂಪತಿಗೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೪೧ ಪದ್ಯ)

ತಾತ್ಪರ್ಯ:
ಹಿರಣ್ಯಾಕ್ಷನನ್ನು ಬೆನ್ನಟ್ಟಿ ಅವನನ್ನು ಸಂಹರಿಸಿದನು. ಆದಿಶೇಷ ಮತ್ತು ಅಷ್ಟದಿಗ್ಗಜರ ಮೇಲೆ ಭೂಮಿಯನ್ನು ನಿಲ್ಲಿಸಿ ಜಗತ್ತನ್ನು ಸಂತೋಷಪಡಿಸಿದನು. ಅವನ ಮಹಿಮೆಯನ್ನು ಹೇಳಲಿ ಹೋಗಿ ಬ್ರಹ್ಮ, ರುದ್ರ, ದೇವೇಂದ್ರರ ಗಂಟಲು ಒಣಗಿತು. ಶಿಶುಪಾಲನಿಗೆ ಭಂಗಿಯ ಮತ್ತು ಹೆಚ್ಚಾಗಿದೆ ಎಂದು ಭೀಷ್ಮರು ನುಡಿದರು.

ಅರ್ಥ:
ತೂಳು:ಬೆನ್ನಟ್ಟು, ಹಿಂಬಾಲಿಸು; ದಂಡೆ: ಹತ್ತಿರ, ಸಮೀಪ; ದೈತ್ಯ: ರಾಕ್ಷಸ; ಸೀಳು: ಕತ್ತರಿಸು; ದಿಕ್ಕರ: ದಿಕ್ಕಿನ ತಲೆ; ಫಣೀಂದ್ರ: ಆದಿಶೇಷ; ಮೇಲೆ: ತುದಿ, ಅಗ್ರಭಾಗ; ಧರಣಿ: ಭೂಮಿ; ನಿಲಿಸು: ಸ್ಥಾಪಿಸು; ಸಂತವಿಸು: ಸಂತೋಷಪಡು; ಜಗ: ಜಗತ್ತು; ಹೇಳು: ತಿಳಿಸು; ಅಜ: ಬ್ರಹ್ಮ; ರುದ್ರ: ಶಿವ; ಅಮರೇಂದ್ರ: ದೇವತೆಗಳ ರಾಜ, ಇಂದ್ರ; ತಾಳಿಗೆ: ಗಂಟಲು; ಒಣಗು: ಬರಡಾಗು; ಭಂಗಿ: ಬಾಗು, ತಿರುವು, ಮುರಿ; ಛಡಾಳಿಸು: ವಿರೋಧಿಸು, ಪ್ರತಿಭಟಿಸು; ಚೈದ್ಯ: ಶಿಶುಪಾಲ; ಭೂಪತಿ: ರಾಜ;

ಪದವಿಂಗಡಣೆ:
ತೂಳಿದನು +ದಂಡೆಯಲಿ +ದೈತ್ಯನ
ಸೀಳಿದನು +ದಿಕ್ಕರ +ಫಣೀಂದ್ರರ
ಮೇಲೆ +ಧರಣಿಯ +ನಿಲಿಸಿದನು +ಸಂತವಿಸಿದನು +ಜಗವ
ಹೇಳಲ್+ಅಜ +ರುದ್ರ+ಅಮರೇಂದ್ರರ
ತಾಳಿಗೆಗಳ್+ಒಣಗಿದವು +ಭಂಗಿ +ಛ
ಡಾಳಿಸಿತಲಾ +ಚೈದ್ಯ +ಭೂಪತಿಗೆಂದನಾ +ಭೀಷ್ಮ

ಅಚ್ಚರಿ:
(೧) ತೂಳಿ, ಸೀಳಿ, ತಾಳಿ, ಛಡಾಳಿ – ಪ್ರಾಸ ಪದಗಳು
(೨) ಆಯಾಸ ಗೊಂಡರು ಎಂದು ಹೇಳಲು – ತಾಳಿಗೆಗಳೊಣಗಿದವು

ಪದ್ಯ ೨೦: ದೇವತೆಗಳಾದಿ ಶಿವನನ್ನು ಹೇಗೆ ಆರಾಧಿಸಿದರು?

ಪುಳಕಜಲವುಬ್ಬರಿಸೆ ಕುಸುಮಾಂ
ಜಳಿಯನಂಘ್ರಿದ್ವಯಕೆ ಹಾಯಿಕಿ
ನಳಿನಭವ ಮೆಯ್ಯಿಕ್ಕಿದನು ಭಯಭರಿತ ಭಕ್ತಿಯಲಿ
ಬಳಿಯಲಮರೇಂದ್ರಾದಿ ದಿವಿಜಾ
ವಳಿಗಳವನಿಗೆ ಮೆಯ್ಯ ಚಾಚಿದ
ರುಲಿವುತಿರ್ದುದು ಜಯಜಯ ಧ್ವಾನದಲಿ ಸುರಕಟಕ (ಕರ್ಣ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಶಿವನನ್ನು ನೋಡಿದ ಬ್ರಹ್ಮನು ರೋಮಾಂಚನ ಗೊಂಡು ಸ್ವೇದಗಳುಂಟಾದವು. ಬೊಗಸೆಯಲ್ಲಿ ಹೂಗಳನ್ನು ಶಿವನ ಪಾದಗಳಿಗೆ ಹಾಕಿ, ಭಯಭರಿತ ಭಕ್ತಿಯಿಂದ ಬ್ರಹ್ಮನು ನಮಸ್ಕರಿಸಿದನು. ಆವನೊಡನೆ ಸಮಸ್ತದೇವತೆಗಳೂ ನಮಸ್ಕರಿಸಿ ಜಯಘೋಷವನ್ನು ಹಾಡಿದರು.

ಅರ್ಥ:
ಪುಳಕ: ಮೈನವಿರೇಳುವಿಕೆ, ರೋಮಾಂಚನ; ಜಲ: ನೀರು; ಪುಳಕಜಲ: ರೋಮಾಂಚನದ ನೀರು; ಉಬ್ಬರಿಸು:ಅತಿಶಯ, ಹೆಚ್ಚಳ; ಕುಸುಮ: ಹೂವು; ಆಂಜಳಿ:ಕೈಬೊಗಸೆ, ಜೋಡಿಸಿದ ಕೈಗಳು; ಅಂಘ್ರಿ: ಪಾದ; ದ್ವಯ: ಎರಡು; ಹಾಯಿಕಿ: ಹಾಕಿ; ನಳಿನ:ಕಮಲ; ನಳಿನಭವ: ಕಮಲದಿಂದ ಹುಟ್ಟಿದ (ಬ್ರಹ್ಮ); ಮೈಯ್ಯಿಕ್ಕು: ನಮಸ್ಕರಿಸು; ಭಯ: ಹೆದರಿಕೆ; ಭರಿತ: ತುಂಬಿದ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಬಳಿ: ಹತ್ತಿರ; ಅಮರೇಂದ್ರ: ದೇವತೆಗಳ ರಾಜ (ಇಂದ್ರ); ಆದಿ: ಮುಂತಾದ; ದಿವಿಜ: ಸುರ, ದೇತವೆ; ಆವಳಿ: ಗುಂಪು; ಮೆಯ್ಯಚಾಚು: ದೀರ್ಘದಂಡ ನಮಸ್ಕಾರ; ಉಲಿವು:ಧ್ವನಿ; ಜಯ: ಗೆಲುವು, ಹೊಗಳು; ಧ್ವಾನ: ಧ್ವನಿ; ಸುರ: ದೇವತೆ; ಕಟಕ: ಗುಂಪು;

ಪದವಿಂಗಡಣೆ:
ಪುಳಕಜಲವ್+ಉಬ್ಬರಿಸೆ +ಕುಸುಮಾಂ
ಜಳಿಯನ್+ಅಂಘ್ರಿ+ದ್ವಯಕೆ +ಹಾಯಿಕಿ
ನಳಿನಭವ+ ಮೆಯ್ಯಿಕ್ಕಿದನು+ ಭಯಭರಿತ+ ಭಕ್ತಿಯಲಿ
ಬಳಿಯಲ್+ಅಮರೇಂದ್ರಾದಿ +ದಿವಿಜಾ
ವಳಿಗಳ್+ಅವನಿಗೆ+ ಮೆಯ್ಯ ಚಾಚಿದರ್
ಉಲಿವುತಿರ್ದುದು +ಜಯಜಯ +ಧ್ವಾನದಲಿ +ಸುರಕಟಕ

ಅಚ್ಚರಿ:
(೧) ಕುಸುಮಾಂಜಳಿ, ದಿವಿಜಾವಳಿ, ಬಳಿ – ಪ್ರಾಸ ಪದಗಳು
(೨) ಮೆಯ್ಯಿಕ್ಕು, ಮೆಯ್ಯ ಚಾಚು – ನಮಸ್ಕರಿಸು ಎಂದು ಹೇಳಲು ಬಳಸಿದ ಪದ
(೩) ಕಟಕ, ಆವಳಿ – ಗುಂಪು ಪದದ ಸಮನಾರ್ಥ

ಪದ್ಯ ೫೯:ಎಲೆಯನ್ನು ಯಾವ ರೀತಿ ತಿನ್ನುವುದರಿಂದ ಲಕ್ಷ್ಮಿ ನಮ್ಮ ಬಳಿ ಇರುತ್ತಾಳೆ?

ನಾಗವಲ್ಲಿಯ ಹಿಂದು ಮುಂದನು
ನೀಗಿ ಕಳೆಯದೆ ಚೂರ್ಣ ಪರ್ಣ
ತ್ಯಾಗವಿಲ್ಲದೆ ದಂತಧಾವನ ಪರ್ಣವನು ಸವಿದು
ಭೋಗಿಸುವೊಡಮರೇಂದ್ರನಾಗಲಿ
ನಾಗಭೂಷಣನಾದೊಡವನನು
ನೀಗಿ ಕಳೆವಳು ಭಾಗ್ಯವಧು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಸಾಮಾನ್ಯ ಜನರೂ ಸಹ ಎಲೆಯಡಿಕೆಯನ್ನು ಕ್ರಮಬದ್ಧವಾಗಿ ತಿನ್ನಬೇಕೆಂದು ವಿದುರ ನೀತಿ ಇಲ್ಲಿ ತಿಳಿಸುತ್ತದೆ. ವೀಳೆಯದಲೆಯ ತೊಟ್ಟು ತುದಿಗಳನ್ನು ತೆಗೆದು ಹಾಕದೆ, ಸುಣ್ಣವಿಟ್ಟ ಎಲೆಯನ್ನು ಬಿಡದೆ ಕೇವಲ ಎಲೆಯನ್ನು ಹಾಕಿಕೊಂಡು ಸವಿದರೆ, ಹಾಗೆ ಮಾಡುವವನು ಇಂದ್ರನಾಗಲಿ, ಶಿವನಾಗಲಿ ಭಾಗ್ಯಲಕ್ಷ್ಮಿಯು ಅವನನ್ನು ಬಿಟ್ಟುಹೋಗುತ್ತಾಳೆ.

ಅರ್ಥ:
ನಾಗವಲ್ಲಿ: ವೀಳ್ಯದೆಲೆ; ಹಿಂದು: ಹಿಂಬದಿ; ಮುಂದನು: ಮುಂಭಾಗ; ನೀಗಿ:ಬಿಡು, ತೊರೆ, ತ್ಯಜಿಸು; ಕಳೆ: ಕೀಳು; ಚೂರ್ಣ: ಸುಣ್ಣ; ಪರ್ಣ: ಎಲೆ; ತ್ಯಾಗ: ತ್ಯಜಿಸು; ದಂತ: ಹಲ್ಲು; ಸವಿ:ರುಚಿ, ಸ್ವಾದ; ಭೋಗಿಸು:ಸುಖವನ್ನು ಅನುಭವಿಸುವುದು; ಅಮರೇಂದ್ರ: ಇಂದ್ರ; ನಾಗಭೂಷಣ: ಶಿವ; ನಾಗ: ಉರಗ; ಭಾಗ್ಯ:ಸಿರಿ, ಐಶ್ವರ್ಯ; ಭೂಪಾಲ: ರಾಜ; ಚೂರ್ಣಪರ್ಣ: ಸುಣ್ಣದ ವೀಳೆದೆಲೆ;

ಪದವಿಂಗಡಣೆ:
ನಾಗವಲ್ಲಿಯ +ಹಿಂದು +ಮುಂದನು
ನೀಗಿ +ಕಳೆಯದೆ +ಚೂರ್ಣ +ಪರ್ಣ
ತ್ಯಾಗವಿಲ್ಲದೆ +ದಂತಧಾವನ+ ಪರ್ಣವನು +ಸವಿದು
ಭೋಗಿಸುವೊಡ್+ಅಮರೇಂದ್ರನಾಗಲಿ
ನಾಗಭೂಷಣನಾದೊಡ್+ಅವನನು
ನೀಗಿ +ಕಳೆವಳು+ ಭಾಗ್ಯವಧು +ಭೂಪಾಲ+ ಕೇಳೆಂದ

ಅ‍‍ಚ್ಚರಿ:
(೧) ಇಂದ್ರ, ಶಿವನನ್ನು – ಅಮರೇಂದ್ರ, ನಾಗಭೂಷಣ ಎಂದು ಕರೆದಿರುವುದು
(೨) ನೀಗಿ ಕಳೆ – ೨, ೬ ಸಾಲಿನ ಮೊದಲ ಪದಗಳು
(೩) ಹಿಂದು ಮುಂದು – ವಿರುದ್ಧ ಪದಗಳು