ಜಗದ ಹುಯ್ಯಲು ಜಡಿಯಲಭ್ರದ
ಲಗಿದು ಕೌರವಸೇನೆ ಹರುಷದ
ಸೊಗಸಿನಲಿ ಮೈಮರೆಯೆ ಕೃಷ್ಣಾದಿಗಳು ಕೈಮರೆಯೆ
ಹೊಗೆಯ ಹೊರಳಿಯ ಕಿಡಿಯ ಥಟ್ಟಿನ
ತಗೆದುರಿಯ ತೆಕ್ಕೆಯಲಿ ಧಗಧಗ
ಧಗಿಸಿ ಧಾಳಿಟ್ಟುದು ಮಹಾಶರವಹಿತಮೋಹರಕೆ (ದ್ರೋಣ ಪರ್ವ, ೧೯ ಸಂಧಿ, ೩೩ ಪದ್ಯ)
ತಾತ್ಪರ್ಯ:
ಮಹಾಶಬ್ದವಾಯಿತು. ಕೌರವಸೇನೆ ಹರ್ಷದಿಮ್ದ ಮೈಮರೆಯಿತು. ಕೃಷ್ಣಾದಿಗಳು ಕೈ ಮರೆತರು. ಶಸ್ತ್ರಗಳು ಕೆಳಬಿದ್ದವು. ಹೊಗೆಯ ತೆಕ್ಕೆಗಳು ಹಬ್ಬಿದವು. ಕಿಡಿಗಳು ಎತ್ತೆತ್ತಲೂ ಸಿಡಿಯುತ್ತಿದ್ದವು, ಉರಿಯು ಧಗಧಗಿಸುತ್ತಿತ್ತು. ನಾರಾಯಣಾಸ್ತ್ರವು ಪಾಂಡವ ಸೇನೆಯ ಮೇಲೆ ದಾಳಿಯಿಟ್ಟಿತು.
ಅರ್ಥ:
ಜಗ: ಪ್ರಪಂಚ; ಅಲುಗು: ಅಲ್ಲಾಡು; ಹುಯ್ಯಲು: ಅಳು; ಜಡಿ:ಬೆದರಿಕೆ, ಹೆದರಿಕೆ; ಅಭ್ರ: ಆಗಸ; ಹರುಷ: ಸಂತಸ; ಸೊಗಸು: ಚೆಂದ; ಮೈಮರೆ: ಎಚ್ಚರತಪ್ಪು; ಕೈ: ಹಸ್ತ; ಮರೆ: ನೆನಪಿನಿಂದ ದೂರವಾಗು; ಹೊಗೆ: ಧೂಮ; ಹೊರಳಿ: ಗುಂಪು, ಸಮೂಹ; ಕಿಡಿ: ಬೆಂಕಿ; ಥಟ್ಟು: ಗುಂಪು; ತಗೆ: ಹೊರತರು; ಉರಿ: ಬೆಂಕಿ; ತೆಕ್ಕೆ: ಗುಂಪು, ಸಮೂಹ; ಧಗ: ಬೆಂಕಿಯ ತೀವ್ರತೆಯನ್ನು ತೋರುವ ಶಬ್ದ; ಧಾಳಿ: ಆಕ್ರಮಣ; ಶರ: ಬಾಣ; ಅಹಿತ: ವೈರಿ; ಮೋಹರ: ಸೈನ್ಯ, ದಂಡು;
ಪದವಿಂಗಡಣೆ:
ಜಗದ +ಹುಯ್ಯಲು +ಜಡಿಯಲ್+ಅಭ್ರದ
ಲಗಿದು+ ಕೌರವಸೇನೆ +ಹರುಷದ
ಸೊಗಸಿನಲಿ +ಮೈಮರೆಯೆ +ಕೃಷ್ಣಾದಿಗಳು +ಕೈಮರೆಯೆ
ಹೊಗೆಯ +ಹೊರಳಿಯ +ಕಿಡಿಯ +ಥಟ್ಟಿನ
ತಗೆದುರಿಯ +ತೆಕ್ಕೆಯಲಿ +ಧಗಧಗ
ಧಗಿಸಿ +ಧಾಳಿಟ್ಟುದು +ಮಹಾಶರವ್+ಅಹಿತ+ಮೋಹರಕೆ
ಅಚ್ಚರಿ:
(೧) ಧಾಳಿಯಿಡುವ ಪರಿ – ಹೊಗೆಯ ಹೊರಳಿಯ ಕಿಡಿಯ ಥಟ್ಟಿನ ತಗೆದುರಿಯ ತೆಕ್ಕೆಯಲಿ ಧಗಧಗ
ಧಗಿಸಿ ಧಾಳಿಟ್ಟುದು ಮಹಾಶರವಹಿತಮೋಹರಕೆ