ಸುರನಗರಿ ನಡುಗಿತ್ತು ಸುರಪತಿ
ಹರನ ನೆನೆದನು ಯಮನ ಪಟ್ಟಣ
ಸರಕುದೆಗೆಯಿತು ಮೃತ್ಯು ಮರೆಹೊಕ್ಕಳು ಮಹೇಶ್ವರನ
ಬಿರುದರಂಜಿತು ದೇಶದೇಶದ
ಧರಣಿಪತಿಗಳಪಾಯವಾಯ್ತೆನೆ
ನರನ ಕಡು ದುಮ್ಮಾನ ನೆರೆ ಹೆದರಿಸಿತು ಮೂಜಗವ (ದ್ರೋಣ ಪರ್ವ, ೮ ಸಂಧಿ, ೧೧ ಪದ್ಯ)
ತಾತ್ಪರ್ಯ:
ಅರ್ಜುನನ ದುಃಖವನ್ನು ಕಂಡು ಅಮರಾವತಿಯು ನಡುಗಿತು. ದೇವೇಂದ್ರನು ಶಿವನನ್ನು ನೆನೆದನು. ಯಮನ ಪಟ್ಟಣದಲ್ಲಿದ್ದವರು ಗುಳೆಕಿತ್ತು ಹೊರಹೊರಟರು. ಮೃತ್ಯುವು ಮಹೇಶ್ವರನ ಮರೆಹೊಕ್ಕಳು. ವೀರರು ಬೆದರಿದರು. ರಾಜರು ಅಪಾಯವಾಯಿತೆಂದರು. ಅರ್ಜುನನ ದುಃಖವು ತ್ರಿಲೋಕವನ್ನು ಹೆದರಿಸಿತು.
ಅರ್ಥ:
ಸುರನಗರಿ: ಅಮರಾವತಿ; ನಡುಗು: ಅಲ್ಲಾಡು; ಸುರಪತಿ: ಇಂದ್ರ; ಹರ: ಶಿವ; ನೆನೆ: ಜ್ಞಾಪಿಸು; ಯಮ: ಜವ; ಪಟ್ಟಣ: ಊರು; ಸರಕು: ಸಾಮಾನು, ಸಾಮಗ್ರಿ; ತೆಗೆ: ಹೊರತರು; ಮೃತ್ಯು: ಮರಣ; ಮರೆ: ನೆನಪಿನಿಂದ ದೂರ ಮಾಡು; ಹೊಕ್ಕು: ಸೇರು; ಮಹೇಶ್ವರ: ಶಿವ; ಬಿರುದು: ಗೌರವ ಸೂಚಕ ಪದ; ಅಂಜು: ಹೆದರು; ದೇಶ: ರಾಷ್ಟ್ರ; ಧರಣಿಪತಿ: ರಾಜ; ಅಪಾಯ: ತೊಂದರೆ; ನರ: ಅರ್ಜುನ; ಕಡು: ಬಹಳ; ದುಮ್ಮಾನ: ದುಃಖ; ನೆರೆ: ಸೇರು, ಪಕ್ಕ; ಹೆದರಿಕೆ: ಅಂಜಿಕೆ; ಮೂಜಗ: ತ್ರಿಲೋಕ;
ಪದವಿಂಗಡಣೆ:
ಸುರನಗರಿ+ ನಡುಗಿತ್ತು +ಸುರಪತಿ
ಹರನ +ನೆನೆದನು +ಯಮನ +ಪಟ್ಟಣ
ಸರಕು+ತೆಗೆಯಿತು +ಮೃತ್ಯು +ಮರೆಹೊಕ್ಕಳು +ಮಹೇಶ್ವರನ
ಬಿರುದರ್+ಅಂಜಿತು +ದೇಶದೇಶದ
ಧರಣಿಪತಿಗಳ್+ಅಪಾಯವಾಯ್ತೆನೆ
ನರನ +ಕಡು +ದುಮ್ಮಾನ +ನೆರೆ +ಹೆದರಿಸಿತು +ಮೂಜಗವ
ಅಚ್ಚರಿ:
(೧) ಸುರನಗರಿ, ಸುರಪತಿ – ಸುರ ಪದದ ಬಳಕೆ;
(೨) ಮೃತ್ಯುವು ಕೂಡ ಅರ್ಜುನನಿಗೆ ಹೆದರಿದಳು ಎಂದು ಹೇಳುವ ಪರಿ – ಮೃತ್ಯು ಮರೆಹೊಕ್ಕಳು ಮಹೇಶ್ವರನ