ಪದ್ಯ ೩೫: ಯಾರು ಯಾರ ಹಿಂದೆ ನಿಂತರು?

ಮುಂದೆ ಹೊಗುವತಿಬಳರು ಹಾರಿತು
ಹಿಂದಣವರನು ಹಿಂದೆ ನಿಲುವರು
ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ
ಅಂದು ಪಾರ್ಥನು ಕೃಷ್ಣಬಲದಲಿ
ನಿಂದನೇವೇಳುವೆನು ನಿನ್ನವ
ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ (ದ್ರೋಣ ಪರ್ವ, ೧೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಮುಂದೆ ನುಗ್ಗಿದ ವೀರರು ಹಿಂದೆ ಬರುತ್ತಿದ್ದವರ ಮರೆಹೊಕ್ಕರು. ಅವರು ಹಿಂದಿದ್ದವರ ಹಿಂದೆ ಹೋಗಿ ಮುಂದಿರುವವರಿಂದ ನಾವು ಉಳಿಯಬಹುದೆಂದು ಹಾರೈಸಿದರು. ಹೀಗೆ ಒಬ್ಬರ ಹಿಂದೊಬ್ಬರು ಹೊಕ್ಕು ಇಡೀ ಸೇನೆಯೇ ಅರ್ಜುನನ ಹಿಂದೆ ನಿಂತಿತು. ಅರ್ಜುನನು ಕೃಷ್ಣನ ಬಲದಿಂದೆ ನಿಂತನು. ಕಪಟವನ್ನು ಬಿಟ್ಟು ಕಾದಿದರೆ, ನಿನ್ನವರು ಯಾವಾಗ ಬೇಕಿದ್ದರು ಗೆಲ್ಲದಿರುವರೇ? ಎಂದು ಸಂಜಯನು ವಿವರಿಸಿದನು.

ಅರ್ಥ:
ಮುಂದೆ: ಎದುರು; ಹೊಗು: ತೆರಳು; ಅತಿಬಳರು: ಪರಾಕ್ರಮಿ; ಹಾರು: ಲಂಘಿಸು; ಹಿಂದಣ: ಹಿಂಭಾಗ; ನಿಲು: ನಿಲ್ಲು; ಮುಂದಣ: ಮುಂದೆ; ಆಸೆ: ಇಚ್ಛೆ; ನಿಂದು: ನಿಲ್ಲು; ಪರಿ: ತೀರಿ; ಬಲ: ಶಕ್ತಿ; ಗಾಹುಗತ: ಮೋಸ, ಭ್ರಾಂತಿ; ಉಳಿದು: ಮಿಕ್ಕ; ಕಾದು: ಹೋರಾಡು;

ಪದವಿಂಗಡಣೆ:
ಮುಂದೆ+ ಹೊಗುವ್+ಅತಿಬಳರು+ ಹಾರಿತು
ಹಿಂದಣವರನು+ ಹಿಂದೆ+ ನಿಲುವರು
ಮುಂದಣವರ್+ಆಸೆಯಲಿ +ನಿಂದುದು +ಪಾರ್ಥ+ಪರಿಯಂತ
ಅಂದು +ಪಾರ್ಥನು +ಕೃಷ್ಣ+ಬಲದಲಿ
ನಿಂದನೇವೇಳುವೆನು +ನಿನ್ನವ
ರೆಂದು +ಗೆಲ್ಲರು+ ಗಾಹುಗತಕವನ್+ಉಳಿದು +ಕಾದುವರೆ

ಅಚ್ಚರಿ:
(೧) ಮುಂದೆ, ಹಿಂದಣ – ವಿರುದ್ಧ ಪದಗಳು
(೨) ಪಾರ್ಥನು ಯಾರ ಹಿಂದೆ ನಿಂತನು – ಪಾರ್ಥನು ಕೃಷ್ಣಬಲದಲಿ ನಿಂದನ್

ಪದ್ಯ ೨೦: ರಾಜರು ಯಾರನ್ನು ಮತ್ತೆ ಯುದ್ದಕ್ಕೆ ಕರೆದರು?

ಶರಣು ಹೊಕ್ಕುದು ಬಂದು ಮಕುಟದ
ಗರುವರವನೀಪಾಲಕರು ಮೋ
ಹರಕೆ ತೋರ್ಪಟ್ಟವರು ಭಾರಿಯ ಬಿರುದಿನತಿಬಳರು
ದುರುಳ ದೈತ್ಯನ ಬಾಧೆ ಘನ ಪರಿ
ಹರಿಸಲರಿಯವು ಕರ್ಣ ನೀನೇ
ಮರಳಿ ಸೇನೆಯ ರಕ್ಷಿಸೆಂದುದು ನಿಖಿಳಪರಿವಾರ (ದ್ರೋಣ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಕುಟವನ್ನು ಹೊತ್ತ ಮಾನನಿಧಿಗಳಾದ ರಾಜರು, ಸೈನ್ಯದಲ್ಲಿ ಮಹಾವೀರರೆಂದು ಪ್ರಸಿದ್ಧರಾದವರು, ದೊಡ್ಡ ದೊಡ್ಡ ಬಿರುದುಗಳನ್ನುಳ್ಳ ಅತಿ ಬಲರು ಬಂದು, ಈ ದುಷ್ಟದೈತ್ಯನ ಬಾಧೆ ಬಹಳ ಭಯಂಕರವಾಗಿದೆ. ನಮ್ಮಿಂದ ಇದನ್ನು ತಪ್ಪಿಸಲು ಸಾಧ್ಯವಿಲ್ಲ, ಕರ್ಣ ಈ ಸೈನ್ಯವನ್ನು ರಕ್ಷಿತು, ಮತ್ತೆ ಯುದ್ಧಮಾಡು ಎಂದು ಬೇಡಿಕೊಂಡರು.

ಅರ್ಥ:
ಶರಣು: ಆಶ್ರಯ, ವಂದನೆ; ಹೊಕ್ಕು: ಸೇರು; ಬಂದು: ಆಗಮಿಸು; ಮಕುಟ: ಕಿರೀಟ; ಗರುವ: ಶ್ರೇಷ್ಠ; ಅವನೀಪಾಲ: ರಾಜ; ಮೋಹರ: ಯುದ್ಧ; ತೋರು: ಗೋಚರಿಸು; ಭಾರಿ: ದೊಡ್ಡ; ಬಿರುದು: ಗೌರವ ಸೂಚಕ ಪದ; ಅತಿಬಳ: ಪರಾಕ್ರಮಿ; ದುರುಳ: ದುಷ್ಟ; ದೈತ್ಯ: ರಾಕ್ಷಸ; ಬಾಧೆ: ನೋವು, ವೇದನೆ; ಘನ: ದೊಡ್ಡ; ಪರಿಹರಿಸು: ನಿವಾರಿಸು; ಅರಿ: ತಿಳಿ; ಮರಳು: ಹಿಂದಿರುಗು; ಸೇನೆ: ಸೈನ್ಯ; ರಕ್ಷಿಸು: ಕಾಪಾಡು; ನಿಖಿಳ: ಎಲ್ಲಾ; ಪರಿವಾರ: ಬಂಧುಜನ, ಪರಿಜನ;

ಪದವಿಂಗಡಣೆ:
ಶರಣು+ ಹೊಕ್ಕುದು +ಬಂದು +ಮಕುಟದ
ಗರುವರ್+ಅವನೀಪಾಲಕರು +ಮೋ
ಹರಕೆ +ತೋರ್ಪಟ್ಟವರು +ಭಾರಿಯ +ಬಿರುದಿನ್+ಅತಿಬಳರು
ದುರುಳ +ದೈತ್ಯನ +ಬಾಧೆ +ಘನ +ಪರಿ
ಹರಿಸಲ್+ಅರಿಯವು +ಕರ್ಣ +ನೀನೇ
ಮರಳಿ +ಸೇನೆಯ +ರಕ್ಷಿಸೆಂದುದು +ನಿಖಿಳ+ಪರಿವಾರ

ಅಚ್ಚರಿ:
(೧) ಪರಾಕ್ರಮಿಗಳೆಂದು ಹೇಳಲು – ಮಕುಟದ ಗರುವರವನೀಪಾಲಕರು

ಪದ್ಯ ೧೬: ಕರ್ಣನ ಸೈನಿಕರು ಭೀಮನ ಮೇಲೆ ಹೇಗೆ ಎರಗಿದರು?

ಮತ್ತೆ ಕವಿದುದು ಮೇಲೆ ಪಡಿಬಲ
ವೊತ್ತಿ ಹೊಕ್ಕುದು ಹೆಣದ ಬೆಟ್ಟವ
ಹತ್ತಿ ಹುಡಿಹುಡಿ ಮಾಡಿ ಹಿಡಿದರು ರಥದ ಕುದುರೆಗಳ
ಕುತ್ತಿದರು ಸಾರಥಿಯನಾತನ
ತೆತ್ತಿಸಿದರಿಟ್ಟಿಯಲಿ ಭೀಮನ
ಮುತ್ತಿ ಕೈಮಾಡಿದರು ರವಿಸುತ ಸಾಕಿದತಿಬಳರು (ಕರ್ಣ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕರ್ಣನು ಅಕ್ಕರೆಯಿಂದ ಪೋಷಿಸಿದ ಸೈನಿಕರು ಹೆಣಗಳ ಬೆಟ್ಟವನ್ನು ಹತ್ತಿ ತುಳಿದು ಮುಂದಕ್ಕೆ ನುಗ್ಗಿ ಭೀಮನ ರಥದ ಕುದುರೆಗಳನ್ನು ಹಿಡಿದು ಹೊಡೆದರು. ಅವನ ಸಾರಥಿಯನ್ನು ಈಟಿಯಿಂದ ತಿವಿದರು. ಭೀಮನ ಮೇಲೂ ಕೈಮಾಡಿದರು.

ಅರ್ಥ:
ಮತ್ತೆ: ಪುನಃ; ಕವಿ: ಮುಚ್ಚು; ಪಡಿಬಲ: ಶತ್ರುಸೈನ್ಯ; ಒತ್ತು: ನೂಕು; ಹೊಕ್ಕು: ಸೇರು; ಹೆಣ: ಶವ; ಬೆಟ್ಟ: ಗುಡ್ಡ; ಹತ್ತು: ಏರು; ಹುಡಿ: ತುಳಿ; ಹಿಡಿ: ಬಂಧಿಸು; ರಥ: ಬಂಡಿ; ಕುದುರೆ: ಅಶ್ವ; ಕುತ್ತು: ಚುಚ್ಚು, ತಿವಿ; ಸಾರಥಿ:ಸೂತ; ತೆತ್ತಿಸು: ಜೋಡಿಸು; ಈಟಿ: ಭರ್ಜಿ; ಮುತ್ತು: ಆವರಿಸು; ಕೈಮಾಡು: ಹೊಡೆದಾಡು ರವಿಸುತ: ಕರ್ಣ; ಸಾಕಿದ: ಪೋಷಿಸಿದ; ಬಳರು: ಸೈನಿಕರು;

ಪದವಿಂಗಡಣೆ:
ಮತ್ತೆ +ಕವಿದುದು+ ಮೇಲೆ +ಪಡಿಬಲವ್
ಒತ್ತಿ +ಹೊಕ್ಕುದು +ಹೆಣದ +ಬೆಟ್ಟವ
ಹತ್ತಿ +ಹುಡಿಹುಡಿ+ ಮಾಡಿ +ಹಿಡಿದರು+ ರಥದ+ ಕುದುರೆಗಳ
ಕುತ್ತಿದರು+ ಸಾರಥಿಯನ್+ಆತನ
ತೆತ್ತಿಸಿದರ್+ಇಟ್ಟಿಯಲಿ +ಭೀಮನ
ಮುತ್ತಿ +ಕೈಮಾಡಿದರು +ರವಿಸುತ+ ಸಾಕಿದ್+ಅತಿಬಳರು

ಅಚ್ಚರಿ:
(೧) ಒತ್ತಿ, ಹತ್ತಿ, ಕುತ್ತಿ, ತೆತ್ತಿ, ಮುತ್ತಿ – ಪ್ರಾಸ ಪದಗಳು