ಪದ್ಯ ೬೧: ಅಭಿಮನ್ಯುವಿನ ಬಾಣಗಳು ಶತ್ರುಸೈನ್ಯವನ್ನು ಹೇಗೆ ನಾಶಮಾಡಿದವು?

ಭಟ ಛಡಾಳಿಸಿದನು ಘೃತಾಹುತಿ
ಘಟಿಸಿದಗ್ನಿಯವೋಲು ರಣ ಚೌ
ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹನಾದದಲಿ
ನಿಟಿಲನೇತ್ರನ ಕೋಪಶಿಖಿ ಲಟ
ಕಟಿಸುವಂತಿರೆ ಹೆಚ್ಚಿದರಿಬಲ
ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ (ದ್ರೋಣ ಪರ್ವ, ೫ ಸಂಧಿ, ೬೧ ಪದ್ಯ)

ತಾತ್ಪರ್ಯ:
ತುಪ್ಪದ ಆಹುತಿಯಿಮ್ದ ಹೆಚ್ಚುವ ಹೋಮಾಗ್ನಿಯಂತೆ ಅಭಿಮನ್ಯುವಿನ ಪರಾಕ್ರಮ ವರ್ಧಿಸಿತು. ಶಿವನ ಹಣೆಯ ನೇತ್ರದ ಅಗ್ನಿ ಛಟಛಟಿಸುವಂತೆ, ಶತ್ರು ಸೈನ್ಯವೆಂಬ ಕಾಡನ್ನು ಅಭಿಮನ್ಯುವಿನ ಬಾಣಗಳು ನಾಶಮಾಡಿದವು.

ಅರ್ಥ:
ಭಟ: ಸೈನಿಕ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಘೃತ: ತುಪ್ಪ, ಆಜ್ಯ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಘಟಿಸು: ಸಂಭವಿಸು; ಅಗ್ನಿ: ಬೆಂಕಿ; ರಣ: ಯುದ್ಧ; ಚೌಪಟ: ನಾಲ್ಕು ಪಟ್ಟು; ಚತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಹೊಕ್ಕು: ಸೇರು; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ; ನಿಟಿಲ: ಹಣೆ, ಫಾಲ; ನೇತ್ರ: ಕಣ್ಣು; ಕೋಪ: ಕ್ರೋಧ; ಶಿಖಿ: ಬೆಂಕಿ; ಲಟಕಟ: ಉದ್ರೇಕಗೊಳ್ಳು; ಹೆಚ್ಚು: ಅಧಿಕ; ಅಟವಿ: ಕಾಡು; ಸವರಿಸು: ನಾಶಮಾದು; ಕುಮಾರ: ಮಗ; ಶರ: ಬಾಣ; ಜಾಲ: ಸಮೂಹ;

ಪದವಿಂಗಡಣೆ:
ಭಟ +ಛಡಾಳಿಸಿದನು +ಘೃತ+ಆಹುತಿ
ಘಟಿಸಿದ್+ಅಗ್ನಿಯವೋಲು +ರಣ +ಚೌ
ಪಟ +ಚತುರ್ಬಲದೊಳಗೆ +ಹೊಕ್ಕನು +ಸಿಂಹನಾದದಲಿ
ನಿಟಿಲನೇತ್ರನ +ಕೋಪ+ಶಿಖಿ +ಲಟ
ಕಟಿಸುವಂತಿರೆ+ ಹೆಚ್ಚಿದ್+ಅರಿ+ಬಲದ್
ಅಟವಿಯನು +ಸವರಿದುದು +ಪಾರ್ಥಕುಮಾರ +ಶರಜಾಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಟ ಛಡಾಳಿಸಿದನು ಘೃತಾಹುತಿ ಘಟಿಸಿದಗ್ನಿಯವೋಲು; ನಿಟಿಲನೇತ್ರನ ಕೋಪಶಿಖಿ ಲಟಕಟಿಸುವಂತಿರೆ

ಪದ್ಯ ೨೪: ಹನುಮನು ಭೀಮನಿಗೆ ಯಾವ ಪ್ರಶ್ನೆ ಕೇಳಿದನು?

ನಾವು ವಾನರರಟವಿಯಲಿ ಫಲ
ಜೀವಿಗಳು ನಿಸ್ಸತ್ವರಿಲ್ಲಿಯ
ಠಾವ ಬಿಡಲನ್ಯತ್ರಗಮನತ್ರಾಣವಿಲ್ಲೆಮಗೆ
ನೀವು ದಿಟವಾರೈ ಮಹಾ ಸಂ
ಭಾವಿತರು ಸುರನರ ಭುಜಂಗರ
ಲಾವಕುಲ ನಿಮಗೆಂದು ಭೀಮನು ನುಡಿಸಿದನು ಹನುಮ (ಅರಣ್ಯ ಪರ್ವ, ೧೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೀಮನ ಪ್ರಶ್ನೆಗೆ ಹನುಮನು ಉತ್ತರಿಸುತ್ತಾ, ನಾವು ವಾನರ ಕುಲಕ್ಕೆ ಸೇರಿದವರು. ಕಾಡಿನಲ್ಲಿ ಹಣ್ಣು ತಿಂದು ಜೀವಿಸುವವರು. ನಮಗೆ ಶಕ್ತಿಯಿಲ್ಲ, ಈ ಜಾಗವನ್ನು ಬಿಟ್ಟು ಬೇರೆಡೆಗೆ ಹೋಗೋಣವೆಂದರೆ ನಮ್ಮಲ್ಲಿ ತ್ರಾಣವಿಲ್ಲ. ನಿಜ, ನೀವಾರು? ಮಹಾಗೌರವಶಾಲಿಗಳಂತಿರುವಿರಿ, ದೇವತೆಗಳೋ, ಮನುಷ್ಯರೋ, ಸರ್ಪಗಳೋ, ನೀವು ಯಾವ ಕುಲಕ್ಕೆ ಸೇರಿದವರು ಎಂದು ಹನುಮನು ಪ್ರಶ್ನಿಸಿದನು.

ಅರ್ಥ:
ವಾನರ: ಮಂಗ, ಕಪಿ; ಅಟವಿ: ಕಾದು; ಫಲ: ಹಣ್ಣು; ಜೀವಿ: ಪ್ರಾಣಿ; ಸತ್ವ: ಶಕ್ತಿ; ಠಾವು: ಸ್ಥಳ, ಜಾಗ; ಬಿಡಲು: ತೊರೆ; ಅನ್ಯ: ಬೇರೆ; ಗಮನ: ನಡೆ, ಚಲಿಸು; ತ್ರಾಣ: ಶಕ್ತಿ; ದಿಟ: ಸತ್ಯ; ಸಂಭಾವಿತ: ಯೋಗ್ಯ, ಸಭ್ಯ; ಸುರ: ದೇವತೆ; ನರ: ಮನುಷ್ಯ; ಭುಜಂಗ: ಸರ್ಪ; ಕುಲ: ವಂಶ; ನುಡಿಸು: ಮಾತನಾಡಿಸು;

ಪದವಿಂಗಡಣೆ:
ನಾವು +ವಾನರರ್+ಅಟವಿಯಲಿ +ಫಲ
ಜೀವಿಗಳು +ನಿಸ್ಸತ್ವರ್+ಇಲ್ಲಿಯ
ಠಾವ +ಬಿಡಲ್+ಅನ್ಯತ್ರ+ಗಮನ+ತ್ರಾಣವ್+ಇಲ್ಲೆಮಗೆ
ನೀವು +ದಿಟವಾರೈ +ಮಹಾ +ಸಂ
ಭಾವಿತರು +ಸುರ+ನರ+ ಭುಜಂಗರಲ್
ಆವಕುಲ+ ನಿಮಗೆಂದು+ ಭೀಮನು +ನುಡಿಸಿದನು +ಹನುಮ

ಅಚ್ಚರಿ:
(೧) ಮೂರು ಲೋಕದಲ್ಲಿ ನೀವ್ಯಾರು ಎಂದು ಕೇಳುವ ಪರಿ – ನೀವು ದಿಟವಾರೈ ಮಹಾ ಸಂ
ಭಾವಿತರು ಸುರನರ ಭುಜಂಗರಲಾವಕುಲ