ಪದ್ಯ ೩೮: ಭೀಮನು ಕೋಪದ ನುಡಿಗಳು ಹೇಗಿದ್ದವು?

ತಿಂಬೆನೀತನ ಜೀವವನು ಪತಿ
ಯೆಂಬ ಗರಿವಿತನಿವನ ನೆತ್ತಿಯ
ತುಂಬು ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ
ಅಂಬುಜಾಕ್ಷಿಗೆ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ (ವಿರಾಟ ಪರ್ವ, ೧೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಕೋಪದಿಂದ, ವಿರಾತನ ಜೀವವನ್ನು ತಿನ್ನುತ್ತೇನೆ, ತಾನು ರಾಜನೆಂಬ ಗರ್ವ ಇವನ ನೆತ್ತಿಗೇರಿದೆ. ನೆತ್ತಿಯು ಮುರಿಯುವಂತೆ ಹೊಡೆದು, ಮತ್ಸ್ಯವಂಶವನ್ನು ಸಂಹರಿಸುತ್ತೇನೆ. ಕೀಚಕನಿಗೆ ದ್ರೌಪದಿಯ ಮೋಹ, ಇವನ ಈ ದುರ್ವರ್ತನೆಗಳು ಅಸಹನೀಯ, ಭೂತ ತೃಪ್ತಿಯನ್ನು ಮಾಡಿಸುತ್ತೇನೆ. ನನ್ನ ಉತ್ತರೀಯವನ್ನು ಬಿಡಿ, ತಡೆಯಬೇಡಿರಿ, ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ತಿಂಬೆ: ತಿನ್ನುತ್ತೇನೆ; ಜೀವ: ಪ್ರಾಣ; ಪತಿ: ಗಂಡ; ಗರ್ವ: ಅಹಂಕಾರ; ನೆತ್ತಿ: ತಲೆ; ಎರಗು: ಬಾಗು; ತರಿ: ಕಡಿ, ಕತ್ತರಿಸು, ಛೇದಿಸು; ಸಂತತಿ: ವಂಶ, ಪೀಳಿಗೆ; ಅಂಬುಜಾಕ್ಷಿ: ಕಮಲದಂತ ಕಣ್ಣು; ಬೇಳಂಬ: ವಿಡಂಬನೆ, ಅಣಕ; ಕೂಟ: ರಾಶಿ, ಸಮುದಾಯ; ತುಷ್ಟಿ: ತೃಪ್ತಿ, ಆನಂದ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬಿಡಿ: ತೊರೆ;

ಪದವಿಂಗಡಣೆ:
ತಿಂಬೆನ್+ಈತನ +ಜೀವವನು +ಪತಿ
ಯೆಂಬ +ಗರಿವಿತನ್+ಇವನ+ ನೆತ್ತಿಯ
ತುಂಬು +ಬಿಡಲ್+ಎರಗುವೆನು +ತರಿವೆನು +ಮತ್ಸ್ಯ+ಸಂತತಿಯ
ಅಂಬುಜಾಕ್ಷಿಗೆ +ಕೀಚಕನ+ ಬೇ
ಳಂಬವ್+ಈತನ +ಕೂಟ +ಭೂತ +ಕ
ದಂಬ +ತುಷ್ಟಿಯ +ಮಾಡಬೇಹುದು +ಸೆರಗ+ ಬಿಡಿಯೆಂದ

ಅಚ್ಚರಿ:
(೧) ಭೀಮನ ಕೋಪದ ನುಡಿ: ತಿಂಬೆನೀತನ ಜೀವವನು ಪತಿಯೆಂಬ ಗರಿವಿತನಿವನ ನೆತ್ತಿಯ
ತುಂಬು ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ

ಪದ್ಯ ೩೫: ಭೀಮನ ರೌದ್ರದ ಮಾತಿನ ವರಸೆ ಹೇಗಿತ್ತು?

ಕೊಂಬೆನೇ ಧರ್ಮಜನ ಧರ್ಮದ
ಡೊಂಬನೀ ಮುದುಗರುಡನಿಕ್ಕಿದ
ನಂಬುಗೆಯ ವಿಷವೈಸಲೇ ತಲೆಗೇರಿತಗ್ರಜನ
ಡೊಂಬಿಗರ ಡಾವರಿಗರಿವದಿರ
ತಿಂಬೆನೀಗಳೆ ತರುಣಿ ಕೇಳೆನು
ತಂಬುಜಾಕ್ಷಿಯ ಸಂತವಿಟ್ಟನು ಕುರುಳನೇರಿಸುತ (ಸಭಾ ಪರ್ವ, ೧೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭೀಮನು ತನ್ನ ರೋಷದ ಮಾತುಗಳನ್ನು ಮುಂದುವರಿಸುತ್ತಾ, ಧರ್ಮಜನ ಧರ್ಮದ ವಂಚನೆಯನ್ನು ನಾನು ಒಪ್ಪುವುದಿಲ್ಲ. ಈ ಮುದಿಗರುಡ ಧೃತರಾಷ್ಟ್ರನು ಇಟ್ಟ ಮೆಚ್ಚುಮದ್ದಿನ ವಿಷವು ಅಣ್ಣನ ತಲೆಗೇರಿದೆ. ಈ ಮೋಸಗಾರರ, ವಂಚಕರ, ದುರುದುಂಬಿಗಳನ್ನೆಲ್ಲರನ್ನೂ ಈಗಲೇ ತಿಂದು ಬಿಡುತ್ತೇನೆ, ದ್ರೌಪದಿ ನೋಡುತ್ತಿರು ಎಂದು ಅವಳ ಮುಂಗುರುಳುಗಳನ್ನು ಮೇಲಕ್ಕೆ ಎತ್ತಿ ನೇವರಿಸಿದನು.

ಅರ್ಥ:
ಕೊಂಬು: ಗರ್ವ, ಕಹಳೆ; ಧರ್ಮ: ಧಾರಣೆ ಮಾಡಿದುದು; ಡೊಂಬ: ಮೋಸಗಾರ; ಮುದು: ವಯಸ್ಸಾದ; ಇಕ್ಕು: ನೀಡು; ನಂಬು: ವಿಶ್ವಾಸವಿಡು; ವಿಷ: ನಂಜು; ಐಸಲೇ: ಅಲ್ಲವೇ; ತಲೆ: ಶಿರ; ಏರು: ಹತ್ತು, ಆರೋಹಿಸು; ಅಗ್ರಜ: ಹಿರಿಯ; ಡಾವರ: ಭೀಷಣತೆ, ಆವರಿಸುವಿಕೆ; ಅರಿ: ತಿಳಿ; ತಿಂಬೆ: ತಿನ್ನುವೆ; ತರುಣಿ: ಹೆಣ್ಣು, ಯುವತಿ; ಕೇಳು: ಆಲಿಸು; ಅಂಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಸಂತವಿಡು: ಸಂತೈಸು; ಕುರುಳ: ಮುಂಗುರುಳು; ಏರಿಸು: ಮೇಲಕ್ಕೆತ್ತು;

ಪದವಿಂಗಡಣೆ:
ಕೊಂಬೆನೇ +ಧರ್ಮಜನ +ಧರ್ಮದ
ಡೊಂಬನ್+ಈ+ ಮುದುಗರುಡನ್+ಇಕ್ಕಿದನ್
ಅಂಬುಗೆಯ +ವಿಷವ್+ಐಸಲೇ +ತಲೆಗೇರಿತ್+ಅಗ್ರಜನ
ಡೊಂಬಿಗರ+ ಡಾವರಿಗರ್+ಇವದಿರ
ತಿಂಬೆನ್+ಈಗಳೆ +ತರುಣಿ +ಕೇಳ್+ಎನುತ್
ಅಂಬುಜಾಕ್ಷಿಯ +ಸಂತವಿಟ್ಟನು+ ಕುರುಳನ್+ಏರಿಸುತ

ಅಚ್ಚರಿ:
(೧) ಡ ಕಾರದ ಜೋಡಿ ಪದ – ಡೊಂಬಿಗರ ಡಾವರಿಗರಿವದಿರ
(೨) ಧೃತರಾಷ್ಟ್ರನನ್ನು ಬಯ್ಯುವ ಪರಿ – ಮುದುಗರುಡ

ಪದ್ಯ ೧೩: ದೂತರು ಗಾಂಧಾರಿಗೆ ಏನೆಂದು ಬಿನ್ನವಿಸಿದರು?

ದೇವಿ ಚಿತ್ತೈಸುವುದು ರಚಿಸಿದ
ದೇವಗಜ ಚಲುವಿಕೆಯನದನಿ
ನ್ನಾವ ಹೊಸ ಪರಮೇಷ್ಠಿಸೃಷ್ಟಿಯೊ ಹೊಗಳಲೆನೆನ್ನಳವೇ
ದೇವತತಿ ಗಗನದಲಿ ಧರೆಯ ಜ
ನಾವಳಿಗಳಿಂಬಿನಲಿ ನೆರೆದಿವೆ
ನೀವು ಬಿಜಯಂಗೈವುದೆನೆ ನಗುತೆದ್ದಳಂಬುಜಾಕ್ಷಿ (ಆದಿ ಪರ್ವ, ೨೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ದೂತರು ಗಾಂಧಾರಿಯ ಬಳಿ ಬಂದು, ದೇವಿ ಗಮನಿಸಿ, ಚಿತ್ರಿಕಾರರು ರಚಿಸಿದ ಐರಾವತವು ಚೆಲುವಿನಿಂದ ಕೂಡಿದ್ದು, ಇದು ಬ್ರಹ್ಮನ ನೂತನ ಸೃಷ್ಠಿಯಂತಿದೆ, ಅದರ ಅಂದವನ್ನು ಹೊಗಳಲು ಸಾಧ್ಯವಿಲ್ಲ. ಅದರ ಸುತ್ತ ಜನರು, ಆಗಸದಲ್ಲಿ ದೇವತೆಗಳು ಸೇರಿದ್ದಾರೆ, ನೀವು ವ್ರತಾಚರಣೆಗೆ ಬರಬೇಕು ಎಂದು ದೂತರು ಹೇಳಿದರು.

ಅರ್ಥ:
ದೇವಿ: ಸ್ತ್ರೀಯರಿಗೆ ಗೌರವ ಸೂಚಕ ಪದ; ಚಿತ್ತೈಸು: ಗಮನಿಸಿ; ರಚಿಸು: ನಿರ್ಮಿಸು; ದೇವಗಜ: ಐರಾವತ; ಚಲುವಿಕೆ: ಅಂದ, ಸೌಂದರ್ಯ; ಹೊಸ: ನವೀನ; ಪರಮೇಷ್ಠಿ: ಬ್ರಹ್ಮ; ಸೃಷ್ಟಿ: ಹುಟ್ಟು; ಹೊಗಳು: ಸ್ತುತಿ;ಅಳವು: ಸಾಧ್ಯವಾದುದು; ತತಿ: ಸಮೂಹ; ಗಗನ: ಆಗಸ; ಧರೆ: ಭೂಮಿ; ಜನಾವಳಿ: ಜನರ ಗುಂಪು; ಇಂಬು: ಆಶ್ರಯ; ನೆರೆದು: ಸೇರು; ಬಿಜಯಂಗೈಸು: ದಯಮಾಡಿಸು; ನಗು: ಸಂತೋಷ; ಅಂಬು: ನೀರು; ಅಂಬುಜ: ಕಮಲ; ಅಕ್ಷಿ: ಕಣ್ಣು;

ಪದವಿಂಗಡಣೆ:
ದೇವಿ+ ಚಿತ್ತೈಸುವುದು +ರಚಿಸಿದ
ದೇವಗಜ+ ಚಲುವಿಕೆಯನ್+ಅದನ್
ಇನ್ನಾವ +ಹೊಸ +ಪರಮೇಷ್ಠಿ+ಸೃಷ್ಟಿಯೊ +ಹೊಗಳಲ್+ಎನ್ನನ್+ ಅಳವೇ
ದೇವತತಿ+ ಗಗನದಲಿ+ ಧರೆಯ +ಜ
ನಾವಳಿಗಳ್+ಇಂಬಿನಲಿ+ ನೆರೆದಿವೆ
ನೀವು +ಬಿಜಯಂಗೈವುದ್+ಎನೆ+ ನಗುತ+ಎದ್ದಳ್+ಅಂಬುಜಾಕ್ಷಿ

ಅಚ್ಚರಿ:
(೧) ದೇವಿ, ದೇವ – ಸ್ತ್ರೀ ಪುಲ್ಲಿಂಗ ಶಬ್ದ – ೧, ೨ ಸಾಲಿನ ಮೊದಲ ಪದ
(೨) ತತಿ, ಆವಳಿ – ಸಮೂಹ ದ ಸಮನಾರ್ಥಕ ಪದ