ಪದ್ಯ ೨೦: ಪಾಂಡವರು ಹೇಗೆ ದುಃಖಿಸಿದರು?

ಬೊಪ್ಪ ದೇಸಿಗರಾದೆವೈ ವಿಧಿ
ತಪ್ಪಿಸಿತಲಾ ನಮ್ಮ ಭಾಗ್ಯವ
ನೊಪ್ಪಿಸಿದೆ ನೀನಾರಿಗೆಮ್ಮನು ಪೂರ್ವಕಾಲದಲಿ
ಮುಪ್ಪಿನಲಿ ನಿನಗೀಯವಸ್ಥೆಯಿ
ದೊಪ್ಪುದೇ ಹೇರಡವಿಯಲಿ ಮಲ
ಗಿಪ್ಪುದೇಕೆಂದೊರಲಿ ಮರುಗಿದರಾ ಕುಮಾರಕರು (ಆದಿ ಪರ್ವ, ೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅಪ್ಪಾ, ನಾವು ಅನಾಥರಾದೆವು. ನಮ್ಮ ಭಾಗ್ಯವನ್ನು ವಿಧಿಯು ಸೆಳೆದುಕೊಂಡಿತು. ನಮ್ಮನ್ನು ಯಾರಿಗೊಪ್ಪಿಸಿ ಹೋದೆ? ಈ ಮುಪ್ಪಿನಲ್ಲಿ ಅಡವಿಯಲ್ಲಿ ಹೀಗೆ ಮಲಗಿರುವುದೇಕೆ? ನಿನಗೆ ಇದು ಒಪ್ಪುತ್ತದೆಯೇ? ಎಂದು ಪಾಂಡವರು ದುಃಖಿಸಿದರು.

ಅರ್ಥ:
ಬೊಪ್ಪ: ಅಪ್ಪ, ತಂದೆ; ದೇಸಿಗ: ಅನಾಥ; ವಿಧಿ: ನಿಯಮ; ತಪ್ಪಿಸು: ಅಡ್ಡಿಮಾಡು; ಭಾಗ್ಯ: ಶುಭ; ಒಪ್ಪಿಸು: ಸಮರ್ಪಿಸು; ಪೂರ್ವ: ಹಿಂದೆ; ಕಾಲ: ಸಮಯ; ಮುಪ್ಪು: ವಯಸ್ಸಾದ ಸ್ಥಿತಿ; ಅವಸ್ಥೆ: ಸ್ಥಿತಿ; ಒಪ್ಪು: ಸರಿಹೊಂದು; ಹೇರಡವಿ: ದಟ್ಟವಾದ ಕಾಡು; ಮಲಗು: ನಿದ್ರಿಸು; ಒರಲು: ಅರಚು; ಮರುಗು: ತಳಮಳ, ಸಂಕಟ; ಕುಮಾರಕರು: ಮಕ್ಕಳು;

ಪದವಿಂಗಡಣೆ:
ಬೊಪ್ಪ +ದೇಸಿಗರಾದೆವೈ +ವಿಧಿ
ತಪ್ಪಿಸಿತಲಾ +ನಮ್ಮ+ ಭಾಗ್ಯವನ್
ಒಪ್ಪಿಸಿದೆ +ನೀನಾರಿಗ್+ಎಮ್ಮನು +ಪೂರ್ವ+ಕಾಲದಲಿ
ಮುಪ್ಪಿನಲಿ +ನಿನಗೀ+ಅವಸ್ಥೆ+ಇದ್
ಒಪ್ಪುದೇ +ಹೇರಡವಿಯಲಿ +ಮಲ
ಗಿಪ್ಪುದ್+ಏಕೆಂದ್+ಒರಲಿ +ಮರುಗಿದರಾ+ ಕುಮಾರಕರು

ಅಚ್ಚರಿ:
(೧) ದುಃಖವನ್ನು ವಿವರಿಸುವ ಪರಿ – ದೇಸಿಗರಾದೆವೈ ವಿಧಿತಪ್ಪಿಸಿತಲಾ ನಮ್ಮ ಭಾಗ್ಯವ

ನಿಮ್ಮ ಟಿಪ್ಪಣಿ ಬರೆಯಿರಿ