ಪದ್ಯ ೨೬: ಭೀಷ್ಮನು ವೇಗವಾಗಿ ಎಲ್ಲಿಗೆ ಬಂದನು?

ವಿರಹ ದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ (ಆದಿ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ವಿರಹದ ಕುಲುಮೆಯ ಬೆಂಕಿಯು ಅವನನ್ನು ಆವರಿಸಿತು. ಆ ತಾಪವನ್ನು ಬಣ್ಣಿಸಲಾರೆ. ಏಳೋ, ಎಂಟೋ, ಒಂಬತ್ತು ದಿನಗಳಲ್ಲಿ ಇವನ ಮರಣವು ನಿಶ್ಚಿತವೆಂದು ಜನರು ಗುಜುಗುಜು ಮಾತನಾಡಿದರು. ಅದನ್ನು ಕೇಳಿ ಭೀಷ್ಮನು ಯಮುನಾ ನದಿಯ ತೀರಕ್ಕೆ ವೇಗದಿಂದ ಬಂದನು.

ಅರ್ಥ:
ವಿರಹ: ಅಗಲಿಕೆ, ವಿಯೋಗ; ದಾವು: ತಾಪ, ಧಗೆ; ಕಿಚ್ಚು: ಬೆಂಕಿ; ಭೂಮೀಶ್ವರ: ರಾಜ; ಮುಸುಕು: ಆವರಿಸು; ಬಲಿ: ಹೆಚ್ಚಾ, ಗಟ್ಟಿ; ಅವಸ್ಥೆ: ಸ್ಥಿತಿ; ಅರಸ: ರಾಜ; ಬಣ್ಣಿಸು: ವಿವರಿಸು; ಅರಿ: ತಿಳಿ; ಬಳಿ: ನಂತರ; ಮರಣ: ಸವು; ಉಬ್ಬರ: ಅತಿಶಯ; ಗುಜುಗುಜು: ಮಾತು; ಅರಿ: ತಿಳಿ; ನದಿ: ಸರೋವರ; ತೀರ: ದಡ; ಬಂದು: ಆಗಮಿಸು; ವಹಿಲ: ವೇಗ;

ಪದವಿಂಗಡಣೆ:
ವಿರಹ +ದಾವುಗೆ +ಕಿಚ್ಚು +ಭೂಮೀ
ಶ್ವರನ +ಮುಸುಕಿತು +ಬಲಿದ್+ಅವಸ್ಥೆಯನ್
ಅರಸ +ಬಣ್ಣಿಸಲ್+ಅರಿಯೆನ್+ಏಳೆಂಟೊಂಬತರ +ಬಳಿಯ
ಮರಣವ್+ಈತಂಗ್+ಎಂಬ +ಜನದ್
ಉಬ್ಬರದ +ಗುಜುಗುಜುವ್+ಅರಿದು +ಯಮುನಾ
ವರ+ನದಿಯ +ತೀರಕ್ಕೆ+ ಬಂದನು +ಭೀಷ್ಮ +ವಹಿಲದಲಿ

ಅಚ್ಚರಿ:
(೧) ವಿರಹದ ತೀವ್ರತೆಯನ್ನು ಹೇಳುವ ಪರಿ – ವಿರಹ ದಾವುಗೆ ಕಿಚ್ಚು ಭೂಮೀಶ್ವರನ ಮುಸುಕಿತು

ನಿಮ್ಮ ಟಿಪ್ಪಣಿ ಬರೆಯಿರಿ