ಪದ್ಯ ೪: ಜನಮೇಜಯ ಯಾವ ಕಥೆಯನ್ನು ಕೇಳಿದನು?

ಕೇಳಿದನು ಜನಮೇಜಯ ಕ್ಷಿತಿ
ಪಾಲಕನು ವರ ಸರ್ಪಯಜ್ಞ
ಸ್ಥೂಲ ಪಾಪವಿಘಾತಿಗೋಸುಗವೀ ಮಹಾಕಥೆಯ
ಕೇಳಿದೆನು ತಾನಲ್ಲಿ ಮುನಿಜನ
ಮೌಳಿ ಮಂಡಿತ ಚರಣಕಮಲ ವಿ
ಶಾಲ ವೇದವ್ಯಾಸಕೃತ ಭಾರತ ಕಥಾಮೃತವ (ಆದಿ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ಹಿಂದೆ ಜನಮೇಜಯರಾಜನು ಸರ್ಪಯಾಗವನ್ನು ಮಾಡಿ ತನಗೆ ಬಂದೊದಗಿದ ಪಾಪವನ್ನು ಕಳೆದುಕೊಳ್ಳುವುದಕ್ಕಾಗಿ ಈ ಕಥೆಯನ್ನು ಕೇಳಿದನು. ಮುನಿಜನರಿಂದ ವಂದಿತವಾದ ಪಾದಕಮಲಗಳನ್ನುಳ್ಳ, ವಿಶಾಲಬುದ್ಧಿಯಾದ ವೇದವ್ಯಾಸರಿಂದ ರಚಿತವಾದ ಭಾರತಕಥಾಮೃತವನ್ನು ನಾನು ಅಲ್ಲಿ ಕೇಳಿದೆನು.

ಅರ್ಥ:
ಕೇಳು: ಆಲಿಸು, ಬೇಡು; ಕ್ಷಿತಿಪಾಲ: ರಾಜ; ವರ: ಶ್ರೇಷ್ಠ; ಯಜ್ಞ: ಯಾಗ, ಕ್ರತು; ಸ್ಥೂಲ: ದೊಡ್ಡ; ಪಾಪ: ಪುಣ್ಯವಲ್ಲದ ಕಾರ್ಯ; ವಿಘಾತ: ನಾಶ, ಧ್ವಂಸ; ಮಹಾಕಥೆ: ದೊಡ್ಡ ವಿಚಾರ; ಮುನಿಜನ: ಋಷಿಗಳ ಗುಂಪು; ಮೌಳಿ: ಶ್ರೇಷ್ಠ; ಮಂಡಿತ: ಶೋಭೆಗೊಂಡ; ಚರಣ: ಪಾದ; ಕಮಲ: ತಾವರೆ; ವಿಶಾಲ: ದೊಡ್ಡ; ಕೃತ: ರಚಿತ; ಅಮೃತ: ಸುಧೆ;

ಪದವಿಂಗಡಣೆ:
ಕೇಳಿದನು +ಜನಮೇಜಯ +ಕ್ಷಿತಿ
ಪಾಲಕನು +ವರ +ಸರ್ಪ+ಯಜ್ಞ
ಸ್ಥೂಲ +ಪಾಪ+ವಿಘಾತಿಗ್+ಓಸುಗವ್+ಈ+ ಮಹಾಕಥೆಯ
ಕೇಳಿದೆನು +ತಾನಲ್ಲಿ+ ಮುನಿಜನ
ಮೌಳಿ +ಮಂಡಿತ +ಚರಣಕಮಲ +ವಿ
ಶಾಲ +ವೇದವ್ಯಾಸ+ಕೃತ +ಭಾರತ +ಕಥಾಮೃತವ

ಅಚ್ಚರಿ:
(೧) ಕೇಳಿದನು, ಕೇಳಿದೆನು – ಪದಗಳ ಬಳಕೆ
(೨) ಗೌರವ ಸೂಚಕ ಪದ – ಮುನಿಜನಮೌಳಿ ಮಂಡಿತ ಚರಣಕಮಲ ವಿಶಾಲ ವೇದವ್ಯಾಸಕೃತ

ನಿಮ್ಮ ಟಿಪ್ಪಣಿ ಬರೆಯಿರಿ