ಪದ್ಯ ೧೮: ಸುರ್ಯೋಧನನು ಯಾರನ್ನು ಯುದ್ಧದಲ್ಲಿ ಕಳೆದುಕೊಂಡನು?

ಅನುಜರಳಿದುದು ನೂರು ರಣದಲಿ
ತನುಜರಳಿದುದು ಮಾವ ಗುರು ಮೈ
ದುನ ಪಿತಾಮಹ ಪುತ್ರ ಮಿತ್ರ ಜ್ಞಾತಿ ಬಾಂಧವರು
ಅನಿಬರವನೀಶ್ವರರು ಸಮರಾ
ವನಿಯೊಳಡಗಿದುದೇಕದೇಶದ
ಜನಪತಿಯ ಮುರಿದುದುವೆ ಸಾಲದೆ ಭೀಮ ನಮಗೆಂದ (ಗದಾ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧರ್ಮಜನು ಮಾತನಾಡುತ್ತಾ, ಎಲೈ ಭೀಮ, ದುರ್ಯೊಧನನ ನೂರು ತಮ್ಮಂದಿರು, ಮಕ್ಕಳು, ಮಾವ, ಗ್ರು, ಮೈದುನ, ತಾತ, ಮಿತ್ರರು, ದಾಯಾದಿಗಳು, ಬಾಂಧವರು, ಮಿತ್ರರಾಜರು ಈ ರಣರಂಗದಲ್ಲಿ ಮಡಿದು ಹೋಗಿದ್ದಾರೆ. ಏಕಾಂಗಿಯಾಗಿದ್ದ ಅವನನ್ನು ಮುರಿದುದೇ ಸಾಲದೆ? ಅದರ ಮೇಲೆ ಅವನಿಗೆ ಈ ರೀತಿ ಹಿಂಸೆ ಕೊಡುವುದು ಸರಿಯೇ? ಎಂದು ಪ್ರಶ್ನಿಸಿದನು.

ಅರ್ಥ:
ಅನುಜ: ತಮ್ಮ; ರಣ: ಯುದ್ಧ; ತನುಜ: ಮಕ್ಕಳು; ಮಾವ: ಅಮ್ಮನ ಅಣ್ಣ/ತಮ್ಮ; ಗುರು: ಆಚಾರ್ಯ; ಮೈದುನ: ತಂಗಿಯ ಗಂಡ; ಪಿತಾಮಹ: ತಾತ; ಪುತ್ರ: ಮಗ; ಮಿತ್ರ: ಸ್ನೇಹಿತ; ಜ್ಞಾತಿ: ತಂದೆಯ ಕಡೆಯ ಬಂಧು, ದಾಯಾದಿ; ಬಾಂಧವ: ಬಂಧು ಬಳಗ; ಅನಿಬರು: ಅಷ್ಟು ಜನ; ಅವನೀಶ್ವರ: ರಾಜ; ಸಮರ: ಯುದ್ಧ; ಅವನಿ: ಭೂಮಿ; ಅಡಗು: ಬಚ್ಚಿಡು, ಕಾಣದಂತಾಗು; ಜನಪತಿ: ರಾಜ; ಮುರಿ: ಸೀಳು; ಸಾಲದೆ: ಸಾಕಾಗು;

ಪದವಿಂಗಡಣೆ:
ಅನುಜರ್+ಅಳಿದುದು +ನೂರು +ರಣದಲಿ
ತನುಜರ್+ಅಳಿದುದು +ಮಾವ +ಗುರು +ಮೈ
ದುನ +ಪಿತಾಮಹ +ಪುತ್ರ+ ಮಿತ್ರ+ ಜ್ಞಾತಿ +ಬಾಂಧವರು
ಅನಿಬರ್+ಅವನೀಶ್ವರರು +ಸಮರ
ಅವನಿಯೊಳ್+ಅಡಗಿದುದ್+ಏಕ+ದೇಶದ
ಜನಪತಿಯ +ಮುರಿದ್+ಅದುವೆ +ಸಾಲದೆ +ಭೀಮ +ನಮಗೆಂದ

ಅಚ್ಚರಿ:
(೧) ಏಕ ಚಕ್ರಾಧಿಪತಿ ಎಂದು ಹೇಳುವ ಪರಿ – ಏಕದೇಶದಜನಪತಿ
(೨) ರಣರಂಗ ಎಂದು ಹೇಳುವ ಪರಿ – ಸಮರಾವನಿ
(೩) ಅನುಜ, ತನುಜ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ