ಎಲವೋ ಭೀಮ ವಿಘಾತಿಗಳ ಕೈ
ದೊಳಸಿನಲಿ ತೆರಹಾಯ್ತು ನೀನಿ
ಟ್ಟಳಿಸುವಡೆ ನಿನಗಾದುದಾಕಸ್ಮಿಕವದಭ್ಯುದಯ
ಛಲವ ಬಿಡಿಸುವಡೇಳು ನೀ ಮನ
ವಳಕುವಡೆ ನಿನ್ನವರ ಕರೆ ಹೊ
ಯ್ಲೊಳಗಿದೊಂದೇ ಹೊಯ್ಲೆನುತ ಹೊಕ್ಕನು ಮಹೀಪಾಲ (ಗದಾ ಪರ್ವ, ೭ ಸಂಧಿ, ೩೩ ಪದ್ಯ)
ತಾತ್ಪರ್ಯ:
ಎಲವೋ ಭೀಮ, ಹೊಡೆತಗಳ ಪ್ರವಾಹದಲ್ಲಿ ಒಂದು ಕ್ಷಣ ಕೈನಿಂತುಹೋಯಿತು. ನಿನಗೆ ಆದ ಅಭ್ಯುದಯವು ಆಕಸ್ಮಿಕ. ನನ್ನ ಛಲವನ್ನು ನಿಲ್ಲಿಸುವೆನೆಮ್ದುಕೊಂಡಿದ್ದರೆ ಏಲು. ನನ್ನ ಹೊಡೆತಕ್ಕೆ ಹೆದರುವುದಾದರೆ ನಿನ್ನವರನ್ನು ಕರೆಸಿಕೋ, ಹಲವು ಹೊಡೆತಗಳಿಂದೇನು. ನಿನಗೆ ಇದೊಂದೇ ಹೊಡೆತ ಸಾಕು ಎನ್ನುತ್ತಾ ನುಗ್ಗಿದನು.
ಅರ್ಥ:
ವಿಘಾತ: ನಾಶ, ಧ್ವಂಸ; ಕೈದು: ಆಯುಧ; ತೆರಹು: ಬಿಚ್ಚು, ತೆರೆ; ಆಕಸ್ಮಿಕ: ಅನಿರೀಕ್ಷಿತವಾದ ಘಟನೆ; ಅಭ್ಯುದಯ: ಏಳಿಗೆ; ಛಲ: ನೆಪ, ವ್ಯಾಜ; ಬಿಡಿಸು: ತೊರೆ; ಏಳು: ಮೇಲೆ ಹತ್ತು; ಮನ: ಮನಸ್ಸು; ಅಳುಕು: ಹೆದರು; ಕರೆ: ಬರೆಮಾದು; ಹೊಯ್ಲು: ಹೊಡೆ; ಹೊಕ್ಕು: ಸೇರು; ಮಹೀಪಾಲ: ರಾಜ;
ಪದವಿಂಗಡಣೆ:
ಎಲವೋ+ ಭೀಮ +ವಿಘಾತಿಗಳ +ಕೈ
ದೊಳಸಿನಲಿ +ತೆರಹಾಯ್ತು +ನೀನ್
ಇಟ್ಟಳಿಸುವಡೆ +ನಿನಗಾದುದ್+ಆಕಸ್ಮಿಕವದ್+ಅಭ್ಯುದಯ
ಛಲವ +ಬಿಡಿಸುವಡ್+ಏಳು +ನೀ +ಮನವ್
ಅಳಕುವಡೆ +ನಿನ್ನವರ+ ಕರೆ +ಹೊ
ಯ್ಲೊಳಗಿದೊಂದೇ +ಹೊಯ್ಲೆನುತ +ಹೊಕ್ಕನು +ಮಹೀಪಾಲ
ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಯ್ಲೊಳಗಿದೊಂದೇ ಹೊಯ್ಲೆನುತ ಹೊಕ್ಕನು