ಪದ್ಯ ೪೩: ಅರ್ಜುನನು ಕೃಷ್ಣನಲ್ಲಿ ಏನೆಂದು ಬೇಡಿದನು?

ದೇವ ಬೆಸಸಿನ್ನನಿಲಸೂನು ಸ
ಜೀವನಹಿತನಿಬರ್ಹಣ ಪ್ರ
ಸ್ತಾವವನು ಕರುಣಿಸುವುದಾತನ ಧರ್ಮವಿಕೃತಿಗ
ನೀವು ಕಂಡಿರೆ ನಾಭಿ ಜಂಘೆಗೆ
ಡಾವರಿಸಿದನು ಹಲವು ಬಾರಿ ಜ
ಯಾವಲಂಬನವೆಂತು ಕೃಪೆಮಾಡೆಂದನಾ ಪಾರ್ಥ (ಗದಾ ಪರ್ವ,೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನ ಬಳಿಗೆ ಹೋಗಿ, ಭೀಮನು ಜೀವಿಸಿದ್ದಾನೆ, ಶತ್ರುವು ಹಲವು ಬಾರಿ ಅವನ ನಾಭಿ ಮತ್ತು ಜಂಘೆಗೂ ಹೊಡೆದಿದ್ದಾನೆ. ಶತ್ರುವಿನ ವಧೆ ಹೇಗಾಗಬೇಕೆಂದು ದಯವಿಟ್ಟು ತಿಳಿಸು ಎಂದು ಅರ್ಜುನನು ಬೇಡಿದನು.

ಅರ್ಥ:
ದೇವ: ಭಗವಂತ; ಬೆಸಸು: ಹೇಳು; ಅನಿಲಸೂನು: ಭೀಮ; ಸಜೀವ: ಪ್ರಾಣವಿರುವ; ಅಹಿತ: ವೈರಿ; ಪ್ರಸ್ತಾವ: ವಿಚಾರ ಹೇಳುವುದು; ಕರುಣಿಸು: ದಯೆ ತೋರು; ಧರ್ಮ: ಧಾರಣೆ ಮಾಡಿದುದು; ವಿಕೃತಿ: ಬದಲಾವಣೆ, ವ್ಯತ್ಯಾಸ, ಕುರೂಪ; ಕಂಡು: ನೋಡು; ನಾಭಿ: ಹೊಕ್ಕಳು; ಜಂಘೆ: ತೊಡೆ; ಡಾವರಿಸು: ಹೊಡೆ; ಹಲವು: ಬಹಳ; ಬಾರಿ: ಸಾರ್ತಿ; ಜಯ: ಗೆಲುವು; ಅವಲಂಬನ: ಆಶ್ರಯ, ಆಸರೆ; ಕೃಪೆ: ದಯೆ;

ಪದವಿಂಗಡಣೆ:
ದೇವ +ಬೆಸಸಿನ್ನ್+ಅನಿಲಸೂನು +ಸ
ಜೀವನ್+ಅಹಿತನಿಬರ್ಹಣ+ ಪ್ರ
ಸ್ತಾವವನು +ಕರುಣಿಸುವುದ್+ಆತನ +ಧರ್ಮ+ವಿಕೃತಿಗ
ನೀವು +ಕಂಡಿರೆ +ನಾಭಿ +ಜಂಘೆಗೆ
ಡಾವರಿಸಿದನು +ಹಲವು +ಬಾರಿ +ಜಯ
ಅವಲಂಬನವೆಂತು +ಕೃಪೆಮಾಡೆಂದನಾ +ಪಾರ್ಥ

ಅಚ್ಚರಿ:
(೧) ಕರುಣಿಸು, ಕೃಪಮಾಡು – ಸಾಮ್ಯಾರ್ಥ ಪದಗಳು

ಪದ್ಯ ೪೨: ಅರ್ಜುನನು ಕೃಷ್ಣನಿಗೆ ಭೀಮನ ಬಗ್ಗೆ ಏನು ಹೇಳಿದ?

ಅರಸ ಕೇಳೈ ಬಿದ್ದ ಭೀಮನ
ಹೊರಗೆ ಬಂದರ್ಜುನನು ಮೋರೆಗೆ
ಬೆರಳನೊಡ್ಡಿ ಸಮೀರನಂದನನುಸಾರನಾರೈದು
ಮರಳಿದನು ಮುರಹರನನೆಕ್ಕಟಿ
ಗರೆದು ಸಪ್ರಾಣನು ಗದಾನಿ
ರ್ಭರಪರಿಶ್ರಮ ಭೀಮ ಬಳಲಿದನೆಂದನಾ ಪಾರ್ಥ (ಗದಾ ಪರ್ವ, ೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ರಾಜ ಕೇಳು, ನೆಲದ ಮೇಲೆ ಬಿದ್ದಿದ್ದ ಭೀಮನ ಬಳಿಗೆ ಅರ್ಜುನನು ಬಂದು, ಮೂಗಿಗೆ ಬೆರಳನ್ನಿಟ್ತುನೋಡಿ, ಕೃಷ್ಣನನ್ನು ಪಕ್ಕಕ್ಕೆ ಕರೆದು ಭೀಮನಿಗೆ ಪ್ರಾಣವಿದೆ, ಯುದ್ಧದ ಬಳಲಿಕೆಯಿಂದ ಮೂರ್ಛಿತನಾಗಿದ್ದಾನೆ ಎಂದು ಹೇಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಿದ್ದ: ಎರಗು; ಹೊರಗೆ: ಆಚೆಗೆ; ಮೋರೆ: ಮುಖ; ಬೆರಳು: ಅಂಗುಲಿ; ಒಡ್ಡು: ನೀಡು; ಸಮೀರ: ವಾಯು; ನಂದನ: ಮಗ; ಉಸುರು: ಜೀವ; ಮರಳು: ಹಿಂದಿರುಗು; ಮುರಹರ: ಕೃಷ್ಣ; ಎಕ್ಕಟಿ: ಏಕಾಕಿ, ಗುಟ್ಟಾಗಿ; ಕರೆದು: ಬರೆಮಾಡು; ಪ್ರಾಣ: ಜೀವ; ನಿರ್ಭರ: ವೇಗ, ರಭಸ; ಪರಿಶ್ರಮ: ಬಳಲಿಕೆ, ಆಯಾಸ; ಬಳಲು: ಆಯಾಸಗೊಳ್ಳು;

ಪದವಿಂಗಡಣೆ:
ಅರಸ+ ಕೇಳೈ +ಬಿದ್ದ+ ಭೀಮನ
ಹೊರಗೆ +ಬಂದ್+ಅರ್ಜುನನು +ಮೋರೆಗೆ
ಬೆರಳನೊಡ್ಡಿ+ ಸಮೀರನಂದನನ್+ಉಸಾರನಾರೈದು
ಮರಳಿದನು +ಮುರಹರನನ್+ಎಕ್ಕಟಿ
ಕರೆದು +ಸಪ್ರಾಣನು +ಗದಾ+ನಿ
ರ್ಭರ+ಪರಿಶ್ರಮ+ ಭೀಮ +ಬಳಲಿದನೆಂದನಾ +ಪಾರ್ಥ

ಅಚ್ಚರಿ:
(೧) ಹೊರೆಗೆ, ಮೋರೆಗೆ – ಪ್ರಾಸ ಪದಗಳು, ೨ ಸಾಲು
(೨) ಭೀಮನನ್ನು ಸಮೀರನಂದನ ಎಂದು ಕರೆದ ಪರಿ

ಪದ್ಯ ೪೧: ಬಲರಾಮನು ಕೃಷಂಗೆ ಏನು ಹೇಳಿದನು?

ದುಗುಡದಲಿ ಹರಿ ರೌಹಿಣೀಯನ
ಮೊಗವ ನೋಡಿದಡಾತನಿದು ಕಾ
ಳೆಗವಲೇ ಕೃತಸಮಯರಾದಿರಿ ಪೂರ್ವಕಾಲದಲಿ
ಹಗೆಯ ಬಿಡಿ ಕುರುಪತಿಯ ಸಂಧಿಗೆ
ಸೊಗಸಿ ನಿಲಲಿ ಯುಧಿಷ್ಠಿರನ ಮಾ
ತುಗಳ ಕೆಡಿಸದಿರೆಂದನಾ ಕೃಷಂಗೆ ಬಲರಾಮ (ಗದಾ ಪರ್ವ, ೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದುಃಖಿಸುತ್ತಾ ಬಲರಾಮನ ಕಡೆಗೆ ನೋಡಲು, ಅವನು, ಇದು ಯುದ್ಧ, ಹಿಂದೆ ನೀವು ಗೆದ್ದಿದ್ದಿರಿ, ಈಗ ನಿಮ್ಮ ಕಾಲ ಕೆಟ್ಟಿತು, ವೈರವನ್ನು ಬಿಟ್ಟು ಕೌರವನೊಂದಿಗೆ ಸಂಧಿಯನ್ನು ಮಾಡಿಕೊಳ್ಳಿರಿ, ಧರ್ಮಜನ ಮಾತನ್ನು ಕೆಡಿಸಬೇಡಿ ಎಂದನು.

ಅರ್ಥ:
ದುಗುಡ: ದುಃಖ; ಹರಿ: ವಿಷ್ಣು; ರೌಹಿಣೀಯ: ಬಲರಾಮ; ಮೊಗ: ಮುಖ; ನೋಡು: ವೀಕ್ಷಿಸು; ಕಾಳೆಗ: ಯುದ್ಧ; ಕೃತ: ಕಾರ್ಯ; ಸಮಯ: ಕಾಲ; ಪೂರ್ವ: ಹಿಂದಿನ; ಹಗೆ: ವೈರಿ; ಬಿಡಿ: ತೊರೆ; ಸಂಧಿ: ರಾಜಿ, ಒಡಂಬಡಿಕೆ; ಸೊಗಸು: ಅಂದ, ಚೆಲುವು; ನಿಲುವು: ಅಭಿಪ್ರಾಯ, ಅಭಿಮತ; ನಿಲು: ತಡೆ; ಮಾತು: ನುಡಿ; ಕೆಡಸು: ಹಾಳುಮಾಡು;

ಪದವಿಂಗಡಣೆ:
ದುಗುಡದಲಿ +ಹರಿ +ರೌಹಿಣೀಯನ
ಮೊಗವ +ನೋಡಿದಡ್+ಆತನ್+ಇದು +ಕಾ
ಳೆಗವಲೇ +ಕೃತ+ಸಮಯರಾದಿರಿ +ಪೂರ್ವಕಾಲದಲಿ
ಹಗೆಯ +ಬಿಡಿ +ಕುರುಪತಿಯ +ಸಂಧಿಗೆ
ಸೊಗಸಿ +ನಿಲಲಿ +ಯುಧಿಷ್ಠಿರನ+ ಮಾ
ತುಗಳ +ಕೆಡಿಸದಿರ್+ಎಂದನಾ +ಕೃಷಂಗೆ +ಬಲರಾಮ

ಅಚ್ಚರಿ:
(೧) ಬಲರಾಮನ ಕಿವಿಮಾತು – ಹಗೆಯ ಬಿಡಿ ಕುರುಪತಿಯ ಸಂಧಿಗೆ ಸೊಗಸಿ ನಿಲಲಿ
(೨) ರೌಹಿಣೀಯ – ಬಲರಾಮನನ್ನು ಕರೆದ ಪರಿ

ಪದ್ಯ ೪೦: ಪಾಂಡವರೇಕೆ ದುಃಖಿಸಿದರು?

ಮಿಡಿದನರ್ಜುನ ಧನುವ ಯಮಳರು
ತುಡುಕಿದರು ಕಯ್ದುಗಳ ಸಾತ್ಯಕಿ
ಮಿಡುಕಿದನು ಮರುಗಿದರು ಪಂಚದ್ರೌಪದೀಸುತರು
ಒಡೆಯನಳಿವಿನಲೆಲ್ಲಿಯದು ನೃಪ
ನುಡಿದ ನುಡಿಯೆನುತನಿಲತನುಜನ
ಪಡೆ ಗಜಾಶ್ವವ ಬಿಗಿಯೆ ಗಜಬಜಿಸಿತು ಭಟಸ್ತೋಮ (ಗದಾ ಪರ್ವ, ೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ಧನುಷ್ಟಂಕಾರ ಮಾಡಿದನು. ನಕುಲ ಸಹದೇವರು ಆಯುಧಗಳನ್ನು ಹಿದಿದರು. ಉಪಪಾಂಡವರೂ, ಸಾತ್ಯಕಿ, ದುಃಖಿಸಿದರು. ನಮ್ಮ ಒಡೆಯನು ಮರಣ ಹೊಂದಿದನೇ? ಧರ್ಮಜನ ಪ್ರತಿಜ್ಞೆ ಏನಾಯಿತು? ಎಂದುಕೊಂಡು ಆನೆ, ಕುದುರೆಗಳನ್ನು ಯುದ್ಧಕ್ಕೆ ಅನುವು ಮಾಡಿಕೊಂಡರು.

ಅರ್ಥ:
ಮಿಡಿ: ತವಕಿಸು; ಧನು: ಬಿಲ್ಲು; ಯಮಳ: ಅವಳಿ ಮಕ್ಕಳು; ತುಡುಕು: ಹೋರಾಡು, ಸೆಣಸು; ಕಯ್ದು: ಆಯುಧ; ಮಿಡುಕು: ಅಲುಗಾಟ, ಚಲನೆ; ಮರುಗು: ತಳಮಳ, ಸಂಕಟ; ಪಂಚ: ಐದು; ಸುತ: ಮಕ್ಕಳು; ಒಡೆಯ: ನಾಯಕ, ರಾಜ; ಅಳಿ: ನಾಶ; ನೃಪ: ರಾಜ; ನುಡಿ: ಮಾತಾಡು; ಅನಿಲ: ವಾಯು; ತನುಜ: ಮಗ; ಪಡೆ: ಗುಂಪು, ಸೈನ್ಯ; ಗಜ: ಆನೆ; ಅಶ್ವ: ಕುದುರೆ; ಬಿಗಿ: ಬಂಧಿಸು; ಗಜಬಜ: ಗೊಂದಲ; ಭಟ: ಸೈನಿಕ; ಸ್ತೋಮ: ಗುಂಪು;

ಪದವಿಂಗಡಣೆ:
ಮಿಡಿದನ್+ಅರ್ಜುನ +ಧನುವ +ಯಮಳರು
ತುಡುಕಿದರು +ಕಯ್ದುಗಳ+ ಸಾತ್ಯಕಿ
ಮಿಡುಕಿದನು +ಮರುಗಿದರು+ ಪಂಚ+ದ್ರೌಪದೀ+ಸುತರು
ಒಡೆಯನ್+ಅಳಿವಿನಲ್+ಎಲ್ಲಿಯದು +ನೃಪ
ನುಡಿದ +ನುಡಿಯೆನುತ್+ಅನಿಲತನುಜನ
ಪಡೆ +ಗಜಾಶ್ವವ+ ಬಿಗಿಯೆ +ಗಜಬಜಿಸಿತು +ಭಟಸ್ತೋಮ

ಅಚ್ಚರಿ:
(೧) ನುಡಿ ಪದದ ಬಳಕೆ – ನೃಪನುಡಿದ ನುಡಿಯೆನುತನಿಲತನುಜನ