ಪದ್ಯ ೩೭: ದುರ್ಯೋಧನನು ಏನು ಹೇಳುತ್ತಾ ಗದೆಯನ್ನು ತಿರುಗಿಸಿದನು?

ಮಡಿದವನ ಹೊಯ್ಯೆನು ಧನಂಜಯ
ತೊಡು ಮಹಾಸ್ತ್ರವನವನಿಪತಿ ಬಿಲು
ದುಡುಕು ಯಮಳರು ಕೈದುಗೊಳಿ ಸಾತ್ಯಕಿ ಶರಾಸನವ
ಹಿಡಿ ಶಿಖಂಡಿ ದ್ರುಪದಸುತರವ
ಗಡಿಸಿರೈ ನಿಮ್ಮವನ ಹರಿಬಕೆ
ಮಿಡುಕುವಡೆ ಬಹುದೆನುತ ತೂಗಿದನವನಿಪತಿ ಗದೆಯ (ಗದಾ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೌರವನು ಗರ್ಜಿಸುತ್ತಾ, ಸತ್ತು ಹೋದವನನ್ನು ನಾನು ಹೊಡೆಯುವುದಿಲ್ಲ, ಅರ್ಜುನ ಮಹಾಸ್ತ್ರವನ್ನು ಹೂದು, ಧರ್ಮಜ ಬಿಲ್ಲನ್ನು ಹಿಡಿ, ನಕುಲ ಸಹದೇವರು ಆಯುಧಗಳನ್ನು ಹಿದಿಯಲಿ, ಸಾತ್ಯಕಿ ಬಿಲ್ಲನ್ನು ಹಿಡಿ, ಶಿಖಂಡಿ, ಧೃಷ್ಟದ್ಯುಮ್ನರೇ ನನ್ನನ್ನು ಇದಿರಿಸಿ, ನಿಮ್ಮವನ ಸೇಡನ್ನು ತೀರಿಸಲು ಬನ್ನಿ ಎಂದು ಕೌರವನು ಗದೆಯನ್ನು ತಿರುಗಿಸಿದನು.

ಅರ್ಥ:
ಮಡಿ: ಸಾವು; ಹೊಯ್ಯು: ಹೊಡೆ; ತೊಡು: ಹೂಡು; ಮಹಾಸ್ತ್ರ: ಶ್ರೇಷ್ಠವಾದ ಶಸ್ತ್ರ; ಬಿಲು: ಬಿಲ್ಲು, ಚಾಪ; ತುಡುಕು: ಹೋರಾಡು, ಸೆಣಸು; ಯಮಳರು: ಅವಳಿ ಮಕ್ಕಳು; ಕೈದು: ಆಯುಧ; ಶರ: ಬಾಣ; ಶರಾಸನ: ಬಿಲ್ಲು; ಹಿಡಿ: ಗ್ರಹಿಸು; ಸುತ: ಮಗ; ಅವಗಡಿಸು: ಸೋಲಿಸು; ಹರಿಬ: ಕೆಲಸ, ಕಾರ್ಯ; ಮಿಡುಕು: ಅಲುಗಾಟ, ಚಲನೆ; ತೂಗು: ಅಲ್ಲಾಡಿಸು; ಅವನಿಪತಿ: ರಾಜ; ಗದೆ: ಮುದ್ಗರ;

ಪದವಿಂಗಡಣೆ:
ಮಡಿದವನ +ಹೊಯ್ಯೆನು+ ಧನಂಜಯ
ತೊಡು +ಮಹಾಸ್ತ್ರವನ್+ಅವನಿಪತಿ +ಬಿಲು
ದುಡುಕು +ಯಮಳರು +ಕೈದುಗೊಳಿ +ಸಾತ್ಯಕಿ +ಶರಾಸನವ
ಹಿಡಿ +ಶಿಖಂಡಿ +ದ್ರುಪದಸುತರ್+ಅವ
ಗಡಿಸಿರೈ +ನಿಮ್ಮವನ+ ಹರಿಬಕೆ
ಮಿಡುಕುವಡೆ +ಬಹುದೆನುತ +ತೂಗಿದನ್+ಅವನಿಪತಿ +ಗದೆಯ

ಅಚ್ಚರಿ:
(೧) ಬಿಲ್ಲು ಎಂದು ಹೇಳಲು ಶರಾಸನ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ