ಹೊಕ್ಕು ಕುರುಪತಿ ಭೀಮಸೇನನ
ನಿಕ್ಕಿದನು ಕಂದದಲಿ ಗದೆಯನು
ಸೆಕ್ಕಿದನು ವಾಮಾಂಗದಲಿ ಪವಮಾನನಂದನನ
ಜಕ್ಕುಲಿಸಿದವೊಲಾಯ್ತು ಜರೆದು ನ
ಭಕ್ಕೆ ಪುಟನೆಗೆದನಿಲಜನ ಸೀ
ಸಕ್ಕೆ ಹೊಯ್ದಾರಿದನು ಕೌರವನೃಪತಿ ಖಾತಿಯಲಿ (ಗದಾ ಪರ್ವ, ೭ ಸಂಧಿ, ೯ ಪದ್ಯ)
ತಾತ್ಪರ್ಯ:
ಕೌರವನು ಮುನ್ನುಗ್ಗಿ ಭೀಮನ ಹೆಗಲನ್ನು ಗದೆಯಿಮ್ದ ಹೊಡೆದು, ಎಡ ಪಕ್ಕೆಯಲ್ಲಿ ಗದೆಯನ್ನು ಸಿಕ್ಕಿಸಿದನು. ಭೀಮನನ್ನು ಜರೆದು ಮೇಲಕ್ಕೆ ಹಾರಿ ಭೀಮನ ಶಿರಸ್ತ್ರಾನವನ್ನು ಹೊಡೆದು ಕೋಪದಿಂದ ಗರ್ಜಿಸಿದನು.
ಅರ್ಥ:
ಹೊಕ್ಕು: ಸೇರು; ಇಕ್ಕು: ಹೊಡೆ; ಕಂದ: ಹೆಗಲು; ಗದೆ: ಮುದ್ಗರ; ಸೆಕ್ಕು: ಕುಗ್ಗುವಿಕೆ, ಹಿಡಿದೆಳೆ; ವಾಮಾಂಗ: ಎಡಭಾಗ; ನಂದನ: ಮಗ; ಪವಮಾನ: ವಾಯು; ಜಕ್ಕುಲಿ: ಕಂಕುಳು, ಕಕ್ಷ; ಜರೆ: ಬಯ್ಯು, ಬೀಳಿಸು; ನಭ: ಆಗಸ; ಪುಟ:ಪುಟಿಗೆ, ನೆಗೆತ; ನೆಗೆ: ಜಿಗಿ; ಅನಿಲಜ: ವಾಯುಪುತ್ರ; ಸೀಸಕ: ಶಿರಸ್ತ್ರಾಣ; ಹೊಯ್ದು: ಹೊಡೆ; ನೃಪತಿ: ರಾಜ; ಖಾತಿ: ಕೋಪ;
ಪದವಿಂಗಡಣೆ:
ಹೊಕ್ಕು +ಕುರುಪತಿ +ಭೀಮಸೇನನನ್
ಇಕ್ಕಿದನು +ಕಂದದಲಿ +ಗದೆಯನು
ಸೆಕ್ಕಿದನು +ವಾಮಾಂಗದಲಿ +ಪವಮಾನ+ನಂದನನ
ಜಕ್ಕುಲಿಸಿದವೊಲಾಯ್ತು +ಜರೆದು +ನ
ಭಕ್ಕೆ+ ಪುಟನೆಗೆದ್+ಅನಿಲಜನ +ಸೀ
ಸಕ್ಕೆ+ ಹೊಯ್ದಾರಿದನು+ ಕೌರವ+ನೃಪತಿ +ಖಾತಿಯಲಿ
ಅಚ್ಚರಿ:
(೧) ಭೀಮಸೇನ, ಪವಮಾನನಮ್ದನ, ಅನಿಲಜ – ಭೀಮನನ್ನು ಕರೆದ ಪರಿ
(೨) ಹೊಡೆದ ಪರಿ – ನಭಕ್ಕೆ ಪುಟನೆಗೆದನಿಲಜನ ಸೀಸಕ್ಕೆ ಹೊಯ್ದಾರಿದನು ಕೌರವನೃಪತಿ ಖಾತಿಯಲಿ