ಪದ್ಯ ೭: ಭೀಮ ದುರ್ಯೋಧನರ ಯುದ್ಧವು ಅಡಿಗಡಿಗೆ ಹೇಗೆ ನಡೆಯಿತು?

ಅಡಿಗಡಿಗೆ ಕರ್ಪುರದ ಕವಳವ
ನಡಸಿದರು ತಾಳಿಗೆಗೆ ಬಳಿಕಡಿ
ಗಡಿಗೆ ಹೆರಸಾರಿದರು ಸಮರಶ್ರಮನಿವಾರಣಕೆ
ಕಡುಹು ತಳಿತುದು ಪೂತು ಫಲವಾ
ಯ್ತಡಿಗಡಿಗೆ ಮಚ್ಚರದ ಮಸಕದ
ತಡಿಕೆವಲೆ ನುಗ್ಗಾಯ್ತು ಮನ ಕುರುಪತಿಯ ಪವನಜನ (ಗದಾ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಮತ್ತೆ ಮತ್ತೆ ಆಯಾಸವನ್ನು ಕಳೆದುಕೊಳ್ಳಲು ಹಿಂದಕ್ಕಿ ಹೋಗಿ ಕುಳಿತು ಕರ್ಪೂರ ವೀಳೆಯವನ್ನು ಹಾಕಿಕೊಳ್ಳುತ್ತಿದ್ದರು. ಅವರ ಶಕ್ತಿ ಚಿಗುರಿತು. ಮನಸ್ಸಿನ ಮತ್ಸರ ಒಳಗೇ ಇದ್ದುದು ತಡಿಕೆ ಬಲೆಯನ್ನು ಮುರಿದು ಹೊರಸಿಡಿಯಿತು.

ಅರ್ಥ:
ಅಡಿಗಡಿಗೆ: ಹೆಜ್ಜೆ ಹೆಜ್ಜೆ; ಕರ್ಪುರ: ಸುಗಂಧ ದ್ರವ್ಯ; ಕವಳ: ಊಟ; ಅಡಸು: ತುರುಕು; ತಾಳಿಗೆ: ಗಂಟಲು; ಬಳಿಕ: ನಂತರ; ಹೆರಸಾರ: ಹಿಂದಕ್ಕೆ ಸರಿ; ಸಮರ: ಯುದ್ಧ; ಶ್ರಮ: ಆಯಾಸ; ನಿವಾರಣ: ಕಡಿಮೆಯಾಗು; ಕಡುಹು: ಸಾಹಸ, ಹುರುಪು; ತಳಿತು: ಚಿಗುರು; ಪೂತು: ಭಲೇ; ಫಲ: ಪ್ರಯೋಜನ; ಮಚ್ಚರ: ಮತ್ಸರ, ಹೊಟ್ಟೆಕಿಚ್ಚು; ಮಸಕ: ಆಧಿಕ್ಯ, ಹೆಚ್ಚಳ; ತಡಿಕೆ: ತೆರೆ, ಮರೆ; ನುಗ್ಗು: ತಳ್ಳಿಕೊಂಡು ಮುಂದೆ ಸರಿ; ಮನ: ಮನಸ್ಸು; ಬಲೆ: ಜಾಲ;

ಪದವಿಂಗಡಣೆ:
ಅಡಿಗಡಿಗೆ +ಕರ್ಪುರದ+ ಕವಳವನ್
ಅಡಸಿದರು +ತಾಳಿಗೆಗೆ +ಬಳಿಕ್+ಅಡಿ
ಗಡಿಗೆ+ ಹೆರಸಾರಿದರು +ಸಮರ+ಶ್ರಮ+ ನಿವಾರಣಕೆ
ಕಡುಹು +ತಳಿತುದು +ಪೂತು +ಫಲವಾಯ್ತ್
ಅಡಿಗಡಿಗೆ+ ಮಚ್ಚರದ+ ಮಸಕದ
ತಡಿಕೆ+ಬಲೆ +ನುಗ್ಗಾಯ್ತು+ ಮನ +ಕುರುಪತಿಯ +ಪವನಜನ

ಅಚ್ಚರಿ:
(೧) ಅಡಿಗಡಿಗೆ – ೩ ಬಾರಿ ಪ್ರಯೋಗ
(೨) ರೂಪಕದ ಪ್ರಯೋಗ – ಮಚ್ಚರದ ಮಸಕದ ತಡಿಕೆವಲೆ ನುಗ್ಗಾಯ್ತು ಮನ ಕುರುಪತಿಯ ಪವನಜನ

ಪದ್ಯ ೬: ಶಿರಸ್ತ್ರಾಣದ ಮಣಿಗಳು ಹೇಗೆ ಸಿಡಿದವು?

ತಿವಿದನವನಿಪನನಿಲತನುಜನ
ಕವಚ ಬಿರಿದುದು ಕಯ್ಯೊಡನೆ ರಣ
ದವಕಿ ಕೈದೋರಿದನು ಕೌರವನ್ರ್ಪನ ವಕ್ಷದಲಿ
ಸವಗ ಸೀಳಿತು ಮರಳಿ ಹೊಯ್ದನು
ಪವನಜನ ಸೀಸಕದ ವರಮಣಿ
ನಿವಹ ಸಿಡಿದವು ಸಿಡಿಲು ಮೆಟ್ಟಿದ ಮೇರುಗಿರಿಯಂತೆ (ಗದಾ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಕೌರವನು ಗದೆಯಿಂದ ತಿವಿಯಲು ಭೀಮನ ಕವಚ ಒಡೆಯಿತು. ಭೀಮನು ಆ ಕ್ಷಣದಲ್ಲೇ ಯುದ್ಧದ ತವಕದಿಂದ ಕೌರವನ ಎದೆಗೆ ಹೊಡೆಯಲು ಅವನ ಕವಚ ಸೀಳಿತು. ಕೌರವನು ಮತ್ತೆ ಭೀಮನ ತಲೆಗೆ ಹೊಯ್ಯಲು ಶಿರಸ್ತ್ರಾಣದ ಮಣಿಗಳು, ಸಿಡಿಲು ಹೊಡೆದ ಮೇರುಪರ್ವತದ ಶಿಖರದಂತೆ ಸಿಡಿದವು.

ಅರ್ಥ:
ತಿವಿ: ಚುಚ್ಚು; ಅವನಿಪ: ರಾಜ; ಅನಿಲ: ವಾಯು; ತನುಜ: ಮಗ; ಕವಚ: ಉಕ್ಕಿನ ಅಂಗಿ, ಕಂಚುಕ, ರಕ್ಷೆ; ಬಿರಿ: ಬಿರುಕು, ಸೀಳು; ಒಡಣೆ: ಕೂಡಲೆ; ರಣ: ಯುದ್ಧರಂಗ; ತವಕ: ಆತುರ, ತ್ವರೆ; ವಕ್ಷ: ಎದೆ; ನೃಪ: ರಾಜ; ಸವಗ: ಕವಚ; ಸೀಳು: ಬಿರುಕು; ಮರಳಿ: ಪುನಃ, ಮತ್ತೆ; ಹೊಯ್ದು: ಹೊಡೆ; ಪವನಜ: ಭೀಮ; ಸೀಸಕ: ಶಿರಸ್ತ್ರಾಣ; ವರಮಣಿ: ಶ್ರೇಷ್ಠವಾದ ರತ್ನ; ನಿವಹ: ಗುಂಪು; ಸಿಡಿ: ಚೆಲ್ಲು; ಸಿಡಿಲು: ಅಶನಿ; ಮೆಟ್ಟು: ತುಳಿ; ಮೇರುಗಿರಿ: ಎತ್ತರವಾದ ಬೆಟ್ಟ;

ಪದವಿಂಗಡಣೆ:
ತಿವಿದನ್+ಅವನಿಪನ್+ಅನಿಲ+ತನುಜನ
ಕವಚ +ಬಿರಿದುದು +ಕಯ್ಯೊಡನೆ +ರಣ
ತವಕಿ +ಕೈದೋರಿದನು +ಕೌರವನೃಪನ +ವಕ್ಷದಲಿ
ಸವಗ +ಸೀಳಿತು +ಮರಳಿ +ಹೊಯ್ದನು
ಪವನಜನ+ ಸೀಸಕದ +ವರಮಣಿ
ನಿವಹ +ಸಿಡಿದವು +ಸಿಡಿಲು +ಮೆಟ್ಟಿದ+ ಮೇರುಗಿರಿಯಂತೆ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ತಿವಿದನವನಿಪನನಿಲತನುಜನ
(೨) ಪವನಜ, ಅನಿಲತನುಜ – ಭೀಮನನ್ನು ಕರೆದ ಪರಿ
(೩) ಉಪಮಾನದ ಪ್ರಯೋಗ – ಸೀಸಕದ ವರಮಣಿ ನಿವಹ ಸಿಡಿದವು ಸಿಡಿಲು ಮೆಟ್ಟಿದ ಮೇರುಗಿರಿಯಂತೆ

ಪದ್ಯ ೫: ಭೀಮ ದುರ್ಯೊಧನರ ಗದಾಯುದ್ಧವನ್ನು ಯಾರು ಹೇಗೆ ಹೊಗಳಿದರು?

ಬೆರಳ ತೂಗಿದನಡಿಗಡಿಗೆ ಹಲ
ಧರನುದಗ್ರ ಗದಾ ವಿಧಾನಕೆ
ಶಿರವನೊಲೆದನು ಶೌರಿ ಮಿಗೆ ಮೆಚ್ಚಿದನು ಯಮಸೂನು
ವರ ಗದಾಯುಧ ವಿವಿಧ ಸತ್ವಕೆ
ಪರಮಜೀವವಿದೆಂದನರ್ಜುನ
ನರರೆ ಮಝರೇ ರಾವು ಜಾಗೆಂದುದು ಭಟವ್ರಾತ (ಗದಾ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಬಲರಾಮನು ಅವರಿಬ್ಬರ ಗದಾಯುದ್ಧದ ವಿಧಾನವನ್ನು ನೋಡಿ, ಮೆಚ್ಚಿ, ಅವರಿಟ್ಟ ಒಂದೊಂದು ಹೆಜ್ಜೆಗೂ ಬೆರಳನ್ನು ತೂಗಿದನು. ಶ್ರೀಕೃಷ್ಣನು ಸಹ ಮೆಚ್ಚಿ ತಲೆಯಾಡಿಸಿದನು. ಯುಧಿಷ್ಠಿರನು ಅತಿಶಯವಾಗಿ ಮೆಚ್ಚಿದನು. ಅರ್ಜುನನು ಗದಾಯುದ್ಧದ ಹಲವು ವಿಧದ ರೀತಿಗಳಿಗೆ ಇದು ಭೂಷಣವೆಂದು ಹೊಗಳಿದನು. ಪರಿವಾರದ ಯೋಧರು ಅರರೇ, ಭಲೇ, ರಾವು, ಜಾಗು ಎಂದು ಕೊಂಡಾಡಿದರು.

ಅರ್ಥ:
ಬೆರಳು: ಅಂಗುಲಿ; ತೂಗು: ಅಲ್ಲಾಡಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆ; ಹಲಧರ: ಬಲರಾಮ; ಉದಗ್ರ: ವೀರ, ಶೂರ; ಗದೆ: ಮುದ್ಗರ; ವಿಧಾನ: ರೀತಿ; ಶಿರ: ತಲೆ; ಒಲೆ: ತೂಗಾಡು; ಶೌರಿ: ಕೃಷ್ಣ; ಮಿಗೆ: ಮತ್ತು, ಅಧಿಕ; ಮೆಚ್ಚು: ಇಷ್ಟಪಡು; ಸೂನು: ಮಗ; ವರ: ಶ್ರೇಷ್ಠ; ವಿವಿಧ: ಹಲವಾರು; ಸತ್ವ: ಸಾರ; ಪರಮ: ಶ್ರೇಷ್ಠ; ಜೀವ: ಪ್ರಾಣ; ಅರರೆ: ಆಶ್ಚರ್ಯ ಸೂಚಕ ಪದ; ಮಝ: ಭಲೇ; ರಾವು: ದಿಗ್ಭ್ರಮೆ; ಜಾಗು:ಹೊಗಳಿಕೆ ಮಾತು; ಭಟ: ಸೈನಿಕ; ವ್ರಾತ: ಗುಂಪು;

ಪದವಿಂಗಡಣೆ:
ಬೆರಳ +ತೂಗಿದನ್+ಅಡಿಗಡಿಗೆ +ಹಲ
ಧರನ್+ಉದಗ್ರ+ ಗದಾ +ವಿಧಾನಕೆ
ಶಿರವನ್+ಒಲೆದನು +ಶೌರಿ +ಮಿಗೆ +ಮೆಚ್ಚಿದನು +ಯಮಸೂನು
ವರ +ಗದಾಯುಧ +ವಿವಿಧ +ಸತ್ವಕೆ
ಪರಮ+ಜೀವವಿದ್+ಎಂದನ್+ಅರ್ಜುನನ್
ಅರರೆ +ಮಝರೇ +ರಾವು +ಜಾಗೆಂದುದು +ಭಟ+ವ್ರಾತ

ಅಚ್ಚರಿ:
(೧) ಮೆಚ್ಚುಗೆಯ ಮಾತುಗಳು – ಅರರೆ, ಮಝರೇ, ರಾವು, ಜಾಗು
(೨) ತೂಗು, ಒಲೆದು – ಸಾಮ್ಯಾರ್ಥ ಪದ
(೩) ಒಂದೇ ಪದವಾಗಿ ರಚನೆ – ಪರಮಜೀವವಿದೆಂದನರ್ಜುನ

ಪದ್ಯ ೪: ಭೀಮ ದುರ್ಯೋಧನರ ಗದಾ ಯುದ್ಧವು ಹೇಗೆ ನಡೆಯಿತು?

ಗದೆಗದೆಯ ಹೊಯ್ಲುಗಳ ಖಣಿಖಟಿ
ಲೊದಗಿತಿಬ್ಬರ ಬೊಬ್ಬೆ ಭುವನವ
ಬೆದರಿಸಿತು ಪದಥಟ್ಟಣೆಯ ಘಟ್ಟಣೆಯ ಘಾತಿಯಲಿ
ಅದರಿತಿಳೆ ಮಝ ಭಾಪು ಭಟರೆಂ
ದೊದರಿತಾ ಪರಿವಾರದಬ್ಬರ
ತ್ರಿದಶನಿಕರದ ಸಾಧುರವವಂಜಿಸಿತು ಮೂಜಗದ (ಗದಾ ಪರ್ವ, ೭ ಸಂಧಿ, ೪ ಪದ್ಯ)

ತಾತ್ಪರ್ಯ:
ಗದೆಗಳು ಒಂದನ್ನೊಂದು ತಾಗಿ ಖಣಿ ಖಟಿಲೆಂಬ ಸದ್ದಾಗುತ್ತಿತ್ತು. ಇಬ್ಬರ ಕೂಗುಗಳು ಲೋಕವನ್ನೇ ಬೆದರಿಸಿದವು. ಪಾದಗಳ ತುಳಿತಕ್ಕೆ ಭೂಮಿ ನಡುಗಿತು. ಪರಿವಾಅರದವರು ಭಲೇ, ಭಾಪು ಎಂದು ಹೊಗಳುತ್ತಿದ್ದರು. ದೇವತೆಗಳು ಸಾಧುವಾದವನ್ನು ಮಾಡಿದರು.

ಅರ್ಥ:
ಗದೆ: ಮುದ್ಗರ; ಹೊಯ್ಲು: ಹೊಡೆತ; ಖಣಿಖಟಿ: ಶಬ್ದವನ್ನು ವರ್ಣಿಸುವ ಪದ; ಬೊಬ್ಬೆ: ಗರ್ಜನೆ; ಭುವನ: ಭೂಮಿ; ಬೆದರಿಸು: ಹೆದರಿಸು; ಪದ: ಪಾದ, ಚರಣ; ಥಟ್ಟಣೆ: ಗುಂಪು; ಘಾತಿ: ಹೊಡೆತ; ಅದರು: ನಡುಗು; ಇಳೆ: ಭೂಮಿ; ಮಝ: ಕೊಂಡಾಟದ ಒಂದು ಮಾತು; ಭಾಪು: ಭಲೇ; ಭಟ: ವೀರ; ಒದರು: ಹೇಳು; ಪರಿವಾರ: ಬಂಧುಜನ; ಅಬ್ಬರ: ಗರ್ಜನೆ; ತ್ರಿದಶ: ದೇವತೆ; ನಿಕರ: ಗುಂಪು; ಸಾಧು: ಒಪ್ಪಿಗೆ, ಮುನಿಜನ; ಅಂಜಿಸು: ಹೆದರು; ಮೂಜಗ: ತ್ರಿಜಗ, ಮೂರು ಜಗತ್ತು;

ಪದವಿಂಗಡಣೆ:
ಗದೆಗದೆಯ +ಹೊಯ್ಲುಗಳ +ಖಣಿಖಟಿಲ್
ಒದಗಿತ್+ಇಬ್ಬರ+ ಬೊಬ್ಬೆ +ಭುವನವ
ಬೆದರಿಸಿತು +ಪದ+ಥಟ್ಟಣೆಯ +ಘಟ್ಟಣೆಯ +ಘಾತಿಯಲಿ
ಅದರಿತ್+ಇಳೆ +ಮಝ +ಭಾಪು +ಭಟರೆಂದ್
ಒದರಿತಾ+ ಪರಿವಾರದ್+ಅಬ್ಬರ
ತ್ರಿದಶ+ನಿಕರದ+ ಸಾಧುರವವ್+ಅಂಜಿಸಿತು +ಮೂಜಗದ

ಅಚ್ಚರಿ:
(೧) ಶಬ್ದಗಳನ್ನು ವಿವರಿಸುವ ಪದ – ಖಣಿಖಟಿಲ, ಬೊಬ್ಬೆ, ಒದರು, ಸಾಧುರವ, ಮಝ, ಭಾಪು
(೨) ಘ ಕಾರದ ಪದಗಳು – ಘಟ್ಟಣೆಯ ಘಾತಿಯಲಿ