ಗೆಲಿದಡೈವರೊಳೊಬ್ಬನನು ಮಿ
ಕ್ಕುಳಿದವರು ಕಿಂಕರರು ಗಡ ನೀ
ತಿಳಿದು ನುಡಿದಾ ನಿನ್ನನಾಹವಮುಖಕೆ ವರಿಸಿದಡೆ
ಗೆಲಲು ಬಲ್ಲಾ ನೀನು ಫಲುಗುಣ
ಗೆಲುವನೇ ನಿನ್ನುಳಿದರಿಬ್ಬರು
ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ (ಗದಾ ಪರ್ವ, ೫ ಸಂಧಿ, ೫೦ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ಎಲೈ ಧರ್ಮಜ, ಒಬ್ಬನನ್ನು ಗೆದ್ದರೆ ಉಳಿದವರು ದಾಸರಾಗುತ್ತರೆ ಎಂದು ನೀನು ಹೇಳಿದೆ ಅಲ್ಲವೇ? ಇದನ್ನು ನೀನು ತಿಳಿದು ಹೇಳಿದೆಯಾ? ಯುದ್ಧಕ್ಕೆ ನಿನ್ನನ್ನು ಕರೆದರೆ ನೀಣು ಗೆಲ್ಲಬಲ್ಲೆಯಾ? ಅರ್ಜುನ ಗೆದ್ದಾನೇ? ನಕುಲ ಸಹದೇವರು ಅವನ ಗದೆಯ ಹೊಡೆತವನ್ನು ತಡೆದುಕೊಂಡು ನಿಲ್ಲಬಲ್ಲರೇ?
ಅರ್ಥ:
ಗೆಲಿದು: ಜಯಿಸು; ಉಳಿದ: ಮಿಕ್ಕ; ಕಿಂಕರ: ದಾಸ; ಗಡ: ಅಲ್ಲವೇ; ತಿಳಿ: ಅರಿ; ನುಡಿ: ಮಾತಾಡು; ಆಹವ: ಯುದ್ಧ; ಮುಖ: ಆನನ; ವರಿಸು: ಕೈಹಿಡಿ; ಗೆಲುವು: ಜಯ; ಬಲ್ಲ: ತಿಳಿದ; ನಿಲು: ನಿಲ್ಲು, ಎದುರಿಸು; ಘಾಟ: ಹೆಕ್ಕತ್ತು, ಹೊಡೆತ; ಘಾಯ: ಪೆಟ್ಟು; ಗದೆ: ಮುದ್ಗರ;
ಪದವಿಂಗಡಣೆ:
ಗೆಲಿದಡ್+ಐವರೊಳ್+ ಒಬ್ಬನನು+ ಮಿ
ಕ್ಕುಳಿದವರು+ ಕಿಂಕರರು +ಗಡ +ನೀ
ತಿಳಿದು +ನುಡಿದಾ+ ನಿನ್ನನ್+ಆಹವಮುಖಕೆ +ವರಿಸಿದಡೆ
ಗೆಲಲು +ಬಲ್ಲಾ +ನೀನು +ಫಲುಗುಣ
ಗೆಲುವನೇ+ ನಿನ್ನುಳಿದರಿಬ್ಬರು
ನಿಲುವರೇ+ ಕುರುಪತಿಯ+ಘಾಟದ +ಗದೆಯ +ಘಾಯದಲಿ
ಅಚ್ಚರಿ:
(೧) ಸುಯೋಧನನ ಪರಾಕ್ರಮದ ವರ್ಣನೆ – ಇನ್ನುಳಿದರಿಬ್ಬರು ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ