ಹಾ ಯುಧಿಷ್ಠಿರ ನಿಮ್ಮ ಕೂಡೆಮ
ಗಾಯಛಲವಿಲ್ಲರ್ಜುನನು ಮಗು
ವೀ ಯಮಳರಿಗೆ ಕೈದುಗೊಳ್ಳೆನು ಹೊಯ್ದು ಕೆಣಕಿದಡೆ
ಬಾಯಿಬಡಿಕನು ಸತ್ವದಲಿ ನಾ
ಗಾಯುತದ ಬಲವೆಂಬ ಡೊಂಬಿನ
ವಾಯುವಿನ ಮಗನೆನ್ನೊಡನೆ ಮಾರಾಂತಡಹುದೆಂದ (ಗದಾ ಪರ್ವ, ೫ ಸಂಧಿ, ೪೭ ಪದ್ಯ)
ತಾತ್ಪರ್ಯ:
ಎಲೈ ಧರ್ಮಜ, ನಿನ್ನೊಡನೆ ನನಗೆ ಯಾವ ಛಲವೂ ಇಲ್ಲ, ಅರ್ಜುನನು ಚಿಕ್ಕವ, ಈ ಯಮಳರು ನನ್ನನ್ನು ಹೊಡೆದು ಕೆಣಕಿದರೂ ಅವರ ಮೇಲೆ ನಾನು ಆಯುಧವನ್ನು ಹಿಡಿಯುವುದಿಲ್ಲ, ಭೀಮನಾದರೋ ಬಾಯಿಬಡುಕ, ಸಾವಿರ ಆನೆಗಳ ಬಲವುಳ್ಳವನೆಂದು ಕೊಚ್ಚಿಕೊಳ್ಳುತ್ತಾನೆ. ಭೀಮನು ನನ್ನನ್ನು ಯುದ್ಧದಲ್ಲಿ ಸೋಲಿಸಿದರೆ ನನಗೆ ಒಪ್ಪಿಗೆ ಎಂದು ಕೌರವನು ನುಡಿದನು.
ಅರ್ಥ:
ಕೂಡ: ಜೊತೆ; ಛಲ: ದೃಢ ನಿಶ್ಚಯ, ನೆಪ; ಮಗು: ಚಿಕ್ಕವ; ಯಮಳ: ಅವಳಿ ಮಕ್ಕಳು; ಕೈದು: ಆಯುಧ; ಹೊಯ್ದು: ಹೋರಾಡು; ಕೆಣಕು: ರೇಗಿಸು; ಬಾಯಿಬಡಿಕ: ಸುಮ್ಮನೆ ಮಾತಾಡುವವ; ಸತ್ವ: ಸಾರ; ನಾಗ: ಆನೆ; ಆಯುತ: ಒಂದುಸಾವಿರ; ಬಲ: ಶಕ್ತಿ; ಡೊಂಬು: ಮೋಸಗಾರ, ವಂಚಕ; ವಾಯು: ಅನಿಲ; ಮಗ: ಪುತ್ರ; ಮಾರಾಂತ: ಯುದ್ಧಕ್ಕೆ ಎದುರು ನಿಲ್ಲು;
ಪದವಿಂಗಡಣೆ:
ಹಾ +ಯುಧಿಷ್ಠಿರ+ ನಿಮ್ಮ +ಕೂಡ್+ ಎಮಗ್
ಆಯ+ಛಲವಿಲ್ಲ್+ಅರ್ಜುನನು +ಮಗುವ್
ಈ+ ಯಮಳರಿಗೆ+ ಕೈದುಗೊಳ್ಳೆನು+ ಹೊಯ್ದು +ಕೆಣಕಿದಡೆ
ಬಾಯಿಬಡಿಕನು +ಸತ್ವದಲಿ +ನಾಗ
ಆಯುತದ +ಬಲವೆಂಬ +ಡೊಂಬಿನ
ವಾಯುವಿನ ಮಗನ್+ಎನ್ನೊಡನೆ +ಮಾರಾಂತಡ್+ಅಹುದೆಂದ
ಅಚ್ಚರಿ:
(೧) ಭೀಮನನ್ನು ಹಂಗಿಸುವ ಪರಿ – ಬಾಯಿಬಡಿಕನು ಸತ್ವದಲಿ ನಾಗಾಯುತದ ಬಲವೆಂಬ ಡೊಂಬಿನ
ವಾಯುವಿನ ಮಗ