ಪದ್ಯ ೧೪: ಧರ್ಮಜನು ಕೌರವನನ್ನು ಹೇಗೆ ಹಂಗಿಸಿದನು?

ಏಳು ಕೌರವರಾಯ ಸಲಿಲ
ವ್ಯಾಳನೇ ನೀನಕಟ ಜಲದೊಳ
ಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ
ಕಾಳೆಗದೊಳದ್ದಿದೆ ಸಹೋದರ
ಜಾಲ ಪುತ್ರಜ್ಞಾತಿ ಬಂಧು ನೃ
ಪಾಲರನು ನೀ ನೀರೊಳಡಗಿದೆ ಕಷ್ಟವಾಯ್ತೆಂದ (ಗದಾ ಪರ್ವ, ೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧರ್ಮಜನು ಮಾತನಾಡುತ್ತಾ, ಕೌರವ ರಾಜ, ನೀನೇನು ನೀರು ಹಾವೇ? ನೀರಿನಲ್ಲಿ ನೀನು ಹೊಕ್ಕು ಅಲ್ಲಿಯೇ ಇರುವೆನೆಂದರೆ ಅದು ಚಂದ್ರವಂಶದ ಹೆಸರನ್ನು ಕೆಡಿಸಿದಂತಾಗುವುದಿಲ್ಲವೇ? ಸಹೋದರರು, ಮಕ್ಕಳು, ಜ್ಞಾತಿಗಳು, ಬಂಧುಗಳಾದ ರಾಜರು ಇವರನ್ನೆಲ್ಲಾ ಕೊಲ್ಲಿಸಿ ನೀನು ನೀರಲ್ಲಿ ಮುಳುಗಿರುವುದು ನೀಚತನ ಎಂದು ಧರ್ಮಜನು ಕೌರವನಿಗೆ ಹೇಳಿದನು.

ಅರ್ಥ:
ರಾಯ: ರಾಜ; ಸಲಿಲ: ಜಲ; ವ್ಯಾಳ: ಸರ್ಪ; ಅಕಟ: ಅಯ್ಯೋ; ಜಲ: ನೀರು; ಆಳು: ಅಧಿಕಾರ ನಡೆಸು; ಕಾಳು: ಕೀಳಾದುದು; ಗರುವ: ಶ್ರೇಷ್ಠ; ಶಶಿ: ಚಂದ್ರ; ವಂಶ: ಕುಲ; ಕಾಳೆಗ: ಯುದ್ಧ; ಸಹೋದರ: ತಮ್ಮ; ಜಾಲ: ಸಮೂಹ; ಪುತ್ರ: ಸುತ; ಜ್ಞಾತಿ: ದಾಯಾದಿ; ಬಂಧು: ನೆಂಟ, ಸಂಬಂಧಿಕ; ನೃಪಾಲ: ರಾಜ; ನೀರು: ಜಲ; ಅಡಗು: ಮುಚ್ಚಿಟ್ಟುಕೊಳ್ಳು; ಕಷ್ಟ: ಕ್ಲಿಷ್ಟ;

ಪದವಿಂಗಡಣೆ:
ಏಳು +ಕೌರವರಾಯ +ಸಲಿಲ
ವ್ಯಾಳನೇ +ನೀನ್+ಅಕಟ +ಜಲದೊಳಗ್
ಆಳುವರೆ+ ಕಾಳಾಯ್ತು +ನಿನ್ನಲಿ +ಗರುವ +ಶಶಿವಂಶ
ಕಾಳೆಗದೊಳ್+ಅದ್ದಿದೆ +ಸಹೋದರ
ಜಾಲ+ ಪುತ್ರ+ಜ್ಞಾತಿ +ಬಂಧು +ನೃ
ಪಾಲರನು +ನೀ +ನೀರೊಳ್+ಅಡಗಿದೆ+ ಕಷ್ಟವಾಯ್ತೆಂದ

ಅಚ್ಚರಿ:
(೧) ಕೌರವನನ್ನು ಹಂಗಿಸುವ ಪರಿ – ಸಲಿಲವ್ಯಾಳನೇ ನೀನಕಟ ಜಲದೊಳಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ

ನಿಮ್ಮ ಟಿಪ್ಪಣಿ ಬರೆಯಿರಿ