ಪದ್ಯ ೪೦: ಅಶ್ವತ್ಥಾಮನು ಯಾವು ವಿಚಾರವನ್ನು ಕೌರವನಿಗೆ ತಿಳಿಸಿದನು?

ಅರಸ ಕೇಳೈ ಸುಕೃತವನು ವಿ
ಸ್ತರಿಸುವೆನು ಪೂರಾಯವೆನೆ ಕಾ
ಹುರದ ನುಡಿ ಬೇಡೇಳು ನಡೆವುದು ಹಸ್ತಿನಾಪುರಿಗೆ
ಅರಿಗಳೈತಂದೌಕಿದಡೆ ಗಜ
ಪುರದ ದುರ್ಗವ ಬಲಿದು ನಿಲುವುದು
ಪರಮಮಂತ್ರವಿದೆಂದನಶ್ವತ್ಥಾಮನವನಿಪನ (ಗದಾ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು, ರಾಜಾ, ನಿನ್ನ ಪುಣ್ಯವನ್ನು ಅರೆಬರೆಯಾಗಿದ್ದರೂ ಪೂರ್ಣಗೊಳಿಸುತ್ತೇನೆ. ಉದ್ವೇಗದ ಮಾತನ್ನು ಬಿಡು, ಮೇಲೇಳು, ಹಸ್ತಿನಾಪುರಕ್ಕೆ ಹೋಗೋಣ, ಶತ್ರುಗಳು ಮುತ್ತಿದರೆ ಕೋಟೆಯನ್ನು ಬಲಗೊಳಿಸೋಣ. ಇದೇ ಅತ್ಯುತ್ತಮವಾದ ಉಪಾಯ ಎಂದು ಹೇಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಸುಕೃತ: ಒಳ್ಳೆಯ ಕೆಲಸ; ವಿಸ್ತರಿಸು: ಹರಡು; ಪೂರಾಯ: ಪೂರ್ಣವಾಗಿ; ಕಾಹುರ: ಆವೇಶ, ಸೊಕ್ಕು, ಕೋಪ; ನುಡಿ: ಮಾತು; ಬೇಡ: ತ್ಯಜಿಸು; ನಡೆ: ಚಲಿಸು; ಅರಿ: ವೈರಿ; ಐತಂದು: ಬಂದು ಸೇರು; ಔಕು: ನೂಕು; ದುರ್ಗ: ಕೋಟೆ; ಬಲಿ: ಗಟ್ಟಿ, ದೃಢ; ನಿಲು: ನಿಲ್ಲು; ಪರಮ: ಶ್ರೇಷ್ಠ; ಮಂತ್ರ: ವಿಚಾರ; ಅವನಿಪ: ರಾಜ;

ಪದವಿಂಗಡಣೆ:
ಅರಸ +ಕೇಳೈ +ಸುಕೃತವನು+ ವಿ
ಸ್ತರಿಸುವೆನು +ಪೂರಾಯವೆನೆ +ಕಾ
ಹುರದ +ನುಡಿ +ಬೇಡ್+ಏಳು +ನಡೆವುದು +ಹಸ್ತಿನಾಪುರಿಗೆ
ಅರಿಗಳ್+ಐತಂದ್+ಔಕಿದಡೆ +ಗಜ
ಪುರದ +ದುರ್ಗವ +ಬಲಿದು +ನಿಲುವುದು
ಪರಮ+ಮಂತ್ರವಿದೆಂದನ್+ಅಶ್ವತ್ಥಾಮನ್+ಅವನಿಪನ

ಅಚ್ಚರಿ:
(೧) ೬ನೇ ಸಾಲು ಒಂದೇ ಪದವಾಗಿ ರಚಿತವಾಗಿರುವುದು – ಪರಮಮಂತ್ರವಿದೆಂದನಶ್ವತ್ಥಾಮನವನಿಪನ
(೨) ಅರಸ, ಅವನಿಪ – ಪದ್ಯದ ಮೊದಲ ಹಾಗು ಕೊನೆಯ ಪದ

ನಿಮ್ಮ ಟಿಪ್ಪಣಿ ಬರೆಯಿರಿ