ಪದ್ಯ ೩೧: ಕೌರವನು ಕೋಪದಿಂದ ಏನು ಕೇಳಿದನು?

ಬದುಕಿ ಬಂದರೆ ಭೀಮ ನಿಮ್ಮನು
ಗದೆಯ ಸವಿಗಾಣಿಸನಲಾ ಸಾ
ಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ
ಕದನದಲಿ ಸೌಬಲ ಸುಶರ್ಮರ
ಹೊದರ ಹರೆಗಡಿವಲ್ಲಿ ನೀವ್ ಮಾ
ಡಿದ ಪರಾಕ್ರಮವಾವುದೆಂದನು ನೃಪತಿ ಖಾತಿಯಲಿ (ಗದಾ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೌರವನು ಅದನ್ನು ಕೇಳಿ ಸಿಟ್ಟಿನಿಂದ, ಭೀಮನು ನಿಮಗೆ ಗದೆಯ ಸವಿಯನ್ನು ಉಣೀಸಲಿಲ್ಲವೇ? ಒಡೆಯನ ಕಷ್ಟಕಾಲದ ಸಮಯದಲ್ಲಿ ಜೊತೆಗ್ಯಾಗಿ ಬಂದೊದಗಿದಿರಲ್ಲವೇ? ಹೌದು ಶಕುನಿ ಸುಶರ್ಮರ ಸೈನ್ಯವನ್ನೂ ವೈರಿಗಳು ಸಂಹರಿಸಿದರಲ್ಲಾ ಆಗ ನೀವೇನು ಮಾಡುತ್ತಿದ್ದೀರಿ ಎಂದು ಕೇಳಿದನು.

ಅರ್ಥ:
ಬದುಕು: ಜೀವಿಸು; ಬಂದು: ಆಗಮಿಸು; ಗದೆ: ಮುದ್ಗರ; ಸವಿ: ಸಿಹಿ; ಕಾಣಿಸು: ತೋರು; ಸಾಕು: ಸಲಹು; ಸಮಯ: ಕಾಲ; ಸುಳಿ: ಕಾಣಿಸಿಕೊಳ್ಳು; ಸಾಹಿತ್ಯ: ಸಾಹಚರ್ಯ, ಸಂಬಂಧ; ರೇಖೆ: ಗೆರೆ, ಗೀಟು; ಕದನ: ಯುದ್ಧ; ಹೊದರು: ಗುಂಪು, ಸಮೂಹ; ಹರೆ: ಸೀಳು; ಪರಾಕ್ರಮ: ಶೌರ್ಯ; ನೃಪತಿ: ರಾಜ; ಖಾತಿ: ಕೋಪ, ಕ್ರೋಧ;

ಪದವಿಂಗಡಣೆ:
ಬದುಕಿ+ ಬಂದರೆ +ಭೀಮ +ನಿಮ್ಮನು
ಗದೆಯ +ಸವಿಗಾಣಿಸನಲ್+ಆ+ ಸಾ
ಕಿದನ +ಸಮಯಕೆ +ಸುಳಿದಿರೈ +ಸಾಹಿತ್ಯ+ರೇಖೆಯಲಿ
ಕದನದಲಿ +ಸೌಬಲ+ ಸುಶರ್ಮರ
ಹೊದರ +ಹರೆಗಡಿವಲ್ಲಿ +ನೀವ್ +ಮಾ
ಡಿದ +ಪರಾಕ್ರಮವಾವುದೆಂದನು +ನೃಪತಿ +ಖಾತಿಯಲಿ

ಅಚ್ಚರಿ:
(೧) ಸ ಕಾರದ ಸಾಲು ಪದಗಳು – ಸವಿಗಾಣಿಸನಲಾ ಸಾಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ

ನಿಮ್ಮ ಟಿಪ್ಪಣಿ ಬರೆಯಿರಿ