ಅರಸ ಕೇಳ್ ಕೃಪ ಗುರುಜ ಕೃತವ
ರ್ಮರು ರಥಾಶ್ವಂಗಳನು ದೂರದ
ಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ
ತರುಲತೆಗಳಿರುಬಿನಲಿ ಕಂಜಾ
ಕರದ ತಡಿಯಲಿ ನಿಂದು ಮೆಲ್ಲನೆ
ಕರೆದು ಕೇಳಿಸಿ ಹೇಳಿದರು ತಂತಮ್ಮ ಹೆಸರುಗಳ (ಗದಾ ಪರ್ವ, ೪ ಸಂಧಿ, ೩೦ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರ ಕೇಳು, ಕೃಪ, ಅಶ್ವತ್ಥಾಮ, ಕೃತವರ್ಮರು ತಮ್ಮ ರಥ ಕುದುರೆಗಳನ್ನು ದೂರದಲ್ಲಿ ನಿಲ್ಲಿಸಿ, ತಲೆ ಮುಸುಕು ಹಾಕಿಕೊಂಡು ಸರೋವರದ ದಡಕ್ಕೆ ಬಂದು, ಮರಬಳ್ಳಿಗಳ ನಡುವೆ ನಿಂತು ಅರಸನನ್ನು ಕರೆದು ತಮ್ಮ ಹೆಸರುಗಳನ್ನು ಹೇಳಿದರು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ಗುರುಜ: ಅಶ್ವತ್ಥಾಮ; ಅಶ್ವ: ಕುದುರೆ; ದೂರ: ಅಂತರ; ತಲೆ: ಶಿರ; ಮುಸುಕು: ಹೊದಿಕೆ; ಯೋನಿ; ಕೊಳ: ಸರೋವರ; ತಡಿ: ದಡ; ತರು: ಮರ, ವೃಕ್ಷ; ಲತೆ: ಬಳ್ಳಿ; ಇರುಬು: ಇಕ್ಕಟ್ಟು; ಕಂಜ: ತಾವರೆ; ನಿಂದು: ನಿಲ್ಲು; ಮೆಲ್ಲನೆ: ನಿಧಾನ; ಕೇಳು: ಆಲಿಸು; ಹೆಸರು: ನಾಮ;
ಪದವಿಂಗಡಣೆ:
ಅರಸ +ಕೇಳ್ +ಕೃಪ +ಗುರುಜ +ಕೃತವ
ರ್ಮರು+ ರಥ+ಅಶ್ವಂಗಳನು +ದೂರದಲ್
ಇರಿಸಿ +ತಲೆ+ಮುಸುಕಿನಲಿ +ಬಂದರು +ಕೊಳನ +ತಡಿಗಾಗಿ
ತರು+ಲತೆಗಳ್+ಇರುಬಿನಲಿ+ ಕಂಜಾ
ಕರದ +ತಡಿಯಲಿ +ನಿಂದು +ಮೆಲ್ಲನೆ
ಕರೆದು +ಕೇಳಿಸಿ +ಹೇಳಿದರು+ ತಂತಮ್ಮ +ಹೆಸರುಗಳ
ಅಚ್ಚರಿ:
(೧) ಕೇಳಿ, ಹೇಳಿ – ಪ್ರಾಸ ಪದ
(೨) ಗುಟ್ಟಾಗಿ ಎಂದು ಹೇಳುವ ಪರಿ – ರಥಾಶ್ವಂಗಳನು ದೂರದಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ