ಪದ್ಯ ೧೯: ಹಸ್ತಿನಾಪುರದ ಸ್ಥಿತಿ ಹೇಗಿತ್ತು?

ತುಂಬಿತಿದು ಗಜಪುರವನಲ್ಲಿಯ
ಕಂಬನಿಯ ಕಾಲುವೆಯನದನೇ
ನೆಂಬೆನೈ ಗಜಬಜಿಕೆ ಮೊಳೆತುದು ಕೇರಿಕೇರಿಯಲಿ
ಲಂಬಿಸಿತು ಭಯತಿಮಿರ ಶೋಕಾ
ಡಂಬರದ ಡಾವರ ವಿವೇಕವ
ಚುಂಬಿಸಿತು ಧೃತರಾಷ್ಟ್ರ ವಿದುರರ ಪೌರ ಪರಿಜನದ (ಗದಾ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಪಾಳೆಯದಿಂದ ಹೋದ ಗಾಡಿ, ರಥ, ಕಂಬಿಗಳು ಗಜಪುರವನ್ನು ತಲುಪಲು ಕಣ್ಣಿರಿನ ಕಾಲುವೆಯೇ ಹರಿಯಿತು. ಕೇರಿಕೇರಿಗಳಲ್ಲಿ ಗೊಂದಲವಾಯಿತು. ಕರಾಳದ ಭಯದ ಕತ್ತಲೆ ಕವಿದು, ಧೃತರಾಷ್ಟ್ರ ವಿದುರ ಪುರಜನರೆಲ್ಲರ ವಿವೇಕವನ್ನು ಚುಂಬಿಸಿತು.

ಅರ್ಥ:
ತುಂಬು: ಭರ್ತಿಯಾಗು; ಗಜಪುರ: ಹಸ್ತಿನಾಪುರ; ಕಂಬನಿ: ಕಣ್ಣೀರು; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಗಜಬಜ: ಕೋಲಾಹಲ; ಮೊಳೆತು: ಚಿಗುರು, ಅಂಕುರಿಸು; ಕೇರಿ: ದಾರಿ, ಮಾರ್ಗ; ಲಂಬ: ಉದ್ದ; ಭಯ: ಅಂಜಿಕೆ; ತಿಮಿರ: ಕತ್ತಲೆ; ಶೋಕ: ದುಃಖ; ಆಡಂಬರ: ತೋರಿಕೆ, ಢಂಭ; ಡಾವರ: ಹಿಂಸೆ, ಕೋಟಲೆ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಚುಂಬಿಸು: ಮುತ್ತಿಡು; ಪೌರ: ಊರು; ಪರಿಜನ: ಸಂಬಂಧಿಕ;

ಪದವಿಂಗಡಣೆ:
ತುಂಬಿತಿದು +ಗಜಪುರವನ್+ಅಲ್ಲಿಯ
ಕಂಬನಿಯ +ಕಾಲುವೆಯನ್+ಅದನೇನ್
ಎಂಬೆನೈ +ಗಜಬಜಿಕೆ+ ಮೊಳೆತುದು +ಕೇರಿಕೇರಿಯಲಿ
ಲಂಬಿಸಿತು +ಭಯ+ತಿಮಿರ +ಶೋಕ
ಆಡಂಬರದ +ಡಾವರ +ವಿವೇಕವ
ಚುಂಬಿಸಿತು +ಧೃತರಾಷ್ಟ್ರ +ವಿದುರರ+ ಪೌರ +ಪರಿಜನದ

ಅಚ್ಚರಿ:
(೧) ದುಃಖದ ತೀವ್ರತೆಯನ್ನು ವಿವರಿಸುವ ಪರಿ – ತುಂಬಿತಿದು ಗಜಪುರವನಲ್ಲಿಯಕಂಬನಿಯ ಕಾಲುವೆ
(೨) ಭಯದ ತೀವ್ರತೆ – ಲಂಬಿಸಿತು ಭಯತಿಮಿರ ಶೋಕಾಡಂಬರದ ಡಾವರ ವಿವೇಕವ ಚುಂಬಿಸಿತು

ನಿಮ್ಮ ಟಿಪ್ಪಣಿ ಬರೆಯಿರಿ