ಪದ್ಯ ೭: ಕೌರವನು ಎಲ್ಲಿ ಸೇರಿದನೆಂದು ಸಂಜಯನು ತಿಳಿಸಿದನು?

ಬಂದನೆನ್ನನು ಸಂತವಿಡುತಲ
ದೊಂದು ಸರಸಿಯ ತಡಿಯಲಳವಡೆ
ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ
ತಂದೆಗರುಹೆಂದೆನಗೆ ಹೇಳಿದು
ಹಿಂದೆ ಮುಂದೆಡಬಲನನಾರೈ
ದಂದವಳಿಯದೆ ನೀರ ಹೊಕ್ಕನು ಕಾಣೆನವನಿಪನ (ಗದಾ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ನನ್ನನ್ನು ಸಂತೈಸುತ್ತಾ ಒಂದು ಸರೋವರದ ತೀರಕ್ಕೆ ಕರೆದುಕೊಂಡು ಹೋಗಿ, ಗದೆಯನ್ನು ಕಂಕುಳಲ್ಲಿ ಇಟ್ಟುಕೊಂಡು, ತಂದೆಗೆ ಈ ವಿಷಯವನ್ನು ಹೇಳು ಎಂದು ನನಗೆ ತಿಳಿಸಿ, ಎಲ್ಲಾ ಕಡೆಯೂ ನೋಡಿ, ನೀರಿನಲ್ಲಿ ಮುಳುಗಿದನು. ಆನಂತರ ನನಗೆ ಮತ್ತೆ ಕಾಣಿಸಲಿಲ್ಲ ಎಂದು ಸಂಜಯನು ಕೃಪ ಅಶ್ವತ್ಥಾಮರಿಗೆ ತಿಳಿಸಿದನು.

ಅರ್ಥ:
ಬಂದು: ಆಗಮಿಸು; ಸಂತ: ಸೌಖ್ಯ, ಕ್ಷೇಮ; ಸರಸಿ: ಸರೋವರ; ತಡಿ: ದಡ; ಅಳವು: ಅಳತೆ, ನೆಲೆ; ನಿಂದು: ನಿಲ್ಲು; ಸಂವರಿಸು: ಸಜ್ಜು ಮಾಡು; ಗದೆ: ಮುದ್ಗರ; ಬಾಹು: ತೋಳು; ಬಾಹುಮೂಲ: ಕಂಕಳು; ತಂದೆ: ಜನಕ; ಅರುಹು: ತಿಳಿಸು, ಹೇಳು; ಹಿಂದೆ: ಭೂತ; ಮುಂದೆ: ಎದುರು; ಎಡಬಲ: ಅಕ್ಕ ಪಕ್ಕ; ನೀರು: ಜಲ; ಹೊಕ್ಕು: ಸೇರು; ಕಾಣೆ: ತೊರಾದಾಗು; ಅವನಿಪನ: ರಾಜ;

ಪದವಿಂಗಡಣೆ:
ಬಂದನ್+ಎನ್ನನು +ಸಂತವಿಡುತಲದ್
ಒಂದು +ಸರಸಿಯ +ತಡಿಯಲ್+ಅಳವಡೆ
ನಿಂದು +ಸಂವರಿಸಿದನು+ ಗದೆಯನು +ಬಾಹುಮೂಲದಲಿ
ತಂದೆಗ್+ಅರುಹೆಂದ್+ಎನಗೆ +ಹೇಳಿದು
ಹಿಂದೆ +ಮುಂದ್+ಎಡ+ಬಲನನಾರೈ
ದಂದವಳಿಯದೆ +ನೀರ+ ಹೊಕ್ಕನು +ಕಾಣೆನ್+ಅವನಿಪನ

ಅಚ್ಚರಿ:
(೧) ಎಲ್ಲಾ ದಿಕ್ಕುಗಳು ಎಂದು ಹೇಳುವ ಪರಿ – ಹಿಂದೆ ಮುಂದೆಡಬಲ
(೨) ಕಂಕಳು ಎಂದು ಹೇಳುವ ಪರಿ – ಬಾಹುಮೂಲ

ನಿಮ್ಮ ಟಿಪ್ಪಣಿ ಬರೆಯಿರಿ