ಪದ್ಯ ೪: ಸಂಜಯನ ಗುರುವರ್ಯರಾರು?

ಬಳಿಕ ಭೀಮನ ಗದೆಯಲಿಭ ಶತ
ವಳಿದರೊಬ್ಬನೆ ತಿರುಗಿ ಹಾಯ್ದನು
ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ
ತಲೆಗೆ ಬಂದುದು ತನಗೆಯಾಖ್ಷನ
ಸುಳಿದರೆಮ್ಮಾರಾಧ್ಯ ವರ ಮುನಿ
ತಿಲಕ ವೇದವ್ಯಾಸದೇವರು ಕೃಪೆಯ ಭಾರದಲಿ (ಗದಾ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಬಳಿಕ ಭೀಮನು ತನ್ನ ಗದೆಯಿಂದ ನೂರಾನೆಗಳನ್ನು ಕೊಲ್ಲಲು ಅರಸನು ಹಿಮ್ಮೆಟ್ತಿ ರಣರಂಗದ ಕೋಲಾಹಲದ ನಡುವೆ ಕೆಸರ್ನ್ನು ತುಳಿಯುತ್ತಾ ಹೋದನು. ಅವನು ಕಾಣದಿರಲು ಹುಡುಕುತ್ತಾ ನಾನು ಬಂದೆ. ಆಗ ನನ್ನ ತಲೆಗೆ ಆಪತ್ತು ಬರಲು, ನಮ್ಮ ಆರಾಧ್ಯಗುರುಗಳಾದ ವೇದವ್ಯಾಸರು ಕರುಣೆಯಿಂದ ಅಲ್ಲಿಗೆ ಬಂದರು.

ಅರ್ಥ:
ಬಳಿಕ: ನಂತರ; ಗದೆ: ಮುದ್ಗರ; ಇಭ: ಆನೆ; ಶತ: ನೂರು; ಅಳಿ: ಸಾವು; ತಿರುಗು: ಓಡಾಡು; ಹಾಯ್ದು: ಹೊಡೆ; ಕೊಳುಗುಳ: ಯುದ್ಧ; ಕೋಳ್ಗುದಿ: ತಕ ತಕ ಕುದಿ, ಅತಿ ಸಂತಾಪ; ಕೋಲಾಹಲ: ಗೊಂದಲ; ಕೆಸರು: ರಾಡಿ; ತಲೆ: ಶಿರ; ಕ್ಷಣ: ಸಮಯ; ಸುಳಿ: ಕಾಣಿಸಿಕೊಳ್ಳು; ಆರಾಧ್ಯ: ಪೂಜನೀಯ; ವರ: ಶ್ರೇಷ್ಠ; ಮುನಿ: ಋಷಿ; ತಿಲಕ: ಶ್ರೇಷ್ಠ; ಕೃಪೆ: ದಯೆ; ಭಾರ: ಹೊರೆ;

ಪದವಿಂಗಡಣೆ:
ಬಳಿಕ +ಭೀಮನ +ಗದೆಯಲ್+ಇಭ +ಶತವ್
ಅಳಿದರ್+ಒಬ್ಬನೆ +ತಿರುಗಿ +ಹಾಯ್ದನು
ಕೊಳುಗುಳದ +ಕೋಳ್ಗುದಿಯ +ಕೋಲಾಹಲದ +ಕೆಸರಿನಲಿ
ತಲೆಗೆ +ಬಂದುದು +ತನಗೆ+ಆ+ಕ್ಷಣ
ಸುಳಿದರ್+ಎಮ್ಮಾರಾಧ್ಯ +ವರ+ ಮುನಿ
ತಿಲಕ +ವೇದವ್ಯಾಸ+ದೇವರು +ಕೃಪೆಯ +ಭಾರದಲಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ

ನಿಮ್ಮ ಟಿಪ್ಪಣಿ ಬರೆಯಿರಿ