ಪದ್ಯ ೩೪: ಕುರುಪತಿಯು ಯಾರ ಮೇಲೆ ಮತ್ತೆ ಯುದ್ಧಮಾಡಲು ಮುಂದಾದನು?

ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ (ಗದಾ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶಕುನಿಯ ದಳದಲ್ಲಿ ಓಡಿಹೋಗಿ ಬದುಕಿದವರು, ಧೈರ್ಯವನ್ನು ಮಾಡಿ ಒಂದುಗೂಡಿ ನೂರು ಆನೆಗಳೊಡನೆ ಕೌರವನನ್ನು ಕೂಡಿಕೊಂಡಿತು. ಕೌರವನು ಏಕೆ ಓಡಿಹೋಗಲಿ, ಇನ್ನೊಂದು ಹಲಗೆ ಆಟವಾಡೋಣ ಎನ್ನುವಂತೆ ಸಹದೇವನ ಮೇಲೆ ಆಕ್ರಮಣ ಮಾಡಿದನು.

ಅರ್ಥ:
ಓಡು: ಧಾವಿಸು; ಧೈರ್ಯ: ಎದೆಗಾರಿಕೆ, ಕೆಚ್ಚು; ಹರಿಹಂಚು: ಚದುರಿದ; ಸುಭಟ: ಸೈನಿಕ; ಕೂಡು: ಜೊತೆಯಾಗು, ಸೇರು; ನೂರು: ಶತ; ಮದದಾನೆ: ಮತ್ತಿನಿಂದ ಕೂಡಿದ ಗಜ; ಹಲಗೆ: ಪಲಗೆ, ಮರ, ಜೂಜಿನ ಒಂದು ಆಟ; ನೋಡು: ವೀಕ್ಷಿಸು; ಕೈಮಾಡು: ಹೋರಾಡು; ಇದಿರು: ಎದುರು;

ಪದವಿಂಗಡಣೆ:
ಓಡಿದವರ್+ಅಲ್ಲಲ್ಲಿ +ಧೈರ್ಯವ
ಮಾಡಿ +ಹರಿಹಂಚಾದ +ಸುಭಟರು
ಕೂಡಿಕೊಂಡುದು +ನೂರು +ಮದದಾನೆಯಲಿ +ಕುರುಪತಿಯ
ಓಡಲೇಕಿನ್ನೊಂದು +ಹಲಗೆಯನ್
ಆಡಿ +ನೋಡುವೆನೆಂಬವೊಲು +ಕೈ
ಮಾಡಿದನು +ಕುರುರಾಯನ್+ಆ+ ಸಹದೇವನ್+ ಇದಿರಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಓಡಲೇಕಿನ್ನೊಂದು ಹಲಗೆಯನಾಡಿ ನೋಡುವೆನೆಂಬವೊಲು ಕೈ ಮಾಡಿದನು ಕುರುರಾಯ
(೨) ಕುರುಪತಿ, ಕುರುರಾಯ – ದುರ್ಯೋಧನನನ್ನು ಕರೆದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ